Advertisement

ಮೋದಿ ಖಾತೆಯಲ್ಲಿ ಸಾಧಕಿಯರ ಮನ್‌ ಕಿ ಬಾತ್‌

09:55 AM Mar 10, 2020 | sudhir |

ಮಹಿಳಾ ದಿನವನ್ನು ಮೋದಿ ಸರ್ಕಾರ ಭಿನ್ನವಾಗಿ ಆಚರಿಸಿದೆ.
ಗಮನಾರ್ಹ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ, ಮಹಿಳಾ ದಿನದಂದು ಅವರಿಂದಲೇ ಪ್ರಧಾನಿಯವರ ಟ್ವಿಟರ್‌ ಖಾತೆ ನಿರ್ವಹಣೆ ಮಾಡಿಸಲಾಗಿದೆ. ಈ ಮಹಿಳೆಯರ ಸಾಧನೆಯೇನು, ಅವರು ಮೋದಿಯವರ ಖಾತೆಯ ಮೂಲಕ ನೀಡಿದ ಸಂದೇಶವೇನು? ಇಲ್ಲಿದೆ ಮಾಹಿತಿ

Advertisement

ಬಡವರ ಹಸಿವು ನೀಗಿಸುವ ಸ್ನೇಹಾ
ಚೆನ್ನೈ ಮೂಲದ ಸ್ನೇಹಾ ಮೋಹನ್‌ದಾಸ್‌ 2015ರಿಂದ “ಫ‌ುಡ್‌ ಬ್ಯಾಂಕ್‌ ಇಂಡಿಯಾ’ ನಡೆಸುತ್ತಿದ್ದಾರೆ. ಜನರಿಂದ ಸಂಗ್ರಹಿಸಿದ ತರಕಾರಿಗಳು, ಧಾನ್ಯಗಳಿಂದ ಆಹಾರ ತಯ್ನಾರಿಸಿ ಬಡ ಬಗ್ಗರಿಗೆ ಸ್ನೇಹಾ ಅವರ ತಂಡ ಪ್ರತಿ ದಿನವೂ ಹಂಚುತ್ತದೆ. ಸ್ನೇಹಾ ಅವರಿಂದ ಪ್ರೇರಣೆ ಪಡೆದು, ಹಾಗೂ ಅವರ ಮಾರ್ಗದರ್ಶನದಲ್ಲಿ ಭಾರತದಾದ್ಯಂತ 20 ಕಡೆಗಳಲ್ಲಿ ಯುವಕರು ಫ‌ುಡ್‌ ಬ್ಯಾಂಕ್‌ ಸ್ಥಾಪಿಸಿ, ಪ್ರತಿದಿನ ಬಡವರಿಗೆ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ.

ಮಹಿಳೆಯರು ಮುಂದೆ ಬಂದು ನನ್ನೊಂದಿಗೆ ಕೈ ಜೋಡಿಸಬೇಕೆಂದು ಕೇಳಿಕೊಳ್ಳುತ್ತೇನೆ. ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ಒಬ್ಬ ಹೆಚ್ಚುವರಿ ವ್ಯಕ್ತಿಗಾದರೂ ಆಹಾರ ನೀಡುವಂತಾಗಬೇಕು, ತನ್ಮೂಲಕ ಹಸಿವು ಮುಕ್ತ ಪ್ರಪಂಚಕ್ಕೆ ಕೊಡುಗೆ ಕೊಡಬೇಕು ಎಂದು ವಿನಂತಿಸುತ್ತೇನೆ.

