Advertisement

ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

07:59 PM Jun 24, 2021 | ಶ್ರೀರಾಜ್ ವಕ್ವಾಡಿ |

ಹೆಣ್ಣು ಅಲ್ಲದ, ಗಂಡು ಅಲ್ಲದೊಂದು ಮನಸ್ಥಿತಿಯನ್ನು ನಾವು ಮಂಗಳಮುಖಿಯರು ಎಂದು ಕರೆಯುತ್ತೇವೆ.  ಸಮಾಜದಲ್ಲಿಈ ಮಂಗಳಮುಖಿಯರ ಬಗ್ಗೆ ಅಸಡ್ಡೆ ದೋರಣೆ ಇದೆ.

Advertisement

ಸಾಮಾಜಿಕ ವಲಯದಲ್ಲಿ ಮಂಗಳಮುಖಿಯರೆಂದರೇ, ಅದೇನೋ ಅಸ್ಪೃಶ್ಯತೆಯ ಭಾವ ಇದೆ. ಸ್ವತಃ ದೇಶದ ಸರ್ವೋಚ್ಛ ನ್ಯಾಯಾಲಯ ಮಂಗಳಮುಖಿಯರನ್ನು ತೃತೀಯ ಲಿಂಗಿಗಳೆಂದು ಪರಿಗಣಿಸಿದರೂ, ಲಿಂಗವನ್ನು ಆರಿಸಿಕೊಳ್ಳುವ ಹಕ್ಕು ಅವರವಿಗೆ ಬಿಟ್ಟ್ಇದ್ದು ಎಂದು ತೀರ್ಪು ಕೊಟ್ಟಿದ್ದರೂ ಕೂಡ ಇಂದಿಗೂ ಆ ವರ್ಗದವರನ್ನು ನೋಡುವ ದೃಷ್ಟಿ ಕೋನ ಬೇರೇನೇ ಇದೆ.

ಇಂತೆಲ್ಲಾ ವಾತಾವರಣದ ನಡುವೆ ಜೀವನದಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿದ ದೇಶದ ಮೊದಲ ಪಿ ಎಚ್ ಡಿ ಸ್ಕಾಲರ್ ತೃತೀಯ ಲಿಂಗಿ ಎನ್ನಿಸಿಕೊಂಡವರು ಮಾನವಿ ಬಂಡೋಪಾಧ್ಯಾಯ.

ಹೌದು, ಪಶ್ಚಿಮ ಬಂಗಾಳದ ನೈಹಾಟಿ ಮೂಲದ ಮಾನವಿ ಬಂಡೋಪಾಧ್ಯಾಯ  ವಿದ್ಯಾವಂತ ಸಾಮಾನ್ಯ ಕುಟುಂಬದಲ್ಲಿ   ಸೋಮನಾಥ ಬಂಡೋಪಾಧ್ಯಾಯರಾಗಿ ಹುಟ್ಟಿ, ತನ್ನ ಹರೆಯದ ವಯಸ್ಸಿನಲ್ಲಿ ಉಂಟಾದ ಭಾವ ಪಲ್ಲಟದಿಂದಾಗಿ ಅವರು ಕಾಲಾಂತರದಲ್ಲಿ ಲಿಂಗ ಬದಲಾವಣೆ ಮಾಡಿಸಿಕೊಂಡ ನಂತರ ಮಾನವಿಯಾಗಿ ಬದಲಾದರು. ಮಾನವಿ ಅಂದರೇ, ಪಶ್ಚಿಮ ಬಂಗಾಳದಲ್ಲಿ ಸುಂದರ ಮಹಿಳೆ ಎಂದು ಕೂಡ ಕರೆಯುವ ವಾಡಿಕೆ ಇದೆ.

Advertisement

ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ..!

