Advertisement

ಮೀನುಗಾರಿಕಾ ಅಭಿವೃದ್ಧಿಗೆ ಗರಿಷ್ಠ ಅನುದಾನ : ಪ್ರಮೋದ್‌

01:31 AM Apr 17, 2019 | sudhir |

ಉಡುಪಿ: ಪ್ರಮೋದ್‌ ಮಧ್ವರಾಜ್‌ ಅವರು ಸಚಿವರಾಗಿದ್ದಾಗ ಮೀನುಗಾರರಿಗೆ ಯಾವುದೇ ಯೋಜನೆಗಳನ್ನು ತರಲಿಲ್ಲ ಎಂದು ಆರೋಪಿಸುವ ಶಾಸಕ ರಘುಪತಿ ಭಟ್‌ಅವರು ತನ್ನ ಅವಧಿಯ 11 ತಿಂಗಳಲ್ಲಿ ಮೀನುಗಾರರಿಗೆ ತಂದ ಯೋಜನೆಗಳ ವಿವರ ಕೊಡಲಿ. ಐದು ವರ್ಷಗಳ ಅವಧಿಯಲ್ಲಿ ಮೀನುಗಾರರಿಗೆ ಸಂಸದೆ ಶೋಭಾ ಕರಂದ್ಲಾಜೆ ತಂದ ಯೋಜನೆಗಳು ಏನೆಂದು ತಿಳಿಸಲಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ಮಲ್ಪೆಯಲ್ಲಿ ನಡೆದ ಮೀನುಗಾರಿಕಾ ಮುಖಂಡರ ಸಭೆಯಲ್ಲಿ ಹೇಳಿದರು.

Advertisement

ಮೀನುಗಾರರ ನಿಯೋಗವನ್ನು ತೆಗೆದುಕೊಂಡು ಹೋಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇ ದೊಡ್ಡ ಸಾಧನೆಯಲ್ಲ. ಕರ ರಹಿತ ಡೀಸೆಲ್‌ ಯೋಜನೆಯಡಿಯಲ್ಲಿ ಡೀಸೆಲ್‌ ಸಹಾಯ ಧನವನ್ನು ವಾರ್ಷಿಕ 105 ಕೋಟಿಯಿಂದ 157 ಕೋಟಿ ರೂಪಾಯಿಗೆ ಏರಿಕೆ ಮಾಡಿ ಆ ಸಹಾಯಧನವನ್ನು ಬೋಟ್‌ ಮಾಲಕರ ಬ್ಯಾಂಕ್‌ ಖಾತೆಗೆ ಜಮೆ ಮಾಡುವಂತೆ ಕೇಂದ್ರ ಸರಕಾರದ ವಿವಿಧ ಸಬ್ಸಿಡಿ ಹಣವು ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಪಾವತಿಸುವ ಅನುಸಾರವಾಗಿ ಪಾವತಿಸಲಾಗಿದೆ. ಇದರಿಂದ ಕರ ರಹಿತ ಡೀಸೆಲ್‌ನ ದುರುಪಯೋಗವನ್ನು ನಿಲ್ಲಿಸಿ ಪ್ರಾಮಾಣಿಕ ಮೀನುಗಾರರಿಗೆ ಅನುಕೂಲ ಮಾಡಿಕೊಟ್ಟ ಕೀರ್ತಿ ಕಾಂಗ್ರೆಸ್‌ ಸರಕಾರಕ್ಕೇ ಸಲ್ಲುತ್ತದೆ. ರಾಜ್ಯ ಸರಕಾರದಿಂದ ಡೀಸೆಲ್‌ ಸಬ್ಸಿಡಿಯನ್ನು ಮೀನುಗಾರಿಕಾ ಬೋಟ್‌ಗೆ
ಪ್ರತಿದಿನಕ್ಕೆ 300 ಲೀಟರ್‌ನಿಂದ 500 ಲೀಟರ್‌ಗೆ ಏರಿಸಲು ತಾನು ಸರ್ವ ಪ್ರಯತ್ನಿಸುತ್ತೇನೆ ಎಂದು ಪ್ರಮೋದ್‌ ಮಧ್ವರಾಜ್‌ ಅವರು ತಿಳಿಸಿದ್ದಾರೆ.

