Advertisement

ಮುಂದಿನ ವಾರ ಲಿಂಗಾಯತ ಮಠಾಧೀಶರ ಸಭೆ

06:10 AM Jul 28, 2017 | |

ಬೆಂಗಳೂರು: ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಗೊಂದಲ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ವತಿಯಿಂದ ಆಗಸ್ಟ್‌ ಮೊದಲ ವಾರದಲ್ಲಿ ರಾಜ್ಯದ ಪ್ರಮುಖ ಲಿಂಗಾಯತ ಮಠಾಧೀಶರ ಸಭೆ ನಡೆಸಲು ಉದ್ದೇಶಿಸಿದೆ.

Advertisement

ಆಗಸ್ಟ್‌ 17ರಂದು ಮಹಾಸಭಾದ ಕಾರ್ಯಕಾರಿ ಸಮಿತಿ ಸಭೆ ನಿಗದಿಯಾಗಿದೆ. ಅದಕ್ಕೂ ಮುಂಚಿತವಾಗಿ ಅಂದರೆ ಆಗಸ್ಟ್‌ 10ಕ್ಕೂ ಮೊದಲೇ ಸಭೆ ನಡೆಸಲು ಉದ್ದೇಶಿಸಿದ್ದು, ಸುಮಾರು 20ಕ್ಕೂ ಅಧಿಕ ಪ್ರಮುಖ ಮಠಾಧೀಶರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪ್ರಸ್ತುತ ಉಂಟಾಗಿರುವ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಗೊಂದಲಕ್ಕೆ ಕಾರಣಗಳು ಹಾಗೂ ಅವುಗಳಿಗೆ ಪರಿಹಾರೋಪಾಯಗಳ ಕುರಿತು ಧರ್ಮಗುರುಗಳೊಂದಿಗೆ ಚರ್ಚಿಸಲಾಗುವುದು.

ಮಹಾಸಭಾ ಪತ್ರ: ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಗೆ ಭಿನ್ನಾಭಿಪ್ರಾಯ ಹೊಂದಿರುವ ಸ್ವಾಮೀಜಿಗಳೂ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ತುಮಕೂರು, ಸುತ್ತೂರು, ಚಿತ್ರದುರ್ಗ, ಸಿರಿಗೆರೆ, ಕೂಡಲಸಂಗಮ, ಭಾಲ್ಕಿ ಪಟ್ಟದೇವರು ಸೇರಿ 50ಕ್ಕೂ ಹೆಚ್ಚು ಧರ್ಮಗುರುಗಳಿಗೆ ಮಹಾಸಭಾ ಪತ್ರ ಬರೆದಿದೆ.

ಭಿನ್ನಾಭಿಪ್ರಾಯ ಹೊಂದಿದವರಿಂದ “ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ’ ವಿಚಾರದಲ್ಲಿ ಆಯಾ ಸ್ವಾಮೀಜಿಗಳಿಂದ ಸ್ಪಷ್ಟನೆ ಕೋರಲಾಗಿದೆ. ಕೆಲವರಿಂದ ಗೊಂದಲಗಳ ಪರಿಹಾರಕ್ಕೆ ಮಾರ್ಗದರ್ಶನ ನೀಡುವಂತೆಯೂ ಪತ್ರದಲ್ಲಿ ಮನವಿ ಮಾಡಲಾಗಿದೆ. ಇದರಲ್ಲಿ ಈಗಾಗಲೇ ಕೆಲವರು ದೂರವಾಣಿ ಮೂಲಕ ಅಭಿಪ್ರಾಯವನ್ನೂ ತಿಳಿಸಿದ್ದಾರೆಂದು ಮಹಾಸಭಾ ಮೂಲಗಳು ತಿಳಿಸಿವೆ.

ಬರುವ ತಿಂಗಳು ಮೊದಲ ವಾರದಲ್ಲಿ ನಡೆಯುವ ಸಭೆಯಲ್ಲಿನ ತೀರ್ಮಾನಗಳು ಹಾಗೂ ನಂತರದ ಬೆಳವಣಿಗೆಗಳನ್ನು ಆಧರಿಸಿ, 17ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ ಎನ್ನಲಾಗಿದೆ.

