Advertisement

ಮಂಥನ: ಬೆಳಕು-ನೆರಳು, ಉಲಿ-ಮೌನದ ಪರದೆಯಲ್ಲರಳಿದ ನಾಟ್ಯ ಚಿತ್ತಾರ

12:17 PM Sep 15, 2017 | |

ರಂಗಕರ್ಮಿ ಅವರು ಉಲ್ಲೇಖೀಸಿದ ಪ್ರಸಿದ್ಧ ಚಿಂತಕಿ ಸೂಸಾನ್‌ ಸೊಂಟಾಗ್‌ ಅವರ ಚಿಂತನೆಯನ್ನು ಇಲ್ಲಿ ಹಂಚಿಕೊಳ್ಳುತ್ತೇನೆ; ಯಾವುದೇ ಕಲಾಪ್ರಸ್ತುತಿಯನ್ನು ಎರಡು ಬಗೆಯಲ್ಲಿ ನೋಡಬಹುದೆಂಬುದು ಸೂಸಾನ್‌ ಅವರ ನಿಲುವು. ಒಂದನೆಯದು ಹರ್ಮನ್ಯೂಟಿಕ್ಸ್ ಅಂದರೆ, ವಿವಿಧ ರೀತಿಯ ವಿಮರ್ಶಾ ಹತ್ಯಾರಗಳಿಂದ ಸೋಸಿ ತೆಗೆಯುವುದು. ಇದನ್ನು ಅಕ್ಷರ ಅವರು ಅರ್ಥವಿಶ್ಲೇಷಣಾ ಕ್ರಮ ಎಂದು ಹೆಸರಿಸುತ್ತಾರೆ. ಇನ್ನೊಂದು ರೀತಿಯು ಇರೋಟಿಕ್ಸ್ ಅರ್ಥವಿಶ್ಲೇಷಣೆಗೆ ಕೈ ಹಾಕದೆ ಕಲಾಕೃತಿಯೊಂದರ ಅನುಭವದಲ್ಲಿ ರಮಿಸುವ ಕ್ರಮವನ್ನು ಅವರು “ಅನುಭೂತಿಯ ಕ್ರಮ’ ಎಂದು ಕರೆದಿದ್ದಾರೆ. ಕೆಳಗಿನ ಬರಹ ಎರಡನೆಯ ಕ್ರಮದ್ದು.

Advertisement

ಮಂಗಳೂರಿನ ನೃತ್ಯಾಂಗನ್‌ ಸಂಸ್ಥೆಯು ನಗರದ ಡಾನ್‌ಬಾಸ್ಕೊ ಹಾಲ್‌ನಲ್ಲಿ ನಾಟ್ಯ ಚಿತ್ತಾರ ಮಂಥನ-2017 ನೃತ್ಯ ಕಾರ್ಯಕ್ರಮ ಏರ್ಪಡಿಸಿತ್ತು. ಬೆಂಗಳೂರಿನ ಆದಿತ್ಯ ಪಿ. ವಿ. ಮತ್ತು ಹೆಸರಾಂತ ನೃತ್ಯಾಂಗನೆ ಮೀನಾಕ್ಷಿ ಶ್ರೀನಿವಾಸನ್‌ ಇವರಿಬ್ಬರ ಅವಳಿ ಪ್ರಸ್ತುತಿಗಳು ಅಂದು ಮೂಡಿಬಂದವು. ತೀರಾ ಸಾಮಾನ್ಯ ಪ್ರೇಕ್ಷಕನಾಗಿ ಈ ಕಾರ್ಯಕ್ರಮದಲ್ಲಿ ನನ್ನನ್ನು ಮೊದಲು ಕಟ್ಟಿಹಾಕಿದ್ದು, ಆಪ್ತತೆ ಮೂಡಿಸಿದ್ದು- ಗಾಯನ, ವಾದನಗಳ ಹಿಮ್ಮೇಳದ ಜತೆಗಿದ್ದ ಮೌನ (ಭಾವೋತ್ಕಟತೆಯ ನಡುನಡುವೆ ಅಗತ್ಯವಾಗಿ ಉಂಟಾಗಬೇಕಾದ ಮನೋವಿಶ್ರಾಂತಿ), ನೆರಳು- ಬೆಳಕಿನ ಅಮೂರ್ತ ಹಿಮ್ಮೇಳ ಹಾಗೂ ಚಲನೆ -ಬೆಳಕು- ಸ್ತಬ್ಧತೆಯೊಂದಿಗೆ ತುಡಿಯುತ್ತಿದ್ದ ಹಿಮ್ಮೇಳ.