ಶೋಭಾ ಸಂಪೂರ್ಣ ವಿಫ‌ಲ
ನಾಡದೋಣಿ ಮೀನುಗಾರರಿಗೆ ಸೀಮೆ ಎಣ್ಣೆ ನೀಡಲು ಹಾಗೂ ಯಾಂತ್ರೀಕೃತ ಮೀನುಗಾರಿಕಾ ಬೋಟ್‌ಗಳಿಗೆ ಡೀಸೆಲ್‌ ಸಬ್ಸಿಡಿ ಕೇಂದ್ರ ಸರಕಾರದಿಂದ ಮಂಜೂರು ಮಾಡುವಲ್ಲಿ ಶೋಭಾ ಕರಂದ್ಲಾಜೆ ಅವರು ಸಂಪೂರ್ಣ ವಿಫ‌ಲರಾಗಿದ್ದಾರೆ. ಮೀನುಗಾರಿಕಾ ಇಲಾಖೆಯಿಂದ ಸಾಧ್ಯತಾ ಪತ್ರ ಪಡೆಯದೆ ಬೋಟ್‌ಗಳನ್ನು ನಿರ್ಮಿಸಿ ಡೀಸೆಲ್‌ ಸಬ್ಸಿಡಿಯಂತಹ ಸರಕಾರದ ಸೌಲಭ್ಯಗಳಿಂದ ವಂಚಿತರಾಗಿ ಸಂಕಷ್ಟ ಅನುಭವಿಸುತ್ತಿದ್ದ 163 ಬೋಟ್‌ಗಳನ್ನು ಸಕ್ರಮಗೊಳಿಸಿ ಡೀಸೆಲ್‌ ದೊರಕುವಂತೆ ಮಾಡಲಾಗಿದೆ.

ಬಿಜೆಪಿ ಸರಕಾರವಿದ್ದಾಗ ಬೋಟ್‌ ನಿರ್ಮಾಣಕ್ಕೆ ಬೇಕಾಗುವ ಸಾಧ್ಯತಾ ಪತ್ರಕ್ಕೆ ಕನಿಷ್ಠ 3-4 ಲಕ್ಷ ರೂಪಾಯಿ ವಸೂಲಿ ಮಾಡಲಾಗುತ್ತಿತ್ತು. ಈ ಸಾಧ್ಯತಾ ಪತ್ರದ ನಿಯಮಾವಳಿಯನ್ನು ಸರಳೀಕರಿಸಿ ಮೀನುಗಾರಿಕಾ ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಅರ್ಜಿ ಹಾಕಿದ ಎಲ್ಲರಿಗೂ ಸಾಧ್ಯತಾ ಪತ್ರವನ್ನು ನೀಡಿ ವಸೂಲಿ ದಂಧೆಗೆ ಕಡಿವಾಣ ಹಾಕಿದ್ದೇವೆ. ಇದು ನನಗೆ ಮೀನುಗಾರರ ಮೇಲಿರುವ ಪ್ರಾಮಾಣಿಕ ಕಾಳಜಿಗೆ ಸಾಕ್ಷಿಯಲ್ಲವೇ ? ಎಂದು ಪ್ರಮೋದ್‌ ಪ್ರಶ್ನಿಸಿದರು.

