Advertisement

ಎನ್ಇಪಿ ಬಗ್ಗೆ ಅಲ್ಪಸಂಖ್ಯಾತರಿಗೆ ಆತಂಕ ಬೇಡ : ಸಚಿವ ಅಶ್ವತ್ಥನಾರಾಯಣ

07:21 PM Oct 12, 2021 | Team Udayavani |

ಬೆಂಗಳೂರು: “ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ-2020) ಬಗ್ಗೆ ಅಲ್ಪಸಂಖ್ಯಾತ ಸಮುದಾಯದವರಿಗೆ ಯಾವುದೇ ಅನುಮಾನವಾಗಲಿ, ಆತಂಕವಾಗಲಿ ಬೇಡ. ಇದು ಯಾರ ಹಕ್ಕುಗಳನ್ನಾಗಲಿ, ಸೌಲಭ್ಯಗಳನ್ನಾಗಲಿ ಕಸಿದು ಕೊಳ್ಳುವುದಿಲ್ಲ. ಎಲ್ಲ ಸಮುದಾಯಗಳ ಮಕ್ಕಳ ಉಜ್ವಲ ಭವಿಷ್ಯವೇ ಎನ್ಇಪಿಯ ಗುರಿಯಾಗಿದೆ” ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಎನ್ಇಪಿ ಕುರಿತು ಮುಸ್ಲಿಂ ಸಮುದಾಯದ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಸಭೆಯಲ್ಲಿ ಅವರು ಈ ಭರವಸೆ ನೀಡಿದರು.

ಸಭೆಯಲ್ಲಿ ಸಮುದಾಯದ ಧರ್ಮಗುರುಗಳು, ನಿವೃತ್ತ ಐಎಎಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಪ್ರಾಧ್ಯಾಪಕರು, ಎನ್.ಜಿಒ ಪ್ರತಿನಿಧಿಗಳು, ವಿದ್ಯಾರ್ಥಿ ಪ್ರತಿನಿಧಿಗಳು ಮುಂತಾದವರು ಪಾಲ್ಗೊಂಡಿದ್ದರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಪ್ರೊ.ತಿಮ್ಮೇಗೌಡರು ಮೊದಲಿಗೆ ಅಲ್ಪಸಂಖ್ಯಾತ ಪ್ರತಿನಿಧಿಗಳಿಗೆ ಎನ್ಇಪಿ ಕುರಿತು ಸ್ಥೂಲವಾಗಿ ವಿವರಿಸಿದರು. ನಂತರ ಚಾಲನೆ ಪಡೆದ ಸಂವಾದದಲ್ಲಿ ಸಚಿವರು ಎಲ್ಲ ಪ್ರಶ್ನೆ ಮತ್ತು ಅನುಮಾನಗಳಿಗೆ ಕಿವಿಯಾಗಿ, ಸುಮಾರು ಒಂದು ಗಂಟೆ ಕಾಲ ವಸ್ತುನಿಷ್ಠ ಉತ್ತರಗಳನ್ನು ನೀಡಿದರು.

ಆರಂಭದಲ್ಲಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಸನಾವುಲ್ಲಾ, ಎನ್ಇಪಿ-2020 ನೀತಿಯು ಸಂವಿಧಾನವು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಹೇಳಿರುವ ಆಶಯಗಳಿಗೆ ವಿರುದ್ಧವಾಗಿರುವಂತಿದೆ ಎಂದು ಸಂದೇಹ ವ್ಯಕ್ತಪಡಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ನಿಮ್ಮ ಹಿತರಕ್ಷಣೆಗೆಂದು ಸಂವಿಧಾನದಲ್ಲಿರುವ 28, 29 ಮತ್ತು 30ನೇ ವಿಧಿಗಳು ಎಂದಿನಂತೆಯೇ ಇರಲಿವೆ. ಅವುಗಳನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಎನ್ಇಪಿ ವಿಶೇಷವಾಗಿ, ಶಿಕ್ಷಣದಲ್ಲಿ ಹಿಂದುಳಿದಿರುವ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಜನಾಂಗದವರು ಹಾಗೂ ಬುಡಕಟ್ಟು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ತುಂಬಾ ಒತ್ತು ಕೊಟ್ಟಿದೆ. ಹೀಗಾಗಿ ಯಾವುದೇ ಆಧಾರರಹಿತ ಅನುಮಾನಗಳನ್ನು ಇಟ್ಟುಕೊಳ್ಳಬೇಡಿ,’’ ಎಂದು ಮನವರಿಕೆ ಮಾಡಿಕೊಟ್ಟರು.

