Advertisement

ನಷ್ಟದ ಭೀತಿಯಲ್ಲಿ ಮಾವು ಬೆಳೆಗಾರರು

01:30 PM Jun 08, 2021 | Team Udayavani |

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ಮಾವಿನ ರಾಜಧಾನಿ ಎಂದೇ ಖ್ಯಾತಿ ಪಡೆದಿದೆ. ಹಣ್ಣುಗಳ ರಾಜನೆಂದೇ ಕರೆಸಿಕೊಳ್ಳುವ ಮಾವು ಕೋವಿಡ್‌ನ‌ ಲಾಕ್‌ಡೌನ್‌ ಸಂಕಷ್ಟ ಮತ್ತು ಅಕಾಲಿಕ ಮಳೆಯಿಂದಾಗಿ ರೈತರ ಕೈಕಚ್ಚುವ ಭೀತಿ ಹುಟ್ಟಿಸಿದೆ.

Advertisement

ಶ್ರೀನಿವಾಸಪುರದ ವೈವಿಧ್ಯಮ ಜಾತಿಯ ಮಾವು ಇನ್ನೂ ಮಾರುಕಟ್ಟೆಯ ಹೊಸ್ತಿಲು ತುಳಿಯುವ ಮುನ್ನವೇ ಮಾರುಕಟ್ಟೆಯ ಭೀತಿ ಎದುರಿಸುತ್ತಿದ್ದು, ಈಗಾಗಲೇ ಹೊರ ರಾಜ್ಯದ ವಿವಿಧ ತರಾವರಿ ಮಾವು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಶ್ರೀನಿವಾಸಪುರದಲ್ಲಿ ಮೇ.15 ರಿಂದಲೇ ಮಾರುಕಟ್ಟೆ

ಆರಂಭಿಸಲಾಗಿದ್ದು, ಮೇ.16 ರ ನಂತರವೇ ಶ್ರೀನಿವಾಸಪುರದ ಕೆಲವು ತಳಿಗಳ ಮಾವು ಮಾರುಕಟ್ಟೆಗೆ ಬರಲಾರಂಭಿಸಿದೆ. ಸರ್ಕಾರ ಮಾರುಕಟ್ಟೆ ಸೌಲಭ್ಯ ನೀಡಿದ್ದರೂ, ದೂರದ ವ್ಯಾಪಾರಿಗಳು ಕೋವಿಡ್‌ ಭಯದಿಂದ ಇತ್ತ ಸುಳಿಯದ ಕಾರಣ ಮಾರಾಟವೂ ನಿರೀಕ್ಷತ ಪ್ರಮಾಣದಲ್ಲಿ ಆಗಿಲ್ಲ.

ರಾಜ್ಯದ ಶೇ.47 ಮಾವು ಜಿಲ್ಲೆಯದ್ದೇ: ರಾಜ್ಯದಲ್ಲಿ ಉತ್ಪಾದನೆಯಾಗುವ ಒಟ್ಟು ಮಾವಿನಲ್ಲಿ ಶೇ. 47ಕ್ಕಿಂತಲೂ ಹೆಚ್ಚು ಮಾವು ಬೆಳೆಯುವುದು ಕೋಲಾರ ಜಿಲ್ಲೆ. ಅದರಲ್ಲೂ ಶ್ರೀನಿವಾಸಪುರದಲ್ಲೇ 24625 ಹೆಕ್ಟೇರ್‌ ಮಾವು ಬೆಳೆಯಲಾಗುತ್ತಿದೆ. ಉಳಿದಂತೆ ಬಂಗಾರಪೇಟೆ 4562, ಕೋಲಾರ-5574 , ಮಾಲೂರು-1471, ಮುಳಬಾಗಲು-16,870 ಹೆಕ್ಟೇರ್‌ ಪ್ರದೇಶ ಸೇರಿದಂತೆ ಒಟ್ಟು 50,172 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ.

