Advertisement

ಮೀರಾರೋಡ್‌ ಲಕ್ಷ್ಮೀನಾರಾಯಣ ಭಜನಾ ಸಮಿತಿ: ಮಂಗಳ್ಳೋತ್ಸವ, ಧಾರ್ಮಿಕ ಸಭೆ

02:38 PM Feb 06, 2019 | |

ಮೀರಾರೋಡ್‌: ಕೃತ, ತ್ರೇತಾ, ದ್ವಾಪರ ಯುಗದಲ್ಲಿ ಹಲವಾರು ವಿಧಾನಗಳ ಮೂಲಕ ಭಗವಂತನನ್ನು ಪೂಜಿಸುತ್ತಿದ್ದರೆ, ಕಲಿಯುಗದಲ್ಲಿ ಪ್ರೀತಿಯ ಹೃದಯದಿಂದ ಭಗವಂತನನ್ನು ಒಲಿಸಲು ಅತ್ಯಂತ ಸುಲಭವಾದ ಮಾರ್ಗ ಭಜನೆ. ನಿಜ್ಯ ಭಜನೆ ಮಾಡುತ್ತಾ ಅದರ ಆನಂದ ಸುಃಖ ಪಡೆಯುತ್ತಿರುವ ನಿಜವಾದ ಸಾತ್ವಿಕ ಆನಂದ ನಿಮಗೆ ತಿಳಿದಿದೆ. ಇಂತಹ ಭಜನೆಗೆ ಬಹುದೊಡ್ಡ ಅವಕಾಶ ಕಲ್ಪಿಸಿಕೊಟ್ಟು ನಿಮ್ಮ ಜೀವ ನವನ್ನು ಸಾರ್ಥಕಪಡಿಸಿಕೊಳ್ಳುತ್ತಿದ್ದೀರಿ ಎಂದು ಸಂಗೀತ ನಿಧಿ ಡಾ| ವಿದ್ಯಾಭೂಷಣ ನುಡಿದರು.

Advertisement

ಅವರು ಫೆ. 3ರಂದು ಶ್ರೀ ಲಕ್ಷ್ಮೀನಾರಾಯಣ ಭಜನಾ ಸಮಿತಿ ಮೀರಾರೋಡ್‌ ಭಜನಾ ಮಂದಿರದ  ವಠಾರದಲ್ಲಿ ಜರಗಿದ 17ನೇ ವಾರ್ಷಿಕ ಮಂಗಳ್ಳೋತ್ಸವ ಹಾಗೂ ನವೀಕೃತ ಭಜನಾ ಮಂದಿರದ ಲೋಕಾರ್ಪಣೆಯ ಅಂಗವಾಗಿ   ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು.
ಭಜನೆಯ ಅಂತರಂಗದ ಮಹತ್ವವನ್ನು ನೆಮ್ಮದಿ, ಭಕ್ತಿ, ಶ್ರದ್ಧೆಯಿಂದ ಅನುಭವಿಸಲು ಭಜನಾ ಮಂದಿರ ಒಂದನ್ನು ನಿರ್ಮಿಸಿ, ಭಜನೆಯ ಆನಂದದಲ್ಲಿ ತೊಡಗಿರುವ ನಿಮಗೆ ಆ ಭಗವಂತನು ಎಲ್ಲಾ ರೀತಿಯ ಅನುಗ್ರಹ, ಶ್ರೇಯಸ್ಸು ನೀಡಲಿ. ಭಜನೆಯಿಂದ ನಿಜವಾದ ಆನಂದ ನಿಮಗೆಲ್ಲರಿಗೂ ದೊರೆಯಲಿ ಎಂದು ಅನುಗ್ರಹ ನೀಡಿದರು.

