Advertisement

ಸೋಂಕು ಕಾಲದಲ್ಲಿ ಮಧುಮೇಹ ನಿರ್ವಹಣೆ

06:42 PM Nov 29, 2020 | Suhan S |

ಕೋವಿಡ್ ಸಾಂಕ್ರಾಮಿಕದ ಈ ಕಾಲಘಟ್ಟದಲ್ಲಿ ಬಹುತೇಕ ಮಂದಿ ಮನೆಯೊಳಗೇ ಇರಲಾರಂಭಿಸಿರುವುದರಿಂದ ಜೀವನ ವಿಧಾನದಲ್ಲಿ ಭಾರೀ ಬದಲಾವಣೆಯಾಗಿದೆ. ಹೊರಾಂಗಣ ಚಟುವಟಿಕೆಗಳಿಗೆ ನಿರ್ಬಂಧಗಳು ಇರುವುದರಿಂದ ಮಧುಮೇಹಿಗಳು ತಮ್ಮ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಮತ್ತು ದೈಹಿಕವಾಗಿ ಚಟುವಟಿಕೆಯಿಂದ ಇರುವುದಕ್ಕೆ ತೊಂದರೆಯಾಗಿದೆ. ಪ್ರತೀ ವರ್ಷ ನವೆಂಬರ್‌ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸುತ್ತಿದ್ದು, ಈ ವರ್ಷದ ದಿನಾಚರಣೆ ಇತ್ತೀಚೆಗಷ್ಟೇ ನಡೆದಿದೆ. ಈ ಹಿನ್ನೆಲೆಯಲ್ಲಿ ಮಧುಮೇಹಿಗಳ ಪ್ರಸ್ತುತ ಸ್ಥಿತಿಗತಿ ಮತ್ತು ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಅಗತ್ಯ ಬದಲಾವಣೆಗಳ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ಕೋವಿಡ್ ಸೋಂಕು ಹಾವಳಿ ಉಂಟಾದ ಬಳಿಕ ಶೇ. 70ರಿಂದ ಶೇ. 80ರಷ್ಟು ಮಧುಮೇಹಿಗಳಲ್ಲಿ ಸಕ್ಕರೆಯ ನಿಯಂತ್ರಣವು  ಕೈಮೀರಿದೆ, ಇನ್ನುಳಿದ ಶೇ. 20ರಿಂದ ಶೇ. 30 ಮಂದಿ ಪಥ್ಯಾಹಾರವನ್ನು ಪಾಲಿಸಿದ್ದರಿಂದ ಮತ್ತು ದೈಹಿಕವಾಗಿ ಚಟುವಟಿಕೆಯಿಂದ ಇದ್ದುದರಿಂದ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿದ್ದಾರೆ. ಲಾಕ್‌ಡೌನ್‌ ತೆರವಾದ ಬಳಿಕವೂ ಶೇ. 60ರಿಂದ ಶೇ. 70ರಷ್ಟು ಮಂದಿ ಮಧುಮೇಹ ರೋಗಿಗಳು ತಮ್ಮ ನಿಯಮಿತ ಚೆಕಪ್‌ಗ್ಳನ್ನು ಮುಂದೂಡಿದ್ದಾರೆ. ಇವರಲ್ಲಿ ಶೇ. 50ರಷ್ಟು ರೋಗಿಗಳು ವರ್ಚುವಲ್‌ ಆಗಿ ವೈದ್ಯರ ಜತೆಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದಾರೆ ಅಥವಾ ಪ್ರಯೋಗಾಲಯಗಳಲ್ಲಿ ಗ್ಲುಕೋ ಮೀಟರ್‌ ಮೂಲಕ ರಕ್ತದಲ್ಲಿ ಸಕ್ಕರೆಯ ಅಂಶವನ್ನು ತಪಾಸಿಸಿಕೊಂಡಿದ್ದಾರೆ. ಇನ್ನುಳಿದ ಶೇ. 50 ಮಂದಿ ರೋಗಿಗಳು ಯಾವುದೇ ರೀತಿಯಲ್ಲಿ ಸಕ್ಕರೆಯ ಅಶವನ್ನು ತಪಾಸಣೆ ಮಾಡಿಸಿಕೊಳ್ಳುವುದರಿಂದ ದೂರ ಉಳಿದಿದ್ದಾರೆ ಮತ್ತು ಈಗ ತಮ್ಮ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದಕ್ಕಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ.

