Advertisement

Mangaluru: ಹೂಡಿಕೆ ಆಮಿಷ; ಲಕ್ಷಾಂತರ ರೂ. ವರ್ಗಾಯಿಸಿಕೊಂಡು ವಂಚನೆ

08:26 PM Oct 21, 2024 | Team Udayavani |

ಮಂಗಳೂರು: ಜೆ.ಪಿ. ಮಾರ್ಗನ್‌ ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡು ಭಾರತದಲ್ಲಿ ಹೊಸದಾಗಿ ಕಂಪೆನಿಯನ್ನು ಪ್ರಾರಂಭಿಸುತ್ತಿದ್ದು, ಹೂಡಿಕೆ ಮಾಡುವಂತೆ ಆಮಿಷ ಒಡ್ಡಿ ಲಕ್ಷಾಂತರ ರೂ. ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಕುರಿತಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರರಿಗೆ ಸೆ. 24ರಂದು ಅಪರಿಚಿತ ವ್ಯಕ್ತಿಯೊಬ್ಬ ತಾನು ವಿಶ್ವನಾಥನ್‌ ಮುಖ್ಯ ಹೂಡಿಕೆದಾರ ಸ್ಟ್ರ್ಯಾಟಜಿಸ್ಟ್‌ ಎಂದು ಹೇಳಿಕೊಂಡು ಸಂಪರ್ಕಿಸಿದ್ದಾನೆ. ಬಳಿಕ ನೀತಾ ಶರ್ಮಾ ಎಂಬಾಕೆ ಜೆ.ಪಿ. ಮಾರ್ಗನ್‌ ಎಂಬ ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡು ವಿವಿಧ ನಂಬರ್‌ಗಳಿಂದ ಕರೆ ಮಾಡಿ ಸಂಪರ್ಕಿಸಿದ್ದಾರೆ. ಕಂಪೆನಿ ಪ್ರಾರಂಭಿಸುವ ಬಗ್ಗೆ ತಿಳಿಸಿ ಲಿಂಕ್‌ ಕಳುಹಿಸಿ, 20 ಲಕ್ಷ ರೂ. ವರ್ಗಾವಣೆ ಮಾಡುವಂತೆ ತಿಳಿಸಿದ್ದಳು. ಅದರಂತೆ ಅ. 14ರಂದು ದೂರುದಾರರು 20 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಷೇರುಗಳನ್ನು ಖರೀದಿಸುವಂತೆ ತಿಳಿಸಿದ್ದು, 1 ಷೇರಿಗೆ 240 ರೂ.ನಂತೆ 1 ಸಾವಿರ ಷೇರುಗಳನ್ನು ಖರೀದಿಸಿದ್ದಾರೆ.

ಅ. 15ರಂದು ಇನ್ನೊಂದು ಸಂಸ್ಥೆಯ ಷೇರುಗಳನ್ನು ಖರೀದಿಸುವಂತೆ ತಿಳಿಸಿದ್ದು, ಅದರಂತೆ 250.95 ರೂ.ನಂತೆ 7,900 ಷೇರುಗಳನ್ನು ಖರೀದಿಸಿದ್ದಾರೆ. ಬಳಿಕ ಹೂಡಿಕೆ ಮಾಡಿದ ಹಣವನ್ನು ವಿದ್‌ಡ್ರಾ ಮಾಡುವಂತೆ ತಿಳಿಸಿದ್ದು, 1,500 ರೂ. ಹಿಂಪಡೆದಿದ್ದಾರೆ. ಆದರೆ ಆ ಹಣವು ಬೇರೊಂದು ಖಾತೆಯಿಂದ ಬಂದಿದ್ದು, ಇದರಿಂದ ಸಂಶಯ ಬಂದು ನೀತಾ ಶರ್ಮಾ ಅವರಿಗೆ ಕೇಳಿದಾಗ ಸರಿಯಾದ ಉತ್ತರ ನೀಡಿಲ್ಲ.

ಹೂಡಿಕೆ ಮಾಡಿದ ಎಲ್ಲ ಹಣವನ್ನು ವಾಪಸ್‌ ನೀಡುವಂತೆ ಕೇಳಿದಾಗ ನೀತಾ ಶರ್ಮಾ 4 ಲಕ್ಷ ರೂ. ಹೆಚ್ಚುವರಿಯಾಗಿ ಕೇಳಿದ್ದಾರೆ. ಆಗ ತಾನು ಮೋಸ ಹೋಗಿರುವುದು ಅರಿವಾಗಿದೆ. ಹೂಡಿಕೆ ಮಾಡುವಂತೆ ಹೇಳಿ ಮೋಸ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next