ಶುಭಾಸಂಸನೆಗೈದ ಜ್ಯೋತಿಷಿ,  ಪುರೋಹಿತ ರಾದ ಕೃಷ್ಣರಾಜ ತಂತ್ರಿ ಅವರು, ಸ್ಮರಣೆ ಮಾಡಿದರೆ ಫಲವಿದೆ. ಭಕ್ತರು ಭಕ್ತಿಯಲ್ಲಿ ಸ್ತೋತ್ರ ಮಾಡಿದರೆ ಭಗವಂತ ಅಭಯ ನೀಡುತ್ತಾನೆ. ಭಗವಂತನನ್ನು ವಶೀಕರಣ ಮಾಡಲು ಯಾವುದೇ ಪದವಿ ಅಥವಾ ಜಾತಿಮತದ ಅಗತ್ಯವಿಲ್ಲ. ಶುದ್ಧ , ಶಾಂತಿಯುತ ಮನಸ್ಸಿನಿಂದ ಭಜನೆ ಹಾಡುವ ಮೂಲಕ ಈ ಜಾಗವನ್ನು ಪವಿತ್ರಗೊಳಿಸಿ, ಭಗವಂತ ಶ್ರೀ ಲಕ್ಷ್ಮೀನಾರಾಯಣ ನೆಲೆಯಾಗಿ ಪರಿವರ್ತಿಸಿದ್ದೀರಿ. ಮೀರಾರೋಡ್‌ ಇಂದು ಧಾರ್ಮಿಕ ಸಂಘಟನೆಗೆ ಹೆಸರುವಾಸಿ ಯಾಗಿ ದ್ದು, ಹರೀಶ್‌ ಜಿ. ಪೂಜಾರಿಯವರ ತ್ಯಾಗವು ಈ ಭಜನಾ ಮಂದಿರಕ್ಕೆ ಕೊಡುಗೆಯಾಗಿದೆ ಎಂದರು.

ಅತಿಥಿಯಾಗಿ ಉಪಸ್ಥಿತರಿದ್ದ ಸ್ಥಳೀಯ ಶಾಸಕ ನರೇಂದ್ರ ಮೆಹ್ತಾ ಮಾತನಾಡಿ, ಧರ್ಮ,  ಪರಂಪರೆಯನ್ನು ಕಟ್ಟುವ ಸಾರ್ಥಕ ಜೀವಿಗಳಾದ ಕರ್ನಾಟಕದ ಜನರ ಸಂಘಟನೆ, ತ್ಯಾಗ, ವಿಶೇಷ ಧಾರ್ಮಿಕ ಚಿಂತನೆಯ ಮೂಲಕ ಈ ಸುಂದರ ಭಜನಾ ಮಂದಿರ ನಿರ್ಮಾಣವಾಗಿದೆ. ಸಂಘಟನೆ  ಯಾವತ್ತೂ ಒಳ್ಳೆಯ ಸಮಾಜವನ್ನು ನಿರ್ಮಿ ಸುತ್ತದೆ. ಸುಂದರ ಧಾರ್ಮಿಕ ಪುಣ್ಯನಗರಿಗೆ ಇಂದು ಡಾ| ವಿದ್ಯಾಭಾಷಣರ ಆಗಮನದಿಂದ ಈ ನೆಲ ಪಾವನವಾಗಿದೆ. ಈ ನಗರವನ್ನು ಇನ್ನೂ ಮೇಲ್ಮಟ್ಟಕ್ಕೆ ಕೊಂಡೊಯ್ಯವ ಪ್ರಯತ್ನಕ್ಕೆ ನೀವೆಲ್ಲ ಸಹಕಾರ ನೀಡಿ ಎಂದು ತಿಳಿಸಿದರು.

Advertisement

ಇನ್ನೋರ್ವ ಅತಿಥಿ ಸಮಾಜ ಸೇವಕ, ಉದ್ಯಮಿ ಸುರೇಶ್‌ ಶೆಟ್ಟಿ ಗಂಧರ್ವ ಅವರು ಮಾತನಾಡುತ್ತ, ಯಾವುದೇ ಕೆಲಸ ಒಗ್ಗಟ್ಟಿಲ್ಲದೆ ಸಾಧ್ಯವಿಲ್ಲ. ಮರವೊಂದು ಸದೃಢವಾಗಿ ಬೆಳೆಯಲು ಅದರ ಬೇರುಗಳು ಬಲವಾಗಿರಬೇಕು. ಅದಕ್ಕೆ ದೇವರ ನಂಬಿಕೆ, ವಿಶ್ವಾಸ ಇರುವ ತ್ಯಾಗ ಮನೋಭಾವದ ಈ ಸಮಿತಿಯ ಅಧ್ಯಕ್ಷರ ಸಹಯೋಗ ಕಾರಣ. ಮೀರಾ-ಭಾಯಂದರ್‌ ಪರಿಸರದವರು ನೀಡಿದ ಸಹಕಾರ ಅನನ್ಯ ಎಂದು ಹೇಳಿದರು.