ಕೋವಿಡ್‌-19 ಸೋಂಕು ತಗಲಿದರೆ ಅದರಿಂದ ಸಂಕೀರ್ಣ ಸಮಸ್ಯೆಗಳಿಗೆ ತುತ್ತಾಗುವ ಅಪಾಯ ಮಧುಮೇಹಿಗಳಿಗೆ ಹೆಚ್ಚು. ಹೀಗಾಗಿ ಅವರು ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾದುದು ಬಹಳ ಮುಖ್ಯವಾಗಿದೆ. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಿದ್ದರೆ ಅದು ಉರಿಯೂತ ಉಂಟಾಗುವುದಕ್ಕೆ ಪೂರಕವಾದ ವಾತಾವರಣ ಒದಗಿಸುತ್ತದೆ, ಇದು ಕೊರೊನಾ ವೈರಸ್‌ ಜತೆಗೆ ಸೇರಿದಾಗ ಸಂಕೀರ್ಣ ಸಮಸ್ಯೆಗಳನ್ನು ಸೃಷ್ಟಿಸಬಹುದಾಗಿದೆ. ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿರುವರು ಕೊರೊನಾ ವೈರಸ್‌ ನಿರ್ವಹಣೆಯನ್ನು ಚೆನ್ನಾಗಿ ಮಾಡುವುದಕ್ಕೆ ಪೂರಕ ಸ್ಥಿತಿಯಲ್ಲಿರುತ್ತಾರೆ. ಮಧುಮೇಹದ ಮೇಲೆ ನಿಯಂತ್ರಣ ಹೊಂದಿಲ್ಲದೆ ಇರುವವರು ಮೂತ್ರಪಿಂಡ ಕಾಯಿಲೆ, ಹೃದ್ರೋಗದಂತಹ ಸಂಕೀರ್ಣ ಸಮಸ್ಯೆಗಳಿಗೆ ತುತ್ತಾಗುವ ಅಪಾಯ ಹೆಚ್ಚು ಇದ್ದು, ಇದರಿಂದಾಗಿ ಕೋವಿಡ್‌-19ನಿಂದ ಗುಣ ಹೊಂದುವುದು ತ್ರಾಸದಾಯಕವಾಗಿರುತ್ತದೆ. ಕೋವಿಡ್‌-19 ಕಾಲದಲ್ಲಿ ಮಧುಮೇಹ ರೋಗಿಗಳು ಅನುಸರಿಸಬೇಕಾದ ಜೀವನಶೈಲಿ ಬದಲಾವಣೆಗಳ ಸ್ಥೂಲನೋಟ ಇಲ್ಲಿದೆ.

ಹೀಗೆ ಮಾಡಿ :

  • ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ರೋಗ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುವುದಕ್ಕೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಕಟ್ಟುನಿಟ್ಟಾದ ಪಥ್ಯಾಹಾರ ಅನುಸರಣೆ ಬಹಳ ಮುಖ್ಯವಾಗಿದೆ.
  • ಹೊರಗೆ ವಾಕಿಂಗ್‌ ಹೋಗುವುದು ಅಸಾಧ್ಯವಾಗಿದ್ದರೆ ವರಾಂಡಾದಲ್ಲಿ ಅಥವಾ ಮನೆಯ ಕೋಣೆಯಲ್ಲಿಯೇ ದಿನವೂ 15ರಿಂದ 30 ನಿಮಿಷಗಳ ಕಾಲ ವಾಕಿಂಗ್‌ ನಡೆಸಿ.
  • ಚಯಾಪಚಯ ಕ್ರಿಯೆಯ ದರವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಪ್ರತೀ ದಿನವೂ ಅರ್ಧ ತಾಸು ಕಾಲ ಏರೋಬಿಕ್‌/ಅನೆರೋಬಿಕ್‌ ವ್ಯಾಯಾಮ ಕೈಗೊಳ್ಳಿ.
  • ದಿನವೂ ಕನಿಷ್ಠ 8 ತಾಸು ಕಾಲ ನಿದ್ದೆ ಮಾಡಿ, ಸರಿಯಾದ ನಿದ್ದೆ ರೋಗ ನಿರೋಧಕ ಶಕ್ತಿ ವರ್ಧಕಗಳಲ್ಲಿ ಒಂದು.
  • ರೋಗ ನಿರೋಧಕ ಶಕ್ತಿ ವರ್ಧಿಸುವುದಕ್ಕೆ ಝಿಂಕ್‌ ಮತ್ತು ಸೂಕ್ಷ್ಮ ಪೋಷಕಾಂಶ ಆಧರಿತ ವಿಟಮಿನ್‌ ಪೂರಕ ಆಹಾರಗಳು ಉತ್ತಮ ಆಯ್ಕೆಗಳು. ವ್ಯಕ್ತಿ ಸೋಂಕು ಪೀಡಿತನಾದಾಗ ಅಥವಾ ಸೋಂಕು ಪೀಡಿತರ ನಿಕಟ ಸಂಪರ್ಕಕ್ಕೆ ಒಳಗಾದಾಗ ವಿಟಮಿನ್‌ ಸಿ ಪೂರಕ ಆಹಾರಗಳನ್ನು ನೀಡಲಾಗುತ್ತದೆ. ಆದರೆ ವಿಟಮಿನ್‌ ಸಿ ಹೆಚ್ಚಾದರೆ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲುದು, ಹೀಗಾಗಿ ಎಚ್ಚರಿಕೆ ಅಗತ್ಯ.
  • ಒತ್ತಡದಿಂದ ಮಧುಮೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸುವುದಕ್ಕಾಗಿ ಯೋಗಾಭ್ಯಾಸ ಮಾಡಿ ಮತ್ತು ಶಿಸ್ತಿನ, ಸಮತೋಲಿತ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ.
  • ಯಾವಾಗಲೂ ಸರಿಯಾದ ಹೊತ್ತಿಗೆ ಆಹಾರ ಸೇವಿಸಿ, ವಿಳಂಬವಾದರೆ ಅದಕ್ಕೆ ಪರ್ಯಾಯವಾಗಿ ಆರೋಗ್ಯಯುತ ಬದಲಿ ಆಹಾರ ಸೇವಿಸಿ.

