Advertisement

ಗ್ರಾಮಾಂತರ ಪ್ರದೇಶದ ವಿವಿಧೆಡೆ ಗಾಳಿ-ಮಳೆಗೆ ಭಾರೀ ಹಾನಿ, ಸಂಚಾರ ಅಸ್ತವ್ಯಸ್ತ

11:48 PM Aug 08, 2019 | Team Udayavani |

ಮಹಾನಗರ: ಗ್ರಾಮಾಂತರ ಪ್ರದೇಶದಲ್ಲಿ ಎರಡು ದಿನಗಳಿಂದ ಸುರಿದ ಗಾಳಿ ಸಹಿತ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ.

Advertisement

ಹಳೆಯಂಗಡಿ: ಮನೆಗೆ ಹಾನಿ
ಹಳೆಯಂಗಡಿ:
ಇಲ್ಲಿನ ಹಳೆಯಂಗಡಿ ಗ್ರಾ.ಪಂ.ನ ಮುಂಭಾಗದ ಜಾರಂದಾಯ ದೈವಸ್ಥಾನದ ಹಿಂಭಾಗದಲ್ಲಿ ಭಾರೀ ಗಾಳಿಗೆ ಬೃಹತ್‌ ಮರವೊಂದು ಪಕ್ಕದ ತೋಟದ ತೆಂಗಿನ ಮರಕ್ಕೆ ವಾಲಿ ಅಪಾಯದ ಮುನ್ಸೂಚನೆ ನೀಡಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಸುಮಾರು 30 ವರ್ಷದ ಹಳೆ ಮರ ಇದಾಗಿದ್ದು ಗಾಳಿಗೆ ವಾಲಿದ ಸಮಯದಲ್ಲಿ ತೆಂಗಿನಮರ ಇಲ್ಲದಿದ್ದಲ್ಲಿ ನೇರವಾಗಿ ಶ್ರೀನಿವಾಸ ಮಂದಿರದ ಛಾವಣೆಗೆ ಬೀಳುವ ಸಾಧ್ಯತೆ ಇದೆ. ಕೂಡಲೆ ತೆರವುಗೊಳಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಜಿ.ಪಂ. ಸದಸ್ಯ ವಿನೋದ್‌ ಬೊಳ್ಳುರು, ತಾ.ಪಂ. ಸದಸ್ಯ ಜೀವನ್‌ ಪ್ರಕಾಶ್‌ ಕಾಮೆರೊಟ್ಟು ಭೇಟಿ ನೀಡಿ ಪಂಚಾ ಯತ್‌ನ ಪಿಡಿಒ ಪರಮೇಶ್ವರ್‌ ಹಾಗೂ ಗ್ರಾಮ ಕರಣಿಕ ಮೋಹನ್‌ ಅವರಿಗೆ ಅರಣ್ಯ ಇಲಾಖೆಯ ಮೂಲಕ ತತ್‌ಕ್ಷಣ ತೆರವು ನಡೆಸಲು ಸೂಚನೆ ನೀಡಿದ್ದಾರೆ.

ಗ್ರಾ. ಪಂ.ನ ಸದಸ್ಯ ವಿನೋದ್‌ಕುಮಾರ್‌ ಕೊಳುವೈಲು, ಹಿಮಕರ್‌ ಕದಿಕೆ, ಉದಯ ಸುವರ್ಣ ಸಸಿಹಿತ್ಲು, ಮನೋಜ್‌ಕುಮಾರ್‌, ಅನಿಲ್ ಸಸಿಹಿತ್ಲು, ಎಚ್. ರಾಮಚಂದ್ರ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