ಕೈ ತುಂಡಾಯಿತು, ಆತ್ಮವಿಶ್ವಾಸವಲ್ಲ!
ಮಾಳವಿಕಾ ಅಯ್ಯರ್‌, 13 ವರ್ಷದ ಬಾಲಕಿಯಾಗಿದ್ದಾಗ ರಾಜಸ್ಥಾನದ ಬಿಕನೇರ್‌ನಲ್ಲಿ ನಡೆದ ಭೀಕರ ಬಾಂಬ್‌ ದಾಳಿಯಲ್ಲಿ ತಮ್ಮ ಎರಡೂ ಕೈಗಳನ್ನೂ ಕಳೆದುಕೊಂಡರು. ಆದರೆ ಧೃತಿಗೆಡಲಿಲ್ಲ. ಬೆಳೆದು ತೋರಿಸಬೇಕು ಎಂದು ಛಲ ತಾಳಿ, ಶಿಕ್ಷಣದತ್ತ ಹೆಚ್ಚು ಒಲವು ಬೆಳೆಸಿಕೊಂಡರು. ಬರವ‌ಣಿಗೆ ಸಹಾಯಕರ ನೆರವಿನೊಂದಿಗೆ 10ನೇ ತರಗತಿ ಪರೀಕ್ಷೆಯಲ್ಲಿ 97 ಪ್ರತಿಶತ ಅಂಕ  ಪಡೆದರು! ಮಾಳವಿಕಾ ಈಗ ಪಿಎಚ್‌ಡಿ ಪದವೀಧರರೂ ಆಗಿದ್ದು, ರಾಷ್ಟ್ರೀಯ-ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದಿವ್ಯಾಂಗರ ಹಕ್ಕುಗಳ, ಸಮಸ್ಯೆಗಳ‌ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ನಾವು ಬದುಕನ್ನು ನಿಯಂತ್ರಿಸಲಾರೆವು, ಆದರೆ ಬದುಕಿನೆಡೆಗಿನ ನಮ್ಮ ಧೋರಣೆಯನ್ನು ನಿಯಂತ್ರಿಸಬಲ್ಲೆವು. ಸವಾಲುಗಳನ್ನು ನಾವು ಹೇಗೆ ಎದುರಿಸುತ್ತೇವೆ ಎನ್ನುವುದೇ ಕೊನೆಗೆ ಮುಖ್ಯವಾಗುತ್ತದೆ. ನಿಮ್ಮ ಮಿತಿಗಳನ್ನು ಮರೆತುಬಿಡಿ, ಕಾನ್ಫಿಡೆನ್ಸ್‌ ಮತ್ತು ಭರವಸೆಯೊಂದಿಗೆ ಜಗತ್ತನ್ನು ಎದುರಿಸಿ!

Advertisement

ಕಾಶ್ಮೀರದ ಕುವರಿ ಆರಿಫಾ ಕೊಡುಗೆ
ಕಾಶ್ಮೀರದ ಶ್ರೀನಗರದ ಆರಿಫಾ ಜಾನ್‌ ಅವರು ಕ್ರಾಫ್ಟ್ ಮ್ಯಾನೇಜ್‌ಮೆಂಟ್‌ ವಿದ್ಯಾಭ್ಯಾಸ ಮಾಡಿದ್ದಾರೆ. ವಿದ್ಯಾಭ್ಯಾಸದ ವೇಳೆ ಸಾಂಪ್ರದಾಯಿಕ ಕುಶಲಕಲೆಗಳ, ಅದರಲ್ಲೂ “ನಮಾª’ ಎನ್ನುವ ಕುಶಲಕಲೆ ನಶಿಸಿಹೋಗುತ್ತಿರುವುದನ್ನು ಕಂಡ ಆರಿಫಾ, ಅದರ ಉಳಿವಿಗಾಗಿ ಪಣತೊಟ್ಟರು. ಅಳಿವಂಚಲ್ಲಿದ್ದ “ನಮಾª’ ಆರಿಫಾರ ಛಲ ಬಿಡದ ಪ್ರಯತ್ನದಿಂದ ಮತ್ತೆ ಬೆಳೆದು, ಬಲಿಷ್ಠವಾಗಿದೆ. ಕಾಶ್ಮೀರದ ನೂರಾರು ಮಹಿಳೆಯರಿಗೆ ಆರಿಫಾ ಜಾನ್‌ ಬದುಕುವ ದಾರಿ ತೋರಿಸಿಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಅವರ ಈ ನಡೆಯು ನನ್ನ ಸ್ಥೈರ್ಯವನ್ನು ಹೆಚ್ಚಿಸಿದೆ. ಕಾಶ್ಮೀರದಾದ್ಯಂತ ಕುಶಲಕರ್ಮಿಗಳ ಹಾಗೂ ವೃತ್ತಿ ಕಲೆಯ ಸುಧಾರಣೆಗಾಗಿ ಮತ್ತಷ್ಟು ಕಠಿಣ ಪರಿಶ್ರಮ ಪಡಲು ಪ್ರೇರೇಪಿಸಿದೆೆ. ಮಹಿಳೆಯರು ಸ್ವಾವಲಂಬಿಗಳಾಗುವತ್ತ ಗಮನಹರಿಸಬೇಕು.