ರಫ್ತು ಗುಣಮಟ್ಟ: ಇನ್ನು ಮಾವು ಎಂದೊಡೆನೇ ನೆನಪಿಗೆ ಬರುವ ಶ್ರೀನಿವಾಸಪುರದ ಮಣ್ಣಿನ ಮಹಿಮೆ, ಫಲವತ್ತತೆ ಮಾವು ಬೆಳೆಗೆ ಪ್ರಕೃತಿಯೇ ಹೇಳಿ ಮಾಡಿಸಿಕೊಟ್ಟಂತಿದೆ. ಜೊತೆಗೆ ಮಾವಿನ ತಿರುಳು ಗಟ್ಟಿಯಾಗಿರುವುದರಿಂದ ಬೇಗನೆ ಕೆಡದೆ ರಫ್ತು ಮಾಡಲು ಹೇಳಿ ಮಾಡಿಸಿದಂತಿದೆ. ಇದೇ ಕಾರಣಕ್ಕೆ ದೇಶಾದ್ಯಂತ ಶ್ರೀನಿವಾಸಪುರ ಮಾವಿಗೆ ಬೇಡಿಕೆ ಹೆಚ್ಚು.

Advertisement

ಜಿಲ್ಲೆಯಲ್ಲಿ ರಸಪೂರಿ, ಬಾದಾಮಿ, ಮಲ್ಲಿಕಾ, ತೋತಾಪುರಿ, ನೀಲಂ, ಬೇನಿಷಾ, ಖುದ್ದೂಸ್‌, ರಾಜಗೀರಾ, ಕಾಲಾಪಾಡ್‌, ಆಲೋನ್ಸಾ , ಮಲಗೋಬಾ, ಅಲ್ಮೇಟ್‌, ತಳಿಯ ಮಾವು ಹೆಚ್ಚು ಬೆಳೆಯುಲಾಗುತ್ತಿದೆ.

ಕೋವಿಡ್: ಅಕಾಲಿಕ ಮಳೆ: ಮಾವು ಬೆಳೆ ಎರಡು ವರ್ಷಕ್ಕೊಮ್ಮೆ ಉತ್ತಮ ಇಳುವರಿ ಸಿಗುತ್ತದೆ. ಕಳೆದ ವರ್ಷ ಮತ್ತು ಈ ವರ್ಷ ಉತ್ತಮ ಬೆಳೆಯಾಗಿದ್ದರೂ ಕೋವಿಡ್‌ ಮಾರಿಯಿಂದ ವ್ಯಾಪಾರಕ್ಕೆ ತೊಡಕಾಗಿದೆ. ಒಂದು ವರ್ಷ ಉತ್ತಮ ಬೆಳೆಯಾದರೆ ಮತ್ತೂಂದು ವರ್ಷ ಕಡಿಮೆ ಫಸಲು ಸಿಗುತ್ತದೆ, ಈ ಬಾರಿ ಮಾವು ಹೂವು ಬಿಡುವ ಸಂದರ್ಭದಲ್ಲಿ ಮತ್ತು ಕಾಲಿ ಕಟ್ಟುವ ಕಾಲದಲ್ಲಿ ಅಕಾಲಿಕ ಆಲಿಕಲ್ಲು ಮಳೆ ಸುರಿದು ಹಾನಿಯಾಗಿತ್ತು. ಆದರೂ, ಸವಾಲುಗಳನ್ನು ಎದುರಿಸಿ ಶ್ರೀನಿವಾಸಪುರದ ಮಾವು ಮಾರುಕಟ್ಟೆಗೆ ಬರಲು ಸಜ್ಜಾಗುತ್ತಿದೆ. ಫ‌ಸಲು ಉತ್ತಮವಾಗಿದ್ದರೂ ಕೊರೊನಾದಿಂದ ತಡೆ ಎದುರಾಗಿದೆ.

