Advertisement

Mangaluru ವಿಶ್ವವಿದ್ಯಾನಿಲಯ ಹೊಸ ಕುಲಪತಿ ಶೀಘ್ರ ಅಂತಿಮ

01:21 AM Sep 14, 2023 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಬಹುನಿರೀಕ್ಷಿತ ಕುಲಪತಿ ನೇಮಕ ಪ್ರಕ್ರಿಯೆ ನಿರ್ಣಾಯಕ ಹಂತದಲ್ಲಿದ್ದು ಮೂರು ಹೆಸರುಗಳು ಬಲವಾಗಿ ಕೇಳಿಬರುತ್ತಿವೆ.

Advertisement

ಕುಲಪತಿ ಆಯ್ಕೆ ಸಂಬಂಧಿಸಿ ಶೋಧನಾ ಸಮಿತಿಯ ಮಹತ್ವದ ಸಭೆ ಈಗಾಗಲೇ ಅಂತಿಮಗೊಂಡಿದ್ದು ಸರಕಾರಕ್ಕೆ ವರದಿಯೂ ಸಲ್ಲಿಕೆ ಹಂತದಲ್ಲಿದೆ. ಒಂದೆರಡು ವಾರದೊಳಗೆ ಹೊಸ ಕುಲಪತಿ ನೇಮಕವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಹೆಸರುಗಳು ಯಾವುವು?
ಮೈಸೂರು ವಿ.ವಿ.ಯ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಉಪನ್ಯಾಸಕ ಪ್ರೊ| ಮುಜಾಫರ್‌ ಅಸ್ಸಾದಿ, ಮಂಗಳೂರು ವಿ.ವಿ.ಯ ಮಾಜಿ ಕುಲಸಚಿವ (ಪರೀಕ್ಷಾಂಗ) ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ| ಪಿ.ಎಲ್‌. ಧರ್ಮ ಹಾಗೂ ಮಂಗಳೂರು ವಿ.ವಿ.ಯ ಮಾಜಿ ಕುಲಸಚಿವ (ಆಡಳಿತ), ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ| ಕಿಶೋರ್‌ ಕುಮಾರ್‌ ಸಿ.ಕೆ. ಸಹಿತ ಕೆಲವರ ಹೆಸರು ಬಲವಾಗಿ ಕೇಳಿಬರುತ್ತಿದೆ.ಶೋಧನಾ ಸಮಿತಿಯಲ್ಲಿ ರಾಜ್ಯಪಾಲರು, ಸರಕಾರ, ಯುಜಿಸಿ ಹಾಗೂ ಮಂಗಳೂರು ವಿ.ವಿ.ಯ ಸೂಚಿತ ವ್ಯಕ್ತಿಗಳು ಸದಸ್ಯರಾಗಿದ್ದಾರೆ. ಸಮಿತಿಯ ಮಹತ್ವದ ಸಭೆಯು ಸೆ. 12ರಂದು ನಡೆದಿದೆ.

ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಕೆಯಾಗುವ ಶೋಧನಾ ಸಮಿತಿಯ ವರದಿಯು ಉನ್ನತ ಶಿಕ್ಷಣ ಸಚಿವರಿಗೆ ಸಲ್ಲಿಕೆಯಾಗುತ್ತದೆ. ಅಲ್ಲಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗುತ್ತದೆ. ಸಿಎಂ ಅವರು ಮೂವರಲ್ಲಿ ಒಬ್ಬರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಶಿಫಾರಸು ಮಾಡುತ್ತಾರೆ. ರಾಜ್ಯಪಾಲರು ಆ ಹೆಸರಿಗೆ ಒಪ್ಪಿಗೆ ಸೂಚಿಸಿದರೆ ಅದೇ ಹೆಸರು ಅಂತಿಮವಾಗುತ್ತದೆ. ಇಲ್ಲವಾದರೆ ರಾಜ್ಯಪಾಲರು ಪರ್ಯಾಯ ಹೆಸರನ್ನು ಸೂಚಿಸಿ ಸರಕಾರದ ಗಮನಸೆಳೆಯುತ್ತಾರೆ. ಈ ಪ್ರಕ್ರಿಯೆ ಬಳಿಕ ಅಂತಿಮ ಹೆಸರು ಪ್ರಕಟವಾಗುತ್ತದೆ.

ಈ ಬಾರಿ ಯಾವ ಕಡೆಗೆ?
ಮಂಗಳೂರು ವಿ.ವಿ. ಸ್ಥಾಪನೆಯಾಗಿ ಇದುವರೆಗೆ 9 ಕುಲಪತಿಗಳು ಕಾರ್ಯ ನಿರ್ವಹಿಸಿದ್ದು, ಇದರಲ್ಲಿ 8 ಕುಲಪತಿಗಳು ವಿ.ವಿ. ವ್ಯಾಪ್ತಿಯ ಹೊರ ಪ್ರದೇಶದವರು. ಕಳೆದ ಬಾರಿ ಮಾತ್ರ ಮಂಗಳೂರು ಮೂಲದವರು ಕುಲಪತಿಯಾಗಿದ್ದರು. ಹೀಗಾಗಿ ಈ ಬಾರಿಯ ಕುಲಪತಿ ಹುದ್ದೆ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ.

