Advertisement

ಕರಾವಳಿ ಮೂಲಗೇಣಿದಾರರ ಹಿತ ಕಾಯಲು ಸರಕಾರ ಬದ್ಧ: ಅಶೋಕ್‌

01:09 AM Dec 22, 2022 | Team Udayavani |

ಬೆಳಗಾವಿ: ಕರಾವಳಿ ಭಾಗದ ಮೂಲಗೇಣಿದಾರರ ಹಿತ ಕಾಯುವುದಕ್ಕೆ ಸಂಬಂಧಿಸಿದಂತೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

Advertisement

ಬುಧವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಪ್ರತಾಪ ಸಿಂಹ ನಾಯಕ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಬಹಳ ವರ್ಷಗಳಿಂದಲೂ ಚರ್ಚೆಯಲ್ಲಿರುವ ವಿಚಾರ. ಕಾರಣಾಂತರಗಳಿಂದ ಮೂಲಗೇಣಿದಾರರು ಈ ಹಿಡುವಳಿಗಳಿಗೆ ಸೊತ್ತನ್ನು ಪೂರ್ಣವಾಗಿ ಅನುಭವಿಸಲು ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ಮೂಲಗೇಣಿ ಮಾಲಕತ್ವ ಅಧಿನಿಯಮ 2011ನ್ನು ಜಾರಿಗೆ ತರಲಾಗಿದೆ. ಈ ಕುರಿತ ನ್ಯಾಯಾಲಯದಲ್ಲಿ ಪ್ರಕರಣಗಳೂ ಇವೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ಇದೆ. ಈ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಸರಕಾರ ವಕೀಲರನ್ನು ನೇಮಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

ಮೂಲಗೇಣಿದಾರರ ಹಿತ ಕಾಯಲು ಸರಕಾರ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವಂತೆ ಪ್ರತಾಪ ಸಿಂಹ ನಾಯಕ್‌ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇಲ್ಲಿರುವ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗುವುದು. ಜತೆಗೆ ಒಪ್ಪಂದ ಮತ್ತು ಸಂಧಾನ ಮಾಡುವ ಅಗತ್ಯವಿದ್ದಲ್ಲಿ ಅದಕ್ಕೂ ಸರಕಾರ ಸಿದ್ಧವಿದೆ ಎಂದು ಹೇಳಿದರು.

ಉಪ ನೋಂದಣಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ
ಸುವರ್ಣ ವಿಧಾನಸೌಧ: ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರವ್ಯಾಪ್ತಿಯ ಕಟ್ಟಿಗೇನಹಳ್ಳಿ ಬಡಾವಣೆ ನಿರ್ಮಾಣಕ್ಕೆ ಬಿಬಿಎಂಪಿಯ ಖಾತೆ ನಕಲಾಗಿದ್ದು, ಅದನ್ನು ಪರಿಶೀಲಿಸದೆಯೇ ನೋಂದಾಯಿಸಿಕೊಟ್ಟ ಇಬ್ಬರು ಉಪ ನೋಂದಣಾಧಿಕಾರಿಗಳನ್ನು ಅಮಾನತು ಮಾಡಿದ್ದೇನೆ. ಸದನ ಒಪ್ಪಿದರೆ ಸಿಐಡಿ ತನಿಖೆಗೆ ಕೊಡಲು ಸರಕಾರ ಸಿದ್ಧವಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ಬುಧವಾರ ಸದನದಲ್ಲಿ ಗಮನ ಸೆಳೆಯುವ ಸೂಚನೆಯಡಿ ಕಾಂಗ್ರೆಸ್‌ನ ಕೃಷ್ಣ ಭೈರೇಗೌಡ ಅವರು, ಕಟ್ಟಿಗೇನಹಳ್ಳಿಯ 16 ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಾಣ ಮಾಡಿ, ಈಗಾಗಲೇ 70 ಸೈಟ್‌ ನೋಂದಣಿ ಮಾಡಿಕೊಡಲಾಗಿದೆ. ಈ ಬಗ್ಗೆ ಬಿಬಿಎಂಪಿ ಕಂದಾಯ ಅಧಿಕಾರಿಗಳು ಜಿಲ್ಲಾ ಉಪನೋಂದಣಾಧಿಕಾರಿಗೆ ದೂರು ನೀಡಿದ್ದಾರೆ. ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದೆ.

