Advertisement

ಪಾಲಿಕೆ: ಕೋವಿಡ್ -19 ಸಂಕಷ್ಟ ಕಾಲದಲ್ಲಿ ಆಸ್ತಿ ತೆರಿಗೆ ಏರಿಕೆ

01:06 AM Jun 12, 2020 | Sriram |

ಮಹಾನಗರ: ಕೋವಿಡ್ -19 ಸಂಕಷ್ಟದ ಕಾಲದಲ್ಲಿ ಸರಕಾರ ಹಾಗೂ ಸ್ಥಳೀಯ ಸಂಸ್ಥೆಗಳು ತೆರಿಗೆ ವಿನಾಯಿತಿಯ ನೆರವು ಪ್ರಕಟಿಸುತ್ತಿದ್ದರೆ, ಮಂಗಳೂರು ಪಾಲಿಕೆ ಮಾತ್ರ ನಿಯಮಾವಳಿ ಪಾಲನೆಯ ನೆಪದಲ್ಲಿ ತೆರಿಗೆಯನ್ನೇ ಹೆಚ್ಚಳ ಮಾಡಿದೆ!

Advertisement

ಪ್ರತಿ ಮೂರು ವರ್ಷಗಳಿಗೊಮ್ಮೆ ಏರಿಕೆ ಮಾಡಬೇಕಾದ ಆಸ್ತಿ ತೆರಿಗೆಯನ್ನು ಮಂಗಳೂರು ಪಾಲಿಕೆ ಇದೀಗ ಶೇ. 15ರಷ್ಟು ಏರಿಸಿದೆ. ಜತೆಗೆ ಘನತ್ಯಾಜ್ಯ ಕರ ಕೂಡ ಇದೇ ಪ್ರಮಾಣದಲ್ಲಿ
ಏರಿಕೆ ಮಾಡಲಾಗಿದೆ. ಪರಿಣಾಮವಾಗಿ ಕೋವಿಡ್ -19 ಸಂಕಷ್ಟದಲ್ಲಿರುವ ಮಂಗಳೂರು ನಾಗರಿಕರಿಗೆ ತೆರಿಗೆ ಹೊರೆ ಏರಿಕೆಯಾದಂತಾಗಿದೆ.

ವಾಸ್ತವ್ಯ ಮತ್ತು ವಾಣಿಜ್ಯ ಕಟ್ಟಡಗಳಿಗೆ ಹಾಲಿ ಇದ್ದ ತೆರಿಗೆ ದರದ ಮೇಲೆ ಶೇ. 15ರಷ್ಟು ಏರಿಕೆ ಮಾಡಲಾಗಿದೆ. ವಾಸ್ತವೇತರ/ವಾಣಿಜ್ಯೇತರ ಕಟ್ಟಡಗಳು, 1,000 ಚದರ ಮೀಟರ್‌ವರೆಗಿನ ಖಾಲಿ ಜಮೀನುಗಳು, 1,001ರಿಂದ 4,000 ಚದರ ಮೀಟರ್‌ವರೆಗಿನ ಖಾಲಿ ಜಮೀನುಗಳು ಹಾಗೂ 4,000 ಚದರ ಮೀಟರ್‌ಗಿಂತ ಮೇಲ್ಪಟ್ಟ ಖಾಲಿ ಜಮೀನುಗಳ ಆಸ್ತಿ ತೆರಿಗೆ ದರದ ಮೇಲೆ ಶೇ. 15ರಷ್ಟು ತೆರಿಗೆ ಏರಿಕೆ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ಏರಿಕೆ
ಮಂಗಳೂರು ಪಾಲಿಕೆಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿಗೆ ಬಂದ ಬಳಿಕ 2008ರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ ಶೇ. 15ರಷ್ಟು ಏರಿಕೆ ಮಾಡಬೇಕು ಎಂಬ ನಿಯಮವಿದೆ. ಒಂದು ವೇಳೆ ತೆರಿಗೆ ಏರಿಕೆ ಮಾಡದಿದ್ದರೆ ಸರಕಾರದಿಂದ ಬರುವ ಅನುದಾನಕ್ಕೆ ಹೊಡೆತ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ 2008, 2011, 2014 ಹಾಗೂ 2017ರಲ್ಲಿ ಆಸ್ತಿ ತೆರಿಗೆ ಶೇ. 15ರಷ್ಟು ಏರಿಕೆ ಕಂಡಿದೆ. ಇದರ ಪ್ರಕಾರ 2020ರ ತೆರಿಗೆ ಏರಿಕೆ ಸದ್ಯ ಮಾಡಲಾಗಿದೆ ಎಂಬುದು ಪಾಲಿಕೆ ಅಭಿಪ್ರಾಯ. ಆದರೆ, ಕೋವಿಡ್ -19 ಸಂಕಷ್ಟದ ಕಾಲದಲ್ಲಿ ನಿಯಮಾವಳಿಯನ್ನು ನೆಪವಾಗಿಸಿಕೊಂಡು ತೆರಿಗೆ ಏರಿಕೆ ಮಾಡಿರುವುದು ಎಷ್ಟು ಸರಿ? ಹಾಗೂ ಕೋವಿಡ್ -19 ಕಾರಣದಿಂದ ಸದ್ಯಕ್ಕೆ ತೆರಿಗೆ ಏರಿಕೆ ನೀತಿ ಕೈಬಿಡುವ ಬಗ್ಗೆ ಸರಕಾರದ ಗಮನಸೆಳೆಯಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

 ಸೂಕ್ತ ತೀರ್ಮಾನ
ಸರಕಾರದ ನಿಯಮಾವಳಿ ಪ್ರಕಾರ ಆಸ್ತಿ ತೆರಿಗೆಯನ್ನು ಶೇ.15ರಷ್ಟು ಏರಿಕೆ ಮಾಡಲಾಗಿದೆ. ಇದನ್ನು ಕಡಿಮೆ ಮಾಡಲು ಸದ್ಯಕ್ಕೆ ಅವಕಾಶವಿಲ್ಲ. ಆದರೆ ಈಗಾಗಲೇ ಏರಿಕೆಯಲ್ಲಿರುವ ನೀರಿನ ತೆರಿಗೆ ಹಾಗೂ ಘನತ್ಯಾಜ್ಯ ಕರವನ್ನು ಇಳಿಕೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಮುಂದಿನ ಪಾಲಿಕೆ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
-ದಿವಾಕರ ಪಾಂಡೇಶ್ವರ
ಮೇಯರ್‌, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next