Advertisement

Mangaluru School incident; ಐಎಎಸ್‌ ಅಧಿಕಾರಿಯಿಂದ ತನಿಖೆ: ದಿನೇಶ್‌ ಗುಂಡೂರಾವ್‌

12:45 AM Feb 18, 2024 | Team Udayavani |

ಮಂಗಳೂರು: ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಿಂದ ಹಿಂದೂ ಧರ್ಮ ಅವಹೇಳನ ಪ್ರಕರಣ ಹಾಗೂ ಆ ಹಿನ್ನೆಲೆಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ತನಿಖೆಗೆ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ, ಐಎಎಸ್‌ ಅಧಿಕಾರಿ ಆಕಾಶ್‌ ಶಂಕರ್‌ ಅವರನ್ನು ನೇಮಕ ಮಾಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕಿಯ ವಿರುದ್ಧದ ತನಿಖೆಯನ್ನು ಶಿಕ್ಷಣ ಇಲಾಖೆ ಮಾಡಲಿದೆ. ಹಾಗಾಗಿ ಎಫ್‌ಐಆರ್‌ ದಾಖಲು ಮಾಡಿಲ್ಲ. ತಪ್ಪು ಮಾಡಿದ್ದರೆ ತನಿಖೆಯಿಂದ ತಿಳಿದು ಬರಲಿದೆ. ತನಿಖಾಧಿಕಾರಿ ಸಮಗ್ರ ತನಿಖೆ ನಡೆಸಿ ಶೀಘ್ರದಲ್ಲೇ ಸರಕಾರಕ್ಕೆ ವರದಿ ನೀಡಲಿದ್ದಾರೆ ಎಂದರು.

ಘಟನೆಗೆ ಸಂಬಂಧಿಸಿದಂತೆ ಶಾಸಕರು ನಡೆದುಕೊಂಡ ರೀತಿಯನ್ನು ಎಲ್ಲರೂ ನೋಡಿದ್ದಾರೆ. ಜಿಲ್ಲೆಯ ಜನರು ತಲೆತಗ್ಗಿಸುವಂತೆ ಮಾಡಿದ್ದಾರೆ. ಎಫ್‌ಐಆರ್‌ ಹಿಂಪಡೆಯಲು ಆಗುವುದಿಲ್ಲ. ದೂರಿನ ಬಗ್ಗೆ ತನಿಖೆಯಾಗಲಿದ್ದು, ತಪ್ಪು ಸಾಬೀತಾದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಶಾಸಕ ಡಾ| ಭರತ್‌ ಶೆಟ್ಟಿ ಮತ್ತು ಶರಣ್‌ ಪಂಪ್‌ವೆಲ್‌ ವಿರುದ್ಧ ಸುಳ್ಳು ಕೇಸ್‌ ದಾಖಲಾಗಿಲ್ಲ. ಅವರ ಪ್ರಚೋದನಕಾರಿ ಹೇಳಿಕೆಗಳನ್ನು ಆಧರಿಸಿ ದೂರು ದಾಖಲಾಗಿದೆ. ಪೊಲೀಸ್‌ ತನಿಖೆಯಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಶಿಕ್ಷಕಿಯ ವಿರುದ್ಧ ಎಫ್ಐಆರ್‌ ದಾಖಲು: ಪೋಷಕರ ಆಗ್ರಹ
ಮಂಗಳೂರು: ತರಗತಿಯಲ್ಲಿ ಹಿಂದೂ ಧರ್ಮ, ದೈವ-ದೇವರನ್ನು ಅವಹೇಳನ ಮಾಡಿರುವ, ಪ್ರಧಾನಮಂತ್ರಿ ಮೋದಿಯವರ ಬಗ್ಗೆ ಕೇವಲವಾಗಿ ಮಾತನಾಡಿರುವ ಖಾಸಗಿ ಶಾಲೆಯ ಶಿಕ್ಷಕಿಯ ವಿರುದ್ಧ ಕೂಡಲೇ ಎಫ್ಐಆರ್‌ ದಾಖಲಿಸಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಶುಕ್ರವಾರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರನ್ನು ಭೇಟಿಯಾಗಿ ಆಗ್ರಹಿಸಿದರು.

ಶಿಕ್ಷಕಿಯ ವಿರುದ್ಧ ಫೆ. 11ರಂದು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರೂ ಈವರೆಗೂ ಎಫ್ಐಆರ್‌ ದಾಖಲಿಸಿಲ್ಲ. ಈ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

Advertisement

ಎಫ್ಐಆರ್‌ ರದ್ದತಿಗೆ ಆಗ್ರಹ
ಕರೆಗೆ ಸ್ಪಂದಿಸಿ ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ಹಾಗೂ ಇಬ್ಬರು ಪಾಲಿಕೆಯ ಸದಸ್ಯರು ಹಾಗೂ ಶಾಲಾ ಆವರಣದಲ್ಲಿ ಪ್ರತಿಭಟನೆಯ ವೇಳೆ ಹಾಜರಿರದ ಶಾಸಕ ಡಾ| ಭರತ್‌ ಶೆಟ್ಟಿ, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ವಿರುದ್ಧ ದಾಖಲಾಗಿರುವ ಎಫ್ಐಆರ್‌ನ್ನು ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು: ಡಾ| ಕೃಪಾ ಅಮರ್‌ ಆಳ್ವ
ಮಂಗಳೂರು: ಶಿಕ್ಷಕಿಯಿಂದ ಹಿಂದೂ ಧರ್ಮದ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ಸಂದರ್ಭ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಆಯೋಗದ ಮಾಜಿ ಅಧ್ಯಕ್ಷೆ ಡಾ| ಕೃಪಾ ಅಮರ್‌ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಘಟನೆಯಿಂದ ಮಕ್ಕಳು ವಿಚಲಿತರಾಗಿದ್ದು, ಕೆಲವರು ಭಯಗೊಂಡಿದ್ದಾರೆ. ಪುಟ್ಟ ಮಕ್ಕಳನ್ನು ಶಾಲೆಯ ಗೇಟಿನ ಬಳಿ ನಿಲ್ಲಿಸಿ ರಾಜಕೀಯ ಪಕ್ಷದ ನಾಯಕರು ಬಳಸಿಕೊಂಡಿರುವುದು ಖಂಡನೀಯ. ಇದು ಮಕ್ಕಳ ಸ್ವಾತಂತ್ರ್ಯ ಮತ್ತು ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆಪ್ತ ಸಲಹೆಗಾರರನ್ನು ನಿಯೋಜಿಸಿ ಮಕ್ಕಳ ಮನಸ್ಸು ತಿಳಿಗೊಳಿಸುವ ಕೆಲಸವಾಗಬೇಕು ಎಂದರು.

ಅಲ್ಪಸಂಖ್ಯಾಕ ಆಯೋಗದ ಮಾಜಿ ಸದಸ್ಯೆ ಮೆಟಿಲ್ಡಾ, ಮಕ್ಕಳ ಹಕ್ಕುಗಳ ಕಾರ್ಯಕರ್ತೆ ನಂದಾ ಪಾಯಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next