ಇದಾದ ಮೇಲೆ ಕೆಲವರು ಎನ್ಇಪಿಯಿಂದಾಗಿ ಈಗ ತಮಗೆ ಸಿಗುತ್ತಿರುವ ಸ್ಕಾಲರ್ಶಿಪ್, ಮೀಸಲು ಇತ್ಯಾದಿಗಳು ಇನ್ನಿಲ್ಲವಾಗಬಹುದು ಎಂದು ಸಂದೇಹಪಟ್ಟರು. ಆಗ ಸಚಿವರು, “ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಜಾರಿಗೆ ಬರುತ್ತಿರುವ ಮೂರನೇ ಎನ್ಇಪಿ ಇದಾಗಿದೆ. ಹಿಂದೆ ಎರಡೂ ಸಲ ಎನ್ಇಪಿ ಬಗ್ಗೆ ಒಂದೇ ಒಂದು ಸಂವಾದವೂ ನಡೆದಿಲ್ಲ. ಇದೇ ಮೊದಲ ಬಾರಿಗೆ ಎನ್ಇಪಿ ಜಾರಿ ಕುರಿತು ಎಲ್ಲರೊಂದಿಗೂ ಮುಕ್ತವಾದ ಸಂವಾದಗಳನ್ನು ನಾವು ನಡೆಸುತ್ತಿದ್ದೇವೆ. ಎನ್ಇಪಿ ನಿಮ್ಮ ಸವಲತ್ತುಗಳನ್ನಾಗಲಿ, ಹಕ್ಕುಗಳನ್ನಾಗಲಿ ಕಿತ್ತುಕೊಳ್ಳುವುದಿಲ್ಲ. ಎನ್ಇಪಿ ಮತ್ತು ಉಳಿದ ವಿಷಯಗಳನ್ನು ಅನಗತ್ಯವಾಗಿ ತಳುಕು ಹಾಕಿಕೊಂಡು, ಗೊಂದಲಕ್ಕೆ ಒಳಗಾಗಬೇಡಿ,’’ ಎಂದು ಸ್ಪಷ್ಟಪಡಿಸಿದರು.

“ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳಿಲ್ಲ ಎಂದಲ್ಲ. ಆದರೆ, ಅವುಗಳನ್ನು ಬಗೆಹರಿಸಿಕೊಳ್ಳಬೇಕೇ ವಿನಾ ಸುಮ್ಮನೆ ಕೂರಬಾರದು. ನಮ್ಮ ಸರಕಾರವು ಸುಧಾರಣೆಗಳಲ್ಲಿ ನಂಬಿಕೆ ಇಟ್ಟುಕೊಂಡಿದೆ. ಪರಸ್ಪರ ನಂಬಿಕೆಯಿದ್ದರೆ ಮಾತ್ರ ನಾವು ಅಭಿವೃದ್ಧಿಯನ್ನು ಸಾಧಿಸಬಹುದು. ಇದಕ್ಕೆ ಇಂದಿನ ಈ ಸಭೆಯೇ ಸಾಕ್ಷಿ”ಎಂದು ಸಚಿವರು ಹೇಳಿದಾಗ, ಎದುರಿದ್ದವರ ಮುಖದಲ್ಲಿ ನಿರಾಳತೆ ಕಾಣಿಸಿಕೊಂಡಿತು.

ಎನ್ಇಪಿ ಕೇವಲ ಬಿಜೆಪಿಯ ಕಾರ್ಯಕ್ರಮವಲ್ಲ. ಇದಕ್ಕೆ ಅಂತಿಮರೂಪ ಕೊಡುವ ಮುನ್ನ 3 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಲಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರ, ಬಳಿಕ ಬಂದ ಸಮ್ಮಿಶ್ರ ಸರಕಾರಗಳು ಕೂಡ ಸಲಹೆ ನೀಡಿವೆ. ಅವುಗಳನ್ನೂ ಇದರಲ್ಲಿ ಅಳವಡಿಸಿಕೊಳ್ಳಲಾಗಿದೆ. ಶಿಕ್ಷಣ ವ್ಯವಸ್ಥೆ ಸರಿಯಾದರೆ ಮಾತ್ರ ಇಡೀ ಸಮಾಜ ಸರಿಯಾಗುತ್ತದೆ. ಎನ್ಇಪಿ ಯನ್ನು ಅತ್ಯಂತ ಪಾರದರ್ಶಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಲವಲವಿಕೆಯಿಂದ ನಡೆದ ಸಂವಾದಕ್ಕೆ ತೆರೆ ಬಿದ್ದಾಗ, ಅಲ್ಪಸಂಖ್ಯಾತರ ಮೊಗದಲ್ಲಿ ಸಮಾಧಾನ ಮನೆಮಾಡಿತ್ತು; ಎನ್ಇಪಿ ಬಗ್ಗೆ ಅವರಲ್ಲಿದ್ದ ಆತಂಕ ಕರಗಿತ್ತು.

ಸಂವಾದದಲ್ಲಿ ಧರ್ಮಗುರುಗಳಾದ ಮೌಲಾನ ಶಬೀರ್ ಅಹ್ಮದ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ, ನಿವೃತ್ತ ಐಎಎಸ್ ಅಧಿಕಾರಿ ಅಜೀಜುಲ್ಲಾ ಬೇಗ್, ನಿವೃತ್ತ ಡಿಸಿಪಿ ಜಿ.ಎ.ಬಾವಾ, ಪ್ರೊ.ನೂರುದ್ದೀನ್, ಪ್ರೊ.ಶಾಕಿರಾ ಖಾನುಂ, ಪತ್ರಕರ್ತ ಎಂ.ಎ.ಸಿರಾಜ್, ಬೆಂವಿವಿ ಸಿಂಡಿಕೇಟ್ ಮಾಜಿ ಸದಸ್ಯ ಆಘಾ ಸುಲ್ತಾನ್, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಮುಖ್ಯಸ್ಥ ಶಾವೀಜ್ ಅಹ್ಮದ್ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next