Advertisement

ಇಂದು ಒಂದೇ ವೇದಿಕೆಯಲ್ಲಿ ಮಾಯಾ-ಮುಲಾಯಂ

04:13 AM Apr 19, 2019 | Team Udayavani |

ಹಲವು ದಶಕಗಳ ಕಾಲ ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಎಸ್‌ಪಿ ಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಮತ್ತು ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಶುಕ್ರವಾರ ಉತ್ತರಪ್ರದೇಶದ ಮೈನ್‌ಪುರಿಯಲ್ಲಿ ಎಸ್‌ಪಿ-ಬಿಎಸ್ಪಿ-ಆರ್‌ಎಲ್‌ಡಿ ಮೈತ್ರಿಕೂಟದ ರ್ಯಾಲಿಯಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ. 1995ರಲ್ಲಿ ಎಸ್‌ಪಿ ಕಾರ್ಯಕರ್ತರು ರಾಜ್ಯ ಅತಿಥಿ ಗೃಹದಲ್ಲಿ ಬಿಎಸ್ಪಿ ನಾಯಕಿ ಮಾಯಾವತಿಯವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಾಗಿನಿಂದಲೂ ಎರಡೂ ಪಕ್ಷಗಳ ನಡುವೆ ವೈರತ್ವ ತೀವ್ರಗೊಂಡಿತ್ತು. ಆದರೆ ಈ ಬಾರಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡಿದೆಯಲ್ಲದೆ, ಶುಕ್ರವಾರ ಮೈನ್‌ಪುರಿಯಲ್ಲಿ ಶಕ್ತಿಪ್ರದರ್ಶನವನ್ನೂ ಮಾಡಲಿವೆ.

Advertisement

ಅಖೀಲೇಶ್‌, ಮನೇಕಾ ನಾಮಪತ್ರ
ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಗುರುವಾರ ಉತ್ತರ ಪ್ರದೇಶದ ಅಜಂಗಡ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್‌ಚಂದ್ರ ಮಿಶ್ರಾ ಸಾಥ್‌ ನೀಡಿದ್ದಾರೆ. ಇನ್ನೊಂದೆಡೆ, ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಮನೇಕಾ ಗಾಂಧಿ ಅವರು ಸುಲ್ತಾನ್‌ಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಪಟ್ಟಿಯಲ್ಲಿ ಹೆಸರಿಲ್ಲದ್ದನ್ನು ಖಂಡಿಸಿ ಕಾಶ್ಮೀರಿ ಪಂಡಿತರ ಪ್ರತಿಭಟನೆ
ಜಮ್ಮುವಿನ ಶ್ರೀನಗರ ಕ್ಷೇತ್ರದಲ್ಲಿ ರಚಿಸಲಾಗಿದ್ದ ವಿಶೇಷ ಮತಗಟ್ಟೆಗಳಲ್ಲಿನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ ಕಾರಣ ನೊಂದು ಹಲವು ಕಾಶ್ಮೀರಿ ಪಂಡಿತರು ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಹಕ್ಕನ್ನು ಕಸಿಯಲಾಗಿದೆ. ವಲಸಿಗರನ್ನು ತಮ್ಮ ಹಕ್ಕುಗಳಿಂದ ವಂಚಿಸಲು ಸಂಚು ನಡೆದಿದೆ ಎಂದೂ ಅವರು ಆರೋಪಿಸಿದ್ದಾರೆ.

ಆಕ್ಷೇಪಾರ್ಹ ಹೇಳಿಕೆ: ಕೇಸು ದಾಖಲು
ಇಸ್ಲಾಂ ವಿರೋಧಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳ್ಳೆ ವಿರುದ್ಧ ಕೇರಳ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಿಪಿಎಂ ನಾಯಕ ವಿ. ಶಿವನ್‌ಕುಟ್ಟಿ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಬೆರಳನ್ನೇ ಕತ್ತರಿಸಿಕೊಂಡ ಬಿಎಸ್ಪಿ ಬೆಂಬಲಿಗ
ವಿಚಿತ್ರ ಬೆಳವಣಿಗೆಯೊಂದರಲ್ಲಿ, ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಬಿಎಸ್‌ಪಿ ಬೆಂಬಲಿಗನೊಬ್ಬ ಬಹುಜನ ಸಮಾಜವ ಪಕ್ಷಕ್ಕೆ ಮತ ಹಾಕುವ ಬದಲಿಗೆ, ತಪ್ಪಾಗಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದರಿಂದ ನೊಂದು ತಮ್ಮ ಬೆರಳನ್ನು ತಾವೇ ಕತ್ತರಿಸಿಕೊಂಡಿದ್ದಾನೆ. ಇಲ್ಲಿನ ಶಿಕಾರ್‌ಪುರ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಬುಲಂದ್‌ಶಹರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭೋಲಾ ಸಿಂಗ್‌ ಮತ್ತು ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿ ಯೋಗೇಶ್‌ ವರ್ಮಾ ನಡುವೆ ಪೈಪೋಟಿಯಿದೆ. ಬಿಎಸ್ಪಿ ಬೆಂಬಲಿಗನಾದ 25 ವರ್ಷದ ಪವನ್‌ ಕುಮಾರ್‌, ತನ್ನಿಂದಾದ ತಪ್ಪಿನಿಂದ ನೊಂದು ಮನೆಗೆ ವಾಪಸಾದವನೇ ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಬಳಿಕ ತನ್ನ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಅಪ್‌ಲೋಡ್‌ ಮಾಡಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next