Advertisement

ಮಂಗಳೂರು ಸೆಂಟ್ರಲ್‌ನಲ್ಲಿ ಸಿದ್ಧಗೊಳ್ಳುತ್ತಿದೆ ‘ಮೆಡಿಕಲ್‌ ಕಿಯೋಸ್ಕ್

10:28 AM Dec 02, 2018 | |

ಮಹಾನಗರ : ಘಟನೆ 1: ಚೆನ್ನೈಯಿಂದ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಆಗಮಿ ಸಿದ ವ್ಯಕ್ತಿಯೊಬ್ಬರು ರೈಲಿನ ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡರು. ಇದನ್ನು ಗಮನಿಸಿದ ರೈಲ್ವೇ ಅಧಿಕಾರಿಗಳು ಆ್ಯಂಬುಲೆನ್ಸ್‌ಗೆ ಕರೆಮಾಡಿದಾಗ ಅರ್ಧ ತಾಸಿನವರೆಗೂ ಆ್ಯಂಬುಲೆನ್ಸ್‌ ಬರಲಿಲ್ಲ. ಆದರೆ, ಅದರ ಮುಂಚೆಯೇ ಗಾಯಗೊಂಡವರನ್ನು ಖಾಸಗಿ ವಾಹನದಲ್ಲಿಯೇ ಆಸ್ಪತ್ರೆ ತಲುಪಿಸಲಾಯಿತು!

Advertisement

ಘಟನೆ 2: ನಗರದ ಕಾಲೇಜಿನ ಫಿಸಿಯೋಥೆರಪಿ ವಿದ್ಯಾರ್ಥಿನಿ ರೈಲು ನಿಲ್ದಾಣದಲ್ಲಿ ಕುಸಿದು ಬಿದ್ದಳು. ಅಲ್ಲಿದ್ದವರು ‘ಫಿಟ್ಸ್‌’ ಎಂದು ಆಕೆಯ ಕೈಗೆ ಕಬ್ಬಿಣವನ್ನು ಕೈಯಲ್ಲಿಟ್ಟು ಉಪಚರಿಸಿದರು. ತತ್‌ಕ್ಷಣ ಆ್ಯಂಬುಲೆನ್ಸ್‌ನವರನ್ನು ಕರೆಸಿ ಆಸ್ಪತ್ರೆಗೆ ದಾಖಲಿಸಿದಾಗ ಗೊತ್ತಾಯಿತು’ ಆಕೆಗೆ ಫಿಟ್ಸ್‌ ಅಲ್ಲ, ನರ ಸಂಬಂಧಿ ಕಾಯಿಲೆ ಎಂದು!

ಘಟನೆ 3: ರೈಲು ಆಗಮಿಸಿದಾಗ ಫ್ಲ್ಯಾಟ್‌ ಫಾರಂನಲ್ಲಿ ವೇಗವಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕಾಲಿಗೆ ಯಾವುದೋ ಕಾರಣದಿಂದ ಬಲವಾದ ಗಾಯವಾಯಿತು. ರಕ್ತ ಸೋರುತ್ತಿತ್ತು. ಆದರೆ ಏನೂ ಮಾಡುವಂತಿರಲಿಲ್ಲ. ನಿಲ್ದಾಣದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಹುಡುಕಾಡಿದರೆ ಅಲ್ಲಿ ಔಷಧ ಇರಲಿಲ್ಲ! ಇಂತಹ ಹಲವು ಘಟನೆಗಳಿಗೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ನಿತ್ಯ ಕಾರಣವಾಗುತ್ತಿದೆ. 

ಪ್ರತೀದಿನ ಹಲವಾರು ರೈಲುಗಳು ಓಡಾಟ ನಡೆಸುತ್ತಿದ್ದು, ಹೆಚ್ಚಾ-ಕಡಿಮೆ 30,000ದಷ್ಟು ಪ್ರಯಾಣಿಕರು ಬಂದು-ಹೋಗುತ್ತಿದ್ದಾರೆ. ನಿಲ್ದಾಣದಲ್ಲಿ ವೈದ್ಯಕೀಯ ಸೇವೆ ಆರಂಭವಾಗಬೇಕು ಎಂಬ ಕಾರಣದಿಂದ ಕಿಶನ್‌ ಕುಮಾರ್‌ ಎಂ.ಎಸ್‌. ಅವರ ಮುತುವರ್ಜಿಯಿಂದ ಮೆಡಿಕಲ್‌ ಕಿಯೋಸ್ಕ್ ಆರಂಭಕ್ಕೆ ಉದ್ದೇಶಿಸಲಾಗಿದೆ.