ಮೌನ ಮತ್ತು ಬೆಳಕನ್ನು ಜತನದಿಂದ ಬಳಸಿದ ನೃತ್ಯ ಕಾರ್ಯಕ್ರಮವಿದು. ಧ್ವನಿಯು ಎಲ್ಲಿಯೂ ಕರ್ಕಶವಾಗದೆ ಹಿತವಾಗಿ ಕಿವಿಗಳಲ್ಲಿ ಉಲಿಯುತ್ತಿತ್ತು – ನೃತ್ಯವು ನಲಿಯುತ್ತಿತ್ತು.  ಕಲಾವಿದ ಆದಿತ್ಯ ಪಿ.ವಿ. ಇವರ ನಾಟ್ಯ, ಲಯಶುದ್ಧಿಯು ನೋಡುಗರ ಮನಸ್ಸಿನ ಮೇಲೆ ಪರಿಣಾಮವನ್ನು ಬೀರುವಂತಿತ್ತು. ಆಂಗಿಕ ಬಾಗು -ಬಳುಕಿನಲ್ಲಿ ಮೂರ್ತವಾಗಿದ್ದ ಲಾಸ್ಯ -ತಾಂಡವ ಗಳಿಂದಲೂ ಯಾವುದೇ ಅವಸರಗಳಿಲ್ಲದ ಪ್ರಸ್ತುತಿಯಿಂದಲೂ ಇವರೊಬ್ಬ ಉತ್ಕೃಷ್ಟ ನರ್ತಕ ಎಂಬುದು ತೋರುತ್ತಿತ್ತು.

ಅನಂತರದ ಪ್ರಸ್ತುತಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ, ದೇಶದ ಕಲಾವಿದರಲ್ಲಿ ಮುಂಚೂಣಿಯಲ್ಲಿರುವ ಶಾಸ್ತ್ರೀಯ ನರ್ತಕಿ ಮೀನಾಕ್ಷಿ ಶ್ರೀನಿವಾಸನ್‌ ಅವರದು. ಏನು ಹೇಳ್ಳೋಣ! ಕಣ್ಣು, ಕಣ್ಣಿನ ಹುಬ್ಬು, ಹುಬ್ಬಿನ ಬಾಗು, ಆ ಬಾಗಿನ ಚಲನೆ, ಅದರ ಚಲನೆಯಲ್ಲಿರುವ ಅಮೂರ್ತ ಭಾವಕ್ಕೆ ಹಿಮ್ಮೇಳವು ನೀಡುವ ಮೂರ್ತತೆಯ ಮಾತನ್ನು ರಸಿಕರಿಗೆ ಉಣಬಡಿಸುವ ಸೊಬಗು, ಅದರ ಪರಿಣಾಮದ ರಮಣೀಯತೆ ಮುಂತಾದವು ಅನನ್ಯ. ಈ ಕಲಾವಿದೆಗೆ ಇಡೀ ಕಾರ್ಯಕ್ರಮವನ್ನು ನೀಡಲು ಬರಿಯ ಕಣ್ಣುಗಳು, ಹುಬ್ಬಿನ ಚಲನೆಗಳು ಮತ್ತು ಅಕ್ಷಿಪಟಲಗಳು, ಅದರ ಕೆಳ -ಮೇಲ್ಭಾಗದ ಮುಖದ ಅಂಚುಗಳು -ಇಷ್ಟೇ ಸಾಕೇನೋ ಅನ್ನುವಷ್ಟರ ಮಟ್ಟಿನ ನೃತ್ಯದಲ್ಲಿ ದೇಹದ ತಾದಾತ್ಮ$Â ವ್ಯಕ್ತವಾಗುತ್ತದೆ ಎಂದೆನಿಸಿತು! ಅದನ್ನು ನೋಡಲು ನಮ್ಮ ಕಣ್ಣಿರಬೇಕು, ಕಾಣಲು ಹೃದಯವಿರಬೇಕು. ಆಕೆಯು ನರ್ತಿಸುವಾಗ ಇಡೀ ದೇಹವು ಗಾನದೊಂದಿಗೆ, ರಾಗದೊಂದಿಗೆ, ರಾಗದ ಭಾವಗಳೊಂದಿಗೆ ಬನಿಯಾಗಿ ಮಿಂದೇಳುತ್ತಿರುವಂತೆ ಭಾಸವಾಗುತ್ತಿತ್ತು. ವಾದನ ರಹಿತವಾಗಿ ಗಾನದ ರಾಗಾಲಾಪವಿದ್ದಾಗ ಮಾತ್ರವೂ ಈ ಕಲಾವಿದೆಯು ಪ್ರಸ್ತುತಪಡಿಸುವ ಲಾಸ್ಯ, ರಾಗ-ಭಾವಗಳ ಭಾವಾನುವಾದವು ಪ್ರಾಯಶಃ ನರ್ತಕನ/ಳ 