ಹೀಗೆ ಮಾಡಬೇಡಿ :

  • ಲಾಕ್‌ಡೌನ್‌ ಕಾಲದಲ್ಲಿ ಮತ್ತು ಆ ಬಳಿಕವೂ ಜನರು ಮನೆಯಲ್ಲಿಯೇ ಉಳಿಯಬೇಕಾಗಿ ಬಂದಿರುವುದರಿಂದ ಬಹುತೇಕ ಮಧುಮೇಹ ರೋಗಿಗಳು ತಮ್ಮ ರಕ್ತದ ಸಕ್ಕರೆಯ ಅಂಶವನ್ನು ಪರೀಕ್ಷಿಸಿಕೊಂಡಿಲ್ಲ ಮತ್ತು ಸಕ್ಕರೆ ನಿಯಂತ್ರಣಕ್ಕಾಗಿ ವೈದ್ಯರ ಸಲಹೆ ಪಡೆದಿಲ್ಲ. ಮಧುಮೇಹದ ಬಗ್ಗೆ ನಿರ್ಲಕ್ಷ್ಯ ಮತ್ತು ಅಸಡ್ಡೆ ಸಲ್ಲದು. ಜನರು ಗುÉಕೊಮೀಟರ್‌ ಉಪಯೋಗಿಸಿ ರಕ್ತದಲ್ಲಿಯ ಸಕ್ಕರೆಯ ಅಂಶವನ್ನು ಪರೀಕ್ಷಿಸಿಕೊಳ್ಳಬಹುದು. ಇದೇರೀತಿ ರೋಗಿಗೆ ವೈದ್ಯರ ಭೇಟಿಗೆ ಅವಕಾಶ ಇಲ್ಲದೆ ಇದ್ದಲ್ಲಿ ಟೆಲಿ-ಕನ್ಸಲ್ಟೆàಶನ್‌ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬಹುದಾಗಿದೆ.
  • ಆದರೆ ತುರ್ತು ಪರಿಸ್ಥಿತಿಗಳಲ್ಲಿ ಟೆಲಿ – ಕನ್ಸಲ್ಟೆàಶನ್‌ ಸರಿಯಾದ ಪರಿಹಾರವಾಗಿರುವುದಿಲ್ಲ. ಹೀಗಾಗಿ ಅಂತಹ ಸಂದರ್ಭಗಳಲ್ಲಿ ರೋಗಿ ವೈದ್ಯರು/ ಆಸ್ಪತ್ರೆಗೆ ಭೇಟಿ ನೀಡಲೇ ಬೇಕಾಗಿರುತ್ತದೆ.
  • ಹೆಚ್ಚು ಜನರು ಸೇರುವ ಸ್ಥಳಗಳಿಗೆ ತೆರಳುವುದನ್ನು ತಪ್ಪಿಸಿಕೊಳ್ಳಿ.
  • ಮಧುಮೇಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶ ಅಥವಾ ವೀಡಿಯೋಗಳನ್ನು ನಂಬದಿರಿ. ಮಧುಮೇಹವು ನಿಯಂತ್ರಣದಲ್ಲಿದ್ದಷ್ಟು ಸಮಯ ಯಾವುದೇ ಬಗೆಯ ಚಿಂತೆ ಅಗತ್ಯವಿಲ್ಲ.
  • ಸಾಮಾನ್ಯ ಶೀತ ಮತ್ತು ಸೈನಸೈಟಿಸ್‌ಗೆ ಸ್ಟೀಮ್‌ ತೆಗೆದುಕೊಳ್ಳುವುದು ಉತ್ತಮ ನಿಯಂತ್ರಣ ವಿಧಾನ. ಆದರೆ ದಿನವೂ ಇದನ್ನು ಮಾಡುವುದರಿಂದ ಕೋವಿಡ್‌ -19 ನಿಯಂತ್ರಿಸಬಹುದು ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ.
  • ಮಧುಮೇಹಿಗಳಲ್ಲಿ ಸಕ್ಕರೆಯ ಅಂಶ ಕಡಿಮೆಯಾದರೆ ಔಷಧಗಳನ್ನು ಹಠಾತ್ತಾಗಿ ನಿಲ್ಲಿಸಬಾರದು. ಅದರಲ್ಲೂ ಇನ್ಸುಲಿನ್‌ ತೆಗೆದುಕೊಳ್ಳುತ್ತಿರುವ ರೋಗಿಗಳಲ್ಲಿ ಈ ಬಗ್ಗೆ ಎಚ್ಚರಿಕೆ ಅಗತ್ಯ. ಇದರ ಬದಲು ವೈದ್ಯರ ಸಲಹೆಯ ಮೇರೆಗೆ ಕ್ರಮೇಣವಾಗಿ ಔಷಧಗಳನ್ನು ಕಡಿಮೆ ಮಾಡಬೇಕು.