ಇನ್ನೋರ್ವ ಅತಿಥಿ ಮೀರಾ-ಭಾಯಂದರ್‌ ಮಹಾನಗರ ಪಾಲಿಕೆ ಸಭಾಪತಿ ಅರವಿಂದ ಶೆಟ್ಟಿ ಮಾತನಾಡಿ, ನಗರಸೇವಕನ ಸೇವೆಗಿಂತ ಸಮಾಜ ಸೇವಕನ ಸೇವೆ ಶ್ರೇಷ್ಠ. ಸಹೃದಯ ಶುದ್ಧ ಮನಸ್ಸಿನಿಂದ ಭಗವಂತನನ್ನು ನೆನೆದಾಗ ಆತನ ಅನುಗ್ರಹ ದೊರೆಯುತ್ತದೆ.  ನಿಮ್ಮೆಲ್ಲರ ಒಗ್ಗಟ್ಟಿನಿಂದ ಇಂದು ಭಗವಂತನ ಸ್ಥಾನ ನಿರ್ಮಾ ಣವಾಗಿದೆ. ಸಂಘ ಸಂಸ್ಥೆಗಳು ಒಗ್ಗಟ್ಟಾಗಿ ಕೆಲಸ ಮಾಡಿದರೆ ಇಂತಹ ಕೆಲಸಗಳು ಫಲಶ್ರುತಿಯಿಂದ ಪೂರ್ಣಗೊಳಿಸಲು ಸಾಧ್ಯ ಎಂದರು.