Advertisement

ಆದರೂ, ನೋಂದಣಿ ಕಾರ್ಯ ಮುಂದುವರಿದಿದೆ. ಹೀಗೆ ಮುಂದುವರಿದರೆ ವಿಧಾನಸೌಧದ ಜಾಗಕ್ಕೂ ನಕಲಿ ಖಾತ ಮಾಡಿ, ಅದನ್ನು ಬೇರೆಯವರಿಗೆ ಮಾರಾಟ ಮಾಡಬಹುದು. ಇದರ ವಿರುದ್ಧ ಉಪನೋಂದಾಣಾಧಿಕಾರಿಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು ಮತ್ತು ಕಾನೂನು ತಿದ್ದುಪಡಿಯನ್ನು ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ಈಗಾಗಲೇ ಇಬ್ಬರು ಉಪ ನೋಂದಣಾಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಉಳಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಮೂರು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಈ ಮಾಫಿಯಾ ಮಟ್ಟ ಹಾಕಲು ಗೃಹ ಸಚಿವರ ಜತೆ ಚರ್ಚಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಶಾಸಕರ ನಿವೇಶನಗಳ ಮೇಲೂ ಭೂಗಳ್ಳರ ಕಣ್ಣು !
ಮಧ್ಯಪ್ರವೇಶಿಸಿದ ಶಾಸಕ ಗೂಳಿಹಟ್ಟಿ ಶೇಖರ್‌, ಬಿಡಿಎಯಿಂದ ನನಗೆ, ನರೇಂದ್ರ ಸ್ವಾಮಿ ಹಾಗೂ ಅಭಯ್‌ ಪಾಟೀಲ್‌ಗೆ ಹಂಚಿಕೆಯಾಗಿರುವ ಜಿ-ಕೆಟಗರಿ ನಿವೇಶನಕ್ಕೆ ಸಂಬಂಧಿಸಿ ಕೆಲವರು ಬೋಗಸ್‌ ಖಾತೆ ಮಾಡಿಸಿಕೊಂಡು. ನೋಂದಣಿ ಮಾಡಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಶಾಸಕರ ನಿವೇಶನಗಳೇ ಈ ರೀತಿಯಾದರೆ, ಸಾರ್ವಜನಿಕರ ಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು. ಧ್ವನಿಗೂಡಿಸಿದ ಶಾಸಕ ಅರವಿಂದ ಲಿಂಬಾವಳಿ, ಪ್ರತಿಭಾ ಪ್ರಹ್ಲಾದ್‌ ಅವರಿಗೆ ಸರ್ಕಾರ ಕೊಟ್ಟ ಜಾಗದಲ್ಲಿ ಯಾರೋ ನಕಲಿ ಖಾತೆ ಸೃಷ್ಟಿಸಿಕೊಂಡಿದ್ದಾರೆ. 10 ವರ್ಷವಾದರೂ ಅವರಿಗೆ ನಿವೇಶನ ಸಿಕ್ಕಿಲ್ಲ ಎಂದು ಸಭೆಯ ಗಮನ ಸೆಳೆದರು.