ಮತ್ಸಾಶ್ರಯಕ್ಕೆ 3.18 ಕೋಟಿ ರೂ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ಸಾ$Âಶ್ರಯ ಯೋಜನೆಯಲ್ಲಿ 308 ಬಡ ಮೀನುಗಾರ ಕುಟುಂಬಗಳಿಗೆ 1.20 ಲಕ್ಷ ರೂ.ಗಳಂತೆ ಮನೆ ನಿರ್ಮಾಣಕ್ಕಾಗಿ 3.18 ಕೋಟಿ ರೂ. ಅನುದಾನ ನೀಡಲಾಗಿದೆ. ರಾಜ್ಯದ ವಿವಿಧ ಇಲಾಖೆಗಳ ವಸತಿ ಯೋಜನೆಗಳನ್ನು ಒಂದೇ ಸೂರಿನಡಿ ತರಲು ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕವೇ ಅನುದಾನ ಬಿಡಗಡೆಗೊಳಿಸಲು ಸಚಿವ ಸಂಪುಟದಲ್ಲಿ ತಿರ್ಮಾನಿಸಿದ್ದರಿಂದ ಈ ನಿರ್ಧಾರದಲ್ಲಿ ನನ್ನ ಹಸ್ತಕ್ಷೇಪ ಇಲ್ಲ. ಕನ್ನಿ ಸಂಘ, ಪರ್ಸಿನ್‌ ಸಂಘ, ಟೆಂಪೋ ಮಾಲಕರಿಗೆ ಸ್ವಂತ ಕಟ್ಟಡ ಕಟ್ಟಲು ಸರಕಾರಿ ಮೀನುಗಾರಿಕಾ ಇಲಾಖೆ ಸ್ಥಳವನ್ನು ನನ್ನ ಪರಿಶ್ರಮದಿಂದಾಗಿ ಲೀಸ್‌ ಆಧಾರದಲ್ಲಿ ನೀಡುವಂತಾಗಿದೆ ಎಂದು ತಿಳಿಸಿದರು.

