Advertisement

ಸಚಿವ ಕಾಗೋಡು  ಎದುರೇ ವಿಷ ಕುಡಿದ ವಿದ್ಯಾರ್ಥಿನಿ!

03:45 AM Jan 28, 2017 | Team Udayavani |

ಶಿವಮೊಗ್ಗ: ಜಮೀನು ವಿವಾದ ಸಂಬಂಧ ಬಾಲಕಿಯೊಬ್ಬಳು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಶಿಕಾರಿಪುರ ತಾಲೂಕು ಅಂಜನಾಪುರದ ಡಿಪ್ಲೊಮಾ ವಿದ್ಯಾರ್ಥಿನಿ ನಯನಾ (17) ವಿಷಸೇವಿಸಿದ ಬಾಲಕಿ. ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Advertisement

ಶಿಕಾರಿಪುರದ ಗುರುಲಿಂಗಪ್ಪ ಅವರ ಜಮೀನಿಗೆ ಸಂಬಂಧಿಸಿದಂತೆ ಕೌಟುಂಬಿಕ ವಿವಾದ ನಡೆಯುತ್ತಿತ್ತು. ಈ ಜಮೀನಿನಲ್ಲಿ ಬೆಳೆಯಲಾಗಿದ್ದ ಶುಂಠಿಯನ್ನು ಕೀಳಲು ತಹಶೀಲ್ದಾರರಿಂದ ಆದೇಶ ಪಡೆದಿದ್ದರು. ಇದನ್ನು ತಿಳಿದ ಪ್ರತಿವಾದಿಗಳು ಜಮೀನಿನಲ್ಲಿ ಬೆಳೆ ಕೀಳದಂತೆ ನ್ಯಾಯಾಲಯದಿಂದ ಆದೇಶ ತಂದಿದ್ದರು ಎನ್ನಲಾಗಿದೆ. ಹೀಗಾಗಿ ಜಮೀನಿಗೆ ಸಂಬಂಧಿಸಿದ ದಾಖಲೆಗಳು ತಮ್ಮ ಪರವಾಗಿದ್ದರೂ ವಿನಾಕಾರಣ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹಿಂಸೆ ನೀಡಲಾಗುತ್ತಿದೆ ಎಂದು ಗುರುಲಿಂಗಪ್ಪ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲು ಶುಕ್ರವಾರ ಕುಟುಂಬದೊಂದಿಗೆ ಬಂದಿದ್ದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿದ ಕುಟುಂಬದವರು ಈ ಕುರಿತು  ಮನವಿ ಸಲ್ಲಿಸಿದ್ದಾರೆ. ಸಚಿವರು ಮನವಿ ಸ್ವೀಕರಿಸಿದರಾದರೂ, ನೋಡೋಣ ಎಂದು ಮುಂದೆ ನಡೆದರು ಎನ್ನಲಾಗಿದೆ. ಇದರಿಂದ ವಿಚಲಿತಳಾದ ಬಾಲಕಿ ತಾನು ಜೊತೆಗೆ ತಂದಿದ್ದ ವಿಷದ ಬಾಟಲಿ ತೆಗೆದು ಕುಡಿಯಲು ಯತ್ನಿಸಿದಳು. ತಕ್ಷಣವೇ ಅಲ್ಲಿದ್ದವರು ಆಕೆಯ ಕೈಯಿಂದ ವಿಷದ ಬಾಟಲಿ ಕಿತ್ತುಕೊಂಡರು. ಅಷ್ಟರಲ್ಲಿ ವಿಷ ಮೈಮೇಲೆಲ್ಲ ಚೆಲ್ಲಿ ಹೊಟ್ಟೆಯನ್ನೂ ಸೇರಿತ್ತು. ಬಳಿಕ ಅಸ್ವಸ್ಥಳಾದ ಕುಸಿದು ಬಿದ್ದ ಬಾಲಕಿಯನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next