ಮರಿಯಮ್ಮನಹಳ್ಳಿ: ಕನ್ನಡವೇ ಜಾತಿ ಕನ್ನಡವೇ ಧರ್ಮವೆಂದು ಭಾವಿಸಿ ಕನ್ನಡಿಗರ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ರಕ್ಷಣಾ ವೇದಿಕೆಗಳು ಹೋರಾಡಬೇಕಾಗಿದೆ ಎಂದು ಹಿರಿಯ ರಂಗಕಲಾವಿದೆ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತೆ ಡಾ| ಕೆ.ನಾಗರತ್ನಮ್ಮ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ದುರ್ಗಾದಾಸ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿಬಣ) ಹೊಸಪೇಟೆ ಘಟಕ ಮರಿಯಮ್ಮನಹಳ್ಳಿ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮರಿಯಮ್ಮನಹಳ್ಳಿ ಸುತ್ತಮುತ್ತಲೂ ಕಾರ್ಖಾನೆಗಳು ಇರುವುದರಿಂದ ಪರಭಾಷಿಕರು ಹೆಚ್ಚು ವಲಸೆ ಬರುತ್ತಿದ್ದಾರೆ. ಸ್ಥಳೀಯ ಕನ್ನಡಿಗರ ಭಾಷೆ ಜನಜೀವನ ರಕ್ಷಣೆಗೆ ರಕ್ಷಣಾವೇದಿಕೆಗಳು ಹೋರಾಡಬೇಕಾಗಿದೆ. ಪಟ್ಟಣದ ಮೂಲಭೂತ ಸಮಸ್ಯೆಗಳಿಗಾಗಿ ಹೋರಾಟಗಳನ್ನು ರೂಪಿಸಿ ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬೇಕಾಗಿದೆ. ಕಲಾವಿದರಾದ ನಾವು ಕನ್ನಡಕ್ಕಾಗಿಯೇ ದುಡಿಯುತ್ತಿದ್ದೇವೆ ಕನ್ನಡಕ್ಕಾಗಿಯೇ ಬದುಕುತ್ತಿದ್ದೇವೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ ಮಾತನಾಡಿ, ನಾವು ಮೊದಲು ಕನ್ನಡಿಗರಾಗಿರಬೇಕು. ನಮ್ಮ ಪರಿಸರವೂ ಕನ್ನಡವಾಗಿರಬೇಕು. ಇಂಗ್ಲಿಷ್ ಭಾಷೆ ಊಟದಲ್ಲಿನ ಉಪ್ಪಿನಕಾಯಿಯಂತೆ ಇರಬೇಕು. ಕನ್ನಡ ನಮ್ಮ ಜೀವನದ ಮೂಲಸತ್ವವಾಗಿರಬೇಕು. ನಮ್ಮ ಭಾಷೆ ಉಳಿಸುವುದರ ಜೊತೆಗೆ ಬೇರೆ ಭಾಷೆಗಳನ್ನು ಕಲಿಯೋಣ ಎಂದರು. ಬಳ್ಳಾರಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಪಿ. ಶೇಖರ್ ಹಾಗೂ ಜಿಲ್ಲಾಧ್ಯಕ್ಷರಾದ ವಿ. ರಾಮಾಂಜಿನೇಯ ಮಾತನಾಡಿದರು.
ಪದಗ್ರಹಣ: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ಶೆಟ್ಟಿ ಬಣ ಹೊಸಪೇಟೆ ತಾಲೂಕು ಘಟಕಕ್ಕೆ ಸಂಘಟನಾ ಕಾರ್ಯದರ್ಶಿಯನ್ನಾಗಿ ಯೇಸು ರಾಜ್, ಮರಿಯಮ್ಮನಹಳ್ಳಿ ಹೋಬಳಿ ಘಟಕದ ಅಧ್ಯಕ್ಷರನ್ನಾಗಿ ಡಣಾಪುರದ ಈ. ರವಿಕುಮಾರ್, ಹೋಬಳಿ ಘಟಕದ ಕಾರ್ಯದರ್ಶಿಯಾಗಿ ರಾಜೇಶ್ ಕೆ.ಎಸ್. ಇವರನ್ನು ಒಂದು ವರ್ಷದ ಅವಧಿವರೆಗೆ ನೇಮಕಮಾಡಲಾಗಿದೆ ಎಂದು ಜಿಲ್ಲಾ ಯುವಾಧ್ಯಕ್ಷರಾದ ಕಟ್ಟೆಸ್ವಾಮಿ ಅವರು ಅಧಿಕೃತವಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರ ಘಟಕ ಅಧ್ಯಕ್ಷರಾದ ಚಂದ್ರಶೇಖರ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ರಾಜ ವಿ.ಕೆ., ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷ ಷಣ್ಮುಖ ಪಿ., ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ಅಧ್ಯಕ್ಷ ಭರಮಣ್ಣ, ತಾಲೂಕು ಯುವ ಘಟಕದ ಅಧ್ಯಕ್ಷ ವಿನೋದ ಕುಮಾರ್, ಚಲನಚಿತ್ರ ನಿರ್ದೇಶಕ ಅಡ್ಡ ರಮೇಶ, ಸಾಹಿತಿ ಶಿಕ್ಷಕ ಪರಮೇಶ್ವರ ಸೊಪ್ಪಿಮಠ, ರೈತ ಮುಖಂಡರಾದ ಕೆ. ಪರಶುರಾಮಪ್ಪ, ಹೂಗಾರ್ ಬಸವರಾಜ ಮತ್ತಿತರರು ಉಪಸ್ಥಿತರಿದ್ದರು. ಸಂಗೀತ ಭಾರತಿಯ ಸಂಸ್ಥಾಪನಾಧ್ಯಕ್ಷ ಎಚ್.ಪಿ. ಕಲ್ಲಂಭಟ್ಟ ಕಾರ್ಯಕ್ರಮ ನಿರ್ವಹಿಸಿದರು.