Advertisement

ಮೀನುಗಾರರಿಗೆ ನಿಮ್ಮ ಕೊಡುಗೆಯೇನು?
ಐದು ವರ್ಷದಲ್ಲಿ ಶೋಭಾ ಕರಂದ್ಲಾಜೆ ಹಾಗೂ 11 ತಿಂಗಳಲ್ಲಿ ರಘುಪತಿ ಭಟ್ಟರು ಮೀನುಗಾರರಿಗೆ ಎಷ್ಟು ಭೂಮಿ ದೊರಕಿಸಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಪ್ರಮೋದ್‌ ಹೌದಾಗಿದ್ದರೆ ಲೆಕ್ಕ ಕೊಡಲಿ ಎಂದು ಸವಾಲೆಸೆದರು. ಮೀನುಗಾರರ ಬಹುದಿನಗಳ ಬೇಡಿಕೆಯಾದ ಬೋಟ್‌ ರಿಪೇರಿ ಮುಂತಾದ ದುರಸ್ತಿ ಕಾರ್ಯಗಳಿಗೆ ಅನುಕೂಲವಾಗುವಂತೆ ಸ್ಲಿಪ್‌ ವೇ ನಿರ್ಮಾಣಕ್ಕಾಗಿ ಒಂದು ಕೋಟಿ ಅನುದಾನ (ಟೆಬಾ¾ ಶಿಪ್‌ ಯಾರ್ಡ್‌ನ ಸಹಭಾಗಿತ್ವದಲ್ಲಿ 2.35 ಕೋಟಿ ವೆಚ್ಚದ ಯೋಜನೆ), ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಮಹಿಳಾ ಮೀನುಗಾರರಿಗೆ ನೀಡುವ 50,000 ರೂ. ಸಾಲದ ಬಡ್ಡಿದರವನ್ನು ಶೇ. 3ರಿಂದ ಶೇ. 2ಕ್ಕೆ ಇಳಿಸಿ ಮಹಿಳೆಯರ ಬಡ್ಡಿಯ ಸಬ್ಸಿಡಿ ಹಣ 17 ಕೋಟಿ ರೂಪಾಯಿಯನ್ನು ಸಿದ್ದರಾಮಯ್ಯ ಸರಕಾರ ಮಹಿಳಾ ಮೀನುಗಾರರ ಖಾತೆಗೆ ಪಾವತಿಸಿದೆ. ಸಮುದ್ರ ಮೀನುಗಾರಿಕೆಯಲ್ಲಿ ಆಕಸ್ಮಿಕವಾಗಿ ಮೀನುಗಾರರು ಮೃತಪಟ್ಟಾಗ ಇಲಾಖೆಯಿಂದ ನೀಡುವ 2 ಲಕ್ಷ ಪರಿಹಾರ ಮೊತ್ತವನ್ನು 6 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಆದರೆ ಕೇಂದ್ರ ಸರಕಾರದಿಂದ ಪರಿಹಾರ ಧನ ಹೆಚ್ಚಳ ಮಾಡಿಲ್ಲ. ಸ್ಲಿಪ್‌ ವೇಯನ್ನು ಮೀನುಗಾರಿಕೆ ಸಂಘಟನೆಗಳಿಗೆ ಲೀಸ್‌ ಆಧಾರದಲ್ಲಿ ಕೊಡಲು ಕಾನೂನು ತೊಡಕು ಇರುವುದರಿಂದ ಮಾಡಲಾಗಿಲ್ಲ. ರಘುಪತಿ ಭಟ್ಟರು ಕಳೆದ 11 ತಿಂಗಳಿಂದ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಮಲ್ಪೆಯಲ್ಲಿ ಒಂದು ಎಕರೆ ಜಾಗದಲ್ಲಿ ಬಸ್‌ನಿಲ್ದಾಣವನ್ನು ನಿರ್ಮಿಸುವ ಯೋಜನೆ ಇತ್ತು. ಮೀನುಗಾರ ಮಹಿಳೆಯರು ಮೀನು ಒಣಗಿಸುತ್ತಿದ್ದ ಸ್ಥಳಕ್ಕೆ ತೊಂದರೆಯಾಗುವುದರಿಂದ ಆ ಯೋಜನೆಯನ್ನು ಸ್ಥಗಿತಗೊಳಿಸಿ ಒಣ ಮೀನುಗಾರ ಮಹಿಳೆಯರು ಹಲವಾರು ವರ್ಷಗಳಿಂದ ಮೀನು ಒಣಗಿಸುತ್ತಿದ್ದ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಲೀಸ್‌ ಆಧಾರದಲ್ಲಿ ಮೀನುಗಾರಿಕೆ ಇಲಾಖೆಯಿಂದ ಸಿಗುವಂತೆ ಮಾಡುವುದಾಗಿ ಪ್ರಮೋದ್‌ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ಸಂಭವಿಸಿದ ದುರ್ಘ‌ಟನೆಯಲ್ಲಿ ಸುವರ್ಣ ತ್ರಿಭುಜ ಬೋಟಿನ ಏಳು ಜನ ಮೀನುಗಾರ ನಾಪತ್ತೆಯಾದ ಕುಟುಂಬದವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭೇಟಿ ಆಗುವ ಮೊದಲೇ ರಾಜ್ಯ ಸರಕಾರದ ಗೃಹ ಸಚಿವರಾದ ಎಂ.ಬಿ. ಪಾಟೀಲ್‌, ಉಸ್ತುವಾರಿ ಸಚಿವೆ ಡಾ| ಜಯಮಾಲಾ, ಮೀನುಗಾರಿಕೆ ಸಚಿವ ನಾಡಗೌಡ ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿಗಳು ನಾಪತ್ತೆಯಾದ ಮೀನುಗಾರರನ್ನು ಪತ್ತೆಹಚ್ಚಲು ಕೇಂದ್ರ ಸರಕಾರದ ಮೇಲೆ ಗರಿಷ್ಠ ಒತ್ತಡವನ್ನು ಹಾಕಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಸತೀಶ್‌ ಅಮೀನ್‌ ಪಡುಕೆರೆ ಅವರು, ಬಿಜೆಪಿಗರ ಒಡೆದು ಆಳುವ ನೀತಿಯಿಂದ ಬಡ ಮೀನುಗಾರರು ಮೋಸ ಹೋಗದೆ ಮುಂಬರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿಯಾದ ಪ್ರಮೋದ್‌ ಮಧ್ವರಾಜರನ್ನು ಆಯ್ಕೆಗೊಳಿಸಬೇಕು ಎಂದು ಮನವಿ ಮಾಡಿದರು.