ಕುಟುಂಬದ ಆದಿಯಾಗಿ ಸಮಾಜದಲ್ಲಿ ಹಲವಾರು ತಾರತಮ್ಯಗಳನ್ನು ಕಂಡು ದುಃಖದಲ್ಲೇ ಬೆಳೆದ ಸೋಮನಾಥ, ಎಳವೆಯಲ್ಲೇ ತಾನು ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದವರು. ಸಾಮಾಜಿಕ ವ್ಯವಸ್ಥೆಯಲ್ಲಿ ಪೂರಕವಾದ ವಾತಾವರಣ ಇಲ್ಲದಿದ್ದ ಸಂದರ್ಭದಲ್ಲಿಯೂ ಸಮಾಜದ ತಪ್ಪುಗಳನ್ನು ಪ್ರಶ್ನಿಸಿ ಎದುರು ನಿಂತವರು. ಮನೆಯಲ್ಲಿ ತಂದೆ ತಾಯಿಯರ ಬೆಂಬಲದಿಂದಾಗಿ ಯಾವುದೇ ರೀತಿಯಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿಲ್ಲ. ಆದಾಗ್ಯೂ ಸಮಾಜದಲ್ಲಿ ತುಂಬಾ ನೋವನ್ನು ಅನುಭವಿಸುತ್ತಾರೆ ಮಾನವಿ.

ಶೋಷಣೆ, ದೌರ್ಜನ್ಯವನ್ನು ಸಾಮಾನ್ಯವಾಗಿ ಎಲ್ಲಾ ಮಂಗಳಮುಖಿಯರು ಎದುರಿಸುವಂತೆ ಇವರೂ ಬದುಕಿನುದ್ದಕ್ಕೂ ಕಾಣುತ್ತಾ ಬಂದವರು. ಶಾಲಾ ಜೀವನದಲ್ಲಿ ಮನಸ್ಥಿತಿಯಲ್ಲಾದ ಬದಲಾವಣೆಗಳಿಂದಾಗಿ ತುಸು ತೊಂದರೆ ಅನುಭವಿಸಿದ್ದರೂ, ಓದಿನ ಬಗ್ಗೆ ಎಂದೂ ಕೂಡ ರಾಜಿ ಮಾಡಿಕೊಂಡವರಲ್ಲ. ಕಷ್ಟಗಳನ್ನು ನುಂಗಿ, ದೇಹದೊಳಗೆ, ಮನಸ್ಸಿನೊಳಗೆ ಆಗುತ್ತಿರುವ ಪರಿವರ್ತನೆಯನ್ನು ಸಹಿಸಿಕೊಂಡು ಮೇಲೆ ಬಂದು ಉನ್ನತ ಶಿಕ್ಷಣಗಳನ್ನೆಲ್ಲಾ ಪೂರೈಸಿ, ಇಂದು ಕಾಲೇಜೊಂದರ ಪ್ರಾಂಶುಪಾಲೆಯಾಗಿದ್ದಾರೆ ಎಂದರೇ ನೀವು ನಂಬಲೇ ಬೇಕು.

ಹೌದು, ದೇಶದ ಮೊಟ್ಟ ಮೊದಲ ತೃತೀಯ ಲಿಂಗಿ ಪಿ ಎಚ್ ಡಿ ಸ್ಲಾಲರ್ ಮಾನವಿ ಬಂಡೋಪಾಧ್ಯಾಯ. ಜಾದವ್ ಪುರ ವಿಶ್ವವಿದ್ಯಾಲಯದಲ್ಲಿ  2005ರಲ್ಲಿ ತನ್ನ  ಡಾಕ್ಟರ್ ಆಫ್ ಫಿಲಾಸಫಿ ಪೂರೈಸಿದ ಮಾನವಿ, 2006 ರಲ್ಲಿ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪ್ರಮಾಣ ಪತ್ರವನ್ನು ಪಡೆಯುತ್ತಾರೆ. ಆ ಮೂಲಕ ಮೊಟ್ಟ ಮೊದಲಾಗಿ ಪಿ ಎಚ್ ಡಿ ಪಡೆದ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗುತ್ತಾರೆ.

1990ರಲ್ಲಿ ಉಪನ್ಯಾಸಕಿಯಾಗಿ ವೃತ್ತಿ..!

