Advertisement

Meditation campaign: ಬೌದ್ಧಿಕ ಆರೋಗ್ಯಕ್ಕಾಗಿ ನಿತ್ಯ ಧ್ಯಾನ ಅಭಿಯಾನ

03:48 PM Oct 21, 2023 | Team Udayavani |

ಕೋಲಾರ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಾಲೂರು ತಾಲೂಕಿನಲ್ಲಿ ಪ್ರತಿ ಮನೆಯಲ್ಲಿ ಧ್ಯಾನ ಪ್ರತಿ ದಿನ ಧ್ಯಾನ ಎಂಬ ವಿನೂತನ ಅಭಿಯಾನವನ್ನು ಹಾರ್ಟ್ ಫುಲ್‌ನೆಸ್‌ ಸಂಸ್ಥೆಯು ಆರಂಭಿಸಿದೆ.

Advertisement

ಮಾನಸಿಕ ಒತ್ತಡ ನಿವಾರಿಸುವಲ್ಲಿ ಧ್ಯಾನದಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡಿಸಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಬೆಳಗ್ಗೆ, ಸಂಜೆ ಅರ್ಧ ಅಥವಾ ಮುಕ್ಕಾಲು ಗಂಟೆ ಧ್ಯಾನ ಮಾಡುವುದು ಒಳಿತು ಎಂಬುದನ್ನು ಮಾಲೂರು ತಾಲೂಕಿನ ಪ್ರತಿಯೊಬ್ಬರಿಗೂ ಮನನ ಮಾಡಿಸುವ ಅಭಿಯಾನ ಆರಂಭವಾಗಿದೆ. ‌

ಕೇಂದ್ರ ಸರ್ಕಾರ ಅನುಮತಿ: ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ದೇಶದ ಜನರ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಬೌದ್ಧಿಕ ಆರೋಗ್ಯ ಸುಧಾರಿಸಲು ಧ್ಯಾನ ಅಭಿಯಾನಕ್ಕೆ ಅನುಮತಿ ನೀಡಿದೆ. ಕೇಂದ್ರ ಸರ್ಕಾರ ನೀಡಿರುವ ಅನುಮತಿ ಮೇರೆಗೆ ಹಾರ್ಟ್ ಫುಲ್‌ನೆಸ್‌ ಸಂಸ್ಥೆಯು ಕರ್ನಾಟಕ ರಾಜ್ಯದ ಮಾಲೂರು ತಾಲೂಕನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಸಮಾಜದ ಎಲ್ಲಾ ವರ್ಗದ, ಜಾತಿ, ಧರ್ಮದ ಜನರಿಗೆ ಸಂಪೂರ್ಣ ಉಚಿತವಾಗಿ ಧ್ಯಾನ ಕಲಿಸಿ ಅಭ್ಯಾಸ ಮಾಡಿಸುವ ಅಭಿಯಾನವನ್ನು ಎರಡು ತಿಂಗಳಿನಿಂದಲೂ ನಡೆಸುತ್ತಿದೆ.

ಸ್ವಯಂಸೇವಕರು: ಕಾರ್ಯಕ್ರಮದ ಭಾಗವಾಗಿ ಸ್ವಯಂಸೇವಕರು ಪ್ರತಿಯೊಬ್ಬರನ್ನು ತಲುಪಿ ಅವರಿಗೆ ಧ್ಯಾನದ ಮಹತ್ವ ಮತ್ತು ಪ್ರಭಾವವನ್ನು ವಿವರಿಸಿ ನಿತ್ಯವೂ ಬೆಳಗ್ಗೆ ಮುಕ್ಕಾಲುಗಂಟೆ, ಸಂಜೆ ಕಾಲು ಗಂಟೆ ಮೌನ ಕುಳಿತು ಮನಸ್ಸು ಕೇಂದ್ರೀಕರಿಸಿ ಧ್ಯಾನ ಮಾಡಿಸುವುದನ್ನು ಮೂರು ದಿನಗಳ ಕಾಲ ಅಭ್ಯಾಸ ಮಾಡಿಸುತ್ತಾರೆ. ಆನಂತರ ಧ್ಯಾನ ಕಲಿತವರೇ ಇದನ್ನು ನಿತ್ಯ ಅಭ್ಯಾಸ ಮಾಡುವಂತೆಯೂ ಸಲಹೆ ನೀಡುತ್ತಾರೆ. ಇದಕ್ಕಾಗಿ ಮಹಿಳಾ, ಯುವಕ, ಯುವತಿ ಸಂಘಗಳು, ಕ್ರೀಡಾ ಸಂಘಗಳು, ಗ್ರಾಮ ಪಂಚಾಯ್ತಿ, ಸ್ವಸಹಾಯ ಸಂಸ್ಥೆಗಳು, ಶಾಲಾ ಕಾಲೇಜು ಇತ್ಯಾದಿ ಸಂಸ್ಥೆಗಳನ್ನು ಸ್ವಯಂಸೇವಕರು ಭೇಟಿ ಮಾಡಿ ಧ್ಯಾನ ಅಭಿಯಾನವನ್ನು ಮುಂದುವರಿಸುತ್ತಿದ್ದಾರೆ.

