Advertisement

ಹೊಂದಾಣಿಕೆ ರಾಜಕಾರಣಕೆ ಬಿಜೆಪಿ ತಿಲಾಂಜಲಿ

02:47 PM Apr 13, 2023 | Team Udayavani |

ಮಂಡ್ಯ: ಮಂಡ್ಯ ಎಂದಾಕ್ಷಣ ಬಿಜೆಪಿ-ಜೆಡಿಎಸ್‌ ಒಳ ಒಪ್ಪಂದ ರಾಜಕಾರಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿತ್ತು. ಆದರೆ, ಈ ಬಾರಿ ಎಲ್ಲ ಕ್ಷೇತ್ರಗಳಲ್ಲೂ ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಬಿಜೆಪಿ ಮುಂದಡಿ ಇಟ್ಟಿದೆ.

Advertisement

ಪ್ರತೀ ಚುನಾವಣೆಯಲ್ಲೂ ಅನಿರೀಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುತ್ತಿದ್ದ ಬಿಜೆಪಿ, ಈ ಬಾರಿ ಅಳೆದು ತೂಗಿ ಯಾವುದೇ ಹೊಂದಾಣಿಕೆ ಇಲ್ಲದ ರಾಜಕಾರಣಕ್ಕೆ ಅಡಿಗಲ್ಲು ಹಾಕಿದ್ದು, ನಿರೀಕ್ಷೆಯಂತೆ ಸಂಭಾವ್ಯ ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಿಸಿದೆ.

ಬಿಜೆಪಿ ಕಲಿಗಳಿಗೆ ಟಿಕೆಟ್‌: ನಿರೀಕ್ಷೆಯಂತೆ ಅಳೆದು ತೂಗಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ನಾಗಮಂಗಲ ಕ್ಷೇತ್ರ ಹೊರತುಪಡಿಸಿ ಉಳಿದಂತೆ ಸಂಭಾವ್ಯ ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಮಂಡ್ಯ ಕ್ಷೇತ್ರದಿಂದ ಅಶೋಕ್‌ ಜಯರಾಂ, ಕೆ.ಆರ್‌.ಪೇಟೆಯಿಂದ ಸಚಿವ ಕೆ.ಸಿ.ನಾರಾಯಣಗೌಡ, ಮದ್ದೂರಿನಿಂದ ಎಸ್‌.ಪಿ.ಸ್ವಾಮಿ, ಮಳವಳ್ಳಿಯಿಂದ ಬಿ.ಮುನಿರಾಜು, ಶ್ರೀರಂಗಪಟ್ಟಣದಿಂದ ಇಂಡುವಾಳು ಎಸ್‌.ಸಚ್ಚಿದಾನಂದ, ಮೇಲುಕೋಟೆಯಿಂದ ಡಾ. ಇಂದ್ರೇಶ್‌ ಹಾಗೂ ನಾಗಮಂಗಲ ಕ್ಷೇತ್ರದಿಂದ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಪತ್ನಿ ಸುಧಾ ಶಿವರಾಮೇಗೌಡಗೆ ಟಿಕೆಟ್‌ ನೀಡಲಾಗಿದೆ.

ಐದು ಹೊಸ ಮುಖಗಳಿಗೆ ಟಿಕೆಟ್‌: ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಿಗೆ ಹೊಸ ಮುಖಗಳಿಗೆ ಟಿಕೆಟ್‌ ನೀಡಲಾಗಿದೆ. ಮಂಡ್ಯ ಕ್ಷೇತ್ರದಿಂದ ಅಶೋಕ್‌ ಜಯರಾಂ, ಮದ್ದೂರು ಎಸ್‌.ಪಿ.ಸ್ವಾಮಿ, ಶ್ರೀರಂಗಪಟ್ಟಣ ಎಸ್‌.ಸಚ್ಚಿದಾನಂದ, ಮೇಲುಕೋಟೆ ಡಾ.ಇಂದ್ರೇಶ್‌, ನಾಗಮಂಗಲ ಸುಧಾ ಶಿವರಾಮೇಗೌಡಗೆ ಮಣೆ ಹಾಕಲಾಗಿದೆ.