ಬಂಗಾಳಿ ಭಾಷೆಯಲ್ಲಿ ಎಂ ಎ ಮಾಡಿದ್ದ ಅವರು 1990ರ ಅಂತ್ಯದಲ್ಲಿ  ವಿವೇಕಾನಂದ ಸತೋಬರ್ಶಿಕಿ ಕಾಲೇಜಿನಲ್ಲಿ ಬಂಗಾಳಿ ಭಾಷಾ ಪ್ರಾಧ್ಯಾಪಕಿಯಾಗಿ  ವೃತ್ತಿ ಆರಂಭಿಸಿದ್ದರು. ಬೋಧಾನ ವೃತ್ತಿಯಲ್ಲಿ ಸಾಕಷ್ಟು ಅವಮಾನ ಹಾಗೂ ಸಮಸ್ಯೆಯನ್ನು ಎದುರಿಸಬೇಕಾಯಿತು. ಸಹೋದ್ಯಗಿಗಳಿಂದ ಹಾಗೂ ತನ್ನ ವಿದ್ಯಾರ್ಥಿಗಳಿಂದಲೇ ನೋವನನ್ನುಭವಿಸಬೇಕಾಯಿತು. ಇದರಿಂದ ಮನನೊಂದ ಮಾನವಿ, ತನ್ನ ವೃತ್ತಿಯಿಂದ ಹೊರಬಂದು ತಾನು ಸಮಾಜದಲ್ಲಿ ಎತ್ತರಕ್ಕೆ ಬೆಳೆದು ನಿಲ್ಲಲೇ ಬೇಕು ಎಂಬ ಛಲದಿಂದ ಪಿ ಎಚ್ ಡಿ ಮಾಡಲು ನಿರ್ಧರಿಸಿ,  ಜಾದವ್ ಪುರ ವಿಶ್ವವಿದ್ಯಾಲಯಕ್ಕೆ ಪಿ ಎಚ್ ಡಿ ವಿದ್ಯಾರ್ಥಿಯಾಗಿ ಸೇರಿಕೊಂಡರು. 2005 ರಲ್ಲಿ ಪಿ ಎಚ್ ಡಿ ಮುಗಿಸಿ ಡಾ. ಮಾನವಿ ಬಂಡೋಪಾಧ್ಯಾಯರಾಗಿ ಹೊರಗೆ ಬಂದು ಸಮಾಜದ ವ್ಯವಸ್ಥೆಗೆ ಅಕ್ಷರಶಃ ಕನ್ನಡಿ ಹಿಡಿದರು.

ನನನ್ನು ಕೊಲ್ಲಲು ಕೂಡ ಪ್ರಯತ್ನ ನಡೆದಿತ್ತು..!

ನಿರಂತರ ಹೋರಾಟದ  ಬದುಕನ್ನೇ ಅನುಭವಿಸಿದ ಅವರು, ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ವೃತ್ತಿ ಜೀವನದ ಆರಂಭದಲ್ಲಿ, ನನ್ನ ತಂದೆ ಹಾಗೂ  ನಾನು, ವಿದ್ಯಾರ್ಥಿ ಸಂಘಟನೆಗಳ ಬೆದರಿಕೆಗಳನ್ನು ಎದುರಿಸಬೇಕಾಯಿತು. ನಾನು ಪುರುಷ ಉಪನ್ಯಾಸಕರಾಗಿ ನೋಂದಾಯಿಸಕೊಳ್ಳಬೇಕು ಎನ್ನುವುದು ಅವರ ಆಗ್ರಹವಾಗಿತ್ತು. ನನ್ನನ್ನು ಹಾಗೂ ನನ್ನ ತಂದೆಯನ್ನು ಕೊಲ್ಲಲು ಕೂಡ ಪ್ರಯತ್ನಗಳು ನಡೆದವು. ಝಾರ್ ಗ್ರಾಮ್ ನಲ್ಲಿ ನಮಗೆ ಉಳಿದುಕೊಳ್ಳಲು ಬಾಡಿಗೆ ಮನೆಯನ್ನು ಕೂಡ ನೀಡುತ್ತಿರಲಿಲ್ಲ ಎಂದು ದುಃಖದಲ್ಲಿ ತಾನು ಎದುರಿಸಿದ ಕಷ್ಟದ ದಿಗಳನ್ನು ನೆನಪಿಸಿಕೊಳ್ಳುತ್ತಾರೆ  ಮಾನವಿ.

