ಬೈಲಹೊಂಗಲ: ಪಟ್ಟಣದ ಕೇಂದ್ರ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಆಕಸ್ಮಿಕವಾಗಿ ಭೇಟಿ ನೀಡಿ 4 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಡಿಪೋ ಕಾಮಗಾರಿ ಪರಿಶೀಲಿಸಿದರು. ಸಚಿವ ಡಿ.ಸಿ. ತಮ್ಮಣ್ಣ ಧಾರವಾಡ, ಬೆಳಗಾವಿಗೆ ತೆರಳುತ್ತಿದ್ದ ಬಸ್ನಲ್ಲಿನ ಪ್ರಯಾಣಿಕರೊಂದಿಗೆ ಸಮಾಲೋಚನೆ ನಡೆಸಿ ಚಾಲಕ, ನಿರ್ವಾಹಕರು ತಮ್ಮೊಂದಿಗೆ ನಡೆದುಕೊಳ್ಳುವ ರೀತಿ, ಬಸ್ಸಿನ ಸ್ವಚ್ಛತೆ ಬಗ್ಗೆ ಚರ್ಚಿಸಿ, ಕೆಲ ಬಸ್ಸಿನಲ್ಲಿದ್ದ ಗುಟ್ಕಾ ಪ್ಯಾಕೆಟ್, ಕಸ ನೋಡಿ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಸಾರಿಗೆ ಇಲಾಖೆಗಳ ಪ್ರಗತಿಗೆ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ಚಾಲಕ, ನಿರ್ವಾಹಕರು, ಸಿಬ್ಬಂದಿ ಬಸ್ಗಳನ್ನು ಸುವ್ಯವಸ್ಥೆಯಲ್ಲಿಟ್ಟುಕೊಂಡು ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಪ್ರತಿಯೊಬ್ಬ ನೌಕರರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಲಹೆ ನೀಡಿದರು.
ಸಾರಿಗೆ ಘಟಕದ ಸುತ್ತಮುತ್ತ ಸಂಚರಿಸಿ ಸ್ವಚ್ಛತೆ, ಖಾಸಗಿ ಬ್ಯಾನರ್, ಪೋಸ್ಟರ್ ಅಳವಡಿಸಿದ್ದನ್ನು ಕಂಡು ಕೂಡಲೇ ತೆರವುಗೊಳಿಸಬೇಕು ಎಂದು ಘಟಕ ವ್ಯವಸ್ಥಾಪಕರಿಗೆ ಸೂಚಿಸಿದರು. ಸಿಬ್ಬಂದಿಗಳಿಗೆ ವಿಶ್ರಾಂತಿ ಗೃಹ, ಶೆಡ್ಗಳನ್ನು ಎತ್ತರಿಸುವುದು, ಡಿಪೋ ಹಿಂದಿನ ಕೊಳಚೆ ಪ್ರದೇಶದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಅದರಲ್ಲಿ ಬೆಡ್ ಕಾಂಕ್ರೀಟ್ ಹಾಕಿಸುವುದು, ಗಟಾರ ನಿರ್ಮಿಸುವುದು. ಕಾಂಪೌಂಡ್ ಹಾಲ್ ಎತ್ತರಿಸಬೇಕು ಎಂದರು. ಮುಂದಿನ ದಿನಗಳಲ್ಲಿ ಘಟಕದ ಸಿಬ್ಬಂದಿಗಳಿಗೆ ಬೈಲಹೊಂಗಲ ಹೊರ ವಲಯದಲ್ಲಿ ವಸತಿ ಗೃಹ ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಕಾರ್ಮಿಕರು ಸಚಿವರೊಂದಿಗೆ ಮಾತನಾಡಿ, ವೇತನ ತಾರತಮ್ಯವಾಗದಂತೆ, ಸಿಬ್ಬಂದಿಗೆ ಕೊಡುವ ಬಾಕಿ ಸಂಬಳ ಶೀಘ್ರ ವಿತರಿಸಬೇಕು. ಬರುವ ಬಾಕಿ ಹಣ ನೀಡುವಂತೆ ಮನವಿ ಮಾಡಿದಾಗ ಸಚಿವರು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಶಾಸಕ ಮಹಾಂತೇಶ ಕೌಜಲಗಿ, ಜಿಪಂ ಸದಸ್ಯ ಶಂಕರ ಮಾಡಲಗಿ, ಸಾರಿಗೆ ಇಲಾಖೆ ಅಧಿಕಾರಿ ನಾಯ್ಕ, ಎಇಇ ಕುಲಕರ್ಣಿ, ಡಿಸಿ ಮಹಾದೇವ ಮುಂಜಿ, ಘಟಕ ವ್ಯವಸ್ಥಾಪಕ ಎ.ಎಂ. ಮುಜಾವರ, ಜಾಗೃತಾ ಅಧಿಕಾರಿ ಜಗದೀಶ ಕೋಳಿ, ವಿಭಾಗೀಯ ಭದ್ರತಾ ನಿರೀಕ್ಷಕ ಎಸ್. ಎಲ್. ಮಲಕಪ್ಪನವರ, ಟ್ರಾಫಿಕ್ ಇನ್ಸ್ಪೆಕ್ಟರ್ ಎಂ.ಎಂ. ಆನಿಕಿವಿ, ಕಾರ್ಮಿಕರಾದ ಸುರೇಶ ಯರಡ್ಡಿ, ಸುಭಾಸ ರುದ್ರಪುರ, ಗೌಸ್ ಕಿತ್ತೂರ, ಪ್ರಕಾಶ ಸೊಗಲ ಇದ್ದರು.