ಮಾಜಿ ಸಚಿವರ ಪತ್ನಿಗೆ ಮಣೆ: ಇತ್ತೀಚೆಗೆ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಬಹುತೇಕ ಅವರಿಗೆ ಟಿಕೆಟ್‌ ನೀಡಲಾಗುವುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಪತ್ನಿ ಸುಧಾ ಶಿವರಾಮೇಗೌಡಗೆ ಟಿಕೆಟ್‌ ಘೋಷಿಸಲಾಗಿದೆ. ಇದರಿಂದ ನಾಗಮಂಗಲ ಕ್ಷೇತ್ರದಲ್ಲಿ ಮಹಿಳೆಗೆ ಮಣೆ ಹಾಕಿದ್ದಾರೆ. ಸುಧಾ ಶಿವರಾಮೇಗೌಡ ಅವರು ತುರುವೇಕೆರೆ ಕೂಡಲ ಗ್ರಾಮದ ಮಾಜಿ ಶಾಸಕ ರಾಮಕೃಷ್ಣಪ್ಪ ಅವರ ಪುತ್ರಿಯಾಗಿದ್ದಾರೆ.

Advertisement

ಫೈಟರ್‌ ರವಿಗೆ ತಪ್ಪಿದ ಟಿಕೆಟ್‌: ನಾಗಮಂಗಲ ಕ್ಷೇತ್ರ ದಲ್ಲಿ ಸಂಚಲನ ಮೂಡಿಸಿದ್ದ ಫೈಟರ್‌ ರವಿ ಆಲಿಯಾಸ್‌ ಮಲ್ಲಿಕಾರ್ಜುನ ಟಿಕೆಟ್‌ ಪೈಪೋಟಿಯಲ್ಲಿದ್ದರು. ಕ್ಷೇತ್ರದಲ್ಲಿ ಸಂಚರಿಸಿ ಬಿಜೆಪಿ ಮತ ಬ್ಯಾಂಕ್‌ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಇತ್ತೀಚೆಗೆ ರೌಡಿಶೀಟರ್‌ ಎಂಬ ಹಣೆಪಟ್ಟಿಯೂ ಸುತ್ತಿಕೊಂಡಿತು. ಅಲ್ಲದೆ, ಪ್ರಧಾನಿ ಮೋದಿ ಕೈಮುಗಿದಿದ್ದರಿಂದ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಈ ಎಲ್ಲ ಬೆಳವಣಿಗೆಯ ನಂತರ ಬಿಜೆಪಿ ಮುಜುಗರ ತಪ್ಪಿಸಿಕೊಳ್ಳಲು ಫೈಟರ್‌ ರವಿ ಹೆಸರು ಕೈಬಿಟ್ಟಿದೆ.

ತ್ರಿಕೋನ ಸ್ಪರ್ಧೆ: ಪ್ರತೀ ಚುನಾವಣೆಯಲ್ಲೂ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಿಗೆ ಪೈಪೋಟಿ ನೀಡಲು ಬಿಜೆಪಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ, ಈ ಬಾರಿ ಏಳು ಕ್ಷೇತ್ರಗಳಲ್ಲೂ ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಮಾಡಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಗೆ ಪೈಪೋಟಿ ನೀಡುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ.

ಮಂಡ್ಯ ಕ್ಷೇತ್ರದಿಂದ ಮಾಜಿ ಸಚಿವ ಎಸ್‌.ಡಿ.ಜಯರಾಂ ಪುತ್ರ ಅಶೋಕ್‌ ಜಯರಾಂ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕೆ.ಆರ್‌.ಪೇಟೆ ಸಚಿವ ನಾರಾಯಣಗೌಡ, ಶ್ರೀರಂಗಪಟ್ಟಣ ಸಚ್ಚಿದಾನಂದ, ಮೇಲುಕೋಟೆ ಡಾ.ಇಂದ್ರೇಶ್‌, ಮದ್ದೂರು ಎಸ್‌. ಪಿ.ಸ್ವಾಮಿ, ನಾಗಮಂಗಲ ಸುಧಾ ಶಿವರಾಮೇಗೌಡ, ಮಳವಳ್ಳಿ ಬಿ.ಮುನಿರಾಜು ಎಲ್ಲರೂ ಕೈ-ದಳಕ್ಕೆ ಪೈಪೋಟಿ ನೀಡುವ ಅಭ್ಯರ್ಥಿಗಳಾಗಿದ್ದಾರೆ.

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next