ಕಲ್ಪನಾ ಎಂಬ ಜಲಯೋಧೆ
ವೃತ್ತಿಯಿಂದ ಆರ್ಕಿಟೆಕ್ಟ್ ಆಗಿರುವ ಹೈದ್ರಾಬಾದ್‌ನ ಕಲ್ಪನಾ ರಮೇಶ್‌, ಜಲಸಂರಕ್ಷಣೆಯ ಹಾದಿಯಲ್ಲಿ ಗಮನಾರ್ಹ ಹೆಜ್ಜೆ ಇಡುತ್ತಿದ್ದಾರೆ. ಮಳೆ ನೀರು ಸಂರಕ್ಷಣೆಯ ಅವರ ಡಿಸೈನ್‌ಗಳು ಅನೇಕ ಮನೆಗಳಲ್ಲಿ ಅಳವಡಿಕೆಯಾಗಿದ್ದು, ಅಗಾಧ ಪ್ರಮಾಣದಲ್ಲಿ ಜಲಸಂರಕ್ಷಣೆಯಾಗುತ್ತಿದೆ. ಅವರ ಮನೆಯಲ್ಲಿ ಮಳೆನೀರು ಸಂಗ್ರಹಕ್ಕಾಗಿ, 300000ಸಿಸಿ ಸಾಮರ್ಥ್ಯದ ಟ್ಯಾಂಕನ್ನು ನಿರ್ಮಿಸಿದ್ದಾರೆ. ಹೈದ್ರಾಬಾದ್‌ನ ಅನೇಕ ಅಪಾರ್ಟ್‌ಮೆಂಟ್‌ಗಳು, ಆಫೀಸುಗಳು ಕಲ್ಪನಾರ ಮಾರ್ಗದರ್ಶನದಲ್ಲಿ ಮಳೆನೀರು ಸಂಗ್ರಹಣೆಯ ಡಿಸೈನ್‌ ಅಳವಡಿಸಿಕೊಂಡಿವೆ. ಸಾಹೇ ಎನ್ನುವ ಎನ್‌ಜಿಓ ಜತೆಗೆ ಕೈಜೋಡಿಸಿ, ಒಣಗಿದ ಬೋರ್‌ವೆಲ್‌ಗಳ ಪುನರ್ಜೀವನಕ್ಕೂ ಕಲ್ಪನಾ ಶ್ರಮಿಸುತ್ತಿದ್ದು, ಹೈದ್ರಾಬಾದ್‌ನಲ್ಲಿನ 10 ಸಾವಿರ ನಿರುಪಯುಕ್ತ ಬೋರ್‌ಗಳಿಗೆ ಮತ್ತೆ ಜೀವತುಂಬುವ ಪಣತೊಟ್ಟು, ಆ ನಿಟ್ಟಿನಲ್ಲಿ ಸಾಕಷ್ಟು ಯಶಸ್ಸು ಪಡೆಯುತ್ತಾ ಸಾಗುತ್ತಿದ್ದಾರೆ.

ನಾವು ಜಲಯೋಧರಾಗಬೇಕು ಎಂದರೆ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಳೆ ನೀರನ್ನು ರಕ್ಷಿಸೋಣ, ನೀರಿನ ಬಳಕೆಯನ್ನು ತಗ್ಗಿಸೋಣ.

ಅಣಬೆಯೇ ಬದುಕಿಗಾಸರೆ
ಬಿಹಾರದ ವೀಣಾದೇವಿಯವರು ಮನೆಯಲ್ಲೇ ಅಣಬೆಗಳನ್ನು ಬೆಳೆಸಿ ಮಾರಾಟ ಮಾಡುವುದು ಹೇಗೆ ಎನ್ನುವುದನ್ನು ಸುತ್ತಮುತ್ತಲ ಗ್ರಾಮೀಣರಿಗೆ ಕಲಿಸಿ, ಸ್ವಾವಲಂಬನೆಯ ಮಾರ್ಗ ತೋರಿಸುತ್ತಿದ್ದಾರೆ. ಸುತ್ತಲಿನ 105 ಹಳ್ಳಿಯಲ್ಲಿ ಅಣಬೆ ಉತ್ಪಾದನೆಯನ್ನು ಪ್ರಖ್ಯಾತಗೊಳಿಸಿರುವ ವೀಣಾ ದೇವಿಯವರಿಂದಾಗಿ, ಸುಮಾರು 1500 ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. 2500ಕ್ಕೂ ಅಧಿಕ ರೈತರಿಗೆ ಕೃಷಿ ತರ ಬೇತಿಯನ್ನೂ ನೀಡಿದ್ದಾರೆ ವೀಣಾ ದೇವಿ.

ಮನಸ್ಸಿದ್ದಲ್ಲಿ ಮಾರ್ಗವಿದೆ. ಹೆಣ್ಣುಮಗಳು ನಿರ್ಧರಿಸಿದಳೆಂದರೆ, ವಿಜಯ ಯಾತ್ರೆ ಆಕೆಯ ಮನೆಯಿಂದಲೇ ಆರಂಭವಾಗಬಲ್ಲದು. ಕೃಷಿಯಿಂದಾಗಿ ಇಂದು ನನಗೆ ಈ ಸಮ್ಮಾನ ಸಿಕ್ಕಿದೆ. ನಾನು ಗ್ರಾ.ಪಂ. ಅಧ್ಯಕ್ಷಳಾಗಿದ್ದೇನೆ.

