Advertisement

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

01:38 AM May 07, 2024 | Team Udayavani |

ಮಂಗಳೂರು: ವಿದೇಶಗಳಿಂದ ಚಿನ್ನ ಕಳ್ಳಸಾಗಣೆ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಕಳೆದ ಜನವರಿಯಿಂದ ಎಪ್ರಿಲ್‌ ವರೆಗೆ ಇಂತಹ 13 ಪ್ರಕರಣಗಳನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಭೇದಿಸಿದ್ದು, 4,45,95,340 ರೂ. ಮೌಲ್ಯದ ಚಿನ್ನವನ್ನು ಸರಕಾರಕ್ಕೆ ಒಪ್ಪಿಸಿದ್ದಾರೆ.

Advertisement

ಕಸ್ಟಮ್ಸ್‌ನ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸುತ್ತಿದ್ದರೂ ಅವರ ಕಣ್ಣು ತಪ್ಪಿಸಿ ಚಿನ್ನವನ್ನು ದೇಶದೊಳಗೆ ತರುವ ಪ್ರಯತ್ನ ಕಳ್ಳಸಾಗಾಟಗಾರರಿಂದ ನಡೆಯುತ್ತಲೇ ಇದೆ. ಕ್ಯಾಪ್ಸೂಲ್‌ ರೀತಿಯಲ್ಲಿ ಗುದದ್ವಾರದಲ್ಲಿ ಸಾಗಾಟ ಮಾಡುವ ವಿಧಾನವೇ ಹೆಚ್ಚು. ಉಳಿದಂತೆ ಟ್ರಾಲಿ ಬ್ಯಾಗ್‌, ಹ್ಯಾಂಡ್‌ ಬ್ಯಾಗ್‌, ಹಾರ್ಲಿಕ್ಸ್‌ ಬಾಟಲಿ, ತಲೆದಿಂಬು, ಬೆಡ್‌ಶೀಟ್‌, ರಟ್ಟಿನ ಬಾಕ್ಸ್‌ , ಟಿವಿ, ಮಿಕ್ಸಿ, ಸ್ಪೀಕರ್‌, ಹ್ಯಾಂಗರ್‌, ಹುಕ್ಸ್‌, ಮಕ್ಕಳ ಆಟದ ಸಾಮಗ್ರಿ ಮೊದಲಾದ ವಸ್ತುಗಳ ಒಳಗಡೆ ಚಿನ್ನವನ್ನು ಪೇಸ್ಟ್‌, ಪೌಡರ್‌ ರೂಪದಲ್ಲಿ ಅಡಗಿಸಿಟ್ಟು ಸಾಗಿಸಲು ಯತ್ನಿಸಿದ್ದೂ ಇದೆ.

