Advertisement

ಮರಿಯಮ್ಮನಹಳ್ಳಿ ರಂಗಕಲಾವಿದರಿಗೆ ಸಂದ ಗೌರವ

11:35 AM Jul 31, 2019 | Naveen |

ಮರಿಯಮ್ಮನಹಳ್ಳಿ: ‘ಪ್ರಶಸ್ತಿ ನನಗೆ ಬಂದಿದ್ದಲ್ಲ. ಬಳ್ಳಾರಿ ರಂಗಭೂಮಿಗೆ, ಮರಿಯಮ್ಮನಹಳ್ಳಿ ಸಮಸ್ತ ರಂಗಕಲಾವಿದರಿಗೆ ಸಂದಬೇಕಾದ ಗೌರವ’ ಎಂದು 2018-19ನೇ ಸಾಲಿನ ನಾಟಕ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿಗೆ ಭಾಜನರಾದ ಹಿರಿಯ ರಂಗಕರ್ಮಿ, ನಟ, ನಿರ್ದೇಶಕ ಗರಗ ನಾಗಲಾಪುರ ಗ್ರಾಮದ ಮ.ಬ ಸೋಮಣ್ಣ ಹೇಳಿದರು.

Advertisement

ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ‘ಉದಯವಾಣಿ’ ಯೊಂದಿಗೆ ಮಾತನಾಡಿದ ಅವರು, ‘ರಂಗಭೂಮಿ ಪ್ರಕ್ರಿಯೆ ಮತ್ತಷ್ಟು ಜಾಸ್ತಿಯಾಗಬೇಕು. ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತರಾಗಿದ್ದಾರೆ. ಸರ್ವಾಂಗೀಣ ಅಭಿವೃದ್ಧಿಗೆ ಮಕ್ಕಳು ರಂಗಭೂಮಿಯಲ್ಲಿ ತೊಡಗಿಕೊಳ್ಳಬೇಕು. ವಾರಕ್ಕೊಮ್ಮೆ ದೇವಸ್ಥಾನಕ್ಕೆ ಹೋದ ಹಾಗೆ ಮಕ್ಕಳು ವಾರಕ್ಕೊಮ್ಮೆಯಾದರೂ ರಂಗಭೂಮಿಗೆ ದರ್ಶನ ಮಾಡಬೇಕು’ ಎಂಬುವುದು ಅವರ ಮನದಾಳದ ಮಾತು.

ಕಲಾ ಸೇವೆ: ಮ.ಬ ಸೋಮಣ್ಣ ಅವರು ಶಿಕ್ಷಕರಾಗಿ ವಿಶೇಷವಾಗಿ ಕನ್ನಡ ಪಂಡಿತರಾಗಿದ್ದು, ಸುಮಾರು 42 ವರ್ಷಗಳ ಕಾಲ ವಿವಿಧ ಕಲಾ ಸೇವೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಕ್ಷೇತ್ರ ಸಂಯೋಜಕರಾಗಿ, ಸಾಕ್ಷರತಾ ಸಂಯೋಜಕರಾಗಿ, ಕಲಾ ಜಾಥಾದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಸುದೀರ್ಘ‌ ಕಾರ್ಯ ನಿರ್ವಹಿಸಿ 2012ರಲ್ಲಿ ನಿವೃತ್ತರಾಗಿದ್ದಾರೆ.

ಮ.ಬ ಸೋಮಣ್ಣ ಅವರು ಏಳನೇ ವಯಸ್ಸಿನಲ್ಲಿಯೇ ರಂಗಪ್ರವೇಶ ಮಾಡಿದರು. ಲಲಿತಕಲಾ ರಂಗದ ಸಂಘಟಕರಾಗಿ ನಿರ್ದೇಶಕರಾಗಿಯೇ ಹೆಚ್ಚು ಕಾಲ ಕಳೆದವರು. ಸುಮಾರು 25ಕ್ಕೂ ಹೆಚ್ಚು ನಾಟಕಗಳನ್ನು ಸಮರ್ಥವಾಗಿ ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಅವ್ವಣ್ಣೆವ್ವ, ಶೀಲಾವತಿ, ಕರಿಭಂಟ, ಆತ್ಮ ಯಾವಕುಲ ಜೀವ ಯಾವಕುಲ, ಸಾಕ್ಷಿಕಲ್ಲು, ವೀರಕೇಸರಿ, ಹರಿಶ್ಚಂದ್ರ, ಸಮರ್ಪಣ, ಕುಸುಮ, ಗಮಡನಾಜ್ಞೆ, ಶಿವನೊಲುಮೆಯ ಶಿಶು, ಕತ್ತಲೆ ಕರಗಿತು ಈ ನಾಟಕಗಳು ಹೆಚ್ಚು ಜನಪ್ರಿಯವಾಗಿವೆ.

