Advertisement

ಮಳವಳ್ಳಿ ಪಟ್ಟಣ ಅಭಿವೃದ್ಧಿ ಮರೀಚಿಕೆ

01:03 PM May 14, 2019 | Team Udayavani |

ಮಂಡ್ಯ: ಹಲವಾರು ದಶಕಗಳಿಂದ ಮಳವಳ್ಳಿ ಪಟ್ಟಣ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪಟ್ಟಣ ತನ್ನ ಸೌಂದರ್ಯ ಕಾಪಾಡಿಕೊಳ್ಳಲಾಗದೆ ಅವ್ಯವಸ್ಥೆಯ ಆಗರವಾಗಿದೆ.

Advertisement

ಪಟ್ಟಣದೊಳಗೆ ಇದುವರೆಗೂ ಸುಂದರವಾದ ಬಡಾವಣೆಗಳು ರಚನೆಯಾಗಿಲ್ಲ. ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದ ನೈರ್ಮಲ್ಯ ಹಾಳಾಗಿದೆ. ಕೊಳಾಯಿ ಸಂಪರ್ಕಗಳಿಗೆ ಪ್ರಭಾವಿಗಳು ನೇರವಾಗಿ ಮೋಟಾರ್‌ ಪಂಪ್‌ ಅಳವಡಿಸಿಕೊಂಡಿದ್ದರೂ ಕೇಳ್ಳೋರಿಲ್ಲ. ಸ್ವಚ್ಛತೆಯ ಬಗ್ಗೆಯಂತೂ ಮಾತನಾಡು ವಂತೆಯೇ ಇಲ್ಲ. ಸಾರ್ವಜನಿಕ ಆಸ್ಪತ್ರೆ ಹಲವು ಅವ್ಯವಸ್ಥೆಗಳ ಗೂಡಾಗಿದ್ದು, ಮಹಿಳಾ ಆಸ್ಪತ್ರೆ ಕಟ್ಟಡ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ರಸ್ತೆಗಳ ಸ್ಥಿತಿ ಉತ್ತಮಗೊಂಡಿಲ್ಲ. ಕಿರಿದಾಗಿರುವ ರಸ್ತೆಗಳು ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿವೆ. ಪಟ್ಟಣದೊಳಗೆ ಅವ್ಯವಸ್ಥೆಗಳು ತಾಂಡವವಾಡುತ್ತಿರುವ ನಡುವೆಯೇ ಮಳವಳ್ಳಿ ಪುರಸಭೆಗೆ ಚುನಾವಣೆ ಘೋಷಣೆಯಾಗಿದೆ.

ಪಟ್ಟಣದೊಳಗೆ ಬಡಾವಣೆಗಳು ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ರಚನೆಯಾಗುತ್ತಿಲ್ಲ. ಅವೈಜ್ಞಾನಿಕ ಮತ್ತು ಅವ್ಯವಸ್ಥಿತ ರೀತಿಯಲ್ಲಿ ತಲೆಎತ್ತಿವೆ. ಹಲವು ಬಡಾವಣೆಯ ರಸ್ತೆಗಳು ಕಿರಿದಾಗಿವೆ. ಒಂದು ವಾಹನ ಸುಗಮವಾಗಿ ಚಲಿಸುವಷ್ಟು ಮಾತ್ರ ಜಾಗವಿದೆ. ಮತ್ತೂಂದು ವಾಹನಕ್ಕೆ ಅಲ್ಲಿ ಜಾಗವೇ ಇಲ್ಲ. ಇಕ್ಕಟ್ಟಾಗಿರುವ ರಸ್ತೆಗಳಲ್ಲಿ ಸುಗಮ ಸಂಚಾರ ಇಂದಿಗೂ ಅಸಾಧ್ಯದ ಮಾತಾಗಿದೆ.

