Advertisement

ಎಂ.ಎಸ್‌. ಕಾಯ್ದೆ ಜಾರಿಗೆ ಸೂಚನೆ

02:14 PM Apr 28, 2022 | Team Udayavani |

ಹಾವೇರಿ: ಕರ್ನಾಟಕ ರಾಜ್ಯ ಸೇರಿದಂತೆ ದೇಶದಲ್ಲಿ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅಧಿಕಾರಿಗಳು ಅನುಷ್ಠಾನಕ್ಕೆ ತರಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ(ಕೋಟೆ) ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಲಾದ ಎಂ.ಎಸ್‌. ಕಾಯ್ದೆ ಮತ್ತು ನಿಯಮಗಳು-2013ರ ಅಂಶಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಈ ಕಾಯ್ದೆ ಕುರಿತಂತೆ ಪ್ರತಿಯೊಬ್ಬ ಅಧಿಕಾರಿಗಳು ಸ್ಪಷ್ಟವಾಗಿ ತಿಳಿವಳಿಕೆ ಹೊಂದುವುದು ಅಗತ್ಯವಾಗಿದೆ. ಈ ಹಿನ್ನೆಲೆಯೆಲ್ಲಿ ಕಾಯ್ದೆಯನ್ನು ಮನದಟ್ಟು ಮಾಡಿಕೊಡಲು ಕಾರ್ಯಾಗಾರ ಆಯೋಜಿಸಲಾಗಿದೆ.

ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ ಪದ್ಧತಿ ನಡೆಯಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ ಹಾಗೂ ಸಮಾಜ ಸುಧಾರಣೆಗೆ ಆಯೋಗ ರಚನೆ ಮಾಡಲಾಗಿದೆ. ಪೌರಕಾರ್ಮಿಕರು ಮಾಡುವ ಕೆಲಸ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಅಂತಹ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಯೋಗ ಮಾಡುತ್ತಿದೆ. ಪ್ರಧಾನ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಪೌರಕಾರ್ಮಿಕರ ಬಗ್ಗೆ ಅಪಾರ ಕಾಳಜಿ ತೋರುತ್ತಾರೆ. ಅಧಿಕಾರಿಗಳು ಸಹ ನಿಯಮಾನುಸಾರ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಪ್ರೀತಿಯಿಂದ ಕಾಣಬೇಕು ಎಂದರು.

ಪ್ರಾತ್ಯಕ್ಷಿಕೆ ಮೂಲಕ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ರಘು ಅವರು ಮಾಹಿತಿ ನೀಡಿ, ಮಾನ್ಯುಯಲ್‌ ಸ್ಕ್ಯಾವೆಂಜರ್ ನಿಷೇಧ ಕಾಯ್ದೆಯನ್ನು (ಮಲಹೊರುವ ಪದ್ಧತಿ) 2013 ಸೆ. 18ರಿಂದ ಜಾರಿಗೆ ತರಲಾಗಿದೆ. ಅಧಿಕಾರಿಗಳು ಅನೈರ್ಮಲ್ಯ ಶೌಚಾಲಯಗಳನ್ನು ಗುರುತಿಸಬೇಕು ಹಾಗೂ ಉನ್ನತ ತಂತ್ರಜ್ಞಾನ ಅಳವಡಿಸಬೇಕು. ಅವೈಜ್ಞಾನಿಕ ಶೌಚಾಲಯಗಳಿದ್ದರೆ ಅವುಗಳನ್ನು ನೆಲಸಮ ಮಾಡಬೇಕು. ಮಲವನ್ನು ಚರಂಡಿಗೆ ಬಿಡುವುದು ಹಾಗೂ ಬಯಲು ಶೌಚಾಲಯ ಗುರುತಿಸಬೇಕು. ನೈರ್ಮಲ್ಯ ಶೌಚಾಲಯವಾಗಿ ಪರಿವರ್ತಿಸಬೇಕು. ಸೆಪ್ಟಿಕ್‌ ಟ್ಯಾಂಕ್‌ ಸ್ವತ್ಛತೆಗೆ ನಿಯೋಜಿತರು 10 ಲಕ್ಷ ವಿಮೆ ಹೊಂದಿರಬೇಕು ಹಾಗೂ 40 ಸುರಕ್ಷಾ ಪರಿಕರಗಳನ್ನು ಹೊಂದಿರಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಾನ್ಯುಯಲ್‌ ಸ್ಕ್ಯಾವೆಂಜರ್ ಪದ್ಧತಿಯಲ್ಲಿ ತೊಡಗಿದ್ದರೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆ ಎಂದರು.