Advertisement

ತೋಕೂರು: ಗಾಳಿಯಿಂದ ವಿದ್ಯುತ್‌ ಕಂಬಗಳಿಗೆ ಹಾನಿ

ತೋಕೂರು: ಪಡುಪಣಂಬೂರು ಗ್ರಾ.ಪಂ.ನ ತೋಕೂರು ಕಂಬಳಬೆಟ್ಟು ಗ್ರಾಮದಲ್ಲಿ ಭಾರೀ ಗಾಳಿಗೆ ಮರವೊಂದು ಬಿದ್ದು ಟ್ರಾನ್ಸ್‌ ಫಾರ್ಮರ್‌ ಸಹಿತ ಆರು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿ, ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಗುರುವಾರ ನಡೆದಿದೆ. ಮನೆಯೊಂದರ ಮೇಲೆ ವಿದ್ಯುತ್‌ ಕಂಬವು ತುಂಡಾಗಿ ಬೀಳುವ ಹಂತದಲ್ಲಿದ್ದರು ಸಹ ವಿದ್ಯುತ್‌ ತಂತಿಯ ಹಿಡಿತದಿಂದ ಪವಾಡ ಸದೃಶವಾಗಿ ರಕ್ಷಿಸಿದೆ. ಘಟನೆಯು ಬೆಳಗ್ಗೆ ನಡೆದಿದ್ದರಿಂದ ರಸ್ತೆಯಲ್ಲಿ ಸಂಚಾರವು ಅಷ್ಟಾಗಿ ಇರಲಿಲ್ಲ ಇತರ ಸಮಯದಲ್ಲಾಗಿದ್ದರೇ ರಸ್ತೆ ಸಂಚಾರಿಗಳಿಗೂ ಹಾನಿಯಾಗುವ ಸಂಭವವಿತ್ತು.

ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬಂದಿಗಳು ಸ್ಥಳೀಯರೊಂದಿಗೆ ಮರಗಳನ್ನು ತೆರವು ಮಾಡಿ, ಹೊಸ ಟ್ರಾನ್ಸ್‌ ಫಾರ್ಮರ್‌ನ್ನು ಅಳವಡಿಸಿ, ವಿದ್ಯುತ್‌ ಕಂಬಗಳನ್ನು ಬದಲಿಸಲಾಯಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ರಸ್ತೆಯನ್ನು ತುರ್ತು ಕಾಮಗಾರಿಯ ಪ್ರಯುಕ್ತ ದಿನದ ಮಟ್ಟಿಗೆ ಸಂಪೂರ್ಣ ಬಂದ್‌ ಮಾಡಲಾಗಿದೆ.

ಅಂಗರಗುಡ್ಡೆ: ಮನೆಗೆ ಹಾನಿ

ಅಂಗರಗುಡ್ಡೆ: ಶಿಮಂತೂರು ಗ್ರಾಮದ ಅಂಗರಗುಡ್ಡೆ ನಾಗೇಶ್‌ ದಾಸ್‌ ಅವರ ಮನೆಗೆ ಬುಧವಾರ ರಾತ್ರಿ ಗಾಳಿ, ಮಳೆಗೆ ಅಡಿಕೆ ಮರ ಮನೆಯ ಮೇಲೆ ಬಿದ್ದು ಹಾನಿಯಾಗಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯ ಜೀವನ್‌ ಶೆಟ್ಟಿ, ಗ್ರಾಮ ಕರಣಿಕ ಸುನಿಲ್ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಪಾಯಕಾರಿ ಮರ ತೆರವು

ಹಳೆಯಂಗಡಿ: ಇಲ್ಲಿನ ಹಳೆಯಂಗಡಿ ಬಳಿಯ ಲೈಟ್‌ಹೌಸ್‌ನ ಪಡುಪಣಂಬೂರು ಗ್ರಾ.ಪಂ.ನ ಅಂಗಡಿ ಕೋಣೆಗಳ ಪಕ್ಕದ ಅಪಾಯದ ಬೃಹತ್‌ ಮರವೊಂದು ಬೀಳುವ ಸ್ಥಿತಿಯಲ್ಲಿ ಅಪಾಯ ಮುನ್ಸೂಚನೆಯಿದ್ದ ಕಾರಣ ಅಂಗಡಿ ಮಾಲಕರು ಪಂಚಾಯತ್‌ನಿಂದ ಅನುಮತಿ ಪಡೆದುಕೊಂಡು ತೆರವುಗೊಳಿಸಿದರು.