ಧ್ಯಾನದಿಂದ ಪ್ರಯೋಜನಗಳೇನು?: ಸಮಾಜದ ಎಲ್ಲರ ಒಳಿತಿಗಾಗಿ ಮಾನಸಿಕ ಹಾಗೂ ದೈಹಿಕ ಕ್ಷಮತೆ ಹೆಚ್ಚಿಸಲು ಹಾಗೂ ಒತ್ತಡ ನಿವಾರಣೆಗೆ ಧ್ಯಾನ ಅಗತ್ಯ. ಇದರ ನಿರಂತರ ಅಭ್ಯಾಸದಿಂದ ಆಂತರಿಕ ಹಾಗೂ ಬಾಹ್ಯ ಜೀವನದ ಸಮತೋಲನ ಸಾಧ್ಯ ಎನ್ನುವುದು ದೃಢಪಟ್ಟಿದೆ. ಯುವ ಜನತೆ ಧ್ಯಾನದ ಮೂಲಕ ಏಕಾಗ್ರತೆ, ಸ್ವಯಂ ಶಿಸ್ತು, ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಸಾ ಧ್ಯವಾಗುತ್ತದೆ. ಇದರಿಂದ ಸಮಾಜ ವಿರೋಧಿ ಚಟುವಟಿಕೆಗಳು ನಿಯಂತ್ರಣ ತಾನಾಗಿಯೇ ಆಗಲು ಸಾಧ್ಯವಿದೆ. ಹೀಗಾಗಿ, ಪ್ರತಿ ಯೊಬ್ಬರೂ ಧ್ಯಾನವನ್ನು ಕಲಿತು ಅಭ್ಯಾಸ ಮಾಡಿದರೆ ಸಮಾಜದಲ್ಲಿ ಅದ್ಭುತವಾಗಿ ಬದಲಾವಣೆ ತರಬಹುದು ಎಂಬುದನ್ನು ಹಾರ್ಟ್‌ಫುಲ್‌ನೆಸ್‌ ಸಂಸ್ಥೆಯು ಕಂಡುಕೊಂಡಿದೆ.

Advertisement

80 ಸಾವಿರ ಮಂದಿ ಕುಳಿತು ಧ್ಯಾನ: ತೆಲಂಗಾಣ ಹೈದರಾಬಾದಿನ ರಂಗಾರೆಡ್ಡಿ ಜಿಲ್ಲೆಯ ಕನ್ಹಾ ಶಾಂತಿ ವನದಲ್ಲಿ 1945 ರಲ್ಲಿ ಆರಂಭವಾದ ಸಂಸ್ಥೆಯು 1500 ಎಕರೆಗಳ ವಿಶಾಲ ಜಾಗದಲ್ಲಿ ಹಾರ್ಟ್‌ಫುಲ್‌ನೆಸ್‌ ಸಂಸ್ಥೆಯ ಕೇಂದ್ರವು ನೆಲೆಗೊಂಡಿದೆ. ಒಮ್ಮೆಲೆ 80 ಸಾವಿರ ಮಂದಿ ಕುಳಿತು ಧ್ಯಾನ ಮಾಡುವ ಮಂದಿರವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ.

2023ರ ಪದ್ಮಭೂಷಣ ಪ್ರಶಸ್ತಿ ವಿಜೇತರಾಗಿರುವ ಕಮಲೇಶ್‌ ಡಿ. ಪಟೇಲ್‌ (ದಾಜಿ) ಇದರ ನೇತೃ ತ್ವವಹಿಸಿ ದ್ದಾರೆ. 160 ದೇಶಗಳಲ್ಲಿ 15 ಲಕ್ಷ ಸ್ವಯಂ ಸೇವಕರು ಹಾಗೂ ಧ್ಯಾನ ಕಲಿಸಲು 10 ಸಾವಿರಕ್ಕೂ ಹೆಚ್ಚು ಮಂದಿ ಸ್ವಯಂ ಸೇವಾ ತರಬೇತುದಾರರಿದ್ದಾರೆ. ಈ ಸಂಸ್ಥೆಯಿಂದ ಕೋಲಾರ ಜಿಲ್ಲೆಯ ಉಸ್ತುವಾರಿಯನ್ನು ಮಾಧುರಿ ಎಂಬುವರು ಹೊತ್ತುಕೊಂಡಿದ್ದಾರೆ.