Advertisement

ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ ಕಾರ್ಯಕ್ಕೆ ಖಾಸಗಿಯಾಗಿ ಕಾರ್ಮಿಕರ ನಿಯೋಜನೆ ಮಾಡಿದರೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಮಾನ್ಯುಯಲ್‌ ಸ್ಕ್ಯಾವೆಂಜರ್ ಕೆಲಸದಿಂದ ವಿಮುಕ್ತಗೊಳಿಸಬೇಕು ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಗುರುತಿನ ಚೀಟಿ(ಐಡಿ ಕಾರ್ಡ್‌) ನೀಡಬೇಕು, ವೃತ್ತಿಪರ ಕೌಶಲ ತರಬೇತಿ ನೀಡಬೇಕು. ಸಹಾಯಧನ ಸೌಲಭ್ಯ ಒದಗಿಸಬೇಕು. ಅವರ ಮಕ್ಕಳಿಗೆ ಸರ್ಕಾರ ಗುರುತಿಸಿದ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಬೇಕು. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಈವರೆಗೆ 93 ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ ಗಳು ಮರಣ ಹೊಂದಿದ್ದಾರೆ. ಹಾಗಾಗಿ ಯಂತ್ರಗಳ ಮೂಲಕವೇ ಶೌಚಾಲಯ ಗುಂಡಿಗಳನ್ನು ಸ್ವತ್ಛಗೊಳಿಸಬೇಕು. ಈ ಕುರಿತು ಅರಿವು ಮೂಡಿಸಬೇಕು. ಸರ್ಕಾರದ ಯೋಜನೆಗಳ ಕುರಿತು ತಿಳಿವಳಿಕೆ ನೀಡಬೇಕು. ಬದುಕು ಬವಣೆ ಎಂಬ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಸಾಕ್ಷ್ಯಚಿತ್ರ ತೋರಿಸಿ ಜಾಗೃತಿ ಮೂಡಿಸಬೇಕು. ಕಾಯ್ದೆ ಉಲ್ಲಂಘನೆಯಾಗದಂತೆ ಜಾಗೃತಿ ವಹಿಸಬೇಕು ಹಾಗೂ ಸಫಾಯಿ ಕರ್ಮಚಾರಿಗಳು ಮ್ಯಾನ್ಯುಯಲ್‌ ಸ್ಕ್ಯಾವೆಂಜರ್ ಗಳು ಅಲ್ಲ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ, ಅಪರ ಜಿಲ್ಲಾಧಿಕಾರಿ ಡಾ| ಎನ್‌. ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಉಪವಿಭಾಗಾಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನವರ, ಶಿವಾನಂದ ಉಳ್ಳಾಗಡ್ಡಿ, ಡಿವೈಎಸ್‌ಪಿ ಶಂಕರ ಮಾರಿಹಾಳ ಇದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಸ್ವಾಗತಿಸಿದರು.

ಸೆಪ್ಟಿಕ್‌ ಟ್ಯಾಂಕ್‌ಗಳ ಸ್ವತ್ಛತೆ ಸಂದರ್ಭದಲ್ಲಿ ಮರಣಗಳು ಸಂಭವಿಸುತ್ತಿದ್ದು, ಇಂತಹ ಘಟನೆಗಳು ನಡೆದರೆ ತಪ್ಪಿತಸ್ಥರ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮಕೈಗೊಳ್ಳಲು ಆಯೋಗಕ್ಕೆ ಅವಕಾಶವಿದೆ. ಕೆಲವು ಪ್ರಕರಣಗಳಲ್ಲಿ ಸಂಬಂಧಿಸಿದವರಿಗೆ ದಂಡ ವಿಧಿಸಲಾಗಿದೆ ಹಾಗೂ ಶಿಕ್ಷೆಗೆ ಗುರಿಪಡಿಸಲಾಗಿದೆ. ರಾಣೆಬೆನ್ನೂರ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗೆ ಎರಡು ಲಕ್ಷ ರೂ. ದಂಡ ವಿಧಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಸಹಿಸುವುದಿಲ್ಲ. -ಎಂ.ಶಿವಣ್ಣ(ಕೋಟೆ), ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next