ಹೀಗೆ ಆಕೆ ಹೋದಲ್ಲೆಲ್ಲಾ ಇದೇ ರೀತಿಯ ಅವಮಾನಗಳನ್ನು ಎದುರಿಸಿದ್ದರಿಂದ, ಅವಳು ಲಿಂಗ ಬದಲಾವಣೆಯ ಆಪರೇಷನ್ ಗೆ ಒಳಗಾಗಲು ನಿರ್ಧರಿಸುತ್ತಾರೆ.

“ನಾನು 2003 ಮತ್ತು 2004 ರಲ್ಲಿ ಲಿಂಗ ಬದಲಾವಣೆಯ ಆಪರೇಷನ್ ಗೆ ಒಳಗಾಗಿದ್ದೆ ಮತ್ತು ಈಗ ಪೂರ್ಣ ಪ್ರಮಾಣದ ಮಹಿಳೆಯಾಗಿದ್ದೇನೆ. ಸೋಮನಾಥ್ ಆಗಿದ್ದ ನಾನು 2004 ರಲ್ಲಿ ಮಾನವಿ ಆಗಿದ್ದೇನೆ. ಅದೊಂದು ಕಷ್ಟಕರ ಹಾಗೂ ಅದ್ಭುತ ಅನುಭವ ಎಂದು ಮುಕ್ತ ಮನಸ್ಸಿನಲ್ಲಿ ಅವರು ಹೇಳಿಕೊಳ್ಳುತ್ತಾರೆ.

ಪಶ್ಚಿಮ ಬಂಗಾಳದ ಲೈಂಗಿಕ ಬದಲಾವಣೆಯ ಕಾರ್ಯಾಚರಣೆಗೆ ಒಳಗಾದ ಮೊದಲ ಕೆಲವು ಮಂಗಳಮುಖಿಯರಲ್ಲಿ ಇವರೂ ಒಬ್ಬರು.

2015 ರಲ್ಲಿ ಪ್ರಾಂಶುಪಾಲೆಯಾಗಿ ಡಾ. ಮಾನವಿ ಬಂಡೋಪಾಧ್ಯಾಯ.!  

ಸತತ ಒಂದು ದಶಕದ ಹೋರಾಟದ ನಂತರ 2015 ಜೂನ್ 7 ರಂದು  16 ವರ್ಷಗಳ ವೃತ್ತಿಯಲ್ಲಿನ ಅನುಭವ ಹಾಗೂ ಪಿಎಚ್‌ಡಿ ಪದವಿ ಆಧರಿಸಿ ಕೃಷ್ಣನಗರ ಮಹಿಳಾ ಕಾಲೇಜಿನ ಪ್ರಾಂಶುಪಾಲೆಯ ಹುದ್ದೆಯನ್ನು ಅಲಂಕರಿಸಿದ್ದಾರೆ. ಆ ಮೂಲಕ ದೇಶದ ಮೊಟ್ಟ ಮೊದಲ ತೃತೀಯ ಲಿಂಗಿ ಪ್ರಾಂಶುಪಾಲೆ ಎಂಬ ಹಿರಿಮೆಗೂ ಕೂಡ ಭಾಜನರಾದರು.

ಮಾನವಿ ಶಾರದಾ ದೇವಿಯ ಭಕ್ತರಾಗಿದ್ದು, ಸ್ವಾಮಿ ಆತ್ಮಸ್ಥಾನಂದ ಅವರಲ್ಲಿ ಆಧ್ಯಾತ್ಮಿಕ ದೀಕ್ಷೆ ಪಡೆದವರು. ಬಂಗಾಳಿ ಸಾಹಿತ್ಯದಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಮಾತ್ರವಲ್ಲದೇ, “ಎ ಗಿಫ್ಟ್ ಆಫ್ ಗಾಡೆಸ್ ಲಕ್ಷ್ಮಿ” ಎಂಬ ಶೀರ್ಷಿಕೆಯೊಂದಿಗೆ ಜೀವನ ಚರೀತ್ರೆಯನ್ನೂ ಕೂಡ ಅವರು ಬರೆದಿದ್ದಾರೆ.