ಬಹುದಿನಗಳ ಕನಸು ನನಸು
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ 28.80 ಕಿ.ಮೀ. ಮೀನುಗಾರಿಕಾ ರಸ್ತೆಗೆ 8.4 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟೀ ಕರಣ, ವಿಸ್ತರಣೆ, ಡಾಮರೀ ಕರಣದಿಂದ ಅಭಿವೃದ್ಧಿ ಪಡಿಸಿದ್ದು ಮೂರನೇ ಹಂತದ ಮೀನುಗಾರಿಕಾ ಬಂದರಿಗೆ 10 ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ.

ಹಾಗೆಯೇ ಅನೇಕ ವರ್ಷದಿಂದ ನನೆಗುದಿಗೆ ಬಿದ್ದಿದ್ದ ತೊಟ್ಟಂ ಸೇತುವೆಯನ್ನು ನಿರ್ಮಾಣಗೊಳಿಸಲಾಗಿದೆ. ಬಾಪುತೋಟದಲ್ಲಿ 2.40 ಕೋಟಿ ರೂ. ವೆಚ್ಚದಲ್ಲಿ ಜಟ್ಟಿ ನಿಮಾಣ 5 ಕೊಟಿ ರೂ. ಅನುದಾನ ದಲ್ಲಿ ಒಂದನೇ ಮತ್ತು 2ನೇ ಹಂತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕಾರ್ಯಗತ ಗೊಳಿಸಲಾಗಿದೆ.

ಬೋಟ್‌ಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದಾಗ 7.75 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ 300 ಮೀ. ಉದ್ದದ ಜೆಟ್ಟಿ ನಿರ್ಮಿಸಲಾಗಿದೆ. ರೂಪಾಯಿ 3.30 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಫಿಶ್‌ ಮಾರ್ಕೆಟ್‌ ನಿರ್ಮಿಸಿ 200 ಮಹಿಳೆಯರ ಜೀವನಕ್ಕೆ ಆಸರೆ, ಉಡುಪಿ ಜಿಲ್ಲೆಗೆ ಮೀನುಗಾರಿಕಾ ಉಪ ನಿರ್ದೇಶಕರ ಕಚೇರಿ, 111 ಕೋಟಿ ರೂ. ಅನುದಾನದೊಂದಿಗೆ ಕಡಲ ತೀರವನ್ನು ಸಂರಕ್ಷಿಸಲು ಬಲಿಷ್ಠ ತಡೆಗೋಡೆ ನಿರ್ಮಾಣ, ಮೀನುಗಾರಿಕಾ ಬಂದರಿನ ಸುತ್ತಮುತ್ತ
ಹಳ್ಳಿಗಳಿಗೆ ಸರಕಾರಿ ಜೆ ನರ್ಮ್ ಬಸ್‌ ಸೇವೆ. ಕಾನೂನಿಗೆ ತಿದ್ದುಪಡಿ ತಂದು ಬೋಟುಗಳ ಗಾತ್ರವನ್ನು 18 ಮೀಟರ್‌ನಿಂದ 21 ಮೀಟರ್‌ಗೆ
ಮತ್ತು ಎಂಜಿನ್‌ ಸಾಮರ್ಥ್ಯವನ್ನು 280 ಎಚ್‌ಪಿಯಿಂದ 350 ಎಚ್‌ಪಿಗೆ ಹೆಚ್ಚಿಸಿ ಮೀನುಗಾರಿಕಾ ಉದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ.

ಮಲ್ಪೆ ಪಡುಕರೆ ಸೇತುವೆಗಾಗಿ ವಿವಿಧ ಮೂಲಗಳಿಂದ 17 ಕೋಟಿ ಹಣವನ್ನು ಕ್ರೋಡೀಕರಿಸಿ ಮಲ್ಪೆ-ಪಡುಕರೆ ನಿವಾಸಿಗಳ ಬಹುದಿನಗಳ ಕನಸನ್ನು ನನಸಾಗಿಸಿದ್ದೇವೆ ಎಂದು ಪ್ರಮೋದ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next