Advertisement

ಕಲೆ-ಸಾಹಿತ್ಯ ಯಾವತ್ತೂ ನಶಿಸಲ್ಲ: ನಂದಿಗುಡಿ ಶ್ರೀ

04:07 PM Jan 02, 2020 | Naveen |

ಮಲೇಬೆನ್ನೂರು: ಗ್ರಾಮೀಣ ಪ್ರದೇಶದಲ್ಲಿ ಹಿಂದೆ ಮಹಿಳೆಯರು ವಿವಿಧ ಕೆಲಸ ಕಾರ್ಯ ಮಾಡುತ್ತಲೇ ಹಾಡು ಕಟ್ಟುತ್ತಿದ್ದರು. ಅವೇ ಜಾನಪದ ಹಾಡುಗಳಾದವು ಎಂದು ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಸಮೀಪದ ಉಕ್ಕಡಗಾತ್ರಿಯಲ್ಲಿ ಶ್ರೀ ಕರಿಬಸವೇಶ್ವರ ಗಾನ ಕಲಾವೃಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲಾ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು. ಜಾನಪದ ಗೀತೆ ಹಳ್ಳಿಗಾಡಿನ
ಸೊಗಡಾಗಿದ್ದು, ಸಂಗೀತಕ್ಕೆ ನರ ನಾಡಿಗಳು ಉತ್ತೇಜನಗೊಳ್ಳುವುದರಿಂದ ಕೃಷಿ ಕಾರ್ಯದಲ್ಲಿ ಪಾಲ್ಗೊಳ್ಳುವ
ಮಹಿಳೆಯರು ಹೆಚ್ಚಿನ ಕೆಲಸ ಮಾಡುವಂತೆ ಸ್ಫೂರ್ತಿ ಪಡೆಯಲು ಸಾಮೂಹಿಕವಾಗಿ ಹಾಡುತ್ತಿದ್ದರು.

ಗ್ರಾಮೀಣ ಪ್ರದೇಶದ ಜನರಿಂದ ನಿರ್ಮಾಣವಾದ ಸಾಹಿತ್ಯ, ಜನರ ಬಾಯಿಯಿಂದ ಬಾಯಿಗೆ ಹರಡಿ ಜಾನಪದ ಗೀತೆಯಾಗಿ ಜನಪ್ರಿಯವಾಗಿವೆ ಎಂದರು.

ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕಲೆ-ಸಾಹಿತ್ಯ ಯಾವತ್ತೂ ನಶಿಸುವುದಿಲ್ಲ. ಬದುಕಿನ ಅರ್ಥವನ್ನು ಕೊಡುವ ಜಾನಪದ ಸಾಹಿತ್ಯವನ್ನು ಹೆಚ್ಚು ಪ್ರೋತ್ಸಾಹಿಸಬೇಕೆಂದರು.
ರಟ್ಟಿಹಳ್ಳಿ ಕಬ್ಬಿಣ ಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನಲ್ಲಿ ಕಲೆ ಎನ್ನುವುದು ಅಂತರ್ಗತವಾಗಿದೆ. ಒಂದು ರೀತಿ ಎಲ್ಲರೂ ಕಲಾವಿದರೇ ಆಗಿದ್ದಾರೆ. ಸಂಗೀತ ಹಾಡುವುದಷ್ಟೇ ಅಲ್ಲದೆ, ಕೇಳುವುದೂ ಒಂದು ಕಲೆಯಾಗಿದೆ ಎಂದರು. ಕಲಾವಿದ ಜಿ. ಸಿದ್ದನಗೌಡ್ರು ಜಾನಪದ ಕಲಾ ಉತ್ಸವ ಹಮ್ಮಿಕೊಳ್ಳುವುದರ ಮೂಲಕ ಕಲೆ-ಸಾಹಿತ್ಯದ ಬಗ್ಗೆ  ನರಲ್ಲಿ ಆಸಕ್ತಿಮೂಡಿಸುತ್ತಿದ್ದಾರೆ. ಮುಂದಿನ ವರ್ಷ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ ಎಂದು ಹಾರೈಸಿದರು.

ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಎನ್‌.ಎಸ್‌.ರಾಜು ಮಾತನಾಡಿ, ಬಯಲು ನಾಟಕ- ನೃತ್ಯ ಪ್ರದರ್ಶನಗಳನ್ನು ಪ್ರತಿ ಹಳ್ಳಿಗಳಲ್ಲೂ ಏರ್ಪಡಿಸಿದಾಗ ಮಾತ್ರ ಇದರ ಮಹತ್ವ ಎಲ್ಲರಿಗೂ ತಿಳಿಯುತ್ತದೆ ಎಂದರಲ್ಲದೆ, ಜಾನಪದ ಕಲಾವಿದರು ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

Advertisement

ಕರಿಬಸವೆಶ್ವರ ಟ್ರಸ್ಟ್‌ ಕಾರ್ಯದರ್ಶಿ ಎಸ್‌.ಸುರೇಶ್‌ ಮಾತನಾಡಿ, ಜಾನಪದ ಕಲೆ ನಶಿಸಿಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜಾನಪದ ಕಲೆ ಉಳಿಸಿ, ಬೆಳೆಸಬೇಕಿದೆ ಎಂದರು.

ಜಿಲ್ಲೆಯ ಅನೇಕ ಜಾನಪದ ಕಲಾ ತಂಡಗಳ ಕಲಾವಿದರು ಹಾಗೂ
ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ರಾಜಬೀದಿಯಲ್ಲಿ ನಡೆದ ಜಾನಪದ ಕಲಾ ಉತ್ಸವದ ಮೆರವಣಿಗೆಯಲ್ಲಿ ಡೊಳ್ಳು, ಹಲಗೆ, ವೀರಗಾಸೆ, ಕೀಲು ಕುದುರೆ, ಗೊಂಬೆಕುಣಿತ ಮತ್ತಿತರೆ ಸುಮಾರು
25ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಭಾಗವಹಿಸಿದ್ದು ಜನಮನ ಸೆಳೆದವು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕತ್ತಗಿ ಚನ್ನಪ್ಪ, ತಬಲಾ ವಾದಕ ಬ್ಯಾಡಗಿಯ ದಿಂದಾಲೇಶ್ವರ್‌, ಹೊಸ ಪಾಳ್ಯದ ಎಚ್‌.ಪಿ. ನಾಗೇಂದ್ರಪ್ಪ, ವಾಸನದ ಮಾಲತೇಶ್‌, ಮುಖ್ಯ ಶಿಕ್ಷಕ ಸುರೇಶ್‌ ರೆಡ್ಡಿ, ಚಿಕ್ಕಮಾಗನೂರಿನ ನಾಗರಾಜ್‌, ನಂದಿಹಳ್ಳಿ ಕುಮಾರ್‌, ಸವಳಂಗದ ಗಣೇಶ್‌ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಬಿ.ಪಿ. ಹರೀಶ್‌, ಗ್ರಾಪಂ ಅಧ್ಯಕ್ಷೆ ಜಯಮ್ಮ, ಜಿಲ್ಲಾ ಬಿಜೆಪಿ ಒಬಿಸಿ ಉಪಾಧ್ಯಕ್ಷ ವಾಸನದ ಎಸ್‌.ಕೆ. ಬಸವರಾಜ್‌, ಗದ್ದಿಗೆ ಟ್ರಸ್ಟ್‌ ಕಮಿಟಿ
ಸದಸ್ಯರಾದ ರಾಮಪ್ಪ ಶಿವಣ್ಣನವರ್‌, ಗದಿಗೆಪ್ಪ ಹೊಸಳ್ಳಿ, ವೀರನಗೌಡ ಪಾಟೀಲ್‌, ಪಿಡಿಓ ಜಿ.ಆರ್‌. ಸುನೀಲ್‌ ಮುಂತಾದವರು ಉಪಸ್ಥಿತರಿದ್ದರು.

ಬಸವೇಶ್ವರ ಗಾನ ಕಲಾವೃಂದದ ಅಧ್ಯಕ್ಷ ಜಿ. ಸಿದ್ಧನಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಮಾಲತೇಶ್‌ ಸ್ವಾಗತಿಸಿದರು. ಚಂದ್ರಗೌಡ ನಿರೂಪಿಸಿದರು. ಯುವ ಕಲಾವಿದ ಜಿ.ಎಸ್‌. ಅಜೇಯಗೌಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next