98.68 ಲಕ್ಷ ರೂ.
ಮೌಲ್ಯದ ದೊಡ್ಡ ಬೇಟೆ
ಈ ಬಾರಿಯ ದೊಡ್ಡ ಬೇಟೆ ಜನವರಿಯಲ್ಲಿ ನಡೆದಿದೆ. ಜ. 8ರಂದು ಅಬುಧಾಬಿಯಿಂದ ಬಂದ ಪ್ರಯಾಣಿಕನೊಬ್ಬ ಪೇಸ್ಟ್‌ ರೂಪದ ಚಿನ್ನವನ್ನು 5 ಅಂಡಾಕಾರದ ವಸ್ತುವಿನಲ್ಲಿ ಇರಿಸಿ, ಗುದದ್ವಾರದಲ್ಲಿ ಇರಿಸಿ ಸಾಗಾಟಕ್ಕೆ ಯತ್ನಿಸಿ ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. 24 ಕ್ಯಾರೆಟ್‌ನ 1,579 ಗ್ರಾಂ ತೂಕದ 98,68,750 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆ ಹೇಗೆ ನಡೆಯುತ್ತದೆ?
ಗಲ್ಫ್ ರಾಷ್ಟ್ರಗಳಿಂದ ಮಂಗಳೂರಿಗೆ ಹೆಚ್ಚಾಗಿ ಚಿನ್ನ ಕಳ್ಳಸಾಗಣೆ ನಡೆಯುತ್ತದೆ. ಹಾಗಾಗಿ ಅಲ್ಲಿನ ವಿಮಾನ ನಿಲ್ದಾಣಗಳ ಸ್ಕ್ರೀನಿಂಗ್‌ ಅಧಿಕಾರಿಗಳೊಂದಿಗೆ ಭಾರತದ ಡೈರೆಕ್ಟರೆಟ್‌ ಆಫ್‌ ರೆವೆನ್ಯೂ ಇಂಟಲಿಜೆನ್ಸ್‌ (ಡಿಆರ್‌ಐ) ಅಧಿಕಾರಿಗಳು ನೇರವಾಗಿ ಸಂಪರ್ಕದಲ್ಲಿದ್ದು, ಅಲ್ಲಿಂದ ದೇಶಕ್ಕೆ ಬರುವ ಚಿನ್ನದ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ಇದು ಆರೋಪಿಗಳಿಗೆ ಬಲೆಗೆ ಬೀಳಲು ಸಹಕಾರಿಯಾಗುತ್ತದೆ. ಒಮ್ಮೆ ಕಳ್ಳಸಾಗಣೆಯಲ್ಲಿ ಸಿಕ್ಕಿ ಬಿದ್ದ ಆರೋಪಿಯ ಕಾಲ್‌ ಡಿಟೇಲ್‌ ಮೂಲಕವೂ ಇತರರನ್ನು ಪತ್ತೆ ಹಚ್ಚುತ್ತಾರೆ. ಕೊನೇ ಕ್ಷಣದಲ್ಲಿ ಗಲ್ಫ್ ರಾಷ್ಟ್ರಗಳಿಗೆ ತೆರಳಲು ಟಿಕೆಟ್‌ ಮಾಡುವವರು, ನಾಲ್ಕೈದು ದಿನದಲ್ಲಿ ಮರಳಿ ಬರುವವರ ಮೇಲೆ, ಪ್ರತಿಸಲ ವಿಸಿಟಿಂಗ್‌ ವೀಸಾದಲ್ಲಿ ಹೋಗಿ ಬರುವವರ ಮೇಲೆ ಕಸ್ಟಮ್ಸ್‌ ಆಧಿಕಾರಿಗಳು ಕಣ್ಣಿಟ್ಟು ತಪಾಸಣೆಗೆ ಒಳಪಡಿಸುತ್ತಾರೆ.

ನಿಲ್ದಾಣದ ಸಿಬಂದಿಯೂ ಭಾಗಿ
ಆರೋಪಿಗಳು ಕೆಲವೊಮ್ಮೆ ತಾವೇ ನೇರವಾಗಿ ಚಿನ್ನವನ್ನು ಕಳ್ಳ ಸಾಗಾಟ ಮಾಡದೆ ಇತರರ ಮೂಲಕ ಸಾಗಿಸಲು ಯತ್ನಿಸುತ್ತಾರೆ. ವಿಮಾನ ಲ್ಯಾಂಡಿಂಗ್‌ ಆದ ಬಳಿಕ ಶೌಚಾಲಯಕ್ಕೆ ಹೋಗಿ ಅಲ್ಲಿ ಅಥವಾ ನಿಲ್ದಾಣದೊಳಗಿನ ಶೌಚಾಲಯದಲ್ಲಿ ಇಡುತ್ತಾರೆ. ನಿಲ್ದಾಣದ ಸ್ವತ್ಛತಾ ಕೆಲಸಗಾರರ ಮೂಲಕ ನಿಲ್ದಾಣದಿಂದ ಹೊರ ತರುತ್ತಾರೆ. ಹಲವು ಪ್ರಕರಣಗಳಲ್ಲಿ ಏರ್‌ಲೈನ್ಸ್‌ ಸಿಬಂದಿಯೂ ಶಾಮೀಲಾಗಿಕಸ್ಟಮ್ಸ್‌ ಅಧಿಕಾರಿಗಳಿಗೆ ಸಿಕ್ಕಿ ಬಿದ್ದು ಅವರ ಮೇಲೂ ಪ್ರಕರಣಗಳು ದಾಖಲಾಗಿವೆ.