ಮನೆಗಳಿಗೆ ಲಕ್ಷಾಂತರ ರೂ. ಹಾನಿ

ಮೂಲ್ಕಿ: ಬುಧವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಯಿಂದಾಗಿ ಅತಿಕಾರಿಬೆಟ್ಟು ಗ್ರಾಮದ ಕಕ್ವ ಬಳಿಯ ರಮಣಿ ಕೋಟ್ಯಾನ್‌ ಎಂಬುವವರ ಮನೆಯ ಮೇಲೆ ಈಚಲು ಮರ ಬಿದ್ದು ಮನೆಗೆ ಹಾನಿ ಉಂಟಾಗಿದೆ. ಇದೇ ಗ್ರಾಮದ ರಾಜಶೇಖರ ಶೆಟ್ಟಿ ಅವರ ಮನೆಯ ಮೇಲೆ ಮರ ಉರುಳಿದ್ದು, ಮಾಡಿನ ಹಂಚುಗಳು ಗಾಳಿಗೆ ಹಾರಿ ಹೋಗಿವೆ. ಶಿಮಂತೂರಿನ ನಾಗೇಶ್‌ದಾಸ್‌ ಮನೆಯ ಮಾಡಿಗೆ ಮರದ ಗೆಲ್ಲು ,ಅಡಿಕೆ ಮರ ಬಿದ್ದು ಹಾನಿ ಕುರಿತು ಮೂಲ್ಕಿ ತಹಶಿಲ್ದಾರ್‌ ಕಚೇರಿಯಲ್ಲಿ ವರದಿಯಾಗಿದೆ. ನಾಡ ಕಚೇರಿಯ ತಹಶಿಲ್ದಾರ್‌ ಮಾಣಿಕ್ಯಂ, ನ.ಪಂ.ಮುಖ್ಯಾಧಿಕಾರಿ ಚಂದ್ರ ಪೂಜಾರಿ, ಪೊಲೀಸ್‌ ಇನ್‌ಸ್ಪೆಕ್ಟರ್‌ ಅನಂತ ಪದ್ಮನಾಭ, ಅತಿಕಾರಿಬೆಟ್ಟು ಪಿಡಿಒ ರವಿ, ಕಿಲ್ಪಾಡಿ ಪಿಡಿಒ ಹರಿಶ್ಚಂದ್ರ ಹಾನಿ ವರದಿ ಪಡೆಯುತ್ತಿದ್ದಾರೆ.

ವಿದ್ಯುತ್‌ ಪರಿವರ್ತಕ್ಕೆ ಮರ ಬಿದ್ದು ಹಾನಿ

ಕಿನ್ನಿಗೋಳಿ: ಗುರುವಾರ ಬೆಳಗ್ಗೆ ಗಾಳಿ ಮಳೆಗೆ ಮೆಸ್ಕಾಂ ವ್ಯಾಪ್ತಿಯ ಎಸ್‌. ಕೋಡಿ ಕಂಬಳಬೆಟ್ಟು ಪರಿಸರದಲ್ಲಿ ಮರ ಬಿದ್ದು ವಿದ್ಯುತ್‌ ಪರಿವರ್ತಕ ಸಹಿತ ಎಂಟು ವಿದ್ಯುತ್‌ ಕಂಬಗಳು ಬಿದ್ದು ಮೆಸ್ಕಾಂ ಇಲಾಖೆಗೆ ಲಕ್ಷಾಂತರ ನಷ್ಟ ಉಂಟಾಗಿದೆ. ಸುಮಾರು 50 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು.

