Advertisement

ಭಗವದ್ಗೀತೆಯ ಮನೋವೈಜ್ಞಾನಿಕ ಮಜಲುಗಳು

11:07 PM Dec 02, 2022 | Team Udayavani |

ಭಗವದ್ಗೀತೆಗೆ ಹೇಗೆ ಒಂದು ಅಧ್ಯಾತ್ಮಸಂಬಂಧವಾದ ಆಯಾಮ ಇದೆಯೋ ಹಾಗೆಯೇ ಮನೋವೈಜ್ಞಾನಿಕ ಆಯಾಮವೂ ಇದೆ. ಇದು ಎಲ್ಲ ಹಿಂದೂ ಪುರಾಣ ಮತ್ತು ದರ್ಶನಗಳ ವೈಶಿಷ್ಟ್ಯ.

Advertisement

ಭಾರತೀಯ ತತ್ತÌಶಾಸ್ತ್ರದ ತಿರುಳನ್ನು ಸಂಕ್ಷೇಪಿಸಿ ಕೇವಲ ನಾಲ್ಕು ಶಬ್ದಗಳಲ್ಲಿ ಹೇಳಬಹುದಾದರೆ, ಆ ಶಬ್ದಗಳು: ಆಸೆ, ಹೆದರಿಕೆ, ದುಃಖ, ಮತ್ತು ಬಿಡುಗಡೆ. ಈ ನಾಲ್ಕೂ ಶಬ್ದಗಳು ಮೂಲಭೂತವಾಗಿ ಅಸಂಖ್ಯ ನೆನಪುಗಳ ಅಗಾಧ ವಿಶ್ವವಾ ಗಿರುವ ಮನಸ್ಸಿಗೆ ಸಂಬಂಧಿಸಿದವುಗಳೇ ಆಗಿವೆ. ಆದ್ದರಿಂದತತ್ವಶಾಸ್ತ್ರ ಅಥವಾ ಫಿಲಾಸಫಿ ಎಂಬುದು ಎಲ್ಲಕ್ಕಿಂತ ಮಿಗಿಲಾಗಿ, ಮನುಷ್ಯನ ನಾನಾ ರೀತಿಯ ಅನುಭವಗಳ ಹಿನ್ನೆಲೆಯಲ್ಲಿ ಅವನ ಮನಸ್ಸಿನ ಅನಂತ ಸಾಧ್ಯತೆಗಳ ಅಧ್ಯಯನ ಮತ್ತು ನಿರಂತರ ಹುಡುಕಾಟವಲ್ಲದೆ ಬೇರೇನೂ ಅಲ್ಲ ಎನ್ನಬಹುದು.

ಹೀಗಾಗಿ ನಮ್ಮ ವೇದೋಪನಿಷತ್ತುಗಳು, ಭಾಗವತ, ಪುರಾಣಗಳು, ರಾಮಾಯಣ, ಮಹಾಭಾರತ, ಮನುಸ್ಮತಿ, ಭಗವದ್ಗೀತೆ – ಎಲ್ಲವೂ ಹಲವು ಸಾವಿರ ವರ್ಷಗಳಿಂದ ಮನುಷ್ಯ ತನ್ನ ನಿಯಂತ್ರಣಕ್ಕೆ ಸಿಗದ, ಅತ್ಯಂತ ಸಂಕೀರ್ಣವಾದ ಮನಸ್ಸನ್ನು ತನ್ನ ಹಾಗೂ ಇತರರ ಒಳಿತಿಗಾಗಿ, ಸುಖಕ್ಕಾಗಿ ಪಳಗಿಸುತ್ತ, ಬಲಾತ್ಕಾರಪೂರ್ವಕವಾಗಿ ಪಳಗಿಸುವಲ್ಲಿ ಹೆಚ್ಚು ಹೆಚ್ಚು ಸೋಲುತ್ತ ಬಹಳ ಸ್ವಲ್ಪ ಗೆಲ್ಲುತ್ತ, ಹತಾಶನಾಗುತ್ತ ಸಾಗಿ ಬಂದ ಒಂದು ಮಹಾಯಾನದ ಸಾರ್ವತ್ರಿಕ ಹಾಗೂ ಐತಿಹಾಸಿಕ ದಾಖಲೆ.

