Advertisement

ಹಾಲು ಪ್ರೋತ್ಸಾಹಧನ 3 ತಿಂಗಳಿಂದ ಬಾಕಿ! ಕಂಗಾಲಾದ ರೈತರು

01:03 PM Nov 13, 2020 | sudhir |

ಬೀದರ: ಕೊರೊನಾ ಬಳಿಕ ಪ್ರವಾಹದ ಹೊಡೆತದಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಕಳೆದ ಮೂರು ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ಸಿಕ್ಕಿಲ್ಲ. ಹಾಲು ಉತ್ಪಾದಕರಿಗೆ ಉತ್ತೇಜಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಪ್ರತಿ ಲೀಟರ್‌ ಹಾಲಿಗೆ ನೀಡಬೇಕಿದ್ದ 5 ರೂ. ಪ್ರೋತ್ಸಾಹ ಧನಕ್ಕಾಗಿ ಹೈನುಗಾರರು ಎದುರು ನೋಡುವಂತಾಗಿದೆ.

Advertisement

ಬೀದರ ಸೇರಿ ರಾಜ್ಯದ ಬಹುತೇಕ ಕಡೆ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆಗಳನ್ನು ಕಳೆದುಕೊಂಡಿರುವ ಅನ್ನದಾತರು ಈಗ ಸಂತ್ರಸ್ತರಾಗಿದ್ದಾರೆ. ರೈತರ ಹಿತ ಕಾಪಾಡುವ ಭರವಸೆ ಮಾತುಗಳನ್ನಾಡುವ ಸರ್ಕಾರ ಸಕಾಲಕ್ಕೆ ಸೌಲಭ್ಯದ ಲಾಭ ಹೈನುಗಾರರಿಗೆ
ದೊರಕಿಸುವಲ್ಲಿ ಮಾತ್ರ ವಿಫಲವಾಗುತ್ತಿದೆ. ಕೈಗೆ ಬಂದ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ ಸದ್ಯ ಹೈನುಗಾರಿಕೆಯೇ ಆಧಾರ. ಆದರೆ, ಬೀದರ ಸೇರಿದಂತೆ ರಾಜ್ಯದಲ್ಲಿ ಜುಲೈವರೆಗೆ ಮಾತ್ರ ಪ್ರೋತ್ಸಾಹ ಧನ ವಿತರಣೆಯಾಗಿದ್ದು, ಅಕ್ಟೋಬರ್‌ ಅಂತ್ಯಕ್ಕೆ ಮೂರು ತಿಂಗಳಿಂದ ಬಾಕಿ ಉಳಿದಂತಾಗಲಿದೆ.

ನಿತ್ಯ 4 ಕೋಟಿ ಪ್ರೋತ್ಸಾಹ ಧನ ಬೇಕು: ರಾಜ್ಯದಲ್ಲಿ ಅಂದಾಜು 80 ಲಕ್ಷ ಲೀಟರ್‌ ಹಾಲು ಕೆಎಂಎಫ್‌ಗೆ ಪೂರೈಸಲಾಗುತ್ತಿದೆ. ಪ್ರತಿ ಲೀಟರ್‌ ಹಾಲಿಗೆ 5 ರೂ. ಗಳಂತೆ ಪ್ರತಿ ನಿತ್ಯ 4 ಕೋಟಿ ರೂ. ಪ್ರೋತ್ಸಾಹ ಧನವನ್ನು ಹೈನುಗಾರರಿಗೆ ಭರಿಸಬೇಕಿದೆ. ತಿಂಗಳಿಗೆ 120 ಕೋಟಿ ರೂ.ಗಳಂತೆ ಮೂರು ತಿಂಗಳಿಗೆ 360 ಕೋಟಿ ರೂ. ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕಿದೆ. ಗಡಿ ಜಿಲ್ಲೆ
ಬೀದರನಲ್ಲಿ 30 ಸಾವಿರ ಲೀಟರ್‌ ಹಾಲು ದಿನವೊಂದಕ್ಕೆ ಕೆಎಂಎಫ್‌ಗೆ ಸಾಗಿಸಲಾಗುತ್ತಿದ್ದು, ದಿನಕ್ಕೆ 1.50 ಲಕ್ಷ ರೂ.
ಪ್ರೋತ್ಸಾಹ ಧನ ಪಾವತಿಸಬೇಕಿದೆ. ರಾಜ್ಯದಲ್ಲಿ ಹೈನುಗಾರಿಕೆಗೆ ಉತ್ತೇಜಿಸುವ ದಿಸೆಯಲ್ಲಿ ಹಿಂದಿನ ಸರ್ಕಾರ “ಕ್ಷೀರಧಾರೆ’ ಯೋಜನೆಯಡಿ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್‌ ಹಾಲಿಗೆ ಪ್ರೋತ್ಸಾಹಧನ ನೀಡುತ್ತ ಬಂದಿದ್ದು, ಪ್ರತಿ ಲೀಟರ್‌ ಹಾಲಿಗೆ 2 ರೂ. ಇದ್ದ ಪ್ರೋತ್ಸಾಹ ಧನವನ್ನು ಸದ್ಯ 5 ರೂ.ಗೆ ಹೆಚ್ಚಿಸಲಾಗಿದೆ. ಪ್ರೋತ್ಸಾಹ ಧನವನ್ನು ಲೀಟರ್‌ಗೆ ಹೆಚ್ಚುವರಿಯಾಗಿ
ಒಂದು ರೂ. ಪಾವತಿಸುವ ಬಗ್ಗೆ ಸರ್ಕಾರ ಈ ಹಿಂದೆ ಘೋಷಿಸಿತ್ತು. ಆದರೆ, ಸದ್ಯ ನೀಡಲಾಗುವ ಹಣ ಮೂರ್‍ನಾಲ್ಕು ತಿಂಗಳಿಗೊಮ್ಮೆ ಪಾವತಿಸುತ್ತಿರುವುದು ಹಾಲು ಉತ್ಪಾದಕರಿಗೆ ರಾಸುಗಳ ನಿರ್ವಹಣೆ ಹೈರಾಣಾಗಿಸಿದೆ.

