ಉಡುಪಿ: ದೇಶದ ಸಂಸ್ಕೃತಿ, ಸಂಸ್ಕಾರ ಮತ್ತು ವೈವಿಧ್ಯವನ್ನು ಪರಿಚಿಸುವ ನಿಟ್ಟಿನಲ್ಲಿ ಜಿ20 ಪ್ರತಿನಿಧಿಗಳಿಗಾಗಿ ದೇಶದ 59 ನಗರಗಳಲ್ಲಿ ಸಮಾರಂಭಗಳನ್ನು ಆಯೋಜಿಸಲಾಗುತ್ತಿದೆ. ಕೊರೊನೋತ್ತರ ವಿಶ್ವದಲ್ಲಿ ಭಾರತದ ಜವಾಬ್ದಾರಿ ಹೆಚ್ಚಿದೆ. ಕೆಲವು ರಾಷ್ಟ್ರಗಳು ಆರ್ಥಿಕ ಹಿಂಜರಿತದಿಂದ ಹೊರಬರಲು ಇನ್ನೂ ಒದ್ದಾಡುತ್ತಿವೆ. ಆದರೆ ಭಾರತ ಪ್ರಗತಿಯತ್ತ ದಾಪುಗಾಲು ಇರಿಸುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಡಾ| ಎಸ್. ಜೈಶಂಕರ್ ಹೇಳಿದರು.
ಮಣಿಪಾಲದ ಕಂಟ್ರಿ ಇನ್ ಸಭಾಂಗಣದಲ್ಲಿ ಜಿÇÉಾ ಬಿಜೆಪಿ ವತಿಯಿಂದ ರವಿವಾರ ನಡೆದ ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆರ್ಥಿಕತೆಗೆ ಬಲವರ್ಧನೆ
ಭಾರತ ಕೋವಿಡ್ ಸಮಸ್ಯೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದು, ವಿಶ್ವದ 5ನೇ ಆರ್ಥಿಕತೆಯಾಗಿ ಬೆಳೆಯುತ್ತಿದೆ. ಈ ದಶಕದ ಅಂತ್ಯದ ವೇಳೆಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ವಿಶ್ವದಲ್ಲಿ ಫಾರ್ಮಸಿ ಮತ್ತು ಡಿಜಿಟಲ್ ಲೀಡರ್ ಆಗಿ ಭಾರತವನ್ನು ಪರಿಗಣಿಸಲಾಗುತ್ತಿದ್ದು, ದೇಶದ ಭದ್ರತೆ ಹಿತದೃಷ್ಟಿಯಿಂದ ಡೇಟಾ ಪ್ರೈವೇಸಿ ಮತ್ತು ಡೇಟಾ ಸೆಕ್ಯೂರಿಟಿ ಪ್ರಸಕ್ತ ಸವಾಲಿನ ಕಾರ್ಯವಾಗಿದೆ ಎಂದರು.
Related Articles
ಜನಹಿತ ನಿರ್ಧಾರ
ಉಕ್ರೇನ್ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ಭಾರತ ಯಾರ ಪರ ಅಥವಾ ವಿರುದ್ಧ ನಿಲ್ಲದೆ ಜನರಿಗೆ ಹಿತವಿರುವಂತಹ ನಿರ್ಧಾರ ಕೈಗೊಂಡಿತ್ತು. ಇದು ಕೇಂದ್ರದಲ್ಲಿ ಸಮರ್ಥ ನಾಯಕತ್ವ ಇರುವ ಕಾರಣಕ್ಕೆ ಸಾಧ್ಯವಾಗಿದೆ ಎಂದರು.
ಡಿಜಿಟಲ್ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ
ನಿತ್ಯದ ಜೀವನದಲ್ಲಿ ತಂತ್ರಜ್ಞಾನ ಬಹಳ ಪ್ರಾಮುಖ್ಯ ಪಡೆದಿದೆ. ಸರಕಾರದ ವಿವಿಧ ಯೋಜನೆಗಳ ಮಾಹಿತಿಗಳೂ ಕ್ಷಣಾರ್ಧದಲ್ಲಿ ಸಿಗುತ್ತಿವೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತಿದೆ. ಇದು ಡಿಜಿಟಲ್ ಇಂಡಿಯಾದ ಪ್ರಭಾವ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ನಾಯಕ್, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ವಿಭಾಗ ಪ್ರಭಾರಿ ಕಿದಿಯೂರು ಉದಯ ಕುಮಾರ್ ಶೆಟ್ಟಿ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಣಾಳಿಕೆ ಸಮಿತಿ ಸಹ ಸಂಚಾಲಕ ರವೀಂದ್ರ ಪೈ ಉಪಸ್ಥಿತರಿದ್ದರು.
ವಿನೋದ್ ನಾಯಕ್ ಸ್ವಾಗತಿಸಿದರು. ಶ್ರೀನಿಧಿ ಹೆಗಡೆ ವಂದಿಸಿದರು. ಶ್ರೀನಾಥ್ ನಿರೂಪಿಸಿದರು. ಅನಂತರ ಸಂವಾದ ನಡೆಯಿತು.
ಭಯೋತ್ಪಾದಕರಿಗೆ ಆರ್ಥಿಕ ನಿರ್ಬಂಧ
ಮುಂದುವರಿದ ದೇಶಗಳು ಅನೇಕ ದಶಕಗಳ ಕಾಲ ಭಯೋತ್ಪಾದನೆಯನ್ನು ತಿರಸ್ಕರಿಸುತ್ತಿದ್ದವು. ಪ್ರಸ್ತುತ ಭಯೋತ್ಪಾದಕರಿಗೆ ಆರ್ಥಿಕ ನಿರ್ಬಂಧ ಹೇರುವಲ್ಲಿ ಮತ್ತು ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಭಯೋತ್ಪಾದಕರ ಹೆಸರು ದಾಖಲಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಉರಿ ಮತ್ತು ಬಾಲಾಕೋಟ್ ಘಟನೆ ಭಯೋತ್ಪಾದನೆಯನ್ನು ಎದುರಿಸುವಲ್ಲಿ ಭಾರತದ ಸಾಮರ್ಥ್ಯವನ್ನು ಶ್ರುತಪಡಿಸಿದೆ ಎಂದು ಸಚಿವರು ತಿಳಿಸಿದರು.