Advertisement

ಭಾರಿ ಗಾಳಿ-ಮಳೆಗೆ ಅಪಾರ ಹಾನಿ

01:11 PM May 01, 2019 | Suhan S |

ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಗಾಳಿ ಸಮೇತ ಭಾರಿ ಮಳೆಯಾಗಿದ್ದು, ಕೆಲ ಗ್ರಾಮಗಳಲ್ಲಿ ಮನೆಯ ತಗಡುಗಳು ಹಾಗೂ ಜಮೀನಿನಲ್ಲಿರುವ ದನದ ಶೇಡ್‌ಗಳು ಗಾಳಿ ರಭಸಕ್ಕೆ ಕಿತ್ತು ಹೋಗಿವೆ.

Advertisement

ಬೇಸಿಗೆ ಬಿಸಿಲಿನಿಂದ ಬಸವಳಿದ ಜನರಿಗೆ ಸೋಮವಾರ ಸಂಜೆ ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಬಂದ ಮಳೆ ರಾತ್ರಿ 9ರವರೆಗೆ ಜಿಟಿಜಿಟಿ ಮಳೆಯಾಗಿದ್ದು, ಮೆಣೇಧಾಳ, ಮೆತ್ತಿನಾಳ, ಗಂಗನಾಳ, ಹಿರೇತೆಮ್ಮಿನಾಳ, ವಿರುಪಾಪುರ ಸುತ್ತಮುತ್ತಲಿನ ರೈತರ ಜಮೀನುಗಳ ಬದುಗಳಲ್ಲಿ ಅಲ್ಲಿಲ್ಲಿ ನೀರು ನಿಂತಿದೆ. ಮೆಣೇಧಾಳ ಗ್ರಾಮದ ಹೊರ ವಲಯದಲ್ಲಿರುವ ಕೆಲ ಮನೆಗಳ ತಗಡುಗಳು ಗಾಳಿ ರಭಸಕ್ಕೆ ಕಿತ್ತಿದ್ದು. 8-10 ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ.

ಮೆಣೇಧಾಳ ಗ್ರಾಮದ ರೇಣುಕಮ್ಮ ಗುಳೇದ, ಯಮನೂರಪ್ಪ ಸಣ್ಣ ಹನುಮಪ್ಪ ಅವರ ಮನೆ ಮೇಲಿನ ತಗುಡಿನ ಶೀಟ್‌ಗಳು ಗಾಳಿಯ ರಭಸಕ್ಕೆ ಕಿತ್ತುಕೊಂಡು ಹೋಗಿವೆ. ಮನೆಯಲ್ಲಿದ್ದ ಆಹಾರದ ದವಸ, ಧಾನ್ಯಗಳು ಮಳೆಯಯಲ್ಲಿ ತೊಯ್ದು ನಷ್ಟ ಸಂಭವಿಸಿದೆ. ಕೆಲ ರೈತರ ಜಮೀನುಗಳಲ್ಲಿ ಮಾವಿನಕಾಯಿ ಗಾಳಿ ರಭಸಕ್ಕೆ ನೆಲಕಚ್ಚಿವೆ.

ಹಳ್ಳೇರಹಟ್ಟಿ: ಹಳ್ಳೇರಹಟ್ಟಿಯಲ್ಲಿ ಭೀಮಪ್ಪ ಹಳ್ಳಿ, ಶ್ಯಾಮಣ್ಣ ಹಳ್ಳಿ, ಭೀಮವ್ವ ಹಳ್ಳಿಯವರ ಮನೆಗಳ ಮುಂದೆ ಹಾಕಿದ ತಗಡಿನ ಶೆಡ್‌ಗಳು ಕಿತ್ತು ಹೋಗಿವೆ. ಘಟನಾ ಸ್ಥಳಕ್ಕೆ ಗ್ರಾಮಲೇಕ್ಕಿಗ ಆದಯ್ಯಸ್ವಾಮಿ ಹಿರೇಮಠ, ಪಪಂ ಸದಸ್ಯ ವೀರೇಶ ಭೋವಿ, ಕನಕಪ್ಪ ಸಿದ್ದಾಪುರ ಭೇಟಿ ನೀಡಿ ಪರಿಶೀಲಿಸಿದರು. ತಾವರಗೇರಾ ಮಳೆ ಮಾಪನ ಕೇಂದ್ರದಲ್ಲಿ 11 ಎಂಎಂ ಮಳೆ ಪ್ರಮಾಣ ದಾಖಲಾಗಿದೆ.

60ಕ್ಕೂ ಹೆಚ್ಚು ಮನೆಗಳಿಗೆ ಹಾನಿ:

Advertisement

ಗಂಗಾವತಿ ತಾಲೂಕಿನಾದ್ಯಂತ ಸೋಮವಾರ ರಾತ್ರಿ ಸುರಿದ ಮಳೆ ಗಾಳಿಗೆ ತೀವ್ರ ಹಾನಿಯಾಗಿದ್ದು ಮನೆ ತಗಡು, ಹಂಚು ಹಾರಿ ಹೋಗಿವೆ. ಸಿದ್ದಿಕೇರಿ, ಕಲ್ಲಪ್ಪನಕ್ಯಾಂಪ್‌, ಸೂರ್ಯನಾಯಕನ ತಾಂಡದಲ್ಲಿ ಹೆಚ್ಚು ಹಾನಿಯಾಗಿದೆ. ಮನೆ ತಗಡು, ಹಂಚು ಹಾಗೂ ಗುಡಿಸಲು ಮೇಲಿನ ಚತ್ತು ಕಿತ್ತುಹೋಗಿದ್ದು ಅಪಾರ ಹಾನಿ ಸಂಭವಿಸಿದೆ. ಗಿಡ ಮರಗಳು ನೆಲಕ್ಕುರುಳಿದ್ದು, ಭತ್ತದ ರಾಶಿಗೆ ಮಳೆ ನೀರು ನುಗ್ಗಿದೆ. ಮೂರು ಗ್ರಾಮಗಳಲ್ಲಿ ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ಇದರಿಂದ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ. ನಿರಾಶ್ರಿತರಿಗೆ ಸರಕಾರಿ ಶಾಲೆಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಮಂಜುನಾಥ ಸ್ವಾಮೀ ಭೇಟಿ ನೀಡಿ ಹಾನಿಯ ಸಮೀಕ್ಷೆ ನಡೆಸಿದ್ದಾರೆ. ಮಳೆ ಗಾಳಿಯಿಂದ ಹಾನಿ ಗೊಳಗಾದ ಗ್ರಾಮಗಳಿಗೆ ಶಾಸಕ ಪರಣ್ಣ ಮುನವಳ್ಳಿ ಪುತ್ರ ಸಾಗರ ಮುನವಳ್ಳಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿರಾಶ್ರಿತರಿಗೆ ವೈಯಕ್ತಿಕ ನೆರವು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next