Advertisement

Article: ಮಾತಿನಬ್ಬರದಲ್ಲಿ ಕಳೆದು ಹೋದ ಮೆಲುದನಿಯ ಭಾರತ

01:20 AM Oct 26, 2023 | Team Udayavani |

ನಾವು ಹಣದುಬ್ಬರ ಎಂಬ ಶಬ್ದವನ್ನು ಆಗಾಗ ಬಳಸುತ್ತೇವೆ. ನೋಟುಗಳು ಹೆಚ್ಚಾಗುತ್ತಾ ಅವುಗಳ ಮೌಲ್ಯ ಕಡಿಮೆ ಯಾಗುವ ಒಂದು ವಿದ್ಯಮಾನವೇ ಹಣ ದುಬ್ಬರ. ಇಂದು ಹಣದುಬ್ಬರದಂತೆಯೇ ನಮ್ಮನ್ನು ಕಾಡುವ ಇನ್ನೊಂದು ವಿದ್ಯಮಾನ ವೆಂದರೆ ಅದು ಮಾತಿನಬ್ಬರ. ಅಂದರೆ ಮಾತು ಹೆಚ್ಚಾಗುವುದು ಹಾಗೆಯೆ ಅದು ಅರ್ಥವನ್ನು ಕಳೆದುಕೊಳ್ಳುವುದು. ಇಂದು ಎಲ್ಲಿ ನೋಡಿದರೂ ಸಭೆ, ಸಮಾರಂಭಗಳಲ್ಲಿ, ಭಾಷಣ, ಚರ್ಚೆ- ಸಂವಾದಗಳಲ್ಲಿ ಮಾತಿನದೇ ಅಬ್ಬರ. ಮಾತಿನಲ್ಲಿ ತುಂಬಿರುವುದೆಲ್ಲ ಬರೀ ಶಬ್ದಾಡಂಬರ. ಶಬ್ದರತಿ ಹಾಗೂ ಆತ್ಮರತಿ.
ಇಡೀ ಮಾನವ ನಾಗರಿಕತೆ ನಿಂತಿರುವುದೇ ಮಾತುಕತೆಯ ಮೇಲೆ. ಮಾತು ಮಾನವನನ್ನು ನಾಗರಿಕನನ್ನಾಗಿಸಿತು. ನಾಗರಿಕ ಮಾನವ ತನ್ನ ಮಾತಿನಿಂದ ಕಥೆಗಳನ್ನು ಕಟ್ಟಿದ. ನಾವಿಂದು ಬದುಕುವುದೇ ಈ ಮಾತು-ಕಥೆಯ ಪ್ರಪಂ ಚದಲ್ಲಿ. ಮಾತಿಗೆ ಪರ್ಯಾಯವಾದುದು ಇನ್ನೊಂದಿಲ್ಲ. ಅದಕ್ಕೆ ಬಸವಣ್ಣ, ನುಡಿದರೆ ಮುತ್ತಿನ ಹಾರದಂತಿರಬೇಕು ಲಿಂಗ ಮೆಚ್ಚಿ ಅಹುದಹು ದೆನ್ನ ಬೇಕು ಎಂದಿದ್ದಾರೆ. ಭಗವದ್ಗೀತೆ ಕೂಡ ಸತ್ಯವೂ, ಹಿತವೂ, ಅನುದ್ವೇಗಕರವೂ ಆದ ಮಾತು ಒಂದು ತಪಸ್ಸು ಎಂದು ಸಾರಿತು.

Advertisement

ಮಹಾತ್ಮಾ ಗಾಂಧಿ ತನ್ನ ಕಾಲದ ಜಗತ್ತಿನ ಸೂಪರ್‌ ಪವರ್‌ ಆಗಿದ್ದ ಬ್ರಿಟಿಷ್‌ ಸಾಮ್ರಾಜ್ಯವ ನ್ನು ಎದುರಿಸಿದ್ದು ಮೌನ, ಧ್ಯಾನ, ಮೆಲುದನಿ ಯ ಮಾತು ಮತ್ತು ಪ್ರಾರ್ಥನೆಗಳಿಂದ ಎಂದರೆ ಇಂದಿನ ತಲೆಮಾರಿಗೆ ಆಶ್ಚರ್ಯವಾದೀತು. ಇದೆ ಬಡಕಲು ಶರೀರದ ಮೆಲು ದನಿಯ ಮನುಷ್ಯನಿಗೆ ಭಾರತ ಮನಸೋತಿತ್ತು. ಭಾರತದ ಉದ್ದಗಲಕ್ಕೂ ಕಂಡುಬರುವ ಧ್ಯಾನಸ್ಥ ಗಾಂಧಿ ಪ್ರತಿಮೆಗಳು ಇಂದಿಗೂ ನಮಗದನ್ನು ನೆನಪಿಸುತ್ತದೆ.

