Advertisement

ಮತ ಎಣಿಕೆ ಜವಾಬ್ದಾರಿಯಿಂದ ನಿರ್ವಹಿಸಿ

07:20 AM May 21, 2019 | Team Udayavani |

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮೇ 23ರಂದು ಬಾಗಲಕೋಟೆ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಸೂಚಿಸಿದರು.

Advertisement

ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಮತ ಎಣಿಕೆ ಮೇಲ್ವಿಚಾರಕರು, ಸಹಾಯಕರು ಹಾಗೂ ಮೈಕ್ರೋ ವೀಕ್ಷಕರಿಗೆ ಹಮ್ಮಿಕೊಂಡ ಮತ ಎಣಿಕೆ ವಿಧಾನ ಕುರಿತು ಕೊನೆಯ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತೋಟಗಾರಿಕೆ ವಿವಿಯಲ್ಲಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದ 8 ವಿಧಾನಸಭಾ ಮತಕ್ಷೇತ್ರಗಳ ಎಣಿಕೆ ಕಾರ್ಯ ನಡೆಸಲಾಗುತ್ತಿದ್ದು, ಮತ ಎಣಿಕೆಗೆ ಸಂಬಂಧಿಸಿದ ಯಾವುದೇ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿ ಮತದಾನದ ರಹಸ್ಯ ಕಾಪಾಡತಕ್ಕದ್ದು ಎಂದರು.

ಪ್ರತಿ ಮತಕ್ಷೇತ್ರಕ್ಕೆ 14 ಟೇಬಲ್ಗಳನ್ನು ಇರಿಸಲಾಗುತ್ತಿದ್ದು, ಪ್ರತಿ ಟೇಬಲ್ಗೆ ತಲಾ ಒಬ್ಬರಂತೆ ಮತ ಎಣಿಕಾ ಮೇಲ್ವಿಚಾರಕ, ಸಹಾಯಕ ಮತ್ತು ಮೈಕ್ರೋ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಬಾಗಲಕೋಟೆ ಲೋಕಸಭಾ ಮತಕ್ಷೇತ್ರಕ್ಕೆ ಒಟ್ಟು 8 ಮತಕ್ಷೇತ್ರಗಳಿದ್ದು, ಮತ ಎಣಿಕೆ ಕಾರ್ಯಕ್ಕೆ ಪ್ರತಿ ಮತಕ್ಷೇತ್ರಗಳಿಗೆ 16 ಜನ ಮೇಲ್ವಿಚಾರಕರು, ಸಹಾಯಕರು ಹಾಗೂ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಮತ ಎಣಿಕೆ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಗೆ ಬೆಳಗಿನ ಉಪಹಾರ, ಟೀ ಹಾಗೂ ಮಧ್ಯಾಹ್ನದ ಊಟ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕಾ ಕೇಂದ್ರದಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದ್ದು, ಮತ ಎಣಿಕಾ ಕೇಂದ್ರದೊಳಗೆ ಬರುವ ಪ್ರತಿಯೊಬ್ಬರು ಆಯಾ ಪ್ರವೇಶದ್ವಾರ ಹಾಗೂ ನಿಗದಿಪಡಿಸಿದ ಸ್ಥಳಗಳಲ್ಲಿ ಮೊಬೈಲ್ ಡಿಪಾಜಿಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಉಹಾಪೋಹಗಳಿಗೆ ಅವಕಾಶವಿಲ್ಲದಂತೆ ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾರ್ಗದರ್ಶನದನ್ವಯ ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸುವಂತೆ ಸೂಚಿಸಿದರು.

Advertisement

ಮಾಸ್ಟರ್‌ ಟ್ರೈನರ್ ಗಂಗಾಧರ ದಿವಟರ್‌ ಮತ ಎಣಿಕೆಗೆ ಸಂಬಂಧಿಸಿದಂತೆ ಎಣಿಕೆ ಟೇಬಲ್, ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ವಿಧಾನ, ಮತ ಎಣಿಕೆ ಪ್ರಕ್ರಿಯೆಯಲ್ಲಿ ಮೂಡಿಬಂದ ಸಂದೇಶಗಳು, ವಿಶೇಷ ಪ್ರಕರಣ, ಮತದಾನ ಖಾತ್ರಿ ಯಂತ್ರದಲ್ಲಿ ಮತ ಎಣಿಕೆ ವಿಧಾನ, ಅಂಚೆ ಮತಪತ್ರಗಳ ಎಣಿಕೆ, ಮತದಾನದ ಗೌಪ್ಯತೆ ಕುರಿತು ವಿವರಿಸಿದರು.

ಅಪರ ಜಿಲಾಧ್ಲಿಕಾರಿ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಎಚ್.ಜಯಾ, ಇಕ್ರಮ ಸೇರಿದಂತೆ ಆಯಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು, ಮತ ಎಣಿಕಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಮತ ಎಣಿಕೆ ರಸ್ತೆ ಮಾರ್ಗ ಬದಲಾವಣೆ:

ಮೇ 23ರಂದು ತೋಟಗಾರಿಕೆ ವಿವಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ರಸ್ತೆ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಆದೇಶ ಹೊರಡಿಸಿದ್ದಾರೆ. ಅಂದು ಬೆಳಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ವಾಹನಗಳ ಸುಗಮ ಸಂಚಾರಕ್ಕಾಗಿ ಬಾಗಲಕೋಟೆ ನವನಗರದ ಬೈಪಾಸ್‌ ರಸ್ತೆಯ ಮೂಲಕ ಸೀಮಿಕೇರಿ ಕ್ರಾಸ್‌ ಕಡೆಗೆ ತೆರಳುವ ವಾಹನಗಳಿಗೆ ಉತ್ತರಾಧಿಮಠ ಕ್ರಾಸ್‌ ಹತ್ತಿರ ಬಲಕ್ಕೆ ತಿರುಗಿ ಗದ್ದನಕೇರಿ ರಸ್ತೆಗೆ ಕೂಡಿಕೊಂಡು ಹುಬ್ಬಳ್ಳಿ ಕಡೆಗೆ ಹೋಗುವಂತೆ ಮತ್ತು ಸೀಮಿಕೇರಿ ಕ್ರಾಸ್‌ ಮೂಲಕ ಬೈಪಾಸ್‌ ಮೂಲಕ ನವನಗರ ಕಡೆಗೆ ಬರುವ ವಾಹನಗಳಿಗೆ ನೇರವಾಗಿ ಗದ್ದನಕೇರಿ ಕ್ರಾಸ್‌ ಮುಖಾಂತರ ಬಾಗಲಕೋಟೆ ನಗರಕ್ಕೆ ಪ್ರವೇಶಿಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಉತ್ತರಾಧಿಮಠದ ಕ್ರಾಸ್‌ದಿಂದ ಸಿಮಿಕೇರಿ ಕ್ರಾಸ್‌ವರೆಗಿನ ರಸ್ತೆಯ ಮೂಲಕ ಚುನಾವಣೆಗೆ ಸಂಬಂಧಿಸಿದ ವಾಹನ ಹೊರತುಪಡಿಸಿ ಬೇರೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next