Advertisement

ಭಾರತ-ಚೀನ ಅಧಿಕಾರಿಗಳ ಸಭೆ: ಶಾಂತಿ ಪಾಲನೆಗೆ ಒತ್ತು

08:05 AM Aug 17, 2017 | Harsha Rao |

ಹೊಸದಿಲ್ಲಿ: ಭಾರತ ಹಾಗೂ ಚೀನ ಸೇನೆಗಳ ಹಿರಿಯ ಅಧಿಕಾರಿಗಳು ಬುಧವಾರ ಲೇಹ್‌ ಪ್ರಾಂತ್ಯದ ತಟಸ್ಥ ಸ್ಥಳವೊಂದರಲ್ಲಿ ಸಭೆ ನಡೆಸಿದ್ದಾರೆ. ಲಡಾಕ್‌ನ ಪ್ಯಾಂಗೋಂಗ್‌ ಸರೋವರದ ದಡದ ಮೂಲಕ ಅಕ್ರಮವಾಗಿ ಭಾರತದ ಭೂಪ್ರದೇಶವನ್ನು ಪ್ರವೇಶಿಸುವ ಚೀನ ಯೋಧರ ಪ್ರಯತ್ನವನ್ನು ಭಾರತದ ಯೋಧರು ವಿಫ‌ಲಗೊಳಿಸಿದ ಮರು ದಿನವೇ ಸಭೆ ನಡೆದಿರುವುದು ಕುತೂಹಲ ಮೂಡಿಸಿದೆ.

Advertisement

ಪ್ಯಾಂಗೋಂಗ್‌ ಸರೋವರದ ಮೂರನೇ ಒಂದು ಭಾಗ ಚೀನ ನೆಲದಲ್ಲಿದ್ದು, ಸರೋವರದ ದಡದ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಚೀನದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಸೈನಿಕರು ಮಂಗಳವಾರ ಎರಡು ಬಾರಿ ಯತ್ನಿಸಿದಾಗ ಭಾರತದ ಸೈನಿಕರು ಅವರನ್ನು ಹಿಮ್ಮೆಟ್ಟಿಸಿದ್ದರು. ಇದೇ ವೇಳೆ ಎರಡೂ ಕಡೆಯ ಸೈನಿಕರು ಪರಸ್ಪರ ಕಲ್ಲು ತೂರಾಟ ಕೂಡ ನಡೆಸಿದ್ದರಿಂದ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಸಿನೋ-ಭಾರತ ಗಡಿಯಲ್ಲಿ ಶಾಂತಿ ಕಾಪಾಡುವುದು ಹಾಗೂ ಗಡಿ ನಿಯಂತ್ರಣ ರೇಖೆ ನಿಗದಿಗೆ ಸಂಬಂಧಿಸಿದಂತೆ ಚರ್ಚಿಸುವ ಉದ್ದೇಶದಿಂದ ಭಾರತ-ಚೀನ ಸೇನೆಯ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಭೆಯಲ್ಲಿ ಬ್ರಿಗೇಡಿಯರ್‌ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. 

ನೇರ ಚರ್ಚೆಗೆ ಅಮೆರಿಕ ಸಲಹೆ: ಭಾರತ ಹಾಗೂ ಚೀನ ಒಟ್ಟಿಗೆ ಕುಳಿತು ನೇರವಾಗಿ ಮಾತುಕತೆ ನಡೆಸುವ ಮೂಲಕ ಗಡಿ ವಿವಾದವನ್ನು ಪರಿಹರಿಸಿಕೊಳ್ಳಬೇಕು ಎಂದು ಅಮೆರಿಕ ಸಲಹೆ ನೀಡಿದೆ. “ಎರಡೂ ದೇಶಗಳ ಮುಖಂಡರು ಒಂದೆಡೆ ಕುಳಿತು, ನೇರವಾಗಿ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಅಮೆರಿಕ ಬಯಸುತ್ತದೆ,’ ಎಂದು ವಿದೇಶಾಂಗ ಇಲಾಖೆಯ ವಕ್ತಾರರಾಗಿರುವ ಹೀದರ್‌ ನೌರ್ತ್‌ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next