Advertisement

ಜಾಮೀನು ಕಷ್ಟವಲ್ಲ!
ಚಿನ್ನ ಕಳ್ಳಸಾಗಾಣೆ ಪ್ರಕರಣಗಳು ಕಸ್ಟಮ್ಸ್‌ ನಡಿ “ಕಮರ್ಷಿಯಲ್‌ ಅಫೆನ್ಸ್‌’ ಎನ್ನುವ ವಿಭಾಗದಲ್ಲಿ ಬರುತ್ತದೆ. ದಂಡ ಕಟ್ಟಿದರೆ ಆತನ ಪಾಸ್‌ಪೋರ್ಟ್‌ ವಾಪಸು ಸಿಗುತ್ತದೆ. ಜಾಮೀನು ಕೂಡ ಆಗುತ್ತದೆ. ಇಂತಹ ಪ್ರಕರಣದಲ್ಲಿ ಕಿಂಗ್‌ಪಿನ್‌ ಯಾರೆಂದು ಇಲ್ಲಿಯ ವರೆಗೆ ಪತ್ತೆ ಮಾಡುವ ಪ್ರಯತ್ನವೂ ನಡೆದಿಲ್ಲ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಚಿನ್ನವನ್ನು ಪೌಡರ್‌, ಪೇಸ್ಟ್‌ ರೂಪದಲ್ಲಿ ಮಾಡಿ ಕೊಡುವ ವಿಶೇಷ ತಂಡವೇ ಗಲ್ಫ್ ರಾಷ್ಟ್ರಗಳಲ್ಲಿದೆ. ಇದರ ಹಿಂಗೆ ಸ್ಮಗ್ಲಿಂಗ್‌ ಮಾಫಿಯಾ ಕೆಲಸ ಮಾಡುತ್ತಿದೆ. ಸ್ಮಗ್ಲರ್‌ಗಳು ಕಮಿಷನ್‌ ಆಸೆ ತೋರಿಸಿ ಚಿನ್ನ ಸಾಗಣೆ ಮಾಡಿಸುತ್ತಾರೆ. ಸದ್ಯ ಸಿಕ್ಕಿ ಬೀಳುತ್ತಿರುವವರಲ್ಲಿ ಕೇರಳ ಮೂಲದವರೇ ಅಧಿಕ ಎನ್ನುತ್ತಾರೆ ಅಧಿಕಾರಿಗಳು.

ಗಲ್ಫ್ ರಾಷ್ಟ್ರಗಳಿಂದ ಚಿನ್ನದ ತರಲು ಮಿತಿ
ಗಲ್ಫ್ ರಾಷ್ಟ್ರಗಳಿಂದ ಪುರುಷರು 20 ಗ್ರಾಂ ಮತ್ತು ಮಹಿಳೆಯರು 40 ಗ್ರಾಂ ಚಿನ್ನ ವನ್ನು ಸುಂಕವಿಲ್ಲದೆ ತರಬಹುದು. ಆರು ತಿಂಗಳಿಂತ ಹೆಚ್ಚು ಕಾಲ ವಾಸ್ತವ್ಯವಿದ್ದವರು ಸುಂಕ ಕಟ್ಟಿ 1 ಕೆ.ಜಿ. ವರೆಗೆ ಚಿನ್ನ ತರಲು ಅವಕಾಶವಿದೆ. ಚಿನ್ನವನ್ನು ಬಿಸ್ಕತ್ತು ಮತ್ತು ನಾಣ್ಯದ ರೂಪದಲ್ಲಿ ತರಬಹುದು.

ಮಂಗಳೂರು ವಿಮಾನ ನಿಲ್ದಾಣದಲ್ಲಿ
ಈ ವರ್ಷ ದಾಖಲಾದ ಪ್ರಕರಣಗಳು
ದಿನ          ಚಿನ್ನ (ಗ್ರಾಂ)          ಮೌಲ್ಯ (ರೂ.)
ಜ. 8           1,579                       98,68,750
ಜ. 12          815                         50,93,750
ಜ. 30         179                         11,16,960
ಫೆ. 14         189                         11,90,700
ಫೆ. 14         128                         8,06,400
ಫೆ. 17         141                          8,74, 200
ಫೆ. 17         733                         45,44,600
ಮಾ. 3       729                        45,92,700
ಮಾ. 19      96                         6,19,200
ಎ. 11         812                        58,78,880
ಎ. 25        636                       45,79,200
ಎ. 27        750                        54,30,000

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next