Advertisement

ಮಂಗಳೂರು ವಿಶ್ವ ವಿದ್ಯಾನಿಲಯ: ಪರೀಕ್ಷೆ ಮುಗಿದು 4 ತಿಂಗಳಾದರೂ ಫಲಿತಾಂಶವಿಲ್ಲ

12:33 AM Aug 20, 2022 | Team Udayavani |

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ತರಾತುರಿಯಲ್ಲಿ ಜಾರಿಯಾದ ಪರಿಣಾಮ ಎಂಬಂತೆ, ಮೊದಲ ಸೆಮಿಸ್ಟರ್‌ ಪರೀಕ್ಷೆ ಮುಗಿದು ನಾಲ್ಕು ತಿಂಗಳಾದರೂ ಮೌಲ್ಯ ಮಾಪನ ಇನ್ನೂ ಆರಂಭವಾಗಿಲ್ಲ !
ಎನ್‌ಇಪಿಗೆ ರೂಪಿಸಲಾದ ಯುಯು ಸಿಎಂಎಸ್‌ (ಸಮಗ್ರ ವಿ.ವಿ. ಹಾಗೂ ಸಮಗ್ರ ಕಾಲೇಜು ನಿರ್ವಹಣ ವ್ಯವಸ್ಥೆ) ತಂತ್ರಾಂಶವು ಮೌಲ್ಯಮಾಪನಕ್ಕೆ ಹೊಂದಿಕೊಳ್ಳದ್ದರಿಂದ ಮೌಲ್ಯಮಾಪನ ಆರಂಭವಾಗಿಲ್ಲ. ಮೊದಲ ಸೆಮಿಸ್ಟರ್‌ನ ಫ‌ಲಿತಾಂಶ ಬಾರದೆ ಎರಡನೇ ಸೆಮಿಸ್ಟರ್‌ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಿದ್ಧತೆ ನಡೆಸುವಂತಾಗಿದೆ.

Advertisement

ತಂತ್ರಾಂಶದಲ್ಲಿ ಡಿಜಿಟಲ್‌ ಮೌಲ್ಯಮಾಪನಕ್ಕೆ ಅವಕಾಶ ಇಲ್ಲ. ಹಾಗೆಯೇ ಕೈಯಲ್ಲಿ (ಮ್ಯಾನ್ಯುವಲ್‌) ಮೌಲ್ಯಮಾಪನ ಮಾಡಿ ಅಂಕ ಲಗತ್ತಿಸಲೂ ತಂತ್ರಾಂಶ ದಲ್ಲಿ ಸಾಧ್ಯವಾಗುತ್ತಿಲ್ಲ. “ಮೊದಲ ಸೆಮಿಸ್ಟರ್‌ ಫಲಿತಾಂಶ ಅತೀ ಜರೂರಿಲ್ಲ’ ಎಂಬುದು ವಿ.ವಿ. ಹಾಗೂ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಬೂಬು. ಆದರೆ, ವಿಷಯಗಳು ಏನಾದರೂ ಬಾಕಿಯಾದರೆ 2ನೇ ಸೆಮಿಸ್ಟರ್‌ನಲ್ಲಿ ಒಟ್ಟಿಗೇ ಓದಿ ಉತ್ತೀರ್ಣರಾಗುವುದು ಕಷ್ಟವಲ್ಲವೇ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಸದ್ಯ, ಎನ್‌ಇಪಿ 2ನೇ ಸೆಮಿಸ್ಟರ್‌ ಪರೀಕ್ಷೆ ಹತ್ತಿರದಲ್ಲಿದೆ.

