Advertisement

ಕೋವಿಡ್‌ನ‌ಲ್ಲಿ ಭಕ್ತರ ಕೈ ಹಿಡಿದ ಮಠಗಳು

06:58 PM May 15, 2021 | Team Udayavani |

ವರದಿ : ವೀರೇಂದ್ರ ನಾಗಲದಿನ್ನಿ

Advertisement

ಗದಗ: ಕರ್ನಾಟಕ ಏಕೀಕರಣ, ಕನ್ನಡ ಜಾಗೃತಿ ಹಾಗೂ ಅಕ್ಷರ, ಅನ್ನದಾಸೋಹ, ಸೌಹಾರ್ದತೆ ಸಾರುವ ಮೂಲಕ ಗಮನ ಸೆಳೆದಿರುವ ಜಿಲ್ಲೆಯ ಹತ್ತಾರು ಮಠಗಳು ಇದೀಗ ಕೋವಿಡ್‌-19ರ ವಿರುದ್ಧ ಸಮರ ಸಾರಿವೆ.

ಜಿಲ್ಲೆಯ ಜನಸಾಮಾನ್ಯರ ಮಠ ಎಂಬ ಖ್ಯಾತಿ ಪಡೆದಿರುವ ಜ| ತೋಂಟದಾರ್ಯ ಮಠ ಹಾವೇರಿಯಲ್ಲಿರುವ ಆರ್ಯುವೇದ ಕಾಲೇಜಿನಲ್ಲಿ 60 ಬೆಡ್‌ಗಳ ಕೋವಿಡ್‌ ಕೇರ್‌ ಸೆಂಟರ್‌ ನಿರ್ಮಿಸುತ್ತಿದೆ. ಅದಕ್ಕಾಗಿ ಆಕ್ಸಿಜನ್‌ ಪೈಪ್‌ಲೈನ್‌ ಅಳವಡಿಕೆ ಕಾರ್ಯವೂ ನಡೆದಿದೆ. ಗದಗ ಚಿರಾಯು ಆಸ್ಪತ್ರೆ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಪೂರ್ಣಗೊಂಡ ಬಳಿಕ ಜಿಲ್ಲಾಡಳಿತದ ಸಹಯೋಗದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಅಗತ್ಯವಾದರೆ, ಜಿಲ್ಲಾಡಳಿತ ಸೂಚಿಸುವ ಸ್ಥಳಕ್ಕೆ ಆಹಾರ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಶ್ರೀಮಠದ ಆಡಳಿತಾ ಧಿಕಾರಿ ಎಸ್‌.ಎಸ್‌.ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಕಳೆದ ಬಾರಿ ಜನರಿಗೆ ಆಹಾರ ಕಿಟ್‌ ಒದಗಿಸಲಾಗಿತ್ತು. ಇತ್ತೀಚೆಗೆ ಕೋವಿಡ್‌ ಹಿನ್ನೆಲೆಯಲ್ಲಿ ಜನರಿಗೆ ಒಂದು ದಿನ ಮಧ್ಯಾಹ್ನ ಊಟ ವಿತರಿಸಲಾಯಿತು. ನಮ್ಮಲ್ಲಿ ಸ್ಥಳಾವಕಾಶಕ್ಕೆ ಕೊರತೆಯಿಲ್ಲ. ಶ್ರೀಮಠದಿಂದಲೇ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಲು ವೈದ್ಯರು, ಸಿಬ್ಬಂದಿ ಬೇಕಾಗುತ್ತದೆ. ಆಸಕ್ತ ವೈದ್ಯರು ಅಥವಾ ಜಿಲ್ಲಾಡಳಿತ ಬಯಸಿದರೆ ನಮ್ಮ ಶಾಲಾ ಕಟ್ಟಡವನ್ನೇ ಬಿಟ್ಟು ಕೊಡುತ್ತೇವೆ ಎಂದು ಮುಂಡರಗಿ ಸಂಸ್ಥಾನಮಠದ ನಾಡೋಜ ಜ| ಡಾ|ಅನ್ನದಾನೀಶ್ವರ ಸ್ವಾಮೀಜಿ ಹೇಳಿದ್ದಾರೆ.