ಗುಣಮಟ್ಟವಿಲ್ಲ: ರಸ್ತೆಗಳು ಕಿರಿದಾಗಿದ್ದರೂ ಗುಣಮಟ್ಟದಿಂದ ಕೂಡಿವೆಯೇ ಎಂದರೆ ಅದೂ ಇಲ್ಲ. ಬಹುತೇಕ ರಸ್ತೆಗಳಲ್ಲಿ ಡಾಂಬರು ಕಿತ್ತು ಬಂದಿದೆ. ಹಳ್ಳ-ಗುಂಡಿಗಳು ನಿರ್ಮಾಣಗೊಂಡಿವೆ. ರಸ್ತೆಯ ಲ್ಲಿರುವ ಗುಂಡಿಗಳನ್ನು ಮುಚ್ಚುವುದಕ್ಕೂ ಪುರಸಭೆ ಆಸಕ್ತಿ ತೋರಿಲ್ಲ. ಕುಲಗಟ್ಟ ರಸ್ತೆಗಳಲ್ಲೇ ಪಟ್ಟಣದ ಸಾರ್ವ ಜನಿಕರು ಸಂಚರಿಸುವಂತಹ ದುಸ್ಥಿತಿ ಎದುರಾಗಿದೆ.

ಅವೈಜ್ಞಾನಿಕ ಒಳಚರಂಡಿ: ಪಟ್ಟಣದ ಒಳಚರಂಡಿ ವ್ಯವಸ್ಥೆ ಅವೈಜ್ಞಾನಿಕವಾಗಿದೆ. ಒಳಚರಂಡಿ ವ್ಯವಸ್ಥೆಯನ್ನು ಎಲ್ಲಿಂದ ಆರಂಭ ಮಾಡಿ ಎಲ್ಲಿಗೆ ಬಿಡಬೇಕು ಎಂಬ ನೀಲಿ ನಕಾಶೆಯೇ ಇಲ್ಲದೆ ಒಳಚರಂಡಿಗಳನ್ನು ನಿರ್ಮಿಸಲಾಗಿದೆ. ಇದರ ಪರಿಣಾಮ ನೀರು ಸರಾಗವಾಗಿ ಹರಿದುಹೋಗದೆ ಅಲ್ಲಲ್ಲೇ ನಿಲ್ಲುತ್ತಿದೆ. ಹೀಗೆ ನಿಲ್ಲುತ್ತಿರುವ ಒಳಚರಂಡಿ ನೀರು ರಸ್ತೆಯಲ್ಲೆಲ್ಲಾ ತುಂಬಿ ಹರಿಯುತ್ತಿದೆ. ಇದರಿಂದಲೂ ಸಾಕಷ್ಟು ಅವಾಂತರಗಳು ಪಟ್ಟಣದೊಳಗೆ ಸೃಷ್ಟಿಯಾಗಿದೆ. ಎಷ್ಟೋ ಕಡೆ ಒಳಚರಂಡಿ ನೀರನ್ನು ನೇರವಾಗಿ ತೆರೆದ ಚರಂಡಿಗಳಿಗೆ ಸಂಪರ್ಕ ಕಲ್ಪಿಸಿ ಹರಿಯಬಿಡಲಾಗುತ್ತಿದೆ. ಇದು ಇನ್ನಷ್ಟು ಅವಾಂತರಗಳಿಗೆ ಕಾರಣವಾಗುತ್ತಿದೆ.