ಪಂಜ ನಾಲ್ಕು ಮನೆಗಳಿಗೆ ಹಾನಿ

ಕೆಮ್ರಾಲ್: ಗ್ರಾ.ಪಂ. ವ್ಯಾಪ್ತಿಯ ಪಂಜದಲ್ಲಿ ಗುರುವಾರ ಬೀಸಿದ ಗಾಳಿ-ಮಳೆಗೆ ಪಂಜ ನಿವಾಸಿ ಲೀಲಾ, ಸಂಜೀವ ಗುರಿಕಾರ, ಜಯಂತ ಪೂಜಾರಿ, ವೀರಪ್ಪ ಅವರ ನಾಲ್ಕು ಮನೆಗಳ ಹೆಂಚು, ತಗಡು ಚಪ್ಪರ, ಪ್ಲಾಸ್ಟಿಕ್‌ ಹಾಳೆ ಹಾರಿ ಹೋಗಿ ನಷ್ಟ ಉಂಟಾಗಿದೆ. ಸ್ಥಳಕ್ಕೆ ಗ್ರಾ. ಪಂ. ಸದಸ್ಯರಾದ ಸುರೇಶ್‌ ಪಂಜ, ಗ್ರಾಮಕರಣಿಕ ಸಂತೋಷ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಉಲ್ಲಂಜೆ: ಮನೆಗೆ ಹಾನಿ

ಕಿನ್ನಿಗೋಳಿ: ಸುರಿದ ಭಾರೀ ಗಾಳಿ ಮಳೆಗೆ ಉಲ್ಲಂಜೆ ನಿವಾಸಿ ವನಜಾ ಮೂಲ್ಯ ಅವರ ಮನೆಯ ಮೇಲ್ಛಾವಣಿಯ ಹಂಚು ಹಾರಿಹೋಗಿದ್ದು ಸುಮಾರು 10 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮಕರಣಿಕ ಸುಜಿತ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಎಡಪದವು: ಅಪಾರ ಹಾನಿ

ಎಡಪದವು: ಕುಪ್ಪೆಪದವು ಗ್ರಾ. ಪಂ. ಆಧ್ಯಕ್ಷೆ ಲೀಲಾವತಿ ಅವರ ಮನೆ ಬುಧವಾರ ರಾತ್ರಿ ಸುರಿದ ಭಾರೀ ಮಳೆ-ಗಾಳಿಗೆ ಭಾಗಶಃ ಕುಸಿದು ಅಪಾರ ನಷ್ಟಗೊಂಡಿದೆ. ಜಿ.ಪಂ. ಸದಸ್ಯ ಜನಾರ್ದನ ಗೌಡ, ಪಂಚಾಯತ್‌ ಪಿಡಿಒ ಸವಿತಾ ಮಂದೋಳಿಕರ್‌. ಜಿ.ಪಂ. ಎಂಜಿನಿಯರ್‌ ವಿಶ್ವನಾಥ, ಗ್ರಾ. ಕಾ.ದೇವರಾಯ, ಪಂ. ಸದಸ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪಡುಪೆರಾರ: ಮನೆಗೆ ಹಾನಿ

ಪಡುಪೆರಾ: ವ್ಯಾಪ್ತಿಯ ಕಳಸಿಬೆಟ್ಟು ಎಂಬಲ್ಲಿಯ ಸೀತಾಬಾಯಿ ಅವರ ಮನೆ ಗಾಳಿ -ಮಳೆಗೆ ಮನೆಯ ಹೆಂಚುಗಳು ಹಾರಿಹೋಗಿದೆ. ಕುಳವೂರು ಗ್ರಾಮದ ಬಳ್ಳಾಜೆ ಎಂಬಲ್ಲಿ ಆಪ್ಪಿ ಎಂಬವರ ಮನೆಯ ಮೇಲೆ ಬೃಹತ್‌ ಮರ ಉರುಳಿಬಿದ್ದು, ಮನೆಗೆ ಹಾನಿಯಾಗಿದೆ.

ಮರ ಉರುಳಿ ಮನಗೆ ಹಾನಿ

ಮುತ್ತೂರು ಪಂ. ವ್ಯಾಪ್ತಿಯ ಬಳ್ಳಾಜೆ ರತ್ನಗಿರಿ ಎಂಬಲ್ಲಿ ಲಲಿತಾ ಪೂಜಾರಿ ಎಂಬವರ ಮನೆಯ ಹಿಂಭಾಗದಲ್ಲಿದ್ದ ಮರ ಉರುಳಿಬಿದ್ದು, ಮನೆಯ ಹಿಂಭಾಗಕ್ಕೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next