Advertisement

ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ಮನಸೂರೆಗೊಂಡ ಕಂಬಳೋತ್ಸವ

04:41 AM Jan 14, 2019 | |

ಮಹಾನಗರ : ನಗರದ ಬಂಗ್ರ ಕೂಳೂರು ಗೋಲ್ಡ್‌ಫಿಂಚ್ ಸಿಟಿಯಲ್ಲಿ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ರವಿವಾರ ಆರಂಭಗೊಂಡ ಎರಡನೇ ವರ್ಷದ ಹೊನಲು ಬೆಳಕಿನ ಮಂಗಳೂರು ಕಂಬಳೋತ್ಸವ ಜನಾಕರ್ಷಣೆಯ ಹಬ್ಬವಾಗಿ ಮನಸೂರೆಗೊಂಡಿತು.

Advertisement

ತಲಪಾಡಿ ದೊಡ್ಡಮನೆ ಕ್ಯಾ| ಬೃಜೇಶ್‌ ಚೌಟ ಅವರ ಸಾರಥ್ಯದಲ್ಲಿ ಗೌರವಾಧ್ಯಕ್ಷ ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಕೆ. ಪ್ರಕಾಶ್‌ ಶೆಟ್ಟಿ ಅವರ ಗೋಲ್ಡ್‌ಫಿಂಚ್ ಸಿಟಿಯಲ್ಲಿ ರವಿವಾರ ಬೆಳಗ್ಗೆ 9.30 ಗಂಟೆಗೆ ಕಂಬಳೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕಂಬಳೋತ್ಸವನ್ನು ಉದ್ಘಾಟಿಸಿದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಆಧ್ಯಕ್ಷ ಚಿತ್ತರಂಜನ್‌ ಅವರು ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ತುಳುನಾಡಿನ ಜಾನಪದ ಕ್ರೀಡೆ ಕಂಬಳ ಕಳೆದ ಎರಡು ವರ್ಷಗಳಿಂದ ಕ್ಯಾ| ಬ್ರಿಜೇಶ್‌ ಚೌಟ ಅವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ಆಯೋಜನೆಗೊಳ್ಳುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳು ಈ ಕಂಬಳದಲ್ಲಿ ಭಾಗವಹಿಸುತ್ತಿವೆ ಎಂದು ಶುಭ ಹಾರೈಸಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೃಷಿ ಬದುಕಿನ ಭಾಗವಾಗಿದ್ದ ಕಂಬಳ ಇಂದು ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಕಂಬಳಕ್ಕೆ ತಡೆಯುಂಟು ಮಾಡುವ ಪ್ರಯತ್ನಗಳು ನಡೆದರೂ ಅದನ್ನು ಎದುರಿಸಿ ತುಳುನಾಡಿನ ಜಾನಪದ ಕ್ರೀಡೆಯನ್ನು ಉಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು. ಕ್ಯಾ| ಬೃಜೇಶ್‌ ಚೌಟ ಅವರ ನೇತೃತ್ವದಲ್ಲಿ ಮಂಗಳೂರು ಕಂಬಳ್ಳೋತ್ಸವ ಅತ್ಯಂತ ಯಶಸ್ವಿಯಾಗಿ ಆಯೋಜನೆಗೊಳ್ಳುತ್ತಿದೆ ಎಂದವರು ಅಭಿನಂದಿಸಿದರು.

ನೂರಕ್ಕೂ ಅಧಿಕ ಜೋಡಿಗಳು
ಅವಿಭಜಿತ ದಕ್ಷಿಣ ಕನ್ನಡ ಸಹಿತ ವಿವಿಧೆಡೆಗಳಿಂದ ನೇಗಿಲು ಹಿರಿಯ ಮತ್ತು ಕಿರಿಯ, ಹಗ್ಗ ಹಿರಿಯ ಮತ್ತು ಕಿರಿಯ, ಕನೆ ಹಲಗೆ, ಅಡ್ಡ ಹಲಗೆ ಸೇರಿ ವಿವಿಧ ವಿಭಾಗಗಳಲ್ಲಿ 100ಕ್ಕೂ ಅಧಿಕ ಕಂಬಳ ಕೋಣಗಳ ಜೋಡಿಗಳು ಭಾಗವಹಿಸಿದ್ದವು.