ಶಾಸಕರ ಪ್ರಶ್ನೆಗೆ ಉತ್ತರಿಸಿ ಸಚಿವ ಆರ್‌.ಅಶೊಕ್‌, ಯಾವ ಪ್ರದೇಶ, ಸರ್ವೇ ನಂ. ನಿವೇಶನ ಸಂಖ್ಯೆ ಸೇರಿ ಯಾವ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿದೆ ಎಂಬುದನ್ನು ಕಳುಹಿಸಿಕೊಟ್ಟರೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸ್‌ ತನಿಖೆಗೆ ಒಪ್ಪಿಗೆ:
ನಕಲಿ ಖಾತ ಮಾಡುವವರ ವಿರುದ್ಧ ಕಠಿನ ಕ್ರಮಕ್ಕಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಡಲು ಸಿದ್ಧನಿದ್ದೇನೆ ಎಂದು ಸಚಿವ ಆರ್‌. ಅಶೋಕ ಸದನಕ್ಕೆ ತಿಳಿಸಿದಾಗ ಶಾಸಕ ಕೃಷ್ಣ ಭೈರೇಗೌಡ ಪೊಲೀಸ್‌ ತನಿಖೆ ಮಾಡಿಸಿದರೆ ಸಾಕು. ಸಿಐಡಿ ತನಿಖೆ ಸದ್ಯ ಅಗತ್ಯವಿಲ್ಲ ಎಂದರು. ಬಳಿಕ ಮಾತನಾಡಿದ ಸಚಿವರು, ಡಿಸಿಪಿ ಬಳಿ ಮಾತನಾಡುವೆ. ಪೊಲೀಸ್‌ ತನಿಖೆ ನಡೆಸಿ ಮಾಫಿಯಾವನ್ನು ಮಟ್ಟಹಾಕಲಾಗುವುದು ಎಂದು ಭರವಸೆ ನೀಡಿದರು.

ಭೂ ಪರಿವರ್ತನೆ ವಿಧಾನ ಸರಳ: ಅಶೋಕ್‌

ಬೆಳಗಾವಿ: ಕೃಷಿ ಭೂಮಿ ಯನ್ನು ಕೃಷಿಯೇತರ ಉದ್ದೇಶಗಳಿ ಗಾಗಿ ಪರಿವರ್ತಿಸುವ ವಿಧಾನವನ್ನು ಸರಳಗೊಳಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

ಬುಧವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ, ಕರ್ನಾಟಕ ಭೂ ಕಂದಾಯ ಅಧಿ ನಿಯಮ 1964 ಕಲಂ 95(2)ರಡಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಹೊಂದಿ ರುವ ಭೂಮಿಯ ಅಧಿಭೋಗದಾರನು ಅಂತಹ ಜಮೀನನ್ನು ಅಥವಾ ಅದರ ಯಾವುದೇ ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಲು ಇಚ್ಛಿಸಿದರೆ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾಧಿಕಾರಿಯು ನಿಯಮಗಳಿಗೆ ಒಳಪಟ್ಟು ಅನುಮತಿಯನ್ನು ನಿರಾಕರಿಸಬಹುದು ಅಥವಾ ತಾನು ಯುಕ್ತವೆಂದು ಆಲೋಚಿಸುವಂತ ಷರತ್ತುಗಳಿಗೆ ಒಳಪಟ್ಟು ಕೊಡಬಹುದಾಗಿದೆ.

ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದಾಗ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 96(4)ರನ್ವಯ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ ಕಂದಾಯ ವಿಧಿಸಲಾಗಿರುವ ಅಥವಾ ಬೇಸಾಯದ ಉದ್ದೇಶಕ್ಕೆ ಹೊಂದಿರುವ ಯಾವುದೇ ಭೂಮಿಯನ್ನು ಯಾವುದೇ ಇತರ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಯ ಅನುಮತಿಯಿಲ್ಲದೆ ಕಟ್ಟಡ ಕಟ್ಟುವುದು ಅಥವಾ ಉಪಯೋಗ ಮಾಡಿದ್ದಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 96(4)ರನ್ವಯ ದಂಡ ವಿಧಿಸಿ, ಭೂ ಪರಿವರ್ತಿಸಲು ಅವಕಾಶ ಕಲ್ಪಿಸಲಾಗಿದೆ.

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತಿಸುವುದಕ್ಕೆ ಸಂಬಂಧಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ಕ್ಕೆ ಇತ್ತೀಚೆಗೆ ಯಾವುದೇ ತಿದ್ದುಪಡಿ ತಂದಿರುವುದಿಲ್ಲ ಎಂದು ಉತ್ತರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next