ಈ ಹಿನ್ನೆಲೆಯಲ್ಲಿ ಭಗವದ್ಗೀತೆಯ ವಿಷಾದಯೋಗ ಹಾಗೂ ಸಾಂಖ್ಯಯೋಗ, ಕಠೊಪನಿಷತ್ತಿನ ಯಮ-ನಚಿಕೇತ ಸಂವಾದ, ಮಹಾಭಾರತದ ಶಾಂತಿ ಪರ್ವದಲ್ಲಿ ಬರುವ ಭೀಷ್ಮ ಹಾಗೂ ಯುಧಿಷ್ಠಿರನ ನಡುವೆ ನಡೆಯುವ ಪ್ರಶ್ನೋತ್ತರ ಮತ್ತು ಅರಣ್ಯ ಪರ್ವದ ಯಕ್ಷಪ್ರಶ್ನೆ-ಎಲ್ಲವೂ ಅನೂಹ್ಯ ಮನೋವೈಜ್ಞಾನಿಕ ಒಳನೋಟಗಳ ಅನನ್ಯ ಪಠ್ಯಗಳು ಮತ್ತು ರೂಪಕಗಳ, ಸಂಕೇತಗಳ ಮೂಲಕ ಕಾವ್ಯಾತ್ಮಕವಾಗಿ, ಸೂಚ್ಯ ವಾಗಿ ತೆರೆದುಕೊಳ್ಳುವ ವಿಶ್ವಸಾಹಿತ್ಯದ ಮಾನವ ಪ್ರಜ್ಞೆಯ, ಬೌದ್ಧಿಕತೆಯ ವಿಕಾಸದ ವಿಭಿನ್ನ, ವಿಶಿಷ್ಟ ಮಾದರಿಗಳು.

ಲೋಕವಿಖ್ಯಾತ ಕೃತಿಯಾಗಿರುವ ದಿ ಇಂಟರ್‌ಪ್ರಟೇಶನ್‌ ಆಫ್ ಡ್ರೀಮ್ಸ್‌ ನ ಲೇಖಕ ಹಾಗೂ ಮನೋವಿಶ್ಲೇಷಣೆಯ (psychoanalysis)ಜನಕ ಸಿಗ¾ಂಡ್‌ ಫ್ರಾಯ್ಡನ ಮನೋ ವೈಜ್ಞಾನಿಕ ಪರಿಕಲ್ಪನೆಗಳನ್ನು ಬಳಸಿ ಭಗವದ್ಗೀತೆಯ ವಿಷಾದ ಯೋಗ ಹಾಗೂ ಸಾಂಖ್ಯಯೋಗವನ್ನು ವಿಶ್ಲೇಷಿಸಿದಲ್ಲಿ ಅದು ಗೀತೆಯ ಅಧ್ಯಯನ ಹಾಗೂ ಅರ್ಥ ವಿವರಣೆಯಲ್ಲಿ ಹೊಸ ಒಳನೋಟಗಳ ವಿಶ್ವದರ್ಶನವನ್ನೆ ಮಾಡಿಸುವ ಸಾಧ್ಯತೆ ಇದೆ.

