Advertisement

ಮಂಗಳೂರು:ಭಾಸ್ಕರ್‌ ಮೇಯರ್‌, ಮಹಮ್ಮದ್‌ ಉಪಮೇಯರ್‌

10:04 AM Mar 09, 2018 | Team Udayavani |

ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆಯ 31ನೇ ಮೇಯರ್‌ ಆಗಿ ಕಾಂಗ್ರೆಸ್‌ನ ಭಾಸ್ಕರ್‌ ಕೆ. ಹಾಗೂ ಉಪ ಮೇಯರ್‌ ಆಗಿ ಮಹಮ್ಮದ್‌ ಕುಂಜತ್ತಬೈಲು ಆಯ್ಕೆ ಯಾಗಿ ದ್ದಾರೆ. ನೂತನ ಮೇಯರ್‌, ಉಪ ಮೇಯರ್‌ ಅಧಿಕಾರಾವಧಿ 2019 ಮಾ. 8ರ ವರೆಗೆ ಇರಲಿದ್ದು, ಕಾಂಗ್ರೆಸ್‌ ಆಡಳಿತದಲ್ಲಿನ ಕೊನೆಯ ಅವಧಿಯ ಮೇಯರ್‌, ಉಪ ಮೇಯರ್‌ ಹುದ್ದೆ ಇದಾಗಿದೆ.

Advertisement

ಪಾಲಿಕೆ ಪರಿಷತ್‌ 20ನೇ ಅವಧಿಯ ಮೇಯರ್‌ ಹಾಗೂ ಉಪ ಮೇಯರ್‌ ಸ್ಥಾನಕ್ಕೆ ಗುರು ವಾರ ಚುನಾವಣೆ ನಡೆಯಿತು. ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಭಾಸ್ಕರ್‌ ಕೆ. ಹಾಗೂ ಬಿಜೆಪಿಯಿಂದ ಸುರೇಂದ್ರ ಅವರು ಸ್ಪರ್ಧಿಸಿದ್ದರು. ಭಾಸ್ಕರ್‌ ಅವರು ಸುರೇಂದ್ರ ವಿರುದ್ಧ 18 ಮತ ಗಳ (ಕೈ ಎತ್ತುವ ಮೂಲಕ) ಅಂತರ ದಿಂದ ಜಯ ಸಾಧಿಸಿ ಮೇಯರ್‌ ಆಗಿ ಚುನಾಯಿತರಾದರು.
60 ಸದಸ್ಯ ಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಓರ್ವ ಸಂಸದ, ಇಬ್ಬರು ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್‌ ಸದಸ್ಯರು ಸಹಿತ ಒಟ್ಟು 65 ಮಂದಿಗೆ ಮತದಾನ ಮಾಡಲು ಅವಕಾಶವಿದೆ. ಇದರಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಮೊದಿನ್‌ ಬಾವಾ, ವಿಧಾನ ಪರಿಷತ್‌ ಸದಸ್ಯರಾದ ಕ್ಯಾ| ಗಣೇಶ್‌ ಕಾರ್ಣಿಕ್‌, ಬಿಜೆಪಿ ಸದಸ್ಯ ಹರೀಶ್‌ ಶೆಟ್ಟಿ ಗೈರು ಹಾಜರಾಗಿದ್ದರು. ವಿಧಾನಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಹಾಗೂ ಶಾಸಕ ಜೆ.ಆರ್‌. ಲೋಬೋ ಮತದಾನ ಮಾಡಿದರು.

ಭಾಸ್ಕರ್‌ ಪರವಾಗಿ ಒಟ್ಟು 37 ಮತಗಳು ಚಲಾವಣೆಯಾದರೆ, ಸುರೇಂದ್ರ ಪರವಾಗಿ 19 ಮತಗಳು ಚಲಾವಣೆಯಾದವು. ಒಟ್ಟು 60 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌-35, ಬಿಜೆಪಿ-20, ಜೆಡಿಎಸ್‌-2, ಎಸ್‌ಡಿಪಿಐ-1, ಸಿಪಿಎಂ-1 ಹಾಗೂ ಓರ್ವ ಪಕ್ಷೇತರ ಸದಸ್ಯ ರಿದ್ದಾರೆ. ಜೆಡಿಎಸ್‌ ಸದಸ್ಯ ರಾದ ಅಬ್ದುಲ್‌ ಅಝೀಝ್ ಕುದ್ರೋಳಿ, ರಮೀಝಾ ಬಾನು, ಸಿಪಿಎಂನ ದಯಾನಂದ ಶೆಟ್ಟಿ, ಎಸ್‌ಡಿಪಿಐನ ಅಯಾಝ್ ಹಾಗೂ ಪಕ್ಷೇತರ ಅಭ್ಯರ್ಥಿ ರೇವತಿ ಅವರು ತಟಸ್ಥರಾಗಿದ್ದರು.

ಉಪ ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ ನಿಂದ ಮಹಮ್ಮದ್‌ ಹಾಗೂ ಬಿಜೆಪಿಯಿಂದ ಮೀರಾ ಕರ್ಕೇರ ನಾಮಪತ್ರ ಸಲ್ಲಿಸಿದ್ದರು. ಮಹಮ್ಮದ್‌ ಅವರ ಪರವಾಗಿ 37 ಮತಗಳು ಹಾಗೂ ಮೀರಾ ಕರ್ಕೇರ ಪರವಾಗಿ 19 ಮತಗಳು ಚಲಾವಣೆಯಾದವು. ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆಯ ಬಳಿಕ 4 ಸ್ಥಾಯೀ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆ ನಡೆಯಿತು. 

3ನೇ ಅವಧಿಯಲ್ಲಿ ಮೇಯರ್‌
ನೂತನ ಮೇಯರ್‌ ಭಾಸ್ಕರ್‌ ಅವರು ಪದವು ವಾರ್ಡ್‌ ಸದಸ್ಯ ರಾಗಿದ್ದು, ಪಾಲಿಕೆಗೆ 3ನೇ ಅವಧಿಗೆ ಆಯ್ಕೆಯಾದವರು. ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರುವ ಅವರು ವೃತ್ತಿಯಲ್ಲಿ ಉದ್ಯಮಿ. ಈ ಹಿಂದೆ ನಗರ ಯೋಜನೆ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಎನ್‌ಎಂಪಿಟಿ ಟ್ರಸ್ಟಿ, ರಾಜ್ಯ ಆಹಾರ ನಿಗಮದ ಸಲಹಾ ಸಮಿತಿ ಸದಸ್ಯರಾಗಿರುವ ಭಾಸ್ಕರ ಕೆ. ಅವರು 20 ವರ್ಷಗಳಿಂದ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸರಕಾರದಿಂದ ನಿಯೋಜಿತ ಏಕೈಕ ಸದಸ್ಯರಾಗಿದ್ದಾರೆ. ಕಾಂಗ್ರೆಸ್‌ನ ರಾಜ್ಯ ಹಾಗೂ ಜಿಲ್ಲಾ ಯುವ ಕಾಂಗ್ರೆಸ್‌ನಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ತಮ್ಮ ಅವಧಿಯಲ್ಲಿ 60 ವಾರ್ಡ್‌ ಗಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಯನ್ನು ಅರಿತು ಪರಿಹರಿಸುವ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next