ಅಧ್ಯಕ್ಷರಾದ ಹರೀಶ್‌ ಜಿ. ಪೂಜಾರಿ ಮಾತನಾಡಿ, ಹಲವಾರು ವರ್ಷಗಳ ಧಾರ್ಮಿಕ ಒಗ್ಗಟ್ಟು, ಆಧ್ಯಾತ್ಮಿಕ ಚಿಂತನೆ ಇಂದು ಅನಾವರಣಗೊಂಡಿದೆ. ಕೆಲವೇ ಮಂದಿ ಭಜನಾ ಸದಸ್ಯರೊಂದಿಗೆ ಪ್ರಾರಂಭವಾದ ಈ ಸಂಘಟನೆ ಇಂದು ಪ್ರಮುಖ ಧಾರ್ಮಿಕ ಸಂಸ್ಥೆಯಾಗಿ ಎತ್ತರಕ್ಕೆ ಬೆಳೆದಿದೆ. ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು, ಮೀರಾರೋಡ್‌ ಪರಿಸರದ ಆಧ್ಯಾತ್ಮಿಕ ಚಿಂತಕರ ಸಹಕಾರದಿಂದ ನಮ್ಮ ಕಾರ್ಯ ಯಶಸ್ವಿಯಾಗಿದೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಆರಂಭದಲ್ಲಿ ನೃತ್ಯ ವಿದೂಷಿ ಅಮಿತ್‌ ಜತಿನ್‌ ಬಳಗದವರಿಂದ ಸ್ವಾಗತ್ಯ ನೃತ್ಯ ಎಲ್ಲರ ಮನರಂಜಿಸಿತು. ಅನಂತರ ಸಂಗೀತ ನಿಧಿ ಡಾ| ವಿದ್ಯಾಭೂಷಣ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಸದಸ್ಯೆಯರು ಪಾರ್ಥನೆ ಹಾಡಿದರು. ಅಧ್ಯಕ್ಷರಾದ ಹರೀಶ್‌ ಜಿ. ಪೂಜಾರಿ ಅತಿಥಿಗಳನ್ನು ಸದ್ಭಕ್ತರನ್ನು ಸ್ವಾಗತಿಸಿದರು. ಸಮಿತಿಯ ಸದಸ್ಯರಾದ ವಸಂತ್‌ ಕೋಟ್ಯಾನ್‌, ಹೇಮಂತ್‌ ಮಚ್ಚಾರು, ಪ್ರಕಾಶ್‌ ಜಿ. ಶೆಟ್ಟಿ, ಸಂಪತ್‌ ಶೆಟ್ಟಿ, ವಾರಿಜಾ ಪೂಜಾರಿ, ಶಿವರಾಮ ಕೋಟ್ಯಾನ್‌, ಸುರೇಶ್‌ ಕರ್ಕೇರ, ರಮೇಶ್‌ ಅಮೀನ್‌, ಸುಂದರ ಪೂಜಾರಿ, ಶ್ರೀಧರ ಶೆಟ್ಟಿ, ಸಂಗೀತ ಐಲ್‌ ಅತಿಥಿಗಳಿಗೆ ಶಾಲು ಹೊದೆಸಿ, ಫಲಪುಷ್ಪ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು. ಸಮಿತಿಯ ಗೌರವ ಕಾರ್ಯದರ್ಶಿ ಮಾಧವ ಬಿ. ಐಲ್‌ ಪ್ರಾಸ್ತಾವಿಕ ಹಾಗೂ ಸಂಕ್ಷಿಪ್ತ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಸಂಗೀತ ನಿಧಿ ಡಾ| ವಿದ್ಯಾಭೂಷಣ ಅವರಿಗೆ ಗುರುವಂದನೆ ಹಾಗೂ ಜ್ಯೋತಿಷಿ ಮತ್ತು ಪುರೋಹಿತರಾದ ಕೃಷ್ಣರಾಜ ತಂತ್ರಿ ಹಾಗೂ ಶ್ರೀ ಬಾಲಾಜಿ ಸನ್ನಿಧಿ ಪಲಿಮಾರು ಮಠ ಮೀರಾ ರೋಡ್‌ ಶಾಖೆಯ ವಿದ್ವಾನ್‌ ರಾಧಾಕೃಷ್ಣ ಭಟ್‌ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಜಯಂತ್‌ ಶೆಟ್ಟಿ, ಸುಧಾಕರ್‌ ಕಾಮತ್‌, ಹರೀಶ್‌ ಅಮೀನ್‌, ಐಕಳ ಆನಂದ ಶೆಟ್ಟಿ, ಚಂದ್ರ ಜನಾರ್ದನ ಪೂಜಾರಿ ಉಪಸ್ಥಿತರಿದ್ದರು.
ರಂಗನಟ ಬಾಬಾ ಅಂಬಾಪ್ರಸಾದ್‌ ಅರಸ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು. ಎರ್ಮಾಳು ಅರುಣ್‌ಕುಮಾರ್‌ ಶೆಟ್ಟಿ ಸಹಕರಿಸಿದರು. ಉಪಾಧ್ಯಕ್ಷ ರಮೇಶ್‌ ಅಮೀನ್‌ ಧನ್ಯವಾದ ಸಮರ್ಪಿಸಿದರು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಿಲ್ಲವರ ಸಂಘ ಪಿಂಪ್ರಿ ಇದರ ಮಾಜಿ ಅಧ್ಯಕ್ಷರಾದ ಶ್ಯಾಮ ಸುವರ್ಣ ಸಮಿತಿಯ ಕಾರ್ಯಕ್ರಮದ ಬಗ್ಗೆ ಮಾತನಾಡಿ ಚಂಚಲೆ ಲಕ್ಷ್ಮೀ ಶ್ರೀನಾರಾಯಣರೊಂದಿಗೆ ಸ್ಥಾಪನೆಯಾಗುವ ಮೂಲಕ ಭಕ್ತಿ ಸಂವೇದನೆಯ ಚಿಂತನೆಯನ್ನು ಸಮಾಜಕ್ಕೆ ಸೇರಿಸಿದೆ. ಹಲವಾರು ಧಾರ್ಮಿಕ ಹಿತಚಿಂತಕರ ಸಂಘಟನೆಯಿಂದ ಸ್ಥಾಪಿತಗೊಂಡ ಈ ಸಮಿತಿಯ ಮಾರ್ಗವು ಶ್ರೀ ಲಕ್ಷ್ಮೀನಾರಾಯಣ ಮಾರ್ಗ ಎಂದು ನಾಮಾಂಕಿತಗೊಳ್ಳುವ ಮೂಲಕ ಈ ಸ್ಥಳದ ಪಾವಿತ್ರÂತೆಯನ್ನು ಸಾರುತ್ತಿದೆ. ಭಜನಾ ಮಂದಿರ ನವೀಕರಣಗೊಂಡರೆ ನಮ್ಮ ಧರ್ಮ ನವೀಕರಣಗೊಂಡಂತೆ ಎಂದು ನುಡಿದರು.

ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next