Advertisement

ಮೆಟ್ರೋ ಭೂಸ್ವಾಧೀನ ಗೊಂದಲ: ಮರು ಜಂಟಿ ಸರ್ವೇಗೆ ಸೂಚನೆ

07:24 AM Jan 10, 2019 | Team Udayavani |

ಬೆಂಗಳೂರು: ನಮ್ಮ ಮೆಟ್ರೋ ಯೋಜನೆಗೆ ಬೆಂಗಳೂರು ದಕ್ಷಿಣ ಭಾಗದ ಬೇಗೂರು ಹೋಬಳಿಯ ಮಡಿವಾಳ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿರುವ 472 ಚದರ ಅಡಿ ಜಾಗದ ಸರ್ವೇ ನಂಬರ್‌ ಬಗ್ಗೆ ಉಂಟಾಗಿರುವ ಗೊಂದಲ ಪರಿಹಾರಕ್ಕೆ ಜಂಟಿ ಮರು ಸರ್ವೇ ನಡೆಸುವಂತೆ ಬುಧವಾರ ಹೈಕೋರ್ಟ್‌ ಸೂಚನೆ ನೀಡಿದೆ.

Advertisement

ಈ ಕುರಿತಂತೆ ವಕೀಲ ಜೋಸ್‌ ಸೆಬಾಸ್ಟಿಯನ್‌ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆರ್‌. ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ಮನವಿಯಂತೆ ಸಂಬಂಧಪಟ್ಟ ಸರ್ವೇ ನಂಬರ್‌ಗಳ ಬಗ್ಗೆ ಮೂರು ತಿಂಗಳಲ್ಲಿ ಕಂದಾಯ ಇಲಾಖೆಯ ಸಿಟಿ ಸರ್ವೇ ಟೀಮ್‌-3ರ ಸರ್ವೇಯರ್‌ ಅವರೊಂದಿಗೆ ಜಂಟಿ ಮರು ಸರ್ವೇ ನಡೆಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಮೆಟ್ರೋ ಯೋಜನೆಗೆ ಬೆಂಗಳೂರು ದಕ್ಷಿಣ ಭಾಗದ ಬೇಗೂರು ಹೋಬಳಿಯ ಮಡಿವಾಳ ಗ್ರಾಮದಲ್ಲಿ ಸರ್ವೇ ನಂಬರ್‌ 105ರಲ್ಲಿನ 472 ಚದರ ಅಡಿ ಜಾಗ ಸ್ವಾಧೀನಕ್ಕೆ 2017ರಲ್ಲಿ ಮೆಟ್ರೋ ಹಾಗೂ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆದರೆ, ಈ ಜಾಗ ತಮಗೆ ಸೇರಿದ್ದು, ಅದರ ಸರ್ವೇ ನಂಬರ್‌ 64/4 ಆಗಿದೆ. ಅಧಿಸೂಚನೆಯಲ್ಲಿ ಸರ್ವೇ ನಂಬರ್‌ ತಪ್ಪು ದಾಖಲಾಗಿರುವುದರಿಂದ ಈ ಬಗ್ಗೆ ಕಂದಾಯ ಇಲಾಖೆಯ ಸಿಟಿ ಸರ್ವೇ ಟೀಮ್‌-3ರ ಸರ್ವೇಯರ್‌ ಅವರೊಂದಿಗೆ ಜಂಟಿ ಮರು ಸರ್ವೇ ನಡೆಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ಹಾಗೂ ಕೆಐಎಡಿಬಿಗೆ ಮೂರು ಬಾರಿ ಮನವಿ ಕೊಟ್ಟರೂ ಅದನ್ನು ಪರಿಗಣಿಸಿಲ್ಲ. ಹಾಗಾಗಿ ಜಂಟಿ ಮರು ಸರ್ವೇ ಕೈಗೊಳ್ಳುವಂತೆ ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next