Advertisement

ಆತಂಕದ ನಡುವೆಯೂ ಮೆಡಿಕಲ್‌ ಶಾಪ್‌, ಪೆಟ್ರೋಲ್‌ ಬಂಕ್‌, ಎಟಿಎಂ ಸಿಬಂದಿ ಸೇವೆ

01:20 AM May 26, 2020 | Sriram |

ವಿಶೇಷ ವರದಿ- ಮಂಗಳೂರು: ಮೆಡಿಕಲ್‌ ಶಾಪ್‌, ಪೆಟ್ರೋಲ್‌ ಬಂಕ್‌ ಮತ್ತು ಎಟಿಎಂಗಳ ಭದ್ರತಾ ಸಿಬಂದಿ ಪ್ರತಿದಿನ, ಪ್ರತಿ ಕ್ಷಣವೆಂಬಂತೆ ನಿರಂತರ ಸಾರ್ವಜನಿಕ ಸಂಪರ್ಕದಲ್ಲಿದ್ದು, ಆತಂಕದ ನಡುವೆಯೂ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಬಹುತೇಕ ಕಡೆಗಳಲ್ಲಿ ಸಿಬಂದಿಯು ಗರಿಷ್ಠ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಾದರಿ ಯೆನಿಸಿಕೊಂಡಿದ್ದರೆ ಕೆಲವೆಡೆ ಮಾತ್ರ ಇನ್ನೂ ಈ ಬಗ್ಗೆ ನಿರ್ಲಕ್ಷ್ಯ ಮುಂದುವರಿದಿರುವುದು ಗಂಭೀರ ವಿಚಾರ.

Advertisement

ಆರೋಗ್ಯ ಇಲಾಖೆ ಸೇರಿದಂತೆ ಆಡಳಿತದ ವಿವಿಧ ವಿಭಾಗಗಳ ಅಧಿಕಾರಿ, ಸಿಬಂದಿ, ಪೊಲೀಸ್‌ ಸಹಿತ ಕೋವಿಡ್-19 ವಾರಿಯರ್ ಗಳಾಗಿ ದುಡಿಯುತ್ತಿರುವವರಂತೆಯೇ ಮೆಡಿಕಲ್‌ ಶಾಪ್‌, ಪೆಟ್ರೋಲ್‌ಪಂಪ್‌ ಮತ್ತು ಎಟಿಎಂ ಕೇಂದ್ರಗಳ ಸಿಬಂದಿ ತಮ್ಮನ್ನು ಕೂಡ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪೆಟ್ರೋಲ್‌ ಬಂಕ್‌ಗಳಲ್ಲಿ ಜಾಗೃತಿ
ಎಲ್ಲ ಲಾಕ್‌ಡೌನ್‌ಗಳ ಸಂದರ್ಭದಲ್ಲಿಯೂ ಪೆಟ್ರೋಲ್‌ ಬಂಕ್‌ಗಳಿಗೆ ವಿನಾಯಿತಿ ಇತ್ತು. ಹಾಗಾಗಿ ಪೆಟ್ರೋಲ್‌ ಹಾಕುವ ಸಿಬಂದಿ (ಕಸ್ಟಮರ್‌ ಅಟೆಂಡರ್‌) ಎಲ್ಲ ದಿನಗಳಲ್ಲಿಯೂ ದುಡಿದಿದ್ದಾರೆ. ಈಗಲೂ ರಾತ್ರಿ ಹಗಲು ಅವರ ಸೇವೆ ಮುಂದುವರಿದಿದೆ.

ಹಲವು ಶಿಫ್ಟ್ ಗಳಲ್ಲಿ ಸಿಬಂದಿ ದುಡಿಯುತ್ತಾರಾದರೂ ಪ್ರತೀ ಕ್ಷಣವೂ ಎಚ್ಚರಿಕೆಯಿಂದ ಇರುವ ಅನಿವಾರ್ಯತೆ ಅವರದ್ದು. ಅವಿಭಜಿತ ದ.ಕ. ಜಿಲ್ಲೆಯಲ್ಲಿ 6,000 ಮಂದಿ ಪೆಟ್ರೋಲ್‌ ಬಂಕ್‌ ಸಿಬಂದಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಮಾಸ್ಕ್ ಇಲ್ಲದಿದ್ದರೆ ವಾಪಸ್‌
“ಮಾಸ್ಕ್ ಧರಿಸದೇ ಬರುವ ಗ್ರಾಹಕರ ವಾಹನಗಳಿಗೆ ಪೆಟ್ರೋಲ್‌ ಹಾಕಲು ನಿರಾಕರಿಸುತ್ತೇವೆ. ಉಳಿದಂತೆ ಯಾವ ರಾಜ್ಯಗಳ ಗ್ರಾಹಕರನ್ನು ಕೂಡ ವಾಪಸ್ಸು ಕಳುಹಿಸುವುದಿಲ್ಲ. ಸಾಧ್ಯವಾದಷ್ಟು ಡಿಜಿಟಲ್‌ ಪೇಮೆಂಟ್‌ಗೆ ಸೂಚಿಸುತ್ತೇವೆ. ನಮಗೆ ಅಗತ್ಯ ಗ್ಲೌಸ್‌, ಮಾಸ್ಕ್ ಗಳನ್ನು ಒದಗಿಸಲಾಗಿದೆ.ನಮ್ಮ ಎಚ್ಚರಿಕೆಯಲ್ಲಿ ನಾವಿದ್ದೇವೆ’ ಎನ್ನುತ್ತಾರೆ ಮಂಗಳೂರು ಭಾಗದ ಪೆಟ್ರೋಲ್‌ ಪಂಪ್‌ನ ಓರ್ವ ಸಿಬಂದಿ.