Advertisement

ಉದಾಹರಣೆಗೆ ನಮ್ಮ ಅಪ್ರಜ್ಞಾಸ್ಥಿತಿಯ (unconscious)ಅಥವಾ ಸುಪ್ತ (subconscious) ಸ್ಥಿತಿಯ ಮನಸ್ಸಿನಲ್ಲಿ ನಡೆಯುವ ಆಗುಹೋಗುಗಳು, ಅಹಂ ಮನೋಭಾವ (ego-psychology) ಅರ್ಜುನನ ಮನಸ್ಸಿನಲ್ಲಿ ನಡೆಯುವ ಕ್ರಿಯೆ/ಕರ್ಮ ಹಾಗೂ ಅ-ಕ್ರಿಯೆ/ಅ-ಕರ್ಮದ ನಡುವಿನ ಹೊಯ್ದಾಟ ಅಂದರೆ ಆಧುನಿಕ ತುಮುಲ ಸಿದ್ಧಾಂತ (conflict theory) ಜಾಗ್ರತ ಮತ್ತು ಅಜಾಗ್ರತ ಮನಸ್ಸಿನ ನಡುವೆ ನಡೆಯುವ ತಿಕ್ಕಾಟಗಳ ಪರಿಣಾಮವಾದ ಆತಂಕ (anxiety)ಹಾಗೂ ಖಿನ್ನತೆ (depression), ಮಹಾಭಾರತದ ಯುದ್ಧದಲ್ಲಿ ಅಂತಿಮವಾಗಿ ಕಾಣಿಸುವ ಮನುಷ್ಯನ ಪ್ರಾಣಿಸಹಜ ಪ್ರವೃತ್ತಿಯಾಗಿರುವ (instinct) ಹಿಂಸೆ, ವಿನಾಶಕಾರಿತ್ವ, ಸ್ವ-ವಿನಾಶಕಾರಿ ಹಾಗೂ ಸ್ವರಕ್ಷಣಾತ್ಮಕ ವರ್ತನೆ, ಈ ವರ್ತನೆಯ ಜತೆಯಲ್ಲೆ ಸಾವನ್ನು ಗೆದ್ದು ಅಮರತ್ವವನ್ನು (ಮೋಕ್ಷವನ್ನು?) ಪಡೆಯುವ ಪ್ರಯತ್ನದ ಭಾಗವಾಗಿ ಮನುಷ್ಯ ಸೃಷ್ಟಿಸಿದ ಕಲೆ, ಸಾಹಿತ್ಯ, ಧರ್ಮ, ಪುರಾಣ, ತತ್ತಶಾಸ್ತ್ರ, ಸಂಸ್ಕೃತಿ, ನಾಗರಿಕತೆ, ಸಾಮಾಜಿಕ ವ್ಯವಸ್ಥೆ ಎಲ್ಲವನ್ನೂ ಮನುಷ್ಯನ ಸೂಕ್ಷ್ಮ ಮನಸ್ಸಿನ ವಿವಿಧ ವಿನ್ಯಾಸಗಳ ಒಂದು ಮಹಾ ಅಧ್ಯಯನವಾಗಿ ನೋಡುವುದು ಸಾಧ್ಯ. ಅಥವಾ ಅಧ್ಯಯನದ ಸಾಧ್ಯತೆಯಾಗಿ, ಕನಿಷ್ಠ ಪಕ್ಷ ಸಾಧ್ಯತೆಯ ಒಂದು ನೈಜ ಹುಡುಕಾಟವಾಗಿ ತಡಕಾಡುವುದಾದರೂ ಸಾಧ್ಯ.

ಇಂತಹ ಒಂದು ಮೆಗಾ ಹಿನ್ನೆಲೆಯಲ್ಲಿ ಮ್ಯಾಕ್ರೋ (macro) ಚೌಕಟ್ಟಿನಲ್ಲಿ ಹತ್ತಾರು ವಿಶ್ಲೇಷಣೆಗೊಳಗಾಗಿರುವ ಗೀತೆಯ ವಿಷಾದಯೋಗ ಹಾಗೂ ಸಾಂಖ್ಯಯೋಗದ ಒಂದು ಮೈಕ್ರೋ(micro)) ವಿಶ್ಲೇಷಣೆ, ಅರ್ಥ ವಿವರಣೆ ಹೇಗಿರಬಹುದು? ಅಲ್ಲಿಯ ಹಲವು ಶ್ಲೋಕಗಳ ಕೆಲವು ಶಬ್ದಗಳ ನಿರುಕ್ತಿ, ಅರ್ಥಬಹುತ್ವ (semantic plurality), ಮತ್ತು ಶಾಬ್ದಿಕೇತರ (paralinguistic) ಸಂವಹನ ಶಕ್ತಿಯ ವ್ಯಾಪ್ತಿಯನ್ನು ನಾವು ಎಷ್ಟರ ಮಟ್ಟಿಗೆ ಗ್ರಹಿಸಬಹುದು?

