Advertisement

ಜಿಲ್ಲೆಯಲ್ಲಿ 3 ವರ್ಷದಲ್ಲಿ 444 ಬಾಲ್ಯ ವಿವಾಹ

03:06 PM Aug 08, 2019 | Naveen |

ಮಂಡ್ಯ: ಓಡುತ್ತಾ, ಆಡುತ್ತಾ, ನಲಿದಾಡಬೇಕಾದ ಎಷ್ಟೋ ಹೆಣ್ಣು ಮಕ್ಕಳ ಮುಖ ಬಾಲ್ಯದಲ್ಲೇ ಬಾಡಿ ಹೋಗುತ್ತಿದೆ. ಚಿಕ್ಕ ವಯಸ್ಸಿನಲ್ಲೇ ವಿವಾಹದ ಸಂಕೋಲೆಯೊಳಗೆ ಬಂಧಿಸಿ ಸಾಂಸಾರಿಕ ಭಾರವನ್ನು ಹೊರಿಸಲಾಗುತ್ತಿದೆ. ಪ್ರತಿ ವರ್ಷ ನಡೆಯುತ್ತಿರುವ ಬಾಲ್ಯವಿವಾಹಗಳು ನೂರಾರು ಹೆಣ್ಣು ಮಕ್ಕಳ ಬದುಕನ್ನು ಕತ್ತಲೆಗೆ ದೂಡುತ್ತಿದೆ.

Advertisement

ಬಡತನ, ಪೋಷಕರ ನಿರ್ಲಕ್ಷ್ಯ, ಮನೆಯೊಳಗಿನ ವಾತಾವರಣ, ಸಾಮಾಜಿಕ ಪರಿಸರದಲ್ಲಿ ಆಗಿರುವ ಬದಲಾವಣೆಗಳು ಸೇರಿದಂತೆ ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಬಾಲ್ಯ ವಿವಾಹಗಳು ಹೆಚ್ಚುತ್ತಲೇ ಇವೆ. ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ 444 ಬಾಲ್ಯ ವಿವಾಹಗಳು ನಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಈ ಮೊದಲು ಮಂಡ್ಯ ಹಾಗೂ ಶ್ರೀರಂಗಪಟ್ಟಣ ಬಾಲ್ಯ ವಿವಾಹದಲ್ಲಿ ಮುಂಚೂಣಿ ಸ್ಥಾನದಲ್ಲಿದ್ದವು. ಈಗ ಪಾಂಡವಪುರ, ಮಳವಳ್ಳಿ, ಮದ್ದೂರುಗಳಲ್ಲೂ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಅಪ್ತಾಪ್ರ ವಯಸ್ಸಿನ ಹೆಣ್ಣು ಮಕ್ಕಳ ವಿವಾಹವಾಗುವುದನ್ನು ನಿಯಂತ್ರಣಕ್ಕೆ ತರಲು ಇಲಾಖಾ ಅಧಿಕಾರಿಗಳಿಂದಲೂ ಸಾಧ್ಯವಾಗುತ್ತಿಲ್ಲ. ಮದುವೆಯಾದ ಬಾಲಕಿಯ ಭವಿಷ್ಯದ ದೃಷ್ಟಿಯಿಂದ ಕಠಿಣ ಕಾನೂನು ಕ್ರಮ ಜರುಗಿಸಿದ್ದರೂ ಎಲ್ಲರೂ ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ.

ಕಾರಣಗಳು ಹಲವು: ಹೆಣ್ಣು ಹೆತ್ತವರು ಬಹಳ ಬೇಗ ಜವಾಬ್ದಾರಿ ಕಳೆದುಕೊಳ್ಳುವ ಉದ್ದೇಶದಿಂದ ಅವರಿಗೆ ಮದುವೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಬದಲಾದ ಕಾಲದೊಳಗೆ ಹೆಣ್ಣು ಮಕ್ಕಳು ಹಾದಿ ತಪ್ಪಬಹುದೆಂಬ ಭೀತಿಯಿಂದ ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ವಿವಾಹ ನೆರವೇರಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟ, ಸಾಲದ ಕಾರಣಕ್ಕೆ ಹದಿನೈದು-ಹದಿನಾರು ವರ್ಷದ ಬಾಲಕಿಯನ್ನು 35-37 ವರ್ಷದ ವರನಿಗೆ ಕೊಟ್ಟು ಮದುವೆ ಮಾಡುತ್ತಿರುವ ಸಂಗತಿಗಳೂ ಬೆಳಕಿಗೆ ಬಂದಿವೆ.