ಮಾತು ಬೆಳಕು, ಅದು ಬೆಂಕಿಯಲ್ಲ. ಆದು ದರಿಂದ ನಾವಿಂದು ವಾಕ್‌-ಶೌಚ (ಸ್ವತ್ಛಮಾತು) ದ ಬಗ್ಗೆ ಜಾಗೃತರಾಗಬೇಕಾಗಿದೆ. ಮಾತು ಹಿತ ವಾಗಿ, ಮಿತವಾಗಿ, ಮೃದುವಾಗಿ, ಸತ್ಯಪರವಾಗಿ ದ್ದರೆ ಅದೇ ವಾಕ್‌ ಶೌಚ. ಹಾಗೆಂದು ಅದು ಮಾರ್ಕೆಟಿಂಗ್‌ ಮಾದರಿಯ ಸವಿಮಾತು ಆಗಿರಬಾರದು. ಹಾಗೆಯೇ “ಹೌದಪ್ಪ” ಗಳ ಭಟ್ಟಂಗಿತನ ಆಗಿರಬಾರದು. ಚಿಂತನ – ಮಂ ಥನ, ಮಂಡನೆ-ಖಂಡನೆ, ಸಂವಾದ, ಜಿಜ್ಞಾಸೆ ಗಳು ಮಾತಿನ ಪರಮೋಚ್ಚ ಸ್ಥಿತಿಗಳು. ಇವುಗ ಳಿಲ್ಲದೆ ಜ್ಞಾನ ಸೃಷ್ಟಿ ಅಸಾಧ್ಯ. ಆದರೆ ಬೊಬ್ಬೆ , ಶಬ್ದಾಡಂಬರ, ಪರನಿಂದನೆ, ಆತ್ಮರತಿ ಮತ್ತು ಬೈಗುಳಗಳಿಗೆ ಮಾತಿನಲ್ಲಿ ಆಸ್ಪದವಿರಕೂಡದು.

ಇಂದು ದೃಶ್ಯಮಾಧ್ಯಮಗಳ ಚರ್ಚಾ ಕೂಟ ಗಳು, ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ನಡೆ ಯುವ ವಾಗ್ವಾದಗಳು, ಸಂಸತ್‌ ಮತ್ತು ವಿಧಾನ ಸಭೆಗ ಳಲ್ಲಿ ನಡೆಯುವ ಚರ್ಚೆಗಳನ್ನು ಗಮನಿಸಿ ದಾಗ ಅವು ಅನುಭವ ಮಂಟಪ ಅಥವಾ ಮಾತಿನ ಮಂಟಪವಾಗುವ ಬದಲು ಬೊಬ್ಬಿಡುವ ರಣಾಂಗಣವಾಗಿದೆಯೇನೋ ಎಂದೆನಿಸುತ್ತದೆ. ಇದನ್ನು ನೋಡುವಾಗ ಇದು ಮಾತು ಸೋತ ಭಾರತವೇನೋ ಎಂಬ ಚಿಂತೆ ಕಾಡುತ್ತದೆ. ಸ್ವ- ವಿಮರ್ಶೆ ಮಾನವನ ಬದುಕಿಗೆ ಒಂದು ದೊಡ್ಡ ಶಕ್ತಿಯನ್ನು ತಂದುಕೊಡಬಲ್ಲ ತತ್ತ್ವ. ಆದರೆ ಇಂದು ವಿಮರ್ಶೆ ಎಂದರೆ ಬಲಹೀನತೆ ಅಥವಾ ಸೋಲು ಎಂಬಂತೆ ಚಿತ್ರಿಸಲಾಗಿದೆ. ಪ್ರತಿಯೊ ಬ್ಬನು ತನಗೆ ತಿಳಿದ ಸತ್ಯವೇ ಅಂತಿಮ ಎಂದು ಬಡಬಡಿಸುತ್ತಾನೆ.