Advertisement

ಜೂನ್‌ನಿಂದ “ವಿಸಿ’
ಹುದ್ದೆ ಖಾಲಿ
4 ವರ್ಷಗಳಿಂದ ಮಂಗಳೂರು ವಿ.ವಿ. ಕುಲಪತಿಯಾಗಿದ್ದ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಜೂ. 2ರಂದು ಸೇವಾ ನಿವೃತ್ತರಾಗಿದ್ದಾರೆ. ಅಲ್ಲಿಂದ ಕುಲಪತಿ ಹುದ್ದೆ ಖಾಲಿ ಇದೆ. ಜೂ. 2ರಂದು ಪ್ರಭಾರ ಕುಲಪತಿಯಾಗಿ ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಲಾ ನಿಕಾಯದ ಡೀನ್‌ ಪ್ರೊ| ಜಯರಾಜ್‌ ಅಮೀನ್‌ ಅಧಿಕಾರದಲ್ಲಿದ್ದಾರೆ.

ಕುಲಪತಿ ಸ್ಥಾನಕ್ಕೆ 108 ಅರ್ಜಿ!
ಕುಲಪತಿ ಹುದ್ದೆಗೆ ಈ ಬಾರಿ ಒಟ್ಟು 108 ಅರ್ಜಿಗಳು ಸಲ್ಲಿಕೆಯಾಗಿತ್ತು. ಇಷ್ಟೂ ಅರ್ಜಿಗಳನ್ನು ಪರಿಶೀಲಿಸಿದ ಶೋಧನಾ ಸಮಿತಿಯು ಪ್ರಾರಂಭಿಕವಾಗಿ 40 ಹೆಸರನ್ನು ಪಟ್ಟಿ ಮಾಡಿಕೊಂಡಿತ್ತು. ಬಳಿಕ ಇದರಲ್ಲಿ 10 ಹೆಸರನ್ನು ಅಂತಿಮ ಮಾಡಿ ಮಂಗಳವಾರ ನಡೆದ ಮಹತ್ವದ ಸಭೆಯಲ್ಲಿ ಮೂರು ಹೆಸರನ್ನು ಅಖೈರುಗೊಳಿಸಿ ಸೀಲ್ಡ್‌ ಕವರ್‌ನಲ್ಲಿ ಸರಕಾರಕ್ಕೆ ಸಲ್ಲಿಸಲಿ ದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

5 ವಿ.ವಿ.ಯಲ್ಲಿ “ಲೆಕ್ಕಾಚಾರ’!
ರಾಜ್ಯದ ಐದು ವಿ.ವಿ.ಗಳಿಗೆ ಕುಲಪತಿ ನೇಮಕ ಆಗಲು ಬಾಕಿ ಇದೆ. ಮೈಸೂರು, ಬಳ್ಳಾರಿ, ಶಿವಮೊಗ್ಗ, ಬೆಳಗಾವಿ ಹಾಗೂ ಮಂಗಳೂರು ವಿವಿಗೆ ಕುಲಪತಿ ಆಯ್ಕೆ ನಡೆಯಲು ಬಾಕಿ ಇದೆ. ಹೀಗಾಗಿ 5 ವಿ.ವಿ.ಗಳಿಗೆ ಕುಲಪತಿ ನೇಮಕ ಬಗ್ಗೆ ರಾಜ್ಯಪಾಲರು ಹಾಗೂ ಸರಕಾರದ ಮಟ್ಟದಲ್ಲಿ ವಿವಿಧ “ಲೆಕ್ಕಾಚಾರ’ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಮಂಗಳೂರು ವಿ.ವಿ. ಕುಲಸಚಿವರಾಗಿ
ರಾಜು ಕೆ. ನಿಯೋಜನೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ 18ನೇ ಕುಲಸಚಿವರಾಗಿ ಕೆಎಎಸ್‌ ಕಿರಿಯ ಶ್ರೇಣಿ ಅಧಿಕಾರಿ ರಾಜು ಕೆ. ಅವರನ್ನು ಸರಕಾರ ಪ್ರಭಾರ ನೆಲೆಯಲ್ಲಿ ನಿಯೋಜಿಸಿ ಆದೇಶ ಹೊರಡಿಸಿದೆ.
ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಆಡಳಿತಾತ್ಮಕ ಹಿತದೃಷ್ಟಿಯಿಂದ ವಿ.ವಿ. ಆಡಳಿತ ವಿಭಾಗದ ಹುದ್ದೆಯನ್ನೂ ಪ್ರಭಾರ ನೆಲೆಯಲ್ಲಿ ನಿಭಾಯಿಸಲಿರುವರು. ಈ ಹಿಂದೆ ವಿ.ವಿ. ಆಡಳಿತ ವಿಭಾಗದ 17ನೇ ಕುಲಸಚಿವರಾಗಿ ಕೆಎಎಸ್‌ ಹಿರಿಯ ಶ್ರೇಣಿ ಅಧಿಕಾರಿ ಮೊಹಮ್ಮದ್‌ ನಯೀಮ್‌ ಮೊಮಿನ್‌ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅವರನ್ನು ಬಿಬಿಎಂಪಿಯ ಯಲಹಂಕ ವಲಯದ ಜಂಟಿ ಆಯುಕ್ತರಾಗಿ ನಿಯೋಜಿಸಿ ವರ್ಗಾಯಿಸಲಾಗಿತ್ತು. ಅನಂತರ ಖಾಲಿ ಉಳಿದ ಕುಲಸಚಿವ ಹುದ್ದೆಯನ್ನು ಪರಿಕ್ಷಾಂಗ ಕುಲಸಚಿವ ಡಾ| ರಾಜುಕೃಷ್ಣ ಚೆನ್ನನ್ನವರ್‌ ಪ್ರಭಾರ ನೆಲೆಯಲ್ಲಿ ವಹಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next