ಏನಿದು ಅಭಿಯಾನ: ಪ್ರತಿ ಮನೆಯಲ್ಲಿ ಧ್ಯಾನ, ಪ್ರತಿದಿನ ಧ್ಯಾನ ಅಭಿಯಾನವು ಈಗಾಗಲೇ ಮಧ್ಯಪ್ರ ದೇಶ ರಾಜ್ಯದ 1.2 ಕೋಟಿ ಜನರಿಗೆ ತಲುಪಿದೆ. ತೆಲಂಗಾಣ ಹಾಗೂ ತಮಿಳುನಾಡಿನ ಚೆಂಗಲ್‌ಪೇಟೆ ಜಿಲ್ಲೆಯಲ್ಲಿ ಹಲವು ಲಕ್ಷ ಮಂದಿ ಈ ಅಭಿಯಾನದ ಲಾಭ ಪಡೆದುಕೊಂಡು ನಿತ್ಯವೂ ಧ್ಯಾನಸ್ಥರಾಗುತ್ತಿದ್ದಾರೆ. ಇದೇ ರೀತಿಯ ಅಭಿಯಾನವನ್ನು ಮಾಲೂರಿನ ತಾಲೂಕಿನ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರತಿ ಮನೆಯ ಪ್ರತಿಯೊಬ್ಬರಿಗೂ ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ.

ಆಯ್ಕೆಗೆ ಕಾರಣವೇನು?: ಮಾಲೂರು ತಾಲೂಕಿನಲ್ಲಿ ಹಾರ್ಟ್‌ಫುಲ್‌ನೆಸ್‌ ಸಂಸ್ಥೆ ಯಲ್ಲಿ ತರಬೇತಿ ಪಡೆದ 200ಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರಿದ್ದಾರೆ. ಈಗಾಗಲೇ 100 ಮಂದಿ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರಿಂದ ಪ್ರಾಯೋಗಿಕವಾಗಿ ಅಭಿಯಾನವನ್ನು ನಡೆಸಲು ಸುಗಮವಾಗುತ್ತದೆ ಎಂಬ ಕಾರಣಕ್ಕೆ ಮಾಲೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ 2 ತಿಂಗಳಿನಿಂದಲೂ ತರಬೇತುದಾರರು ಅಭಿಯಾನದ ಚಟುವಟಿಕೆ ಆರಂಭಿಸಿದ್ದು, ಮಾಲೂರಿನ ಜನತೆಗೆ ಧ್ಯಾನ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಆರು ತಿಂಗಳೊಳಗಾಗಿ ಮಾಲೂರಿನ 200ಕ್ಕೂ ಗ್ರಾಮಗಳನ್ನು ತಲುಪಲು ಉದ್ದೇಶಿಸಲಾಗಿದೆ. ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ಜಿಪಂ ಮಾಲೂರು ತಾಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಇಡೀ ತಾಲೂಕಿನಲ್ಲಿ ಅಭಿಯಾನ ಪೂರ್ಣಗೊಂಡ ನಂತರ ಇದರ ಪ್ರಯೋಜನಗಳ ಆಧಾರದ ಮೇಲೆ ಇಡೀ ರಾಜ್ಯ ದಲ್ಲಿ ಪ್ರತಿ ಮನೆಯಲ್ಲಿ ಧ್ಯಾನ ಪ್ರತಿ ದಿನ ಧ್ಯಾನ ಅಭಿಯಾನ ವಿಸ್ತರಿಸಲು ತೀರ್ಮಾನಿಸಲಾಗಿದೆ.

ಮಾಲೂರು ತಾಲೂಕಿನಲ್ಲಿ ನಮ್ಮ ಹಾರ್ಟ್‌ಫುಲ್‌ನೆಸ್‌ ಸಂಸ್ಥೆಯಿಂದ ತರಬೇತಿ ಪಡೆದ ಸ್ವಯಂ ಸೇವಕರು ಹೆಚ್ಚಾಗಿದ್ದುದ್ದರಿಂದ ಪ್ರತಿ ಮನೆಯಲ್ಲಿ ಧ್ಯಾನ, ಪ್ರತಿ ದಿನ ಧ್ಯಾನ ಅಭಿಯಾನಕ್ಕೆ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ 25ಕ್ಕೂ ಹೆಚ್ಚು ಗ್ರಾಮ ಧ್ಯಾನಸ್ಥ ಗ್ರಾಮಗಳಾಗಿಸಿದ್ದೇವೆ. 200 ಗ್ರಾಮ ತಲು ಪುವ ಗುರಿಯೊಂದಿಗೆ ಇಡೀ ತಾಲೂಕಿನ ಜನರನ್ನು ಜಾತಿ, ಧರ್ಮ, ವರ್ಗ, ವರ್ಣ, ರಾಜಕೀಯವನ್ನು ಮೀರಿ ಧ್ಯಾನಸ್ಥರನ್ನಾಗಿಸಲು ಅಭಿಯಾನದಡಿ ಶ್ರಮಿಸುತ್ತಿದ್ದೇವೆ. – ಆರ್‌. ಮಾಧುರಿ, ವಲಯ ಸಮನ್ವಯಾಧಿಕಾರಿ, ಹಾರ್ಟ್‌ಫುಲ್‌ನೆಸ್‌ ಸಂಸ್ಥೆ, ಕೋಲಾರ.

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next