ಖ್ಯಾತ ಚಿಂತಕ ಮಿಶಲ್‌ ಪುಕೊ ಅವರು ಹೇಳುವಂತೆ ಪ್ರಭುತ್ವ ಮತ್ತು ಪ್ರಭುತ್ವಗಳು ಸೃಷ್ಟಿ ಸಿದ ಜ್ಞಾನಪರ್ವಗಳು ಎಂದೂ ವಿಮರ್ಶೆ ಯನ್ನು ಸಹಿಸಲಾರವು. ಯಾಕೆಂದರೆ ವಿಮರ್ಶೆ ಬದಲಾ ವಣೆಯನ್ನು ಬಯಸುತ್ತದೆ. ಪ್ರಭುತ್ವ ಗಳು ಯಥಾ ಸ್ಥಿತಿಯನ್ನು ಕಾಪಾಡಲು ಯತ್ನಿಸುತ್ತವೆ. ಮೂಲ ವಿಜ್ಞಾನಗಳು ಮಾತ್ರ ತನಗೆ ಎಲ್ಲವೂ ತಿಳಿದಿಲ್ಲ ಎಂದೂ ತಿಳಿದಿರುವ ಸತ್ಯ ನಾಳೆಯ ಸಂಶೋ ಧನೆಯಿಂದ ಬಿದ್ದು ಹೋಗಲೂಬಹುದು ಎಂದು ತಿಳಿಯುತ್ತವೆ. ಆದ್ದರಿಂದಲೇ ಅವು ಬೆಳೆಯುತ್ತವೆ. ಸಮಾಜ ವಿಜ್ಞಾನಗಳು ಸ್ಥಾಪಿತ ಸಿದ್ಧಾಂತಗಳಿಗೆ ಜೋತು ಬೀಳುತ್ತವೆ. ಅದಕ್ಕೆ ಅವು ವೇಗವಾಗಿ ಬೆಳೆಯಲಾರವು. ವಿಮರ್ಶೆಯನ್ನು ಸಹಿಸದ ಮಾತು ಬರೀ ಶಬ್ದ ಮಾತ್ರ.

Advertisement

ಮುಕ್ತ ಮಾತಿಗಾಗಿ ಹಾಲ್ಡೇನ್‌ ಎಂಬ ವಿಜ್ಞಾನಿ ತನ್ನ ದೇಶವನ್ನೇ ತ್ಯಜಿಸಿ ಭಾರತದ ಪೌರತ್ವ ಪಡೆದಿದ್ದ. ಈತ ಬ್ರಿಟಿಷ್‌ ಪ್ರಜೆ. 1950ರ ದಶಕ ದಲ್ಲಿ ಬ್ರಿಟನ್‌ ಈಜಿಪ್ಟಿಗೆ ಸೇರಿದ ಸೂಯೆಜ್‌ ಕಾಲುವೆಯನ್ನು ತನ್ನದೆಂದು ಯುದ್ಧ ಸಾರಿತು. ಸತ್ಯನಿಷ್ಠ ಮಾತಿಗೆ ಹೆಸರಾದ ಹಾಲ್ಡೇನ್‌ ತನ್ನ ದೇಶದ ನಿರ್ಧಾರವನ್ನು ಒಪ್ಪದೇ ಪ್ರತಿಭಟಿಸಿದ ಮತ್ತು ತನ್ನ ಮುಕ್ತಮಾತಿಗೆ ಅಲ್ಲಿ ಅವಕಾಶ ವಿಲ್ಲವೆಂದು ಭಾರತದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ. ಭಾರತವೇ ಯಾಕೆ ನಿಮ್ಮ ಆಯ್ಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಹಾಲ್ಡೇನ್‌, “ಈಗಿನ ಕಾಲಘಟ್ಟದಲ್ಲಿ ಯುರೋ ಪ್‌, ಅಮೆರಿಕ, ರಷ್ಯಾ, ಚೀನದಲ್ಲೆಲ್ಲೂ ಮುಕ್ತ ಮಾತಿಗೆ ಅವಕಾಶವಿಲ್ಲ. ಅದು ಭಾರತದಲ್ಲಿದೆ ಎಂದು ಭಾರತದ ಪೌರತ್ವ ಪಡೆದೆ’ ಎನ್ನುತ್ತಾನೆ. ಹಾಲ್ಡೇನ್‌ ಹೇಳಿದ ಭಾರತ ಗಾಂಧಿ ಯುಗದ ಪ್ರಭಾವದಲ್ಲಿದ್ದ ಭಾರತ. ಅನಂತರದ ದಿನಗಳಲ್ಲಿ ಭಾರತ ಸತ್ಯನಿಷ್ಠ ಮಾತಿಗೆ, ಟೀಕೆ ವಿಮರ್ಶೆಗೆ ಮುಕ್ತವಾಗಿದೆಯೇ? ಇಂದು ಮೌನ, ಮೆಲು ದನಿ, ಹಿತಮಿತವಾದ ಸಾತ್ವಿಕ ಮಾತಿಗೆ ನಮ್ಮ ಸಮಾಜ ಆದಷ್ಟು ಪೂರಕವಾಗಿದೆ ಎಂದು ನಾವೆಲ್ಲರೂ ಆತ್ಮಾವಲೋಕನ ಮಾಡಿ ಕೊಳ್ಳಬೇಕಿದೆ.

ಡಾ| ರಾಮದಾಸ ಪ್ರಭು, ಸಿಂಗನಕೋಡಿ

Advertisement

Udayavani is now on Telegram. Click here to join our channel and stay updated with the latest news.

Next