ಪ್ರಬುದ್ಧತೆಯ ಜತೆಗೆ ಆಹಾರ್ಯದ ಸರಳತೆಯೂ ನೃತ್ಯದ ಮೂಲಭಾವವನ್ನು ಕೊನೆಯ ಸ್ತರದ ಪ್ರೇಕ್ಷಕನಿಗೂ ತಲುಪಿಸಲು ಸಾಧ್ಯವೇನೋ ಎನ್ನಿಸಿತು. ದೇಹ ಶಿಲ್ಪ, ಆಂಗಿಕ, ಲಯಗಳನ್ನೆಲ್ಲ ಮೀರಿದ ಸಾತ್ವಿಕ ಪ್ರಸ್ತುತಿಯು ನೋಡುಗರ ಮನಸ್ಸನ್ನು ಅರಳಿಸುವಂತಹುದು, ಕಣ್ಣ ಬೆಳಕಿಗೆ ಬೆಳಕನ್ನಿತ್ತ ವಿದ್ಯುಲ್ಲತೆಯಂತಹುದು. 

Advertisement

ಕೆಲವು ಸಂದರ್ಭಗಳಲ್ಲಿ ಬರೇ ನಟುವಾಂಗದ ಗುಬ್ಬಿತಾಳದ ಹಿನ್ನೆಲೆಯ, ವಾದ್ಯಮಾತ್ರದ ನೃತ್ತದ ಹಸ್ತಾಭಿನಯವು ರೋಮಾಂಚಗೊಳಿಸುತ್ತಿತ್ತು. ಈ ಸಂದರ್ಭದಲ್ಲಿ ಗದ್ದಲದ ನಡುವೆ ನಾವೆಷ್ಟು ಕಳೆದುಹೋಗಿದ್ದೇವೆ ಎಂದು ಅನ್ನಿಸಿದ್ದು ಸುಳ್ಳಲ್ಲ. ಕೇವಲ ತಾಳದ ಕಣತ್ಕಾರದ ಹಿನ್ನೆಲೆಯ ನೃತ್ತವು ಹೊಸ ಸಾಧ್ಯತೆ ಅಲ್ಲದೆ ಮತ್ತೇನು? ಮೌನದ ಮನೋವಿಶ್ರಾಂತಿಯಲ್ಲಿ ಕಳೆದುಹೋಗುವುದರ ಸುಖವು ಸದ್ದಿಯೊಳಗೆ ಮೀಯುವುದರಲ್ಲಿ ಎಂದೂ ಇಲ್ಲ. ಈ ಕಾರ್ಯಕ್ರಮದಲ್ಲಿ ವಿದುಷಿ ಮೀನಾಕ್ಷಿ ಶ್ರೀನಿವಾಸನ್‌ ನನ್ನನ್ನು ವಿಶ್ರಾಂತ ಮೌನದಲ್ಲಿ ಕಳೆದುಹೋಗುವಂತೆ ಮಾಡಿದರು-ಸುಖವಾಗಿ ಹೋದೆ.

