Advertisement

ಪದವೀಧರ ಕ್ಷೇತ್ರ-ಬಿಜೆಪಿ ಗೆಲುವು ಶತಸಿದ್ಧ

03:50 PM Oct 25, 2020 | Suhan S |

ಗದಗ: ವಿಧಾನ ಪರಿಷತ್‌ ಪಶ್ಚಿಮ ಪದವೀಧರ ಕ್ಷೇತ್ರದ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಬಿಜೆಪಿ ಅಭ್ಯರ್ಥಿ ಎಸ್‌.ವಿ. ಸಂಕನೂರು ಅವರು ಮತದಾರರ ಮನವೊಲಿಕೆ, ಪ್ರಚಾರಕ್ಕಾಗಿ ಈಗಾಗಲೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತಿದ್ದಾರೆ. ಹೀಗಾಗಿ, ಕ್ಷೇತ್ರದಲ್ಲಿ ಬಿಜೆಪಿ ಮತ್ತೂಮ್ಮೆ ಗೆಲುವಿನ ನಗೆ ಬೀರಲಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ.

Advertisement

“ಉದಯವಾಣಿ’ ಜತೆ ಮಾತನಾಡಿದ ಅವರು, ಎಲ್ಲೆಡೆ ಚುನಾವಣಾ ಪ್ರಚಾರ ನಡೆಯುತ್ತಿದ್ದು, ವಾತಾವರಣ ಪಕ್ಷದ ಪರವಾಗಿದೆ. 10-15 ಮತದಾರರಿಗೆ ಓರ್ವ ಕಾರ್ಯಕರ್ತನನ್ನು ಜೋಡಣೆ ಮಾಡಿದ್ದೇವೆ. ಅವರು ಪ್ರತಿನಿತ್ಯಮತದಾರರನ್ನು ಭೇಟಿ ಮಾಡಿ, ಸಂಕನೂರ್‌ ಅವರ ಕರ ಪತ್ರ ನೀಡಿ ಪ್ರಚಾರ ನಡೆಸುತ್ತಿದ್ದಾರೆ. ಮತದಾನದ ದಿನ ಮತದಾರರನ್ನು ಮತಗಟ್ಟೆಗೆಕರೆತಂದು ಮತ ಹಾಕಿಸುವ ಜವಾಬ್ದಾರಿಯನ್ನೂಅವರಿಗೆ ವಹಿಸಿದ್ದೇವೆ. ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದು ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದರು.

ಪದವೀಧರ ಕ್ಷೇತ್ರ ಎಂಬುದು ಸುಶಿಕ್ಷಿತ, ಬುದ್ಧಿವಂತರ ಕ್ಷೇತ್ರ. ಇಲ್ಲಿ ಎಲ್ಲವೂ ಪರಿಗಣನೆಗೆ ಬರುತ್ತವೆ. ಸಂಕನೂರ್‌ ಅವರದ್ದು ಸೌಮ್ಯ ಸ್ವಭಾವದ ವ್ಯಕ್ತಿತ್ವ. ಕಳೆದ 6 ವರ್ಷಗಳ ಅವಧಿಯಲ್ಲಿ ಪದವೀಧರರು, ಶಿಕ್ಷಕರು ಅಲ್ಲದೇ, ಸಾರ್ವಜನಿಕರ ಪರವಾಗಿ ಸದನದ ಒಳಗೆ ಮತ್ತು ಹೊರಗೆ ಸಾಕಷ್ಟು ಹೋರಾಟ ನಡೆಸಿದ್ದಾರೆ. ಲಾಕ್‌ಡೌನ್‌ ವೇಳೆ ಅತಿಥಿ ಉಪನ್ಯಾಸಕರ ವೇತನ ಬಿಡುಗಡೆ ಸೇರಿದಂತೆ ಹಲವಾರು ರೀತಿಯಲ್ಲಿ ಶ್ರಮಿಸಿದ್ದಾರೆ. ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಭಿಮಾನಿ ಭಾರತ, ಆತ್ಮನಿರ್ಭರ ಭಾರತವನ್ನು ಕಟ್ಟುತ್ತಿದ್ದಾರೆ. ದೈತ್ಯಶಕ್ತಿ ಚೀನಾವನ್ನು ಹಿಮ್ಮೆಟ್ಟಿಸಿದ ಬಗೆ, ಕುತಂತ್ರಿ ಪಾಕಿಸ್ತಾನವನ್ನು ಮಣಿಸಿದ ರೀತಿ, ಮಹಾಮಾರಿ ಕೋವಿಡ್ ನಿಯಂತ್ರಣ, ರಾಜ್ಯ ಸರಕಾರದ ಜನಸ್ಪಂದನೆಯ ಕಾರ್ಯಕ್ರಮಗಳು, ಯೋಜನೆಗಳಿಂದಾಗಿ ಕ್ಷೇತ್ರದ ಮತದಾರರು ಸಹಜವಾಗಿಯೇ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಹೀಗಾಗಿ ಗೆಲುವು ಸುಲಭವಾಗಲಿದೆ ಎಂದು ತಿಳಿಸಿದರು.