ತೋಟಗಾರಿಕೆ ಇಲಾಖೆಯಿಂದ ನೆರವು: ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಗಾಯಿತ್ರಿ ಅವರು ಹೇಳುವಂತೆ ಅನೇಕ ರೈತರೊಂದಿಗೆ ರಿಲೆಯನ್ಸ್‌ ಮತ್ತಿತರ 13 ಕಲೆಕ್ಷನ್‌ ಸೆಂಟರ್‌ಗಳು ಖರೀದಿಗೆ ಮುಂದಾಗಿದ್ದಾರೆ, ರೈತರಿಗೆ ಮಾರುಕಟ್ಟೆ ಒದಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ಇಲಾಖೆಯ ಅನುಮತಿ ಪಡೆದಿರುವ ಫಾರ್ಮ್ ಪ್ರೊಡಕ್ಷನ್‌ ಆರ್ಗನೈಸರ್‌ ಸಮಿತಿಗಳು ರಚಿತವಾಗಿದ್ದು, ಅವುಗಳಲ್ಲಿ ಮುಳಬಾಗಿಲಿ ನಲ್ಲಿ 2, ಶ್ರೀನಿವಾಸಪುರ 1, ಕೋಲಾರದಲ್ಲಿ 2 ಸಂಸ್ಥೆಗಳು ಮಾವನ್ನು ಒಳ್ಳೆಯ ಬೆಲೆಗೆ ಮಾರಾಟ ಮತ್ತು ಹೊರಗಡೆಗೆ ಸರಬರಾಜಾಗಲು ಕ್ರಮವಹಿಸಿವೆ ಎಂದು ತಿಳಿಸಿದ್ದಾರೆ.

ಜತೆಗೆ ಅಪಾರ್ಟ್‌ಮೆಂಟ್ಸ್‌ಗಳಲಿಗೆ ಬಾಕ್ಸ್‌ ಮಾಡಿ ತಲುಪಿಸುವ ಕಾರ್ಯವೂ ನಡೆದಿದೆ.

ಹೂವು,ಹಣ್ಣು ಬೆಳೆಗಾರರಿಗೆ ಹೆಕ್ಟೇರ್‌ಗೆ 10 ಸಾವಿರ ರೂ. ಪರಿಹಾರ ನಿಗದಿ ಮಾಡಲಾಗಿದೆ. ಮಾವು ಬೆಳೆಗಾರರಿಗೆ ಯಾವುದೇ ಪ್ಯಾಕೇಜ್‌ ಘೋಷಣೆ ಆಗಿಲ್ಲ, ಎಕರೆಗೆ ಕನಿಷ್ಠ 10 ಸಾವಿರ ರೂ. ಪರಿಹಾರ ಕೊಡಿಸಲು ಮನವಿ ಮಾಡುವೆ.– ಕೆ.ವಿ.ನಾಗರಾಜ, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ

ಕೊರೊನಾದಿಂದ ಇತರ ಬೆಳೆಗಳು ಕೈಕಚ್ಚಿವೆ. ವಾರ್ಷಿಕ ಬೆಳೆ ಮಾವಿನಲ್ಲಾದರೂ ಲಾಭ ಮಾಡಿಕೊಳ್ಳಬಹುದು ಎಂಬ ನಿರೀಕ್ಷೆ ಲಾಕ್‌ಡೌನ್‌ನಿಂದ ಹುಸಿಯಾಗುತ್ತಿದೆ. ಸರಕಾರ ಮಾವು ಬೆಳೆಗಾರರ ನೆರವಿಗೆ ಧಾವಿಸಬೇಕಾಗಿದೆ. ಸೂಕ್ತ ಪರಿಹಾರ ಘೋಷಿಸಬೇಕಾಗಿದೆ.– ಕೆ.ಶ್ರೀನಿವಾಸಗೌಡ, ರೈತ ಸಂಘ ಸಂಚಾಲಕ

 

– ಕೆ.ಎಸ್‌.ಗಣೇಶ್‌

 

Advertisement

Udayavani is now on Telegram. Click here to join our channel and stay updated with the latest news.

Next