Advertisement

ಕ್ಯಾನ್ಸರ್‌ನಿಂದ ಗೆದ್ದು ಬಂದ ಸ್ಫೂರ್ತಿಯ ಕಥೆ ತೆರೆದಿಟ್ಟ ಮನೀಶಾ

10:28 AM Sep 16, 2019 | mahesh |

ಕೆಲ ವರ್ಷಗಳ ಹಿಂದೆ ಬಾಲಿವುಡ್‌ನ‌ ಖ್ಯಾತ ನಟಿ ಮನೀಶಾ ಕೊಯಿರಾಲಾ ಮಹಾಮಾರಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿದ್ದು, ಬಳಿಕ ಅದರ ವಿರುದ್ಧ ಹೋರಾಡಿ ಗೆದ್ದು ಬಂದಿದ್ದು ನಿಮಗೆ ನೆನಪಿರಬಹುದು. ಅದಾದ ನಂತರ ಮತ್ತೆ ಸಿನಿ ಬದುಕಿಗೆ ರೀ ಎಂಟ್ರಿಯಾಗಿರುವ ಮನೀಶಾ ಬಿಡುವಿನ ವೇಳೆಯಲ್ಲಿ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

Advertisement

ಇತ್ತೀಚೆಗೆ ನಡೆದ ಅಂಥದ್ದೇ ಕಾರ್ಯಕ್ರಮವೊಂದರಲ್ಲಿ ಮನೀಶಾ ತಮ್ಮ ಕ್ಯಾನ್ಸರ್‌ ವಿರುದ್ಧ ಹೋರಾಟದ ಸಂದರ್ಭವನ್ನು ವಿವರಿಸಿದ್ದಾರೆ. “ಸ್ವರ್ಗ ಇದ್ದರೆ ಇಲ್ಲೇ ಇದೆ. ನರಕ ಇದ್ದರೂ ಇಲ್ಲಿಯೇ ಇದೆ. ನಾನು ಸಾವಿನ ಅಂಚಿನಲ್ಲಿ ಇದ್ದಾಗ ನನಗೆ ಬದುಕಿನ ಮಹತ್ವ ಹೆಚ್ಚು ತಿಳಿಯಿತು. ಕ್ಯಾನ್ಸರ್‌ ನಮ್ಮನ್ನು ಅಲುಗಾಡಿಸಬಹುದು. ಆದರೆ, ಅದರಿಂದ ನಾವು ಗೆಲ್ಲಬಹುದು. ಅದಕ್ಕೆ ಆತ್ಮವಿಶ್ವಾಸ ಮುಖ್ಯ’ ಎಂದು ಹೇಳಿದ್ದಾರೆ.

ಇನ್ನು ಮನೀಶಾ ಕೊಯಿರಾಲಾ ಅವರಿಗೆ ಕ್ಯಾನ್ಸರ್‌ ವಿರುದ್ದ ಹೋರಾಡಲು ಸ್ಫೂರ್ತಿಯಾಗಿದ್ದು, ಕ್ರಿಕೆಟ್‌ ಆಟಗಾರ ಯುವರಾಜ್‌ ಸಿಂಗ್‌ ಅವರಂತೆ. ಈ ಬಗ್ಗೆ ಮಾತನಾಡಿರುವ ಮನೀಶಾ, “ಕ್ಯಾನ್ಸರ್‌ ವಿರುದ್ಧ ಹೋರಾಡಿದ ಯುವರಾಜ್‌ ಸಿಂಗ್‌ ನನಗೆ ಸ್ಫೂರ್ತಿಯಾದರು. ಅವರಿಂದ ಜೀವನದ ಅತಿ ಸಂಕಷ್ಟದ ಹಂತವನ್ನು ಹೇಗೆ ಎದುರಿಸುವುದು ಎಂದು ತಿಳಿದುಕೊಂಡೆ’ ಎಂದಿದ್ದಾರೆ. ಅಲ್ಲದೆ ಕಳೆದ ವರ್ಷ ಕ್ಯಾನ್ಸರ್‌ ಎದುರಿಸಿದ್ದ ನಟಿ ಸೋನಾಲಿ ಬೇಂದ್ರೆ ಬಗ್ಗೆಯೂ ಮನೀಶಾ ಕೊಯಿರಾಲಾ ಮೆಚ್ಚುಗೆ ಮಾತನ್ನು ಆಡಿದ್ದಾರೆ.

ಸದ್ಯ ಮನೀಶಾ ಆಡಿರುವ ಮುಕ್ತ ಮಾತುಗಳು ಅನೇಕರಿಗೆ ಪ್ರೇರಣೆಯಾಗಿವೆ ಎಂಬ ಮಾತುಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಕೇಳಿ ಬರುತ್ತಿದೆ. ಕ್ಯಾನ್ಸರ್‌ನಿಂದ ಹೊರ ಬಂದ ಮೇಲೆ ಮನೀಶಾ ಕೊಯಿರಾಲಾ ಡಿಯಲ್‌ ಮಾಯಾ, ಸಂಜು ಚಿತ್ರದಲ್ಲಿ ನಟಿಸಿದ್ದರು. ಸದ್ಯ, ಪ್ರಸ್ತಾನಮ… ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೆಟ್‌ ಫ್ಲಿಕ್ಸ್‌ ನ ಲಸ್ಟ್‌ ಸ್ಟೋರೀಸ್‌ಯಲ್ಲಿಯೂ ಅಭಿನಯಿಸಿದ್ದರು. ಇನ್ನು ನಟಿ ಮನೀಶಾ ಕೊಯಿರಾಲಾ ನಡೆಸಿಕೊಂಡು ಬರುತ್ತಿರುವ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಕೂಡ ಕೈ ಜೋಡಿಸಿದ್ದು, ಇಬ್ಬರೂ ಜಂಟಿಯಾಗಿ ಹಲವು ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮ ಗಳನ್ನು ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next