ಭಯವಾದಾಗ ನಮ್ಮ ಅವಯವಗಳು ಕಂಪಿಸುತ್ತವೆ, ಬಾಯಿ ಒಣಗುತ್ತದೆ, ಮನಸ್ಸು ಚಂಚಲಗೊಂಡು ದೃಢ ನಿರ್ಧಾರ ಸಾಧ್ಯವಾಗುವುದಿಲ್ಲ. ಭಯದ ಪರಿಣಾಮವಾಗಿ ಮುಂದಕ್ಕೆ ಏನಾಗುತ್ತದೋ, ನಮ್ಮ ಆಸೆ ಈಡೇರುತ್ತದೋ ಇಲ್ಲವೋ ಎಂಬ ಆತಂಕ, ಆತಂಕದ ಜತೆ ಬರುವ ಖನ್ನತೆ, ಡಿಪ್ರಶನ್‌, ದುಃಖ (ಶೋಕ), ಶೋಕದ ಪರಿಣಾಮವಾಗಿ ಕ್ರಿಯೆಯಲ್ಲಿ ನಿರಾಸಕ್ತಿ, ಈ ನಿರಾಸಕ್ತಿಯ ಪರಿಣಾಮವಾಗಿ ಅಕ್ರಿಯೆ (inaction) ನಮ್ಮ ಜೀವನಾನುಭವ.

ಗೀತೆಯ ವಿಷಾದಯೋಗದಲ್ಲಿ ತನ್ನ ಸಮಸ್ತ ಬಂಧುಗಳನ್ನು ನೋಡಿ ಅವರ ಮೇಲಿನ ಮೋಹದಿಂದ ವಿಷಣ್ಣನಾಗಿ ಅರ್ಜುನ ಹೇಳುವ (ವಿಷೀದನ್ನಿವಮಬ್ರವೀತ್‌) ಮಾತುಗಳನ್ನು ಗಮನಿಸಬೇಕು : ಸ್ವಜನರನ್ನು ನೋಡಿ ನನ್ನ ಅವಯವಗಳು ಕುಂದುತ್ತಿವೆ. (ಸೀದಂತಿ ಮಮ ಗಾತ್ರಾಣಿ), ಬಾಯಿ ಒಣಗುತ್ತಿದೆ (ಮುಖಂ ಚ ಪರಿಶುಷ್ಯತಿ), ನನ್ನ ಮನಸ್ಸು ಚಂಚಲಗೊಂಡು ಸುತ್ತುತ್ತಿರುವ ಹಾಗೆ ಇದೆ. (ಭ್ರಮತೀವ ಚ ಮೇ ಮನಃ), ಕುಲನಾಶದಿಂದ ಧರ್ಮ ನಷ್ಟವಾಗಿ ವರ್ಣ ಸಂಕರ ಉಂಟಾಗುತ್ತದೆ ಎಂಬ ಭಯ ಕಾಡುತ್ತಿದೆ. ಅಂತಿಮವಾಗಿ ಅವನನ್ನು ಕಾಡುವ, (ಮನಃಶಾಸ್ತ್ರದ ಪರಿಭಾಷೆಯಲ್ಲಿ) ಅಪರಾಧ ಪ್ರಜ್ಞೆಯೊಂದಿಗಿನ ದುಃಖದಿಂದ ವ್ಯಾಕುಲನಾಗಿ (ಶೋಕ ಸಂವಿಗ್ನ ಮಾನಸಃ) ಅರ್ಜುನ ಶಸ್ತ್ರತ್ಯಾಗ ಮಾಡಿ ರಥದಲ್ಲಿ ಕುಳಿತುಬಿಡುತ್ತಾನೆ.

ಎರಡನೆಯ ಅಧ್ಯಾಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅಧ್ಯಾಯದ ಉದ್ದಕ್ಕೂ ಕೃಷ್ಣ ಆತಂಕಗೊಂಡ, ಭೀತನಾದ, ಶೋಕತಪ್ತನಾದ ಅರ್ಜುನನನ್ನು, ಕಶ್ಮಲದಂತಹ ಮೋಹದಿಂದ ಬಿಡುಗಡೆಗೊಳಿಸುತ್ತಾನೆ, ಮುಕ್ತನಾಗಿಸುತ್ತಾನೆ. ಅವನ ಕ್ಷುದ್ರ ವಾದ ಮನೋದೌರ್ಬಲ್ಯವನ್ನು (ಕ್ಷುದ್ರ ಹೃದಯ ದೌರ್ಬಲ್ಯಂ) ಅವನು ತ್ಯಜಿಸಿ ಬಿಲ್ಲು ಬಾಣಗಳನ್ನು ಕೈಗೆತ್ತಿಕೊಳ್ಳುವಂತೆ ಎದ್ದೇಳು ಎನ್ನುವ (ಇಂದಿನ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಗಳು ನೇಮಿಸಿಕೊಳ್ಳುವ) ಒಬ್ಬ ಕ್ಲಿನಿಕಲ್‌ ಸೈಕಾಲಜಿಸ್ಟ್‌ನ ಹಾಗೆ ಅವನಿಗೆ ಕೌನ್ಸೆಲಿಂಗ್‌ ಮಾಡುತ್ತಾನೆ.