ದಕ್ಷಿಣ ರೈಲ್ವೇಯ ಪಾಲಕ್ಕಾಡ್‌ ವಿಭಾಗ ಅಧಿಕಾರಿಗಳು ಸ್ಥಳಾವಕಾಶ ನೀಡಿದ್ದು, ಮುಂದಿನ 15 ದಿನದೊಳಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೆಂಟ್ರಲ್‌ ರೈಲು ನಿಲ್ದಾಣದ ಪ್ರವೇಶದ್ವಾರದ ಎಡಭಾಗದಲ್ಲಿ ಮೆಡಿಕಲ್‌ ಕಿಯೋಸ್ಕ್ ಕಾರ್ಯಾಚರಿಸಲಿದೆ. ಮುಂಭಾಗದಲ್ಲಿ ಟಿಕೆಟ್‌ ಕೌಂಟರ್‌ ಹಾಗೂ ಪ್ರಯಾಣಿಕರ ಓಡಾಟದ ಮುಖ್ಯ ಪ್ರದೇಶ ಇದಾಗಿರುವುದರಿಂದ ಅಧಿಕ ಜನರು ಕಿಯೋಸ್ಕ್ ಸೌಲಭ್ಯ ಪಡೆಯಬಹುದು. ಮೆಡಿಕಲ್‌ ಕಿಯೋಸ್ಕ್ ನಿರ್ಮಾಣ, ನಿರ್ವಹಣೆಯನ್ನು ಮಂಗಳೂರಿನ ಯುನಿಟಿ ಆಸ್ಪತ್ರೆ ವಹಿಸಿಕೊಂಡಿದೆ. ಬೂತ್‌ ನಿರ್ಮಾಣಕ್ಕೆ ಸ್ಥಳಾವಕಾಶ, ನೀರು, ವಿದ್ಯುತ್‌ ಸೌಕರ್ಯವನ್ನು ರೈಲ್ವೇ ಇಲಾಖೆ ಉಚಿತವಾಗಿ ನೀಡುತ್ತದೆ.

Advertisement

ಪರಿಣತಿ ಹೊಂದಿದ ಪ್ಯಾರಾ ಮೆಡಿಕಲ್‌ ಸಿಬಂದಿ ಪ್ರತಿ ನಿತ್ಯ ಇಲ್ಲಿ ಸೇವೆಯಲ್ಲಿರುತ್ತಾರೆ. ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ತತ್‌ಕ್ಷಣದ ಚಿಕಿತ್ಸೆ ದೊರೆಯಲಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್‌ ಸೇವೆ ಕೂಡ ನಿಯೋಜಿಸಲು ನಿರ್ಧರಿಸಲಾಗಿದೆ.

ಎಟಿಎಂ ಸೇವೆ ಮರು ಆರಂಭ?
ಸೆಂಟ್ರಲ್‌ ನಿಲ್ದಾಣ ವ್ಯಾಪ್ತಿಯಲ್ಲಿ ಬ್ಯಾಂಕ್‌ ಎಟಿಎಂ ಸೇವೆ ಕೆಲವು ತಿಂಗಳಿನಿಂದ ದೊರೆಯುತ್ತಿರಲಿಲ್ಲ. ಮೂರು ಎಟಿಎಂಗಳು ಕಾರ್ಯಾಚರಿಸುತ್ತಿದ್ದ ಜಾಗದಲ್ಲಿ ಈಗ ಒಂದೂ ಕೂಡ ಇಲ್ಲದೆ ಪ್ರಯಾಣಿಕರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ರೈಲ್ವೇ ಇಲಾಖೆಗೆ ಬ್ಯಾಂಕಿನವರಿಂದ ನಿಗದಿಪಡಿಸಿದ ಠೇವಣಿ ಮೊತ್ತ ದುಬಾರಿ ಎಂಬ ಕಾರಣ ನೀಡಿ ಎಟಿಎಂಗಳು ಬಾಗಿಲು ಹಾಕಿದ್ದವು. ಇದನ್ನು ಮನಗಂಡ ರೈಲ್ವೇ ಇಲಾಖೆ ಇದೀಗ ನಿಯಮಾವಳಿಯಲ್ಲಿ ಸರಳೀಕರಣ ಮಾಡಿದೆ. ಅದರಂತೆ ಠೇವಣಿಯನ್ನು ಕೈಬಿಟ್ಟು, ಟೆಂಡರ್‌ ಆಧಾರದಲ್ಲಿ ಎಟಿಎಂ ಸೇವೆಗೆ ಬ್ಯಾಂಕಿನವರಿಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಟೆಂಡರ್‌ನಲ್ಲಿ ಭಾಗವಹಿಸಿ ಆಯ್ಕೆಯಾದವರಿಗೆ ಎಟಿಎಂ ಮಾಡಲು ಅವಕಾಶವಿದೆ. ಈ ಕಾರಣದಿಂದ ಹಲವು ಬ್ಯಾಂಕ್‌ನವರು ರೈಲ್ವೇ ಇಲಾಖೆಯನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

15 ದಿನದೊಳಗೆ ಕಾರ್ಯಾರಂಭ
ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಮೆಡಿಕಲ್‌ ಕಿಯೋಸ್ಕ್ ಆರಂಭಿಸಲು ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಮುಂದಿನ 15 ದಿನಗಳೊಳಗೆ ನೂತನ ಉಚಿತ ಕಿಯೋಸ್ಕ್ ಸೇವೆ ಆರಂಭವಾಗಲಿದೆ. ಈ ಮೂಲಕ ರೈಲು ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ತುರ್ತು ಆರೋಗ್ಯ ಸ್ಪಂದನೆಯ ನಿಟ್ಟಿನಲ್ಲಿ ಕಿಯೋಸ್ಕ್ ಕಾರ್ಯನಿರ್ವಹಿಸಲಿದೆ.
– ಕಿಶನ್‌ ಕುಮಾರ್‌
ಎಂ.ಎಸ್‌., ಡೆಪ್ಯುಟಿ ಸ್ಟೇಷನ್‌ ಮ್ಯಾನೇಜರ್‌ (ವಾಣಿಜ್ಯ),
ಮಂಗಳೂರು ಸೆಂಟ್ರಲ್‌

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next