Advertisement

ಮಂಗಳೂರು: ನಗರದ ನಡುವೆಯೇ ಸೃಷ್ಟಿಯಾಗಿದೆ ದಟ್ಟ ಅರಣ್ಯ!

04:04 PM May 22, 2024 | Team Udayavani |

ಮಹಾನಗರ: ಮಹಾ ನಗರದ ನಟ್ಟ ನಡು ವೆಯೇ ದಟ್ಟ ಅರಣ್ಯವೊಂದು ಸೃಷ್ಟಿಯಾಗಿದೆ. ಕೇವಲ ಎರಡು ವರ್ಷದ ಅವಧಿಯಲ್ಲಿ 2000 ಮರಗಳ ಕಾಡೊಂದು ಜೀವ ತಳೆದಿದೆ. ಪ್ರಾಣಿ, ಪಕ್ಷಿ, ಜೀವಿಗಳಿಗೆ ಆಶ್ರಯ ತಾಣವಾಗುವುದರೊಂದಿಗೆ ನಗರದ “ಹಸುರು ಪರಿಸರ’ ಉಳಿಸುವಲ್ಲಿಯೂ ಕೊಡುಗೆ ನೀಡಿದ ಈ ಕಾಡು ಇರುವುದು ನಗರದ ಪದವು ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ. ಈ ದಟ್ಟ ಕಾಡಿನ ಹಿಂದಿರುವುದು ಮಿಯಾ ವಾಕಿ ಪವಾಡ.

Advertisement

ಕೆಪಿಟಿ ಮತ್ತು ನಂತೂರು ಜಂಕ್ಷನ್‌ಗಳ ನಡುವಿನ ಪದವು ಬಸ್‌ ತಂಗುದಾಣ ಬಳಿಯ 78 ಸೆಂಟ್ಸ್‌ ಜಾಗದಲ್ಲಿ ಈ ಅರಣ್ಯ ನಿರ್ಮಾಣವಾಗಿದೆ. ಕೇವಲ ಎರಡು ವರ್ಷದ ಹಿಂದೆ ಈ ಜಾಗದಲ್ಲಿ ತ್ಯಾಜ್ಯ ಕಸಕಡ್ಡಿಗಳನ್ನು ಎಸೆಯಲಾಗುತ್ತಿತ್ತು. 2022ರಲ್ಲಿ ಬಯೋಕಾನ್‌ ಸಂಸ್ಥೆ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ಗಿಡಗಳನ್ನು ನೆಡ ನೆಟ್ಟು ಕಾಡು ಬೆಳೆಸುವ ಯೋಜನೆ ರೂಪು ತಳೆದಾಗ ಆಯ್ಕೆಯಾಗಿದ್ದು, ಈ ಜಾಗ. ಅದರ ಜವಾಬ್ದಾರಿ ಯನ್ನು ವಹಿಸಿಕೊಂಡದ್ದು ಪರಿಸರ ಪ್ರೇಮಿ ಜೀತ್‌ ಮಿಲನ್‌ ರೋಚ್‌ ಮತ್ತು ತಂಡ.

ಅರಣ್ಯ ನಿರ್ಮಾಣಕ್ಕಾಗಿ ಟನ್‌ ಗಟ್ಟಲೆ ತ್ಯಾಜ್ಯವನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ಬಳಿಕ ಗಿಡಗಳಿಗೆ ಯಾವುದೇ ಹಾನಿಯಾಗದಂತೆ ತಡೆ ಬೇಲಿಗಳನ್ನು ನಿರ್ಮಿಸಿ ಅರಣ್ಯವನ್ನು ಸಂರಕ್ಷಿಸುವ ಕೆಲಸವನ್ನೂ ಜೀತ್‌ ಅವರ
ತಂಡ ಮಾಡಿತ್ತು. ಜಪಾನ್‌ನಲ್ಲಿ ನಗರದ ನಡುವೆ ದಟ್ಟ ಕಾಡು ನಿರ್ಮಿಸುವ “ಡಾ| ಅಕಿರಾ ಮಿಯಾವಾಕಿ’ ಅವರ ಪರಿಕಲ್ಪನೆಯಂತೆ ಗಿಡಗ ಳನ್ನು ಬೆಳೆಸಲಾಯಿತು. ನಗರದ ತ್ಯಾಜ್ಯಗಳನ್ನೇ ಗೊಬ್ಬರವಾಗಿಸಿ ಅವುಗಳಿಗೆ ಉಣಿಸಲಾಗಿದೆ.

ಮರಗಳಿಂದ ಉದುರುವ ತರಗೆಲೆಗಳಿಂದಾಗಿ ನೆಲವೂ ಫಲವತ್ತಾಗಿದೆ. ದಿನಕ್ಕೆ 8,000 ಲೀಟರ್‌ ನೀರನ್ನೂ ನೀಡಲಾಗುತ್ತಿದೆ. ಹೀಗೆ ಇಲ್ಲೊಂದು ದಟ್ಟ ಕಾಡಿನ ನಿರ್ಮಾಣವಾಗಿದೆ. “ಮಿಯಾವಾಕಿ ಅರಣ’ ಪರಿಕಲ್ಪನೆ ಯಡಿ ನಗರದಲ್ಲಿ ಈಗಾಗಲೇ ಅಲ್ಲಲ್ಲಿಕಿರು ಅರಣ್ಯಗಳು ನಿರ್ಮಾಣವಾಗಿದೆ.