Advertisement

ಕೊಳಾಯಿಗಳಿಗೆ ಮೋಟಾರ್‌ ಪಂಪ್‌ ಅಳವಡಿಕೆ: ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಸುವ ಕೊಳಾಯಿ ಸಂಪರ್ಕಗಳು ಉತ್ತಮವಾಗಿಲ್ಲ. ಪ್ರಭಾವಿಗಳು ಕೊಳಾಯಿ ಸಂಪರ್ಕಗಳಿಗೆ ನೇರವಾಗಿ ಮೋಟಾರ್‌ ಪಂಪ್‌ ಅಳವಡಿಸಿಕೊಂಡಿದ್ದಾರೆ. ಅದನ್ನು ಪ್ರಶ್ನಿಸುವ ತಾಕತ್ತನ್ನು ಯಾರೂ ಪ್ರದರ್ಶಿಸುತ್ತಿಲ್ಲ. ಕೊಳಾಯಿ ಸಂಪರ್ಕಗಳಿಗೆ ಟ್ಯಾಪ್‌ಗ್ಳನ್ನು ಸರಿಯಾಗಿ ಅಳವಡಿಸಿಲ್ಲದ ಕಾರಣ ನೀರು ಸರಬರಾಜು ವೇಳೆ ಎಗ್ಗಿಲ್ಲದೆ ಪೋಲಾಗುತ್ತಿದ್ದರೂ ಯಾರೂ ಗಮನಹ ರಿಸುತ್ತಿಲ್ಲ. ನೀರು ಪೂರೈಕೆಗೂ ನಿಗದಿತ ಸಮಯ ನಿಗದಿಪಡಿಸಿಲ್ಲ. ಇಷ್ಟಬಂದ ಸಮಯಕ್ಕೆ ನೀರು ಬಿಡುತ್ತಿರುವುದರಿಂದ ಪಟ್ಟಣದ ಜನರು ನೀರಿಗಾಗಿ ಕಾದು ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ವಚ್ಛತೆ ಸಂಪೂರ್ಣ ಹಾಳು: ಪಟ್ಟಣದ ಸ್ವಚ್ಛತೆಯಂತೂ ಸಂಪೂರ್ಣ ಹಾಳಾಗಿದೆ. ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರಮುಖ ರಸ್ತೆಗಳಲ್ಲಿ ಶುಚಿತ್ವ ಕಾಪಾಡುವುದನ್ನು ಬಿಟ್ಟರೆ ಪಟ್ಟಣದೊಳಗೆ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸೌಂದರ್ಯ ಹೆಚ್ಚಿಸುವ ಬದ್ಧತೆಯನ್ನು ಯಾರೊಬ್ಬರೂ ಪ್ರದರ್ಶಿಸುತ್ತಿಲ್ಲ. ಇದರಿಂದ ಎಲ್ಲೆಲ್ಲೂ ಕಸದ ರಾಶಿಯ ದಿವ್ಯದರ್ಶನವಾಗುತ್ತಿದೆ.

ನಿಯಮಾವಳಿಗಳಿಲ್ಲ: ಕಟ್ಟಡ ಹಾಗೂ ಗೃಹ ನಿರ್ಮಾಣಕ್ಕೆ ಪರವಾನಗಿ ನೀಡುವ ವೇಳೆ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗುತ್ತಿದೆ. ಪಾರ್ಕಿಂಗ್‌ಗೆ ಜಾಗವನ್ನೇ ಬಿಡದೆ ಕಟ್ಟಡಗಳು ಮೇಲೇಳುತ್ತಿರುವುದರಿಂದ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವಂತಹ ಪರಿಸ್ಥಿತಿ ಸೃಷ್ಠಿಯಾಗಿದೆ. ಪಟ್ಟಣದೊಳಗೆ ಅಳವಡಿಸಿರುವ ಬಹುತೇಕ ಹೈಮಾಸ್ಟ್‌ ದೀಪಗಳು ಹಾಳಾಗಿವೆ. ರಸ್ತೆ ವಿಭಜಕದ ಮಧ್ಯೆ ಅಳವಡಿಸಲಾಗಿರುವ ಬೀದಿ ದೀಪಗಳು ಕೆಟ್ಟು ಕತ್ತಲು ಆವರಿಸಿದ್ದರೂ ಹೊಸ ಬೀದಿ ದೀಪಗಳನ್ನು ಅಳವಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ.

ನಿವೇಶನ ಕೊಟ್ಟಿಲ್ಲ: ಪಟ್ಟಣದ ಶ್ರೀ ಬೀರೇಶ್ವರ ದೇವಸ್ಥಾನದ ಬಳಿ 33 ಎಕರೆ ಪ್ರದೇಶವನ್ನು ಮೀಸಲಿಟ್ಟು ಬಡವರಿಗೆ ನಿವೇಶನಗಳನ್ನಾಗಿ ಪರಿವರ್ತಿಸಿ ಹಂಚುವ ಕೆಲಸವೂ ನಡೆದಿಲ್ಲ. ಇದರಲ್ಲಿ ಹದಿನಾಲ್ಕೂವರೆ ಎಕರೆ ಪ್ರದೇಶಕ್ಕೆ ಹಕ್ಕುಪತ್ರ ವಿತರಿಸಲಾಗಿದ್ದರೂ ಅವುಗಳನ್ನು ನಿವೇಶನಗಳಾಗಿ ಪರಿವರ್ತಿಸಿಲ್ಲ. ಮೂಲ ಸೌಲಭ್ಯಗಳನ್ನೂ ಕಲ್ಪಿಸಿಲ್ಲ. ಇದೂ ಸಹ ನಿವೇಶನ ಆಕಾಂಕ್ಷಿತರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next