4000 ಶೌಚಾಲಯ ನಿರ್ಮಾಣ
ಕಾನ್ಪುರದ ಕಲಾವತಿ ದೇವಿಯವರ ಜೀವನ ಪ್ರೇರಣಾದಾಯಕ. ಕಲಾವತಿ ವಾಸಿಸುತ್ತಿದ್ದ ಪ್ರದೇಶವು ಅವ್ಯವಸ್ಥೆಯ ತಾಣವಾಗಿತ್ತು. 700 ಜನರಿದ್ದ ಈ ಜಾಗದಲ್ಲಿ ಒಂದು ಶೌಚಾಲಯವೂ ಇರಲಿಲ್ಲ. 2 ದಶಕಗಳ ಹಿಂದೆ ಸ್ಥಳೀಯ ಎನ್‌ಜಿಒ ಕಲಾವತಿ ವಾಸಿಸುತ್ತಿದ್ದ ಪ್ರದೇಶದಲ್ಲಿ ಒಂದು ಶೌಚಾಲಯ ನಿರ್ಮಿಸಲು ಮುಂದಾಯಿತು. ಗಾರೆ ಕೆಲಸದ ಕಲಾವತಿಯವರೇ ಶೌಚಾಲಯ ನಿರ್ಮಿಸಿದರು. ಆಗ, ಸ್ವತ್ಛತೆ ಮತ್ತು ಸ್ವಾಸ್ಥ್ಯಕ್ಕೂ ಸಂಬಂಧವಿದೆ ಎಂದರಿತ ಅವರು ಸುತ್ತಮುತ್ತಲ ಜನರಿಗೆ ಶೌಚಾಲಯ ನಿರ್ಮಾಣಕ್ಕೆ ಮನವೊಲಿಸಿ ಕೈಯ್ನಾರೆ 50 ಶೌಚಾಲಯ ನಿರ್ಮಿಸಿದರು. ಈಗ ನೂರಾರು ಯುವಕರು ಕಲಾವತಿಯವರ ತಂಡದಲ್ಲಿದ್ದು, ಈ ತಂಡ 4000ಕ್ಕೂ ಅಧಿಕ ಶೌಚಾಲಯ ನಿರ್ಮಿಸಿದೆ.

ದೇಶದ ಸಹೋದರಿಯರಿಗೆ, ಸೊಸೆಯಂದಿರಿಗೆ ಮತ್ತು ಹೆಣ್ಣು ಮಕ್ಕಳಿಗೆ ನನ್ನ ಸಂದೇಶವಿದು- ಮನೆಯಿಂದ ಹೊರಗೆ ಬನ್ನಿ. ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡಿ. ಗುರಿ ಮುಟ್ಟಬೇಕು ಎನ್ನುವವರು ಹಿಂದೆ ತಿರುಗಿನೋಡಬಾರದು.

ಬದುಕು ಕಟ್ಟಿಕೊಟ್ಟ ವಿಜಯಾ
ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಬಂಜಾರ ಸಮುದಾಯದ ಕರಕುಶಲ ವಸ್ತುಗಳಿಗೆ ಪುನರುಜ್ಜೀವನ ಕೊಡಲು ಕಳೆದ 2 ದಶಕದಿಂದ ಶ್ರಮಿಸುತ್ತಿರುವವರು ವಿಜಯಾ ಪವಾರ್‌. ವಿಜಯಾ ಪವಾರ್‌ರಿಂದಾಗಿ ಇಂದು ಸಾವಿರಾರು ಮಹಿಳೆಯರ ಬದುಕು ಹಸನಾಗಿದೆ. ಬಂಜಾರಾ ಸಾಂಪ್ರದಾಯಿಕ ಕೌಶಲ್ಯವನ್ನೆಲ್ಲ ಸುಮಾರು ನಾಲ್ಕು ವರ್ಷಗಳವರೆಗೆ ಅಧ್ಯಯನ ಮಾಡಿದ ವಿಜಯಾ 2004ರಲ್ಲಿ ಎನ್‌ಜಿಒ ಸ್ಥಾಪಿಸಿದರು. ಸುತ್ತಮುತ್ತಲಿನ ತಾಂಡಾಗಳಿಗೆ ತೆರಳಿ ಮಹಿಳೆಯರಿಗೆ ಕೆಲಸ ಕೊಟ್ಟರು.

ಸಾಂಪ್ರದಾಯಿಕ ಗೋರ್ಮತಿ ಕಲೆಯನ್ನು ಉತ್ತೇಜಿಸಲು ಪ್ರಧಾನಿ ಮೋದಿಯವರು ನಮಗೆ ಕೇವಲ ಪ್ರೋತ್ಸಾಹಿಸಿರುವುದು ಮಾತ್ರವಲ್ಲ, ಆರ್ಥಿಕವಾಗಿಯೂ ಸಹಾಯ ಮಾಡಿದ್ದಾರೆ. ಇದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next