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸುಮಾರು 75 ಸಾವಿರಕ್ಕಿಂತ ಹೆಚ್ಚು ಮತದಾರರಿದ್ದಾರೆ. ಆ ಪೈಕಿ ಗದಗ ಜಿಲ್ಲೆಯಲ್ಲಿ 16,013 ಜನ ಮತದಾರರಿದ್ದಾರೆ. ಈಗಾಗಲೇ ಪಕ್ಷದ ಘಟಕ ಪ್ರಮುಖರ ಮೂಲಕ ಬಹುತೇಕ ಮತದಾರರನ್ನು ತಲುಪಿದ್ದೇವೆ. ಪ್ರತಿ 10 -15 ಮತದಾರ ರಿಗೆ ಓರ್ವ ಘಟ ಪ್ರಮುಖರನ್ನು ಪಕ್ಷ ನೇಮಿಸಿದೆ. ಕಳೆದ ಚುನಾವಣೆಯಲ್ಲಿ 14 ಸಾವಿರ ಮತಗಳಿಂದ ಆಯ್ಕೆಯಾಗಿದ್ದ ಸಂಕನೂರ್‌ ಈ ಬಾರಿ 25 ಸಾವಿರ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ನಾನೂ ಒಳಗೊಂಡಂತೆ ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುವುದು ಪ್ರತಿಯೊಬ್ಬ ಕಾರ್ಯಕರ್ತರ ಹೊಣೆ. ಬಿಜೆಪಿಯಲ್ಲಿ ಕ್ಯಾಡರ್‌ ಬೇಸ್‌ ಕಾರ್ಯಕರ್ತರಿದ್ದಾರೆ. ಅಭಿಮಾನದಿಂದ ಕೂಡಿರುವ ಕಾರ್ಯಕರ್ತರ ಪಡೆ ಪಕ್ಷದ ದೊಡ್ಡ ಶಕ್ತಿಯಾಗಿದೆ. ಚುನಾವಣಾ ಗೆಲುವಿಗೆ ಜಿಲ್ಲೆಯಲ್ಲಿ ರೂಪಿಸಿದ್ದ ಕಾರ್ಯಕ್ರಮ ಪಾಲಿಸಲಾಗುತ್ತಿವೆ. ಬೂತ್‌ನಿಂದ ಹಿಡಿದು ಶಿಕ್ಷಣ ಸಂಸ್ಥೆಗಳು ಹಾಗೂ ಮನೆ ಮನೆ ಭೇಟಿಯನ್ನು ಚಾಚೂ ತಪ್ಪದೇ ನಿರ್ವಹಿಸುತ್ತಿದ್ದೇವೆ. ಇದರಿಂದ ಎಲ್ಲ ಮತದಾರರನ್ನು ತಲುಪುವಂತೆ ಮಾಡಿದ್ದೇವೆ. ಚುನಾವಣೆ ಗೆಲುವಿಗೆ ಪಕ್ಷವೇ ಬೆನ್ನೆಲುಬು. ಪಕ್ಷದ ಪರವಾಗಿರುವ ಅಲೆಯನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳುವುದು ಅಭ್ಯರ್ಥಿ, ನಾಯಕರ ಕೆಲಸವಾಗಿದೆ. ಸರಕಾರದ ಸಾಧನೆಗಳು, ಅಭ್ಯರ್ಥಿಯ ವರ್ಚಸ್ಸು ಕೂಡಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 19 ಕ್ಷೇತ್ರದಲ್ಲಿ ಬಿಜೆಪಿ ಶಾಸಕರು, ಸಂಸದರಿರುವುದರಿಂದ ಸಂಕನೂರ್‌ ಅವರಿಗೆ ಆನೆ ಬಲ ತಂದುಕೊಟ್ಟಂತಾಗಿದೆ. ಆದರೂ, ಮತದಾನ ಮುಗಿಯುವವರೆಗೆ ವಿಶ್ರಮಿಸುವುದಿಲ್ಲ ಎಂದು ತಿಳಿಸಿದರು.

Advertisement

ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಎಲ್ಲ ಕಡೆ ಸಂಚಾರ ಮಾಡಿದ ಸಂದರ್ಭ ಬಿಜೆಪಿ ಪರ ಅಲೆ ಕಂಡುಬರುತ್ತಿದ್ದು, ವಾತಾವರಣ ಉತ್ತಮವಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು ಕೆಳ ಹಂತದಿಂದಲೇ ಚುನಾವಣೆಗೆಸಿದ್ಧತೆ ನಡೆಸಿರುವುದು ಪಕ್ಷದ ಅಭ್ಯರ್ಥಿ ಪ್ರೊ| ಎಸ್‌.ವಿ.ಸಂಕನೂರು ಅವರ ಗೆಲುವಿಗೆ ಸಹಕಾರಿಯಾಗಲಿದೆ. ಕಳೆದ ಚುನಾವಣೆಗಿಂತಲೂ ಈ ಬಾರಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ.  –ಶಿವಕುಮಾರ ಉದಾಸಿ, ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next