ನೋವಿನ ಕನ್ನಡಿ “ಎ ಗಿಫ್ಟ್ ಆಫ್ ಗಾಡೆಸ್ ಲಕ್ಷ್ಮಿ”

ತನ್ನ ಬಾಲ್ಯ, ಹರೆಯ ಹಾಗೂ ಆ ವಯೋಮಾನದಲ್ಲಿ ಅನುಭವಿಸಿದ ಮಾನಸಿಕ ಪಲ್ಲಟ, ಹೀಗೆ ಅನೇಕ ಕಷ್ಟಗಳನ್ನು ಬಿಚ್ಟಿಟ್ಟ ಕೃತಿ ಇದು.   ಬಂಗಾಳದ ಪ್ರಸಿದ್ಧ ಬರಹಗಾರ ಮತ್ತು ಪತ್ರಕರ್ತ ಜಿಮ್ಲಿ ಮುಖರ್ಜಿ ಪಾಂಡೆ, ಈ ಕೃತಿಯನ್ನು ನಿರೂಪಿಸಿದ್ದು, ಕನ್ನಡಕ್ಕೂ ಕೂಡ ಈ ಕೃತಿ ತರ್ಜುಮೆಗೊಂಡಿದೆ ಎನ್ನುವುದು ವಿಶೇಷ.

“ಗಂಡು ಜೀವ, ಹೆಣ್ಣು ಭಾವ” (ಮುಚ್ಚುಮರೆ ಇಲ್ಲದೆಯೇ ಬಿಚ್ಚಿಡುವೆ ಎಲ್ಲವನ್ನು) ಎನ್ನುವ ಶೀರ್ಷಿಕೆಯಲ್ಲಿ ಭಾರತದ ಪ್ರಪ್ರಥಮ ಟ್ರಾನ್ಸ್ ಜೆಂಡರ್ ಪ್ರಿನ್ಸಿಪಾಲರ ಸಾದಾಸೀದಾ ಜೀವನ ಚರಿತ್ರೆಯನ್ನು ಬಿ ಎಸ್ ಜಯಪ್ರಕಾಶ ನಾರಾಯಣ ಕನ್ನಡಕ್ಕೆ ಭಾವಾಂತರಿಸಿದ್ದಾರೆ.

“ಎ ಗಿಫ್ಟ್ ಆಫ್ ಗಾಡೆಸ್ ಲಕ್ಷ್ಮಿ” ಪುಸ್ತಕದಲ್ಲಿನ ಲೇಖಕಿಯ ಮಾತು

“ನಾನು ಇಂಥವರ ಪೈಕಿ ಒಬ್ಬಳು! ನನ್ನ ಇದುವರೆಗಿನ ಬದುಕಿನಲ್ಲಿ ಎಲ್ಲರೂ ನನ್ನನ್ನು ಹಿಜಡಾ, ಬೃಹನ್ನಳೆ, ನಪುಂಸಕ, ಖೋಜಾ, ಲೌಂಡಾ ಇತ್ಯಾದಿ ಹೆಸರುಗಳಿಂದ ಕರೆದಿದ್ದಾರೆ. ಹಾಗೆಯೇ, ಇಷ್ಟು ವರ್ಷಗಳ ಜೀವನವನ್ನು ನಾನು ಒಬ್ಬ ಬಹಿಷ್ಕತನಂತೆ ಕಳೆದಿದ್ದೇನೆ. ಇದು ನನಗೆ ನೋವುಂಟು ಮಾಡಿದೆಯೇ..? ನಿಜ ಹೇಳಬೇಕೆಂದರೆ, ಸಮಾಜದ ಇಂತಹ ದೃಷ್ಟಿಯು ನನ್ನನ್ನು ಊನಗೊಳಿಸಿದೆ. ಆದರೆ,  ಹಳೆಯ ಕಾಲದ ಒಂದು ಮಾತನ್ನೇ ಹೇಳುವುದಾದರೆ, ‘ಕಾಲ’ಕ್ಕಿಂತ ದೊಡ್ಡ ಸಂಜೀವಿನಿ ಇನ್ನೊಂದಿಲ್ಲ. ಈ ಮಾತು ನನ್ನ ವಿಷಯದಲ್ಲಿ ಸ್ವಲ್ಪ ಬೇರೆ ತರಹ ಕೆಲಸ ಮಾಡಿದೆ. ಅಂದರೆ,  ಸಮಾಜವು ನನ್ನಂಥವನನ್ನು ತುಚ್ಛವಾಗಿ ಕಾಣುವ ಪ್ರವೃತ್ತಿಯಿಂದ ನನ್ನಲ್ಲಿ ಉಂಟಾಗಿರುವ ನೋವು ಹಾಗೆಯೇ ಇದೆ; ಆದರೆ, ಅದು ಮೊದಮೊದಲು ಕೊಡುತ್ತಿದ್ದ ಅವರ್ಣನೀಯವಾದ ಬಾಧೆಯು ಕಾಲ ಉರುಳಿದಂತೆ ಕಡಿಮೆಯಾಗುತ್ತ ಬರುತ್ತಿದೆ. ನಾನು ಒಂಟಿಯಾಗಿದ್ದಾಗ ನನ್ನ ಅಸ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಮುಖಾಮುಖಿಯಾದಾಗ ಸಹಜವಾಗಿಯೇ ಈ ನೋವು ನನ್ನನ್ನು ಆವರಿಸಿಕೊಂಡು ಬಿಡುತ್ತದೆ. ನಾನು ಯಾರು? ನಾನೇಕೆ ಒಂದು ಗಂಡಿನ ರೂಪದಲ್ಲಿದ್ದ ಹೆಣ್ಣಾಗಿ ಹುಟ್ಟಿದೆ? ಹಾಗಾದರೆ, ನನ್ನ ಹಣೆಯಲ್ಲಿ ಏನು ಬರೆದಿದೆ..?