ಇದನ್ನೂ ಓದಿ:ಮೇಘನಾ ರಾಜ್ ಭಾವುಕ ಮಾತು : ನನ್ನ ಮಗ ಸ್ಟಾರ್ ಆಗುವುದಕ್ಕಿಂತ, ಎಲ್ರೂ ಮೆಚ್ಚು ವಂತವನಾಗಬೇಕು..

ವಿಳಂಬಕ್ಕೆ “ಡಿಬಿಟಿ’ ಪದ್ಧತಿ ಕಾರಣ: ಪ್ರೋತ್ಸಾಹ ಧನವನ್ನು ಹೈನುಗಾರ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲು ರಾಜ್ಯ ಸರ್ಕಾರ ಹೊಸ ಸಾಫ್ಟವೇರ್‌ ಮೂಲಕ ನೇರ ಲಾಭ ವರ್ಗಾವಣೆ (ಡಿಬಿಟಿ) ಪದ್ಧತಿ ಜಾರಿಗೊಳಿಸಿದೆ. ಆದರೆ, ಡಿಬಿಟಿ ಪದ್ಧತಿ ಅನುಷ್ಠಾನದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವ ಕಾರಣ ಪ್ರೋತ್ಸಾಹ ಧನ ಪಾವತಿ ವಿಳಂಬಕ್ಕೆ ಕಾರಣವಾಗುತ್ತಿದೆ. ಬೆಳೆ ನಷ್ಟದಿಂದ ಒದ್ದಾಡುತ್ತಿರುವ ಅನ್ನದಾತರು ಜಾನುವಾರುಗಳಿಗೆ ಆಹಾರ ಪದಾರ್ಥ, ಮೇವುಗಾಗಿ
ಪರದಾಡುತ್ತಿದ್ದಾರೆ. ಇನ್ನೊಂದೆಡೆ ಲಿಂಪಿಸ್ಕಿನ್‌ ಮತ್ತು ಕಾಲುಬಾಯಿ ಜ್ವರ ಸೇರಿದಂತೆ ವಿವಿಧ ರೋಗಗಳು ರಾಸುಗಳಲ್ಲಿ ಕಂಡು ಬರುತ್ತಿರುವುದು ಹೈನುಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಈ ಹಂತದಲ್ಲಿ ಪ್ರತಿ ತಿಂಗಳಿಗೊಮ್ಮೆ ಪ್ರೋತ್ಸಾಹ ಧನ ನೀಡಬೇಕಾದ ಸರ್ಕಾರ ವಿಳಂಬ ಧೋರಣೆ ತಾಳುತ್ತಿರುವುದು ಅಸಮಾಧಾನ ವ್ಯಕ್ತವಾಗುತ್ತಿದೆ.

Advertisement

ಕೆಎಂಎಫ್‌ ಹಾಲು ಪೂರೈಸಿದ ಹೈನುಗಾರರಿಗೆ ಲೀಟರ್‌ಗೆ 5 ರೂ. ಪ್ರೋತ್ಸಾಹ ಧನದಂತೆ ಬೀದರ ಜಿಲ್ಲೆಯಲ್ಲಿ ತಿಂಗಳಿಗೆ 50 ಲಕ್ಷ ರೂ. ಭರಿಸಬೇಕಿದೆ. ರಾಜ್ಯದಲ್ಲಿ ದಿನಕ್ಕೆ ಅಂದಾಜು 80 ಲಕ್ಷ ಲೀಟರ್‌ ಹಾಲು ಪೂರೈಕೆ ಇದ್ದು, ಜುಲೈವರೆಗೆ ಮಾತ್ರ ಪ್ರೋತ್ಸಾಹ ಧನ ಪಾವತಿಯಾಗಿದೆ. ಡಿಬಿಟಿ ವ್ಯವಸ್ಥೆ ಜಾರಿಯಿಂದಾಗಿ ಪ್ರೋತ್ಸಾಹಧನ ಪಾವತಿಗೆ ವಿಳಂಬ ಆಗುತ್ತಿದೆ.

– ಬಂಡೆಪ್ಪ ಬಿರಾದಾರ, ವ್ಯವಸ್ಥಾಪಕರು, ಕೆಎಂಎಫ್‌ ಬೀದರ

– ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next