Advertisement

ಸಿಎಂ ಭೇಟಿ ಮುಂದಕ್ಕೆ: ಈ ಮಧ್ಯೆ ಮಹಾಸಭಾ ಪದಾಧಿಕಾರಿಗಳ ನಿಯೋಗದಿಂದ ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಸಮಯ ನಿಗದಿಯಾಗಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ನಿಧನ ಹಿನ್ನೆಲೆಯಲ್ಲಿಭೇಟಿ ಮುಂದಿನ ವಾರಕ್ಕೆ ಮುಂದೂಡಲ್ಪಟ್ಟಿದೆ  ಆದರೆ,ಇನ್ನೂ ದಿನಾಂಕ ನಿಗದಿಯಾಗಿಲ್ಲ.
ಇನ್ನು ಗುರುವಾರ ಮಹಾಸಭಾದ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯಾಧ್ಯಕ್ಷ ಅಧ್ಯಕ್ಷ ಎನ್‌.ತಿಪ್ಪಣ್ಣ ಸೇರಿ ಕೆಲವು ಪದಾಧಿಕಾರಿಗಳು ಸೇರಿದ್ದರು. ಆದರೆ, ವೀರಶೈವ-ಲಿಂಗಾಯತದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಯಾವುದೇ ಸಭೆಗಳು ನಡೆದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಆ. 22ರಂದು ಬೆಳಗಾವಿಯಲ್ಲಿ ಬೃಹತ್‌ ರ್ಯಾಲಿ
ಬೆಳಗಾವಿ:
ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಕುರಿತು ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ
ಸೆಳೆಯಲು ಬೆಳಗಾವಿಯಲ್ಲಿ ಆಗಸ್ಟ್‌ 22ರಂದು ಬೃಹತ್‌ ರ್ಯಾಲಿ ನಡೆಸಲು ಲಿಂಗಾಯತ ಧರ್ಮ ಸಮನ್ವಯ ಸಮಿತಿ ನಿರ್ಧರಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗನೂರು ರುದ್ರಾಕ್ಷಿ ಮಠದ ಡಾ| ಶ್ರೀ ಸಿದ್ದರಾಮ ಸ್ವಾಮೀಜಿ, ಲಿಂಗಾಯತ ಸಂಸ್ಕೃತಿ ಹಾಗೂ ಅಸ್ಮಿತೆ ಉಳಿಸಲು ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಹೇಗೆ ಜೈನ, ಸಿಖ್‌ ಹಾಗೂ ಬೌದಟಛಿ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡಲಾಗಿದೆಯೋ ಹಾಗೆಯೇ ಲಿಂಗಾಯತ ಧರ್ಮಕ್ಕೆ ಸಿಗಬೇಕು. ರ್ಯಾಲಿಯಲ್ಲಿ ಸುಮಾರು 3-4 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ವೈದಿಕರಿಂದ ಶೋಷಣೆ ಹಾಗೂ ಅಸಮಾನತೆ ನಿವಾರಿಸಲು ವಿಶ್ವಗುರು ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆಸಿಗಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ,ವೀರಶೈವರು ಬಂದು ತಮ್ಮ ಪ್ರಭುತ್ವ ಸಾಧಿಸಲು ಹೊರಟಿದ್ದಾರೆ. ಬಸವಣ್ಣನವರನ್ನು ಒಪ್ಪಿಕೊಂಡು ಯಾರು ಬರುತ್ತಾರೋ ಅವರೆಲ್ಲರೂ ಲಿಂಗಾಯತ ಧರ್ಮದವರೇ ಎಂದು ಎಂದು ಸ್ಪಷ್ಟಪಡಿಸಿದರು.

ನೇಗಿನಾಳದ ಗುರು ಮಡಿವಾಳೇಶ್ವರ ಮಠದ ಶ್ರೀ ಬಸವ ಸಿದ್ದಲಿಂಗ ಸ್ವಾಮೀಜಿ, ಕಾರಂಜಿ ಮಠದ ಶ್ರೀ ಗುರುಸಿದಟಛಿ ಸ್ವಾಮೀಜಿ, ಕಿತ್ತೂರು ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿದ್ದರು.

ಲಿಂಗಾಯತ ಧರ್ಮಕ್ಕಾಗಿ ಸುಮಾರು 900 ವರ್ಷಗಳಿಂದ ಹೋರಾಟ ನಡೆದುಕೊಂಡು ಬಂದಿದೆ. ರಾಜ್ಯ ಸರಕಾರ ಸಂಪುಟ ಸಭೆಯಲ್ಲಿ ಅಂಗೀಕಾರ ಮಾಡಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು. ಇಲ್ಲಿ ಯಾವುದೇ ಪಕ್ಷದ ನಾಯಕರಿದ್ದರೂ ಲಿಂಗಾಯತ ಧರ್ಮದ ಹೋರಾಟದಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಂದೇ ಪಕ್ಷಕ್ಕೆ ಇದು ಸೀಮಿತವಾಗಿಲ್ಲ.
ಶ್ರೀ ನಿಜಗುಣಾನಂದ ಸ್ವಾಮೀಜಿ, ಬೈಲೂರು ನಿಷ್ಕಲ
ಮಂಟಪ.

ಪ್ರತ್ಯೇಕ ಧರ್ಮವಾದರೆ ತಪ್ಪಲ್ಲ: ಮೂಜಗು
ಹುಬ್ಬಳ್ಳಿ:
ವೀರಶೈವ ಮತ್ತು ಲಿಂಗಾಯತ ಧರ್ಮ ಚರ್ಚೆಯ ವಿಷಯವೇ ಅಲ್ಲ. ತಾತ್ವಿಕವಾಗಿ ಇವೆರಡು ಒಂದೇ ಧರ್ಮ. ಇದರಲ್ಲಿ ಎರಡನೇ ಮಾತೆ ಇಲ್ಲ. ಈ ಕುರಿತು ರಾಜಕೀಯ ಮಾಡುವುದು ಸರಿಯಲ್ಲವೆಂದು ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಮತ್ತು ವೀರಶೈವ ಧರ್ಮದ ಬಗ್ಗೆ ಚರ್ಚೆ ಅಪ್ರಸ್ತುತ.
ಧರ್ಮ ಮನುಷ್ಯನ ಭಾವನೆ ಜೊತೆ ಬೆರೆತಿದ್ದು  ಇವೆರಡು ಧರ್ಮಗಳು ಅನಾದಿ ಕಾಲದಿಂದಲೂ ಧರ್ಮವೆಂದು ಗುರುತಿಸಿ ಕೊಂಡಿವೆ. ಲಿಂಗಾಯತ ಮತ್ತು ವೀರಶೈವ ಪದಗಳಲ್ಲಿ ಭೇದ-ಭಾವ ಬೇಡ. 