  • ಔದ್ಯೋಗಿಕ ಒತ್ತಡವನ್ನು ವೈಯಕ್ತಿಕ ಜೀವನದ ಜತೆಗೆ ತರಬೇಡಿ. ಔದ್ಯೋಗಿಕ ಜೀವನ ಮತ್ತು ವೈಯಕ್ತಿಕ ಜೀವನಗಳ ನಡುವೆ ಸ್ಪಷ್ಟವಾದ ಗಡಿಯನ್ನು ಗುರುತಿಸಿಕೊಂಡು ಎರಡನ್ನೂ ಪ್ರತ್ಯೇಕವಾಗಿರಿಸಿ. ಬಹುತೇಕ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿರುವ ಕಾರಣ ಕಚೇರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗಾಗಿ ಮನೆಯಲ್ಲಿ ಪ್ರತ್ಯೇಕ ಕೊಠಡಿಯನ್ನು ಮೀಸಲಾಗಿಡಿ ಮತ್ತು ಕಚೇರಿ ಕೆಲಸಕ್ಕೆ ವ್ಯಯಿಸುವ ಸಮಯವನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಿ. ಇದರಿಂದಾಗಿ ಮನೆಯಲ್ಲಿ ಒತ್ತಡವನ್ನು ಕಡಿಮೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.
  • ಕೋವಿಡ್‌ -19 ಕಾಲಘಟ್ಟದಲ್ಲಿ ಮಧುಮೇಹಿ ರೋಗಿಯು ಕೋವಿಡ್ ಸೋಂಕಿಗೆ ತುತ್ತಾಗದಂತೆ ಮಾಸ್ಕ್ ಧಾರಣೆ, ಸ್ಯಾನಿಟೈಸೇಶನ್‌, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಹೆಚ್ಚು ಕಾಳಜಿಯಿಂದ ಅನುಸರಿಸಬೇಕು. ಮಧುಮೇಹಿಗಳ ಕುಟುಂಬ ಸದಸ್ಯರು ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸೋಂಕು ತಗಲದಂತೆ ಎಚ್ಚರಿಕೆಯಿಂದ ಇರಬೇಕು. ಆದರೂ ಮಧುಮೇಹಿಗಳು ಜ್ವರ, ಕೆಮ್ಮು, ಉಸಿರುಗಟ್ಟುವಿಕೆಯಂತಹ ಲಕ್ಷಣಗಳನ್ನು ಅನುಭವಿಸಿದರೆ 1ರಿಂದ 3 ದಿನಗಳ ಒಳಗೆ ಕೊರೊನಾ ತಪಾಸಣೆಗೆ ಒಡ್ಡಿಕೊಳ್ಳಬೇಕು. ಯಾಕೆಂದರೆ ವಿಳಂಬಿಸುವುದು ಅಥವಾ ನಿರ್ಲಕ್ಷ್ಯ ವಹಿಸುವುದರಿಂದ ಅಪಾಯ ಹೆಚ್ಚುವ ಸಾಧ್ಯತೆಗಳಿರುತ್ತವೆ.
Advertisement

 

ಡಾ| ಶ್ರೀನಾಥ್‌ ಪಿ. ಶೆಟ್ಟಿ

ಕನ್ಸಲ್ಟಂಟ್‌ ಎಂಡೊಕ್ರಿನಾಲಜಿ,

ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next