Advertisement

ಸುರಕ್ಷಾ ಕ್ರಮ ಪಾಲಿಸಿ
ಹೆಚ್ಚಿನ ಪೆಟ್ರೋಲ್‌ ಬಂಕ್‌ಗಳ ಸಿಬಂದಿ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಕೆಲವೆಡೆ ಸಿಬಂದಿ ಮಾಸ್ಕ್ ನ್ನುಸಮರ್ಪಕವಾಗಿ ಧರಿಸದಿರುವುದು ಕೂಡ ಗಮನಕ್ಕೆ ಬಂದಿದೆ. ಇಂತವರಲ್ಲಿಯೂ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ ಎನ್ನುತ್ತಾರೆ ಗ್ರಾಹಕರು.

ಎಟಿಎಂ ಸಿಬಂದಿಗೂ ಆತಂಕ
ಎಟಿಎಂಗಳ ಭದ್ರತಾ ಸಿಬಂದಿ ಕೂಡ ಆತಂಕದ ನಡುವೆ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ನಗರಗಳಲ್ಲಿ ಇರುವ ಎಟಿಎಂಗಳಿಗೆ ಕೆಲವೊಮ್ಮೆ ಬೇರೆ ರಾಜ್ಯಗಳ ವಾಹನಗಳ ಚಾಲಕರು ಕೂಡ ಬರುತ್ತಾರೆ. ಇದು ಎಟಿಎಂ ಭದ್ರತಾ ಸಿಬಂದಿಯ ಆತಂಕಕ್ಕೆ ಕಾರಣ. ಕೆಲವು ಎಟಿಎಂಗಳಲ್ಲಿ ಗ್ರಾಹಕರ ಬಳಕೆಗಾಗಿ ಸ್ಯಾನಿಟೈಸರ್‌ಗಳನ್ನು ಇಡಲಾಗಿದೆ. ಇನ್ನು ಕೆಲವೆಡೆ ಸ್ಯಾನಿಟೈಸರ್‌ಗಳಿಲ್ಲ. ಕೆಲವೆಡೆ ಎಟಿಎಂ ಭದ್ರತಾ ಸಿಬಂದಿ ಕೂಡ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರು ಕೂಡ ಹೆಚ್ಚು ಜಾಗರೂಕತೆ ವಹಿಸಬೇಕು ಎನ್ನುತ್ತಾರೆ ಸಾರ್ವಜನಿಕರು. ಫಾರ್ಮಸಿಸ್ಟ್‌ಗಳು ಸೇರಿದಂತೆ ಮೆಡಿಕಲ್‌ಗ‌ಳಿಗೆ ಸಂಬಂಧಿಸಿದ ಕೆಲಸಗಳಲ್ಲಿಯೂ ನೂರಾರು ಮಂದಿ ತೊಡಗಿಸಿಕೊಂಡಿದ್ದು ಅವರು ಕೂಡ ನಿರಂತರವಾಗಿ ತಮ್ಮ ಕರ್ತವ್ಯ ಮುಂದುವರೆಸಿದ್ದಾರೆ. ಇವರ ಸೇವೆಗೂ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಸುರಕ್ಷತಾ ಕ್ರಮ ಪಾಲನೆ
ಪೆಟ್ರೋಲ್‌ ಬಂಕ್‌ಗಳಲ್ಲಿ ದುಡಿಯುವವರಿಗೆ ಗ್ಲೌಸ್‌, ಮಾಸ್ಕ್ ಸೇರಿದಂತೆ ಎಲ್ಲ ಸುರಕ್ಷಾ ಪರಿಕರಗಳನ್ನು ಒದಗಿಸಿ ಮಾಹಿತಿ ನೀಡಲಾಗಿದೆ. ಅಗತ್ಯ ಸುರಕ್ಷತಾ ಕ್ರಮಗಳಿಂದಾಗಿ ಇದುವರೆಗೆ ಪೆಟ್ರೋಲ್‌ ಬಂಕ್‌ ಸಿಬಂದಿಗೆ ಕೋವಿಡ್-19 ಸೋಂಕು ಉಂಟಾಗಿಲ್ಲ. ಪೆಟ್ರೋಲ್‌ ಡೀಸೆಲ್‌ ಮಾರಾಟ ತೀವ್ರ ಕುಸಿತ ಕಂಡಿದ್ದರೂ ಸಿಬಂದಿ ಸಂಬಳ ಬಾಕಿ ಇಟ್ಟಿಲ್ಲ. ಸಿಬಂದಿಗೆ ಪೆಟ್ರೋಲಿಯಂ ಕಂಪೆನಿಗಳು ಕೋವಿಡ್‌ ಇನ್ಶೂರೆನ್ಸ್‌ ಎಂಬ ವಿಮೆ ಮಾಡಿದ್ದು ಒಂದು ವೇಳೆ ಕೋವಿಡ್-19 ದಿಂದ ಮೃತಪಟ್ಟರೆ 5 ಲ.ರೂ. ಪರಿಹಾರ ದೊರೆಯುತ್ತದೆ. ಪ್ರಸ್ತುತ ಡಿಜಿಟಲ್‌ ಪೇಮೆಂಟ್‌ ಪ್ರಮಾಣ ಹೆಚ್ಚಾಗಿದೆ.
 -ಪಿ.ವಾಮನ್‌ ಪೈ, ಅಧ್ಯಕ್ಷ, ಉಡುಪಿ ಮತ್ತು ದ.ಕ. ಜಿಲ್ಲಾ ಪೆಟ್ರೋಲಿಯಂ ಡೀಲರ್ ಅಸೋಸಿಯೇಶನ್‌.

Advertisement

Udayavani is now on Telegram. Click here to join our channel and stay updated with the latest news.

Next