ಇಂದಿನ ಆಹಾರ ಪದ್ಧತಿಯೂ ಹೆಣ್ಣು ಮಕ್ಕಳು ಬಹಳ ಬೇಗ ಋತುಮತಿಯಾಗು ತ್ತಿರುವುದು, ಆಕೆ ವಾಸಿಸುತ್ತಿರುವ ಪರಿಸರದ ಸುತ್ತ ಆಗಿರುವ ಬದಲಾವಣೆಗಳು, ಪೋಷಕರು ಹೆಣ್ಣು ಮಕ್ಕಳ ಮೇಲೆ ಹೆಚ್ಚು ಕಾಳಜಿ ವಹಿಸದೆ ನಿಯಂತ್ರಣ ಕಳೆದು ಕೊಂಡಿರುವುದು ಹೀಗೆ ಹಲವಾರು ಕಾರಣ ಗಳಿಂದ ಬಾಲ್ಯ ವಿವಾಹಗಳು ನಡೆಯುತ್ತಿವೆ.

Advertisement

ಜಿಲ್ಲೆಯಲ್ಲಿ ನಡೆಯುತ್ತಿರುವ ಅಪ್ತಾಪ್ತರ ವಿವಾಹ ಪ್ರಕರಣಗಳು ಬೆಳಕಿಗೆ ಬರುವುದು ಬಹಳ ಕಡಿಮೆ. ಹೊರಗಿನವರ ಗಮನಕ್ಕೆ ಬಾರದೆ ಎಷ್ಟೋ ಬಾಲಕಿಯರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಮೂಕ ರೋಧನ ಅನುಭವಿಸುತ್ತಿದ್ದಾರೆ. 16 -17 ವಯಸ್ಸಿಗೆ ಮದುವೆಯಾಗಿ ಮಕ್ಕಳ ಜವಾಬ್ದಾರಿ ಹೊರುತ್ತಿದ್ದಾರೆ. ಬಾಲ್ಯದಲ್ಲೇ ವಿವಾಹದ ಸಂಕೋಲೆಗಳಿಗೆ ಸಿಲುಕಿ ಶಿಕ್ಷಣದಿಂದ ವಂಚಿತರಾಗುವುದು ಮಾತ್ರ ವಲ್ಲದೆ ಸ್ವತಂತ್ರ ಆಲೋಚನಾ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ.

ದೇವಸ್ಥಾನಗಳಲ್ಲಿ ವಿವಾಹ: ಸಾಮಾನ್ಯವಾಗಿ ಬಾಲ್ಯ ವಿವಾಹಗಳು ದೇವಸ್ಥಾನಗಳಲ್ಲೇ ಹೆಚ್ಚಾಗಿ ನಡೆಯುತ್ತಿವೆ. ಇಂತಹ ವಿವಾಹಗಳು ಬಹಳ ಗುಪ್ತವಾಗಿ ನಡೆಯುತ್ತವೆ.

ಕೆಲವರು ಅಪ್ತಾಪ್ತ ಹೆಣ್ಣು ಮಕ್ಕಳಿಗೆ ನಡೆಯುತ್ತಿರುವ ವಿವಾಹದ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಪೊಲೀಸರ ಗಮನಕ್ಕೆ ತಂದರೆ, ಮತ್ತೆ ಕೆಲವರು ದ್ವೇಷದ ಕಾರಣದಿಂದಲೂ ಬಾಲ್ಯದಲ್ಲೇ ಮದುವೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡುವುದೂ ಉಂಟು. ಕೆಲವೊಮ್ಮೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲೇ ವಿವಾಹ ಮುಗಿದು ಹೋಗಿರುತ್ತವೆ. ಹಲವು ಸಮಯದಲ್ಲಿ ನಿಗದಿತ ಸಮಯಕ್ಕೆ ತೆರಳಿ ವಿವಾಹಗಳನ್ನು ತಡೆದಿರುವುದೂ ಉಂಟು.

ಜಾಗೃತಿ ಅಗತ್ಯ: ಬಾಲ್ಯ ವಿವಾಹ , ಫೋಕ್ಸೋ ಕಾಯಿದೆ ಸೇರಿದಂತೆ ಹೆಣ್ಣು ಮಕ್ಕಳ ದೌರ್ಜನ್ಯದ ವಿಷಯವಾಗಿ ನಗರ ಪ್ರದೇಶ ಗಳಿಗಿಂತಲೂ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಗ್ರಾಮೀಣ ಪರಿಸರದಲ್ಲಿರುವ ಹೆಣ್ಣು ಮಕ್ಕಳೊಂದಿಗೆ ಸಂವಾದ ನಡೆಸುವುದು, ಬಾಲ್ಯ ವಿವಾಹದಿಂದ ಎದುರಿಸಬೇಕಾದ ಸಮಸ್ಯೆಗಳ ಕುರಿತು ಅರಿವು-ಜಾಗೃತಿ ಮೂಡಿಸುವುದರೊಂದಿಗೆ ಬಾಲ್ಯದಲ್ಲೇ ಕಮರಿಹೋಗುತ್ತಿರುವ ನೂರಾರು ಹೆಣ್ಣು ಮಕ್ಕಳ ಬದುಕಿಗೆ ಹೊಸ ದಾರಿ ತೋರಿಸುವ ಜವಾಬ್ದಾರಿ ಎಲ್ಲರ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next