ಸೈಕೊಥೆರಪಿಯನ್ನು ಬಳಸಿ ಮನೋ ವಿಜ್ಞಾನದ ನೆಲೆಯಲ್ಲಿ ಪ್ರಶ್ನೋತ್ತರಗಳ ಮೂಲಕ ಆಪ್ತ ಸಮಾ ಲೋಚನೆ ನಡೆಸಿ ತನ್ನೆಡೆಗೆ ಬಂದಿರುವ ಖಿನ್ನ (depressed) ವ್ಯಕ್ತಿಯನ್ನು ಅಂತಿಮವಾಗಿ ಸೂಕ್ತವಾದ, ಸರಿಯಾದ ಕ್ರಿಯೆಗೆ ಸಿದ್ಧಗೊಳಿಸುವ ಮನೋವೈದ್ಯನಾಗಿ ಕೃಷ್ಣ ಯಶಸ್ವಿಯಾಗುತ್ತಾನೆ. ಮನೋಚಿಕಿತ್ಸೆಯ ಪರಿಭಾಷೆಯಲ್ಲಿ ಅಡ್ಜಸ್ಟ್‌ಮೆಂಟ್‌ ಡಿಸಾ ರ್ಡರ್‌ ಅನ್ನು ಹೋಗಲಾಡಿಸುತ್ತಾನೆ. ಅ-ಕರ್ಮದಿಂದ ಕರ್ಮದ ಕಡೆಗೆ ಅವನ ಮನಸ್ಸು ಪರಿವರ್ತನೆಗೊಳ್ಳುವಂತೆ ಮಾಡುತ್ತಾನೆ. ಅ-ಕರ್ಮದಿಂದ ಅರ್ಜುನನಿಗೆ ಮೋಕ್ಷ ದೊರಕಿಸುತ್ತಾನೆ. ಅವನಲ್ಲಿ ಭಾವನಾತ್ಮಕ ಸಮತೋಲನ ಉಂಟಾಗುವಂತೆ ನೋಡಿಕೊಳ್ಳುತ್ತಾನೆ.

ಆಧ್ಯಾತ್ಮಿಕ ಪರಿಭಾಷೆಯಲ್ಲಿ ಉತ್ಕಟವಾದ ಭಕ್ತಿ ಹೇಗೆ ಕೆಲಸ ಮಾಡುತ್ತದೋ ಮನಃಶಾಸ್ತ್ರದ ಪರಿಭಾಷೆಯಲ್ಲಿ ಅದು ಮನೋ ವೈದ್ಯನ ಬಳಿಗೆ ಬರುವ ವ್ಯಕ್ತಿಗೆ ತನ್ನ ವೈದ್ಯನಲ್ಲಿರುವ ವಿಶ್ವಾಸದ, ಉತ್ಕ ಟತೆಯನ್ನು, ತೀವ್ರತೆಯನ್ನು ಅವಲಂಬಿಸಿ ಕೆಲಸ ಮಾಡುತ್ತದೆ.

ಆದರೆ ಆಧ್ಯಾತ್ಮದ ಸಮೀಕರಣಗಳು ಸುಲಭಗ್ರಾಹ್ಯವಲ್ಲ, ಅವುಗಳು ಸತ್ಯಸ್ಯ ಸತ್ಯಂ (ಸತ್ಯದ ಸತ್ಯ) ಇರಬಹುದು ಎಂಬ ಎಚ್ಚರದೊಂದಿಗೆಯೇ ಗೀತೆಯ ಮನಃಶಾಸ್ತ್ರೀಯ ವ್ಯಾಖ್ಯಾ ನದ, ಫ್ರೆಂಚ್‌ ಲೇಖಕ ಸಾರ್ತ್ರೆ ಹೇಳುವ ಅಸ್ತಿತ್ವವಾದಿ ಆತಂಕದ (existential angst) ಅರಿವಿನ ಅರಸುವಿಕೆ ನಡೆಯಬೇಕಾಗುತ್ತದೆ.

– ಡಾ| ಬಿ. ಭಾಸ್ಕರ ರಾವ್‌

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next