Advertisement

ನಮ್ಮೆಲ್ಲರ ಕಥೆಯಾಗುವ ಮಾನಿಷಾದ

07:40 PM Apr 04, 2019 | mahesh |

ವಾಲ್ಮೀಕಿಯ ಸಂಕಟದ ಕಥೆಯೇ ಮಾನಿಷಾದ ನಾಟಕ. ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ ಬೇಡನೊಬ್ಬ ಬಾಣ ಹೂಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುವ ಹೃದಯ ವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಕೆಳಕಂಡ ಶ್ಲೋಕವನ್ನು ಉದ್ಗರಿಸುತ್ತಾರೆ.

Advertisement

ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |
ಯತೌಚಮಿಥುನಾದೇಕಮವಧೀಃ ಕಾಮಮೋಹಿತಮ್‌ ||
ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಬಾಯಿಂದ ಹೊರಹೊಮ್ಮಿದ ಮಾತುಗಳು.

ಇದರ ಸುತ್ತ ಇರುವುದೇ ಗಿರೀಶ್‌ ಕಾರ್ನಾಡ್‌ ರಚಿಸಿದ ಮಾನಿಷಾದ ನಾಟಕ. ರಾಮಾಯಣದ ಪ್ರಾರಂಭ ವೇದನೆ ಹಾಗೂ ವಿಯೋಗದಿಂದ ಎಂಬಲ್ಲಿ ಮಾನಿಷಾದ ವಾಲ್ಮೀಕಿಯ ಹತಾಶೆಯ ಬಗ್ಗೆ ಮಾತನಾಡುತ್ತದೆ. ಶಾಪದ ಮೂಲವಾಗಿರುವ ರಾಮಾಯಾಣ ವಾಲ್ಮೀಕಿಯ ಭಾರ ಹೃದಯದ ಮಾತಾಗಿ ಸದಾ ದುಃಖವೇ ವೈಭವೀಕರಣವಾಗುತ್ತದೆ ಅನ್ನುತ್ತದೆ ಈ ನಾಟಕ.

ನಾಟಕದ ಪ್ರಾರಂಭ -ಸೀತೆ ಭೂಮಿಗೆ ಸೇರಿದ ನಂತರ ಆಕೆಯನ್ನ ಹುಡುಕಿಕೊಂಡು ಬರುತ್ತಾನೆ ಅಗಸ. ಬದುಕು ಮುಗಿದ ಮೇಲೆ ಎಲ್ಲಾ ಸರಿ ಮಾಡಲು ಬರುವ ವೇದನೆಯ ಪರಕಾಷ್ಠೆ ಇಲ್ಲಿ ಕಾಣುತ್ತದೆ. ಇದು ವಾಲ್ಮೀಕಿಯ ಹತಾಶೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಆಡಿದ ಮಾತಿನಿಂದ ಉಂಟಾದ ಎಲ್ಲಾ ಸಂದರ್ಭಗಳ ಬಗ್ಗೆ ತನ್ನದೇ ರೀತಿಯಲ್ಲಿ ಅರ್ಥ ಕೊಡುತ್ತಾ, ತನ್ನ ರೀತಿಯಲ್ಲೇ ರಾಮಾಯಾಣದ ಮುಖ್ಯ ಅಂಶವನ್ನ ಬಿಚ್ಚಿಡುತ್ತಾ ಸಾಗುತ್ತಾನೆ ಅಗಸ. ಅಗಸನ ಕಥೆ ರಾಜನ ಕಥೆಗೆ ಮೂಲವಾಗುವುದು ವಿಶೇಷತೆ. ಸಾಮಾನ್ಯನೊಬ್ಬ ದೇಶದ ಆಗುಹೋಗುಗಳಿಗೆ ಕಾರಣವೂ ಆಗುತ್ತಾನೆ ಎಂಬ ಆಶಯ ಎದ್ದು ಕಾಣುತ್ತದೆ. ರಾಮ ಹೇಗೆ ತನ್ನ ಮಾತನ್ನ ತನಗೆ ಬೇಕಾದ ರೀತಿಯಲ್ಲಿ ತನಗೆ ಬೇಕಾದಂತೆ ಉಪಯೋಗಿಸುತ್ತಾನೆ ಎಂದು ಹೇಳುವ ಅಗಸ ತನ್ನೆಲ್ಲ ಕೃತ್ಯಕ್ಕೆ ಸಮರ್ಥನೆ ಕೊಡುತ್ತಾ ಸಾಗುತ್ತಾನೆ ಇಡೀ ನಾಟಕದಲ್ಲಿ. ತಾವು ಮಾಡುವ ಕಾರ್ಯಗಳಿಗೆ ಇತರರನ್ನ ಹೊಣೆಯಾಗಿಸುವ ಪ್ರಕೃತಿ ಎದ್ದು ಕಾಣುತ್ತದೆ. ತಮ್ಮಲ್ಲಿನ ಒಳಿತು ಕೆಡಕುಗಳಿಗೆ, ಯೋಗಗಳಿಗೆ ದೇವರನ್ನಲ್ಲದೆ ಬೇರೆ ಯಾರನ್ನ ಹೊಣೆ ಮಾಡಲಾದೀತು ಎಂಬ ನಾಟಕದ ವಾಲ್ಮೀಕಿಯ ಮಾತು ಪ್ರತಿಯೊಬ್ಬರ ಅಂತಃಜೀವನದ ದರ್ಶನ ಮಾಡಿಸುತ್ತದೆ. ಕಥೆ ಅಗಸನದ್ದಾದರೂ ಕಥೆಗಾರ ವಾಲ್ಮೀಕಿಯ ಹತಾಶೆ, ವೇದನೆಗಳ ಪರಿಚಯ ಮಾಡಿಕೊಡುವ ನಾಟಕ.