ಅಗತ್ಯವಿರುವ ಭಕ್ತರಿಗೆ ಆಸ್ಪತ್ರೆಗಳಲ್ಲಿ ಬೆಡ್‌ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದ್ದೇವೆ. ಜಿಲ್ಲಾಡಳಿತ ಬಯಸಿದರೆ ಶ್ರೀಮಠದಲ್ಲಿರುವ 5 ಸಾವಿರ ಚದರ ಅಡಿ ವಿಸ್ತ್ರೀರ್ಣದ ಎರಡು ಅಂತಸ್ತಿನ ಕಟ್ಟಡ ಬಿಟ್ಟು ಕೊಡುತ್ತೇವೆ ಎಂದು ಬಾಲೆಹೊಸೂರು ದಿಂಗಾಲೇಶ್ವರಮಠದ ಶ್ರೀ ಕುಮಾರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಕಳೆದ ಬಾರಿ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಮೂಲಕ 10 ಲಕ್ಷ ರೂ. ಚೆಕ್‌ ನೀಡಿದ್ದ ಹಾಗೂ ಭಕ್ತರಿಗೆ ಆಹಾರ ಕಿಟ್‌ ಒದಗಿಸಿದ್ದ ಹಾಲಕೆರೆ ಅನ್ನದಾನೀಶ್ವರ ಮಠ ಈ ಬಾರಿ ಲಸಿಕಾಕರಣಕ್ಕೆ ಒತ್ತು ನೀಡಿದೆ. ಕಳೆದ ಬಾರಿಯೂ ನೆರವು: ಕಳೆದ ವರ್ಷ ಎದುರಾಗಿದ್ದ ಕೊರೊನಾ ಒಂದನೇ ಅಲೆಯಲ್ಲಿ ಜನರಿಗೆ ಆಹಾರ ಕಿಟ್‌, ಮಾಸ್ಕ್, ಸ್ಯಾನಿಟೈಸರ್‌ ವಿತರಿಸುವ ಮೂಲಕ ಜಿಲ್ಲೆಯ ಮಠಗಳು ಸಹಾಯ ಹಸ್ತ ಚಾಚಿದ್ದವು.

Advertisement

ಮುಂಡರಗಿ ಅನ್ನದಾನೀಶ್ವರ ಮಠ, ಗದಗಿನ ಜ|ತೋಂಟದಾರ್ಯ ಮಠಗಳು ಭಕ್ತರಿಗೆ ಆಹಾರ ಕಿಟ್‌, ಮಾಸ್ಕ್ ವಿತರಿಸಿದ್ದವು. ಶಿರಹಟ್ಟಿ ಫಕ್ಕೀರೇಶ್ವರ ಸ್ವಾಮಿ ಮಠ ಕಳೆದ ಬಾರಿ ಸರ್ಕಾರಕ್ಕೆ 2 ಲಕ್ಷ ರೂ. ಚೆಕ್‌ ನೀಡಿತ್ತು. ಆದರೆ ಈ ಬಾರಿ ಕೊರೊನಾ ಜಾಗೃತಿ ಕೈಗೊಂಡಿವೆ. ಶಿವಾನಂದ ಮಠ, ಭೈರನಹಟ್ಟಿ ದೊರೆಸ್ವಾಮಿಮಠ ಸೇರಿದಂತೆ ಅನೇಕ ಮಠಗಳು ಬರ, ನೆರೆ, ಅತಿವೃಷ್ಟಿ ಸೇರಿದಂತೆ ಅನೇಕ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ನೆರವು ನೀಡುವುದರ ಜತೆಗೆ ಭಕ್ತರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿವೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಮಸ್ಯೆ ಎದುರಾಗಬಹುದು ಎಂಬ ಕಾರಣಕ್ಕೆ ಹಲವು ಮಠಗಳು ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ತಾತ್ಕಾಲಿಕ ಆಸ್ಪತ್ರೆಗಳ ಆರಂಭಕ್ಕೆ ಹಿಂದೇಟು ಹಾಕುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next