ಭಾರತದ ಮೊದಲ ಟ್ರಾನ್ಸ್ ಜೆಂಡರ್ ಮ್ಯಾಗಜೀನ್, ‘ಅಬೊಮನೋಬ್’ ಸಂಪಾದಕಿ.!

ಮಾನವಿ ಭಾರತದ ಮೊದಲ ಟ್ರಾನ್ಸ್ ಜೆಂಡರ್ ಮ್ಯಾಗಜೀನ್, ಅಬೊಮನೋಬ್ ಅನ್ನು ನಡೆಸುತ್ತಿದ್ದಾರೆ, ಅದು ಈಗ ವಾರ್ಷಿಕ ಪತ್ರಿಕೆಯಾಗಿ ಬದಲಾಗಿದ್ದು, ಸುಮಾರು 20 ವರ್ಷಗಳಿಂದ ಈ ನಿಯತಕಾಲಿಕೆಯನ್ನು ಅವರು ಮುನ್ನಡೆಸುತ್ತಿದ್ದಾರೆ.

ಇನ್ನು,  2019 ರಲ್ಲಿ ರಾಜೋರ್ಷಿ ಡೇ ನಿರ್ದೇಶನದ ಚೊಚ್ಚಲ ಚಿತ್ರ ‘ಪುರ್ಬಾ ಪಾಸ್ಚಿಮ್ ದಕ್ಷಿಣ’ ದಲ್ಲಿ ಬಂಡೋಪಾಧ್ಯಾಯ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುವುದು ಅವರ ಹೆಚ್ಚುಯಗಾರಿಕೆ.

ಒಟ್ಟಿನಲ್ಲಿ, ಸಾಕಷ್ಟು ಏಳು ಬೀಳುಗಳನ್ನು ಅನುಭವಿಸುತ್ತಾ ಸದ್ಯ ಪ್ರಾಂಶುಪಾಲೆಯಾಗಿ ವೃತ್ತಿಯಲ್ಲಿರುವ ಮಾನವಿ ಬಂಡೋಪಾಧ್ಯಾಯ ಮಾದರಿ ವ್ಯಕ್ತಿ ಎನ್ನುವುದರಲ್ಲಿ ಅನುಮಾನವಿಲ್ಲ.

-ಶ್ರೀರಾಜ್ ವಕ್ವಾಡಿ

ಇದನ್ನೂ ಓದಿ  : ಹೀರೋ ಮೊಟೊಕಾರ್ಪ್ ನ ಎಲ್ಲಾ ದ್ವಿಚಕ್ರ ವಾಹನಗಳ ಬೆಲೆ ಜುಲೈ 1ರಿಂದ ಹೆಚ್ಚಳ.!ಮಾಹಿತಿ ಇಲ್ಲಿದೆ  

Advertisement

Udayavani is now on Telegram. Click here to join our channel and stay updated with the latest news.

Next