ರಂಗ ಗೀತೆ ರಚನೆ: ಸೋಮಣ್ಣ ಅವರು ಬರೆದ ನಾಟಕಗಳಲ್ಲಿ ಅವ್ವಣ್ಣೆವ್ವ, ಶೀಲಾವತಿ, ಕರಿಭಂಟ, ಹಾಗೂ ವಿಶ್ವಬಂಧು ಬಸವಣ್ಣ ಸಾಕಷ್ಟು ಪ್ರದರ್ಶನಗಳನ್ನು ಕಂಡಿವೆ. ಇವಲ್ಲದೇ ವೀರಕೇಸರಿ, ದೈವಸಂಗಮ, ವಿದ್ಯಾವಂತ, ಶಿವನೊಲುಮೆ, ಸಮರ್ಪಣ,ಬಲಿ, ಇಂಗುತಿಂದ ಮಂಗ, ಕುಸುಮ, ಊರುಕೇರಿ, ಅರಣ್ಯರೋದನ, ರಾಜಾರಾಮ ವಿಜಯ ಮುಂತಾದ ನಾಟಕಗಳನ್ನೂ ಬರೆದು ಪ್ರಯೋಗಿಸಿದ್ದಾರೆ. ಹಲವಾರು ಬೀದಿ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಸಣ್ಣ ಕತೆಗಳನ್ನು, 600ಕ್ಕೂ ಹೆಚ್ಚು ರಂಗಗೀತೆಗಳನ್ನು ಬರೆದಿದ್ದಾರೆ.

Advertisement

ಮರಿಯಮ್ಮನಹಳ್ಳಿ ಅಷ್ಟೇ ಅಲ್ಲದೇ ಸುತ್ತಲಿನ ಜಿಲ್ಲೆಗಳಲ್ಲೂ ಸೋಮಣ್ಣನವರ ರಂಗಸೇವೆ ಪಸರಿಸಿದೆ. ಲಲಿತ ಕಲಾರಂಗದ ಶಿಸ್ತಿನ ಆಡಳಿತಗಾರರಾಗಿ ಬೆಳೆಸಿಕೊಂಡು ಬಂದವರಲ್ಲಿ ಸೋಮಣ್ಣ ಅವರು ಒಬ್ಬರು. ಇಂತಹ ಹಿರಿಯ ರಂಗ ಮುತ್ಸದ್ದಿಗೆ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ರಂಗಪ್ರಶಸ್ತಿ ಬಂದಿರುವುದು ಮರಿಯಮ್ಮನಹಳ್ಳಿ ರಂಗಪ್ರೇಮಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದೆ.

ಅಭಿನಯ ಚತುರ
ಮ.ಬ ಸೋಮಣ್ಣ ನಿರ್ದೇಶಿಸಿದ ನಾಟಕಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಅಭಿನಯ ಚತುರರು ಎಂದೆನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಹವ್ಯಾಸಿ ನಾಟಕಗಳಿಗೆ ಸಂಗೀತ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ತಬಲಾ ವಾದಕರಾಗಿಯೂ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇವರು ಬರಹಗಾರರಾಗಿಯೂ ಅನೇಕ ನಾಟಕಗಳನ್ನು ಬರೆದು ರಂಗಕ್ಕೆ ತಂದಿದ್ದಾರೆ. ಇಂತಹ ಹಿರಿಯ ರಂಗ ಮುತ್ಸದ್ದಿಗೆ ಈಗ ಪ್ರಶಸ್ತಿ ಬಂದಿರುವುದಕ್ಕೆ ರಂಗಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next