ಬೆಂಗಳೂರು: ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಕ್ಕೆ ಗುರುವಾರ ದಿಢೀರ್ ಭೇಟಿ ನೀಡಿ ಹಾಲು ಮತ್ತು ಹಾಲಿನ ವಿವಿಧ ಖಾದ್ಯಗಳ ಉತ್ಪನ್ನ ಘಟಕದಲ್ಲಿ ತಯಾರಿಸುವ ಸಿಹಿ ಮತ್ತು ತಿಂಡಿ ತಿನಿಸುಗಳನ್ನು ಪರಿಶೀಲನೆ ನಡೆಸಿದರು.
ಕೆಎಂಎಫ್ ಸಭಾಂಗಣದಲ್ಲಿ ಮಾತನಾಡಿದ ಅವರು, ಹಾಲು ಪೂರೈಸುವ ರೈತರಿಗೆ ಕೊಡುತ್ತಿರುವ ಪ್ರೋತ್ಸಾಹಧನವನ್ನು ವಿಲೇ ಮಾಡದೇ ಕೂಡಲೇ ಅವರ ಖಾತೆಗಳಿಗೆ ಜಮಾ ಮಾಡಬೇಕು ಎಂದು ತಾಕೀತು ಮಾಡಿದರು.
ನಂದಿನಿ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಸೂಚನೆ ನೀಡಿದ ಅವರು, ರೈತರಿಗೆ ಅನಾನುಕೂಲವಾಗದಂತೆ ಜಾಗೃತೆ ವಹಿಸಬೇಕು. ರೈತರಿಗೆ ತೊಂದರೆಯಾಗದಂತೆ ಹಾಲನ್ನು ಖರೀದಿ ಮಾಡಬೇಕು ಎಂದು ಇದೇ ವೇಳೆ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಭು ಚವ್ಹಾಣ್ ಸೂಚನೆ ನೀಡಿದರು.
ದೇಶದಲ್ಲಿಯೇ ಸಹಕಾರಿ ವಲಯದಲ್ಲಿ ಎರಡನೇ ಸ್ಥಾನದಲ್ಲಿರುವ ಕೆಎಂಎಫ್ ರೈತರ ಆರ್ಥಿಕ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅಂತಹ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ಶ್ರಮಿಸಬೇಕು ಎಂದು ಪ್ರಭು ಚವ್ಹಾಣ್ ತಾಕೀತು ಮಾಡಿದರು.
ಕೆಎಂಎಫ್ ಡೈರಿ ಘಟಕವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದೀರಿ. ಮುಂದೆಯೂ ಉತ್ತಮವಾಗಿ ನಿರ್ವಹಣೆ ಮಾಡಬೇಕು. ಸ್ವತ್ಛತೆಗೆ ಇನ್ನೂ ಹೆಚ್ಚಿನ ಆಧ್ಯತೆ ನೀಡಬೇಕೆಂದು ಪ್ರಭು ಚವ್ಹಾಣ್ ಅವರು ಸಲಹೆ ನೀಡಿದರು.
ಕೆಎಂಎಫ್ ಆವರಣದಲ್ಲಿರುವ ಹೈನುಗಾರಿಕೆ ಪಿತಾಮಹ ಕುರಿಯನ್ ಅವರ ಪ್ರತಿಮೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ವಿವಿಧ ಖಾದ್ಯ ತಯಾರಿಕಾ ಘಟಕಗಳು ಹಾಗೂ ಕೇಂದ್ರಿಯ ಪ್ರಯೋಗಾಲಯಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.