ಲಿಂಗಾಯತಎಂಬುದುಗ್ರಾಮೀಣವಾಗಿಬಳಸುವಪದ ಹಾಗೂ ವೀರಶೈವ ಎಂಬುದು ಗ್ರಾಂಥಿಕ ಪದ. ಸಾಂವಿ ಧಾನಿಕವಾಗಿ ಧರ್ಮದ ಘೋಷಣೆ ಮಾಡುವುದಕ್ಕೆ ತಮ್ಮ ಬೆಂಬಲವಿದೆ. ಆದರೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

“ಲಿಂಗಾಯತ ಮತ್ತು ವೀರಶೈವ ಧರ್ಮದವರು ಲಿಂಗ ಧರಿಸುತ್ತಾರೆ. ಭಸ್ಮಧಾರಣೆ ಮಾಡುತ್ತಾರೆ. ರುದ್ರಾಕ್ಷಿ ಕಟ್ಟುತ್ತಾರೆ. ಸಮಾನವಾದ ಆಚರಣೆ ಮಾಡುತ್ತಾರೆ. ಆದರೆ ಲಿಂಗಾಯತ ಸಮಾಜದಲ್ಲೂ ಬಹಳಷ್ಟು ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಸಮಾಜದಲ್ಲಿ ಅವರೂ ಗೌರವದಿಂದ ಬದುಕಬೇಕು, ಹಕ್ಕು, ಸವಲತ್ತುಗಳು ಹೆಚ್ಚಿಗೆ ಸಿಗಬೇಕೆಂಬ ನಿಟ್ಟಿನಲ್ಲಿ ಸ್ವತಂತ್ರ ಧರ್ಮದ ಮಾನ್ಯತೆ ದೊರೆತು ಸಮಾಜದವರಿಗೆ ಅನುಕೂಲವಾಗುತ್ತದೆ ಎಂದರೆ ಪ್ರತ್ಯೇಕ ಧರ್ಮವಾದರೆ ತಪ್ಪಿಲ್ಲ. ವೀರಶೈವ ಇಲ್ಲವೇ ಲಿಂಗಾಯತ ಪ್ರತ್ಯೇಕ ಧರ್ಮವೆಂದು ಘೋಷಣೆ ಮಾಡಿದರೆ ತಪ್ಪಲ್ಲ. ನನ್ನ ಪ್ರಕಾರ ಎರಡು ಒಂದೇ. ಹೀಗಾಗಿ ಈ ಬಗ್ಗೆ ತಕರಾರು, ತಂಟೆ ಬೇಡ’ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಹೇಳಿಕೆ ನೀಡಲುಬಯಸುವುದಿಲ್ಲ.ಧರ್ಮ ಒಡೆಯುವ ವಿಷಯದ ಕುರಿತು ನಾನು ಮಾತನಾಡಲಾರೆ.
– ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ.

ಬಸವಣ್ಣ ಧರ್ಮ ಸ್ಥಾಪಕ ಎಂದು ಯಾರು ತಿಳಿದುಕೊಳ್ಳುತ್ತಾರೋ ಅವರೆಲ್ಲರೂ ಲಿಂಗಾಯತರೇ. ವೀರಶೈವರು ಹಾಗೂ ಲಿಂಗಾಯತರು ಎನ್ನುವ ಭೇದ ಮಾಡುವುದಿಲ್ಲ. ಬಸವಣ್ಣನವರನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬರೂ
ಲಿಂಗಾಯತರು. ಸರಕಾರದ ಜುಜುಬಿ ಸವಲತ್ತಿಗಾಗಿ ನಾವು ಪ್ರತ್ಯೇಕ ಧರ್ಮ ಕೇಳುತ್ತಿಲ್ಲ. ನಮ್ಮ ಲಿಂಗಾಯತ ಸಂಸ್ಕೃತಿ ಉಳಿಯಲು ಧರ್ಮ ಸ್ಥಾಪನೆ ಅಗತ್ಯವಿದೆ

– ಡಾ| ಶ್ರೀ ಸಿದ್ದರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ.

ಲಿಂಗಾಯತ ಸ್ವತಂತ್ರ ಧರ್ಮ ಕುರಿತು ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಪರ-ವಿರೋಧ
ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಂದೆ ತೀರ್ಮಾನ ಕೈಗೊಳ್ಳಲಾಗುತ್ತದೆ.

– ಸಿದ್ದರಾಮಯ್ಯ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next