ವಿ| ವೇದಕೃಷ್ಣರಾಮ್‌ ಅವರ ಲಯಕಾರಿಯಾದ ನೃತ್ಯಧರ್ಮಿ ಮೃದಂಗವನ್ನು ಇಲ್ಲಿ ಉಲ್ಲೇಖೀಸಬೇಕಾದದ್ದು ಕೂಡ ಬಹಳ ಮುಖ್ಯ. ಈ ಲಯವಿದ್ವಾಂಸರು ಇಡೀ ನೃತ್ಯ ಕಛೇರಿಯಲ್ಲಿ ಆಗಾಗ ಉಪಯೋಗಿಸಿಕೊಳ್ಳುತ್ತಿದ್ದ ವಿಶ್ರಾಂತ ಮೌನತಂತ್ರದ ಶೈಲಿ. ಅಗತ್ಯ ವೆನಿಸುವಲ್ಲಿ ನುಡಿಸದೆಯೇ ಬರೇ ನರ್ತನದ ಹಸ್ತಾಭಿನಯ, ನೃತ್ತವಿಲ್ಲದ ಆಂಗಿಕಾಭಿನಯವನ್ನು ಗಾನದೊಂದಿಗೆ ಹಾಗೆಯೇ ಬಿಟ್ಟುಬಿಡುತ್ತಿದ್ದ ಅನನ್ಯತೆ. ಇದು ವಾದಕನ ಪದ್ಯ-ಭಾವ-ರಸದ ಅವಧಾರಣ ಸ್ಥಿತಿಯನ್ನು ಸೂಚಿಸುವುದು. ಎಲ್ಲೂ ಗಾನ ಮತ್ತು ನೃತ್ಯವನ್ನು ಅಧಿಗಮಿಸದ ಸಂಯಮದ ವಾದನ, ಹಸ್ತದ ಕಂಪಿತದಿಂದ ಕೂಡಿದ ಅಭಿನಯಗಳಿಗೆ ಅನುಸಾರವಾಗಿ ಸಂವಾದಿಯಾಗಿ ಬಂದ, ಮೃದಂಗದ ಕೆನ್ನೆಗೆ ಮೃದುವಾಗಿ ಬೆರಳುಗಳಿಂದ ಮುತ್ತಿಕ್ಕುತ್ತಾ ಹೊರಡಿಸಿದ ನಂನಂನಂ ಕಾರಗಳು ಕಂಪಿತ ಹಸ್ತಗಳ ಸುತ್ತಲೂ ಅಲಂಕಾರ ಸರಮಾಲೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಇಡೀ ಹಿಮ್ಮೇಳದ ದನಿಯಾಗಿ ನೃತ್ಯ, ನೃತ್ಯದ ಪ್ರಭಾವಲಯವಾಗಿ ಹಿಮ್ಮೇಳವಾಗಿ ಇದು ಸಂಭವಿಸಿತು, ಇದಕ್ಕೆ ನಾವೆಲ್ಲ ಸಾಕ್ಷಿಗಳಾದೆವು.

ಆಯೋಜಕರಾದ ನೃತ್ಯಾಂಗನ್‌ ಸಂಸ್ಥೆಯ ರಾಧಿಕಾ ಶೆಟ್ಟಿಯವರಿಗೂ ಪೂರಕ ಹಿಮ್ಮೇಳಕ್ಕೂ ಹಿತ-ಮಿತವಾದ ನಿರೂಪಣೆಯ ಮಂಜುಳಾ ಸುಬ್ರಹ್ಮಣ್ಯ ಅವರಿಗೂ ಧನ್ಯವಾದಗಳು. ಒಟ್ಟಿನಲ್ಲಿ ಧನ್ಯತೆಯ ವಾರಾಂತ್ಯವನ್ನು ಈ ನೃತ್ಯ ಪ್ರದರ್ಶನ ಒದಗಿಸಿಕೊಟ್ಟಿತು.

ಕೃಷ್ಣಪ್ರಕಾಶ ಉಳಿತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next