ಈ ನಾಟಕವನ್ನು ಭೂಮಿಕಾ ಹಾರಾಡಿ ತಂಡ ಇತ್ತೀಚೆಗೆ ತೆಕ್ಕಟ್ಟೆಯಲ್ಲಿ ಪ್ರದರ್ಶಿಸಿತು. ರಂಗದ ಬೆಳಕುಗಳೂ, ಪರಿಕರಗಳೂ ನಾಟಕಕ್ಕೆ ಒಂದು ಶೋಭೆಯಾಗಿ ನಿಲ್ಲುತ್ತವೆ. ಕ್ರೌಂಚ ಪಕ್ಷಿಯನ್ನ ನಾಟಕಾದ್ಯಂತ ತರುವ ಪ್ರಯತ್ನ ಮನೋಹರವಾಗಿತ್ತು. ಪ್ರಾರಂಭದಲ್ಲಿ ಪೂರ್ಣ ಕೂತೂಹಲ ಹಾಗೂ ವಾಲ್ಮೀಕಿಯ ಭಾವನೆಗಳನ್ನ ತೋರಿಸುತ್ತಾ ಕೊನೆಯಲ್ಲಿ ಜೀವನದ ತತ್ವಗಳನ್ನು ಯಶಸ್ವಿಯಾಗಿ ತೋರಿಸಲು ನಿರ್ದೇಶಕ ವಿಘ್ನೇಶ ಹೊಳ್ಳ ಮಾಡಿದ ಪ್ರಯತ್ನ ಶ್ಲಾಘನೀಯ. ಗಿರೀಶ ಕಾರ್ನಾಡರ ಒಳನೋಟ, ಬೇರೆಯೇ ತರಹದ ಯೋಚನೆಗಳಿಗೆ ಈ ಪ್ರದರ್ಶನ ನ್ಯಾಯ ಒದಗಿಸಿತ್ತಾದರೂ ನಾಟಕದ ಮಧ್ಯೆಯಲ್ಲಿ ಹಿಡಿತ ಕಡಿಮೆಯಾಯಿತು ಅನ್ನಿಸುತ್ತದೆ. ಮಧ್ಯಭಾಗದಲ್ಲಿ ನಾಟಕ ಸ್ವಲ್ಪ ಸಾಮಾಜಿಕ ವಿಷಯಗಳಿಗೆ ತೆರೆೆದುಕೊಳ್ಳುವುದು, ವಾಲ್ಮೀಕಿಯ ಅಂತಃಕರಣ ಕಾಣಿಸಿಕೊಳ್ಳದೇ ಇರುವುದು ತುಸು ಆತಂಕಕ್ಕೆ ಕಾರಣವಾಗುತ್ತದೆ. ಯುವಕರಿಂದಲೇ ಮೂಡಿಬಂದ ನಾಟಕ ಹೊಸ ಲೋಕಕ್ಕೆ ಕರೆದೊಯ್ಯುತ್ತದೆ.

Advertisement

ಡಾ| ರಶ್ಮಿ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next