Advertisement

Mangaluru: ಬಿಜೆಪಿ, ಕೇಂದ್ರದ ಕೈಗೊಂಬೆಯಂತೆ ರಾಜ್ಯಪಾಲರ ವರ್ತನೆ: ಸಚಿವ ದಿನೇಶ್‌

12:23 AM Aug 04, 2024 | Team Udayavani |

ಮಂಗಳೂರು: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಬಿಜೆಪಿ ಹಾಗೂ ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಿಗೆ ದೂರು ಬಂದಾಕ್ಷಣ ಅವರು ತರಾತುರಿಯಲ್ಲಿ ನೋಟಿಸ್‌ ನೀಡಿರುವುದು ಸರಿಯಲ್ಲ. ರಾಜ್ಯಪಾಲರು ಅಟಾರ್ನಿ ಜನರಲ್‌ ಅವರನ್ನು ಕರೆಸಿ ಪರಿಶೀಲಿಸಬೇಕಿತ್ತು. ಮುಖ್ಯಮಂತ್ರಿಗಳು ಏನು ತಪ್ಪು ಮಾಡಿದ್ದಾರೆ ಎಂಬುದನ್ನು ತಿಳಿಸಲಿ ಎಂದರು.

ಬಿಜೆಪಿಯೇತರ ಸರಕಾರ ಬೀಳಿಸಲು ಕೇಂದ್ರ ಸರಕಾರವು ಅಧಿಕಾರ ದುರುಪಯೋಗ ಮಾಡುತ್ತಿದೆ. ತಮಿಳುನಾಡು, ಮಹಾರಾಷ್ಟ್ರ, ದಿಲ್ಲಿ, ಝಾರ್ಖಂಡ್‌, ಪಶ್ಚಿಮ ಬಂಗಾಲ, ಕೇರಳಗಳಲ್ಲಿ ಕೇಂದ್ರದಿಂದ ಅಧಿಕಾರದ ದುರುಪಯೋಗವಾಗಿದೆ. ಸರಕಾರ ಅಸ್ಥಿರಗೊಳಿಸಲು, ಗೊಂದಲ ಸೃಷ್ಟಿಸಲು, ನಾಯಕರನ್ನು ಜೈಲಿಗೆ ಹಾಕಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲೇ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಶೇ.95 ಇ.ಡಿ., ಐಟಿ ದಾಳಿಯಾಗಿರುವುದು ವಿಪಕ್ಷಗಳ ಮೇಲೆ ಎಂದು ಅಸಮಾಧಾನ ಹೊರಹಾಕಿದರು.

ಬಿಜೆಪಿ ಪಾದಯಾತ್ರೆಗೆ ಅವಕಾಶ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಅಭಿಪ್ರಾಯ ತಿಳಿಸಲು ಎಲ್ಲರಿಗೂ ಮುಕ್ತ ಅವಕಾಶಗಳಿವೆ. ನಿರ್ಬಂಧಗಳೊಂದಿಗೆ ಬಿಜೆಪಿ, ಜೆಡಿಎಸ್‌ ಪಾದಯಾತ್ರೆಗೆ ಅನುಮತಿ ನೀಡುತ್ತೇವೆ. ಅನೇಕ ಪಾದಯಾತ್ರೆಗಳಿಗೆ ಅಧಿಕೃತ ಅನುಮತಿ ನೀಡಲಾಗುವುದಿಲ್ಲ. ಹಿಂದೆ ನಾವು ಮೇಕೆದಾಟು ಪಾದಯಾತ್ರೆ ಮಾಡಿದ ವೇಳೆ ಅನುಮತಿ ಸಿಕ್ಕಿರಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next