Advertisement

ಮನ್ಸೂರ್‌ ಖಾನ್‌ ಪತ್ನಿಯರ ಮನೆಗಳ ಮೇಲೆ ದಾಳಿ

01:31 AM Jun 18, 2019 | Lakshmi GovindaRaj |

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ತಲೆಮರೆಸಿಕೊಂಡಿರುವ ಆರೋಪಿ ಮನ್ಸೂರ್‌ ಖಾನ್‌ನ ಇಬ್ಬರು ಪತ್ನಿಯರು ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ಸೋಮವಾರ ದಾಳಿ ನಡೆಸಿ, ಕೆಜಿಗಟ್ಟಲೇ ಚಿನ್ನಾಭರಣ ಹಾಗೂ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದೆ.

Advertisement

ಶಿವಾಜಿನಗರ, ಜಯನಗರ ಮತ್ತು ತಿಲಕನಗರದಲ್ಲಿರುವ ಮನ್ಸೂರ್‌ ಖಾನ್‌ ಮೊದಲ ಮತ್ತು ಮೂರನೇ ಪತ್ನಿಯರ ಮನೆಗಳು ಹಾಗೂ ಅವರ ಸಂಬಂಧಿಕರ ಮನೆಗಳು ಸೇರಿ 7ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಎರಡು ಕೆ.ಜಿ. ಚಿನ್ನಾಭರಣ, 2.7 ಲಕ್ಷ ರೂ. ನಗದು, ಲ್ಯಾಪ್‌ಟಾಪ್‌ ಮತ್ತು ಕೆಲ ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಎಸ್‌ಐಟಿಯ ಮೂಲಗಳು ತಿಳಿಸಿವೆ.

ದುಬೈನಲ್ಲೂ ದೂರುಗಳು: ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮನ್ಸೂರ್‌ ಖಾನ್‌ ವಿರುದ್ಧ ರಾಜ್ಯದಲ್ಲಿ ಮಾತ್ರವಲ್ಲದೆ, ದುಬೈನ ಹೂಡಿಕೆದಾರರು ದೂರು ನೀಡಲು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ದುಬೈನಿಂದಲೇ ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿರುವ 500ಕ್ಕೂ ಹೆಚ್ಚು ಮಂದಿ ಹೂಡಿಕೆದಾರರು ಭಾರತ ಹೈ ಕಮಿಷನ್‌ಗೆ ದೂರು ನೀಡಲು ಸಿದ್ದತೆ ನಡೆಸಿದ್ದಾರೆ.

ಮತ್ತೂಂದೆಡೆ ವಂಚನೆಗೊಳಗಾದವರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, 40 ಸಾವಿರ ಗಡಿ ದಾಟಿದೆ. ಸೋಮವಾರವೂ ಸಾವಿರಾರು ಮುಂದಿ ಶಿವಾಜಿನಗರದ ಗಣೇಶ್‌ ಭಾಗ್‌ ಕನ್ವೆಷನ್‌ ಹಾಲ್‌ನಲ್ಲಿ ದೂರು ನೀಡಿದ್ದು, ರಾತ್ರಿ ವೇಳೆಗೆ 40, 600 ದೂರುಗಳು ದಾಖಲಾಗಿವೆ ಎಂದು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next