ಕೊಟ್ಟಾರದ ಜಿಲ್ಲಾ ಪಂಚಾಯತ್‌ ಕಚೇರಿ ಬಳಿ, ಮಂಗಳಾದೇವಿಯ ರಾಮಕೃಷ್ಣ ಮಠ, ಪಡೀಲ್‌ ರೈಲ್ವೇ ಅಂಡರ್‌ ಪಾಸ್‌ ಬಳಿ, ಸುಲ್ತಾನ್‌ ಬತ್ತೇರಿ ರಸ್ತೆ ಹೀಗೆ ವಿವಿಧ ಕಡೆಗಳಲ್ಲಿ ಮಿಯಾವಾಕಿ ಮಾದರಿಯಲ್ಲಿ ಗಿಡಗಳನ್ನು ಬೆಳೆಸಲಾಗಿದೆ. ಪದವಿನ
ಪ್ರದೇಶ ದಟ್ಟ ಅರಣ್ಯವಾಗಿದ್ದು, ನೋಡುಗರ ಮನ ಸೆಳೆಯುತ್ತಿದೆ.

Advertisement

ಅರಣ್ಯದಲ್ಲಿ ಏನೆಲ್ಲಾ ಇವೆ?
ಕಾಡು ಮಾವು, ಹಲಸು, ಹೆಬ್ಬಲಸು, ನೊರೆಕಾಯಿ, ಸೀತಾ ಅಶೋಕ, ಮಹಾಘನಿ, ಶ್ರೀಗಂಧ, ಹೊನ್ನೆ, ಸಂಪಿಗೆ, ಕಾಡು ಬಾದಾಮು, ಪುನರ್ಪುಳಿ, ಅಂಡಿಪುನರ್‌, ಹೊಂಗೆ, ಚೆರಿ, ಬಸವನಪಾದ, ಕದಂಬ, ಅಶ್ವತ್ಥ, ಆಲ, ಬಿದಿರು ಮೊದಲಾದ 150ಕ್ಕೂ ಅಧಿಕ ಜಾತಿಯ ಮರಗಳನ್ನು ಬೆಳೆಸಲಾಗಿದೆ. ಸುಮಾರು 2 ಸಾವಿರಕ್ಕೂ ಅಧಿಕ ಗಿಡಗಳು ಈ ಅರಣ್ಯದಲ್ಲಿದ್ದು, ಪ್ರಸ್ತುತ 10-15 ಅಡಿಗಳಷ್ಟು ಎತ್ತರಕ್ಕೆ ಬೆಳೆದಿವೆ. ಕೆಲವು ವರ್ಷಗಳಲ್ಲಿ ಇವುಗಳು ಹಣ್ಣು ಕೊಡಲು ಆರಂಭ ಮಾಡುತ್ತವೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಗಿಡಗಳನ್ನು ತಂದು ಬೆಳೆಸಲಾಗಿದ್ದು, ಅಳಿವಿನಂಚಿನಲ್ಲಿರುವ ಗಿಡಗಳೂ ಇವೆ ಎನ್ನುತ್ತಾರೆ ಅರಣ್ಯದ ಉಸ್ತುವಾಗಿ ಜೀತ್‌ ಮಿಲನ್‌.

ಪದವು ಬಳಿ ನೆಟ್ಟು ಬೆಳೆಸಿದ  ಮಿಯಾವಾಕಿ ಅರಣ್ಯ ನಾವು ಅಂದು ಕೊಂಡಿರುವುದ ಕ್ಕಿಂತಲೂ ಉತ್ತಮವಾಗಿ ಬಂದಿದೆ. ಕೆಲವು ಗಿಡಗಳು ಹೂಬಿಟ್ಟಿದ್ದು, ಕೆಲವು ಗಿಡಗಳಲ್ಲಿ ಹಣ್ಣುಗಳು ಬೆಳೆದಿವೆ. ಇದರಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಚಿಟ್ಟೆ ಗಳು ಕಂಡು ಬರುತ್ತಿದ್ದು, ಕಪ್ಪೆಗಳ ವಾಸಸ್ಥಾನವೂ ಆಗಿದೆ. ಇನ್ನೊಂದು 2 ವರ್ಷಗಳಲ್ಲಿ ಇನ್ನಷ್ಟು ಸುಂದರವಾಗಿ ಕಂಗೊಳಿಸಲಿದೆ.
ಜೀತ್‌ ಮಿಲನ್‌ ರೋಚ್‌,
ಪರಿಸರ ಪ್ರೇಮಿ

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next