Advertisement

ಮಂಗಳೂರು: ಚಾಲಕನ ಕೊಲೆ ಪ್ರಕರಣ; ನಾಲ್ವರನ್ನು ಬಂಧಿಸಿದ ಪೊಲೀಸರು

03:19 PM Apr 19, 2023 | Team Udayavani |

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ನಲ್ಲಿರುವ ಪುಟ್ಬಾಲ್ ಮೈದಾನದ ಬಳಿ ಮಲಗಿದ್ದ ಕಾರು ಚಾಲಕ ಜನಾರ್ದನ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು‌ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತರನ್ನು ಕೇರಳ ಮೂಲದ ಪ್ರಶಾಂತ್ (40), ಕುಶಲನಗರದ ಜಿ.ಕೆ ರವಿಕುಮಾರ್ @ ನಂದೀಶ (38), ಕೊಣಾಜೆಯ ವಿಜಯ ಕುಟಿನ್ಹಾ (28) ,ಬಂಟ್ವಾಳದ ಶರತ್.ವಿ (36) ಎಂದು ಗುರುತಿಸಲಾಗಿದೆ.

ಮೊಬೈಲ್ ಸುಲಿಗೆ ಉದ್ದೇಶದಿಂದ ಕೊಲೆ: ಮಂಗಳವಾರ (ಏ.18 ರಂದು) ಸಂಜೆ ಸ್ಟೇಟ್ ಬ್ಯಾಂಕ್ ನಲ್ಲಿರುವ ಪುಟ್ಬಾಲ್ ಮೈದಾನದ ಬಳಿ ಮಲಗಿದ್ದ ಜನಾರ್ದನ ಪೂಜಾರಿ ಅವರ ಹತ್ತಿರ ಬಂದು ಆರೋಪಿಗಳು ಜನಾರ್ದನ ಅವರ ಮೊಬೈಲ್‌ ಕೊಡುವಂತೆ ಹೇಳಿದ್ದಾರೆ. ಇದೇ ಮಾತಿಗೆ ಆರೋಪಿಗಳ ಜೊತೆ ಘರ್ಷಣೆ ಉಂಟಾಗಿದೆ. ಈ ವೇಳೆ ಒಬ್ಬಾತ ತನ್ನ ಕಾಲಿನಿಂದ ಜನಾರ್ದನ ಪೂಜಾರಿ ಅವರ ಎದೆಗೆ ಒದ್ದಾಗ ಅವರು ಸುಮಾರು 6 ಅಡಿ ಮೇಲಿನಿಂದ ಕೆಳಗಡೆ ಬಿದ್ದಿದ್ದಾರೆ. ಬಳಿಕ ಪುನಃ ನಾಲ್ಕು ಜನ ಆರೋಪಿಗಳು ಜನಾರ್ದನ ಪೂಜಾರಿ ಅವರು ಬಿದ್ದಿದ್ದಲ್ಲಿಗೆ ಹೋಗಿ, ತಮ್ಮ ಕೈಗಳಿಂದ ಜನಾರ್ದನ ಪೂಜಾರಿ ಅವರಿಗೆ ಹಲ್ಲೆ ಮಾಡಿ ತಮ್ಮ ಕಾಲಿನಿಂದ ತುಳಿದು ಕೊಲೆಯನ್ನು ಮಾಡಿದ್ದಾರೆ. ಈ ಬಗ್ಗೆ ಜನಾರ್ದನ ಪೂಜಾರಿ ರವರ ಅಣ್ಣ ಉಮೇಶ್ ಪೂಜಾರಿ ದೂರು ನೀಡಿದ್ದಾರೆ.

ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಸುಲಿಗೆ ಉದ್ದೇಶದಿಂದಲೇ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳ ಕ್ರಿಮಿನಲ್‌ ಹಿನ್ನೆಲೆ: ಬಂಧಿತರಾಗಿರುವ ಆರೋಪಿಗಳ ಮೇಲೆ ಈಗಾಗಲೇ ಹಲವು ಕ್ರಿಮಿನಲ್‌ ಕೇಸ್‌ ದಾಖಲಾಗಿದ್ದು,ಜಿ.ಕೆ. ರವಿಕುಮಾರ್  ಎಂಬಾತನ ಮೇಲೆ 2009 ರಲ್ಲಿ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಶರತ್ ಎಂಬಾತನ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯಲ್ಲಿ 2007 ರಲ್ಲಿ ಮನೆ ಕಳವು ಪ್ರಕರಣ, ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ 2022 ರಲ್ಲಿ ಸುಲಿಗೆ ಪ್ರಕರಣ ದಾಖಲಾಗಿದೆ. ಈತ ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾಗಿದ್ದ.  ಆರೋಪಿ ವಿಜಯ ಕುಟಿನ್ಹಾ ಎಂಬಾತನ ಮೇಲೆ ಕೋಣಾಜೆ ಪೊಲೀಸ್‌ ಠಾಣೆಯಲ್ಲಿ 2022 ರಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next