ಇನ್ನೂ ಸಿದ್ಧವಾಗದ ಯುಯುಸಿಎಂಎಸ್‌!
ಯುಯುಸಿಎಂಎಸ್‌ ತಂತ್ರಾಂಶ ಮೌಲ್ಯಮಾಪನಕ್ಕೆ ಇನ್ನೂ ಸಿದ್ಧಗೊಂಡಿಲ್ಲ. ಮೌಲ್ಯಮಾಪನ ನಡೆದ ತತ್‌ಕ್ಷಣವೇ ವಿದ್ಯಾರ್ಥಿಯ ಅಂಕವನ್ನು ದಾಖಲಿಸಬೇಕಾಗುತ್ತದೆ. ಹಾಗಾಗಿ ಕೂಡಲೇ ಫ‌ಲಿತಾಂಶವೂ ಈ ವ್ಯವಸ್ಥೆಯಲ್ಲಿ ಲಭ್ಯವಾಗಲಿದೆ. ಆದರೆ ಇನ್ನೂ ಈ ವ್ಯವಸ್ಥೆ ಆರಂಭವಾಗುವ ಲಕ್ಷಣಗಳೇ ಗೋಚರಿ ಸದಾಗಿದೆ. ಈ ಮಧ್ಯೆ, ಹೊಸ ತಂತ್ರಾಂಶ ವ್ಯವಸ್ಥೆ ಬಗ್ಗೆ ಸೂಕ್ತ ಮಾಹಿತಿ-ತರಬೇತಿ ನೀಡದ ಕಾರಣ ಪ್ರಾಧ್ಯಾಪಕರೂ ಗೊಂದಲದಲ್ಲಿದ್ದಾರೆ. ಹಾಗಾಗಿ, ವಿದ್ಯಾರ್ಥಿಗಳ ದಾಖಲಾತಿಯೂ ತಡವಾಗಿದೆ. ತರಗತಿ ಜತೆಗೆ ಪ್ರಾಧ್ಯಾಪಕರಿಗೆ ಮೌಲ್ಯಮಾಪನ ಒತ್ತಡ ಇದ್ದರೆ, ಅತಿಥಿ ಉಪನ್ಯಾಸಕರು ಮೌಲ್ಯಮಾಪನದಲ್ಲಿ ಪಾಲ್ಗೊಂಡರೆ ಗೌರವಧನ ಕಡಿತದ ಭೀತಿ ಎದುರಿಸುತ್ತಿದ್ದರು. ಹೀಗಾಗಿ ಎನ್‌ಇಪಿ ಮೌಲ್ಯ ಮಾಪನ ಸಾಧ್ಯವಾಗಲಿಲ್ಲ ಎಂಬುದು ಪ್ರಾಧ್ಯಾಪಕರೊಬ್ಬರ ಅಭಿಪ್ರಾಯ.

2ನೇ ಸೆಮಿಸ್ಟರ್‌ನ
ಬಳಿಕ ಮೌಲ್ಯಮಾಪನ?
ಎನ್‌ಇಪಿ ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಹಾಗೂ ಹಾಜರಾತಿಯನ್ನು ತತ್‌ಕ್ಷಣವೇ ಸಲ್ಲಿಸಲು ಮಂಗಳೂರು ವಿ.ವಿ.ಯು ಎಲ್ಲ ಕಾಲೇಜುಗಳಿಗೆ ಸೂಚಿಸಿದೆ. ಇದರಿಂದ ವಿದ್ಯಾರ್ಥಿಗಳು ಯುಯುಸಿಎಂಎಸ್‌ನಲ್ಲಿ 2ನೇ ಸೆಮಿಸ್ಟರ್‌ ಪರೀಕ್ಷೆಗೆ ಶುಲ್ಕ ಪಾವತಿಸಿ, ಪ್ರವೇಶ ಪತ್ರ ಪಡೆದು ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷೆ ಆದ ಬಳಿಕ 1 ಹಾಗೂ 2ನೇ ಸೆಮಿಸ್ಟರ್‌ ಮೌಲ್ಯಮಾಪನವನ್ನು ಒಟ್ಟಿಗೆ ಕೈಗೊಳ್ಳಲೂ ವಿ.ವಿ. ಚಿಂತನೆ ನಡೆಸಿದೆ ಎಂದು ಪ್ರಾಧ್ಯಾಪಕರೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ತಡವಾದರೆ ಸಮಸ್ಯೆ ಇಲ್ಲ
ಯುಯುಸಿಎಂಎಸ್‌ನಲ್ಲಿ ಕೆಲವು ಅವಕಾಶಗಳು ಲಭ್ಯವಿಲ್ಲದ್ದರಿಂದ ಮೊದಲ ಸೆಮಿಸ್ಟರ್‌ ಮೌಲ್ಯಮಾಪನ ನಡೆದಿಲ್ಲ. ಈ ವಿಳಂಬದಿಂದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು. ಪದವಿಯ ಕೊನೆಯ ಪರೀಕ್ಷಾ ಫಲಿತಾಂಶವನ್ನು ತುರ್ತಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ.
-ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿ.ವಿ.

Advertisement

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next