Advertisement

ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿ ಕೊಂಡಿರುವ ಬಂಗ್ರಕುಳೂರಿನ ಗೋಲ್ಡ್‌ಪಿಂಚ್ ಸಿಟಿಯ ಅತ್ಯಂತ ವಿಶಾಲ ಪ್ರದೇಶದಲ್ಲಿ ರಾಮ -ಲಕ್ಷ್ಮಣ ಹೆಸರಿನಲ್ಲಿ ಜೋಡುಕರೆಯನ್ನು ಸುವ್ಯವಸ್ಥಿತವಾಗಿ ಮತ್ತು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ| ಬೃಜೇಶ್‌ ಚೌಟ ಅವರು ಕೋಣಗಳ ಯಜಮಾನರುಗಳನ್ನು ವಿದ್ಯುಕ್ತವಾಗಿ ಸ್ವಾಗತಿಸಿದರು.

ಮೇಯರ್‌ ಭಾಸ್ಕರ್‌, ಕುಳೂರು ಬೀಡಿನ ವಜ್ರ ಕರ್ಣಂತಾಯ ಬಳ್ಳಾಲ್‌, ಬಾರ್ಕೂರು ಕಚ್ಚಾರು ಮಾಲ್ತಿದೇವಿ ದೇವಸ್ಥಾನದ ಉಪಾಧ್ಯಕ್ಷ ಶಿವಪ್ಪ ನಂತೂರು, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್‌.ಶೆಟ್ಟಿ , ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಗುಣಪಾಲ ಕಡಂಬ ಅತಿಥಿಯಾಗಿದ್ದರು. ಜಿಲ್ಲಾ ಬಿಜೆಪಿ ಕೋಶಾಧಿಕಾರಿ ಸಂಜಯ ಪ್ರಭು, ಕಂಬಳ ಸಮಿತಿಯ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

ಆಕರ್ಷಕ ಬಹುಮಾನ 
ಕನೆ ಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಪ್ರಥಮ ಎರಡು ಪವನು, ದ್ವಿತೀಯ ಒಂದು ಪವನು, ಹಗ್ಗ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥ‌ಮ ಎರಡು ಪವನು, ದ್ವಿತೀಯ ಒಂದು ಪವನು, ಅಡ್ಡ ಹಲಗೆ ಹಗ್ಗ, ನೇಗಿಲು, ಕಿರಿಯ ವಿಭಾಗದಲ್ಲಿ ಪ್ರಥಮ ಒಂದು ಪವನು, ದ್ವಿತೀಯ ಅರ್ಧ ಪವನು ಚಿನ್ನ ಬಹುಮಾನ ನೀಡಲಾಗುತ್ತಿದೆ. ನಿಖರ ಫ‌ಲಿತಾಂಶ ಪಡೆಯಲು ಲೇಸರ್‌ ಬೀಂ ನೆಟ್ ವರ್ಕ್‌ ಸಿಸ್ಟಂ, ವೀಡಿಯೋ ದಾಖಲೀಕಣ, ಚಿತ್ರೀಕರಣ ವ್ಯವಸ್ಥೆ ಮಾಡಲಾಗಿತ್ತು.

ಗತ್ತು…ಗಮ್ಮತು
ಸಿಂಗಾರಗೊಂಡ ಕೋಣಗಳ ಗತ್ತು, ಒಮ್ಮೊಮ್ಮೆ ತುಂಟಾಟಕ್ಕೆ ಪ್ರಯತ್ನ, ಗದರಿಸಿ ನಿಯಂತ್ರಿಸುವ ಕೋಣಗಳ ಪರಿಚಾರಕರು, ಕಹಳೆಯ ನಿನಾದ, ಕರೆಯಲ್ಲಿ ಧಾವಿಸಿ ಬರುವ ಕೋಣಗಳನ್ನು ಗಂತಿನಲ್ಲಿ ಹೆಸರೆತ್ತಿ ಹುರಿದುಂಬಿಸಿ ಕರೆಯುವ ಕೋಣಗಳ ಮೇಲ್ವಿಚಾರಕರು… ಹೀಗೆ ಅಲ್ಲಿ ನೋಡುಗರ ಪಾಲಿಗೆ ಅಲ್ಲಿ ಒಂದು ಗಮ್ಮತ್ತಿನ ವಾತಾವರಣ ಸೃಷ್ಟಿಯಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ನಗರ ನಿವಾಸಿಗಳು ಭೇಟಿ ನೀಡಿ ಕಂಬಳವನ್ನು ವೀಕ್ಷಿಸಿ ಆನಂದಿಸಿದರು. ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next