Advertisement

ಸರ್ಕಾರಿ ಸೌಲಭ್ಯ ಸದುಪಯೋಗಿಸಿಕೊಳ್ಳಿ

09:27 PM Aug 19, 2019 | Team Udayavani |

ಚಾಮರಾಜನಗರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಅನುಕೂಲ ಒದಗಿಸುವ ಉದ್ದೇಶದಿಂದ ಸರ್ಕಾರ ಬೈಸಿಕಲ್‌ಗ‌ಳನ್ನು ವಿತರಿಸುತ್ತಿದೆ. ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದು ಉತ್ತಮವಾಗಿ ವ್ಯಾಸಂಗ ಮಾಡಬೇಕು ಎಂದು ಶಾಸಕ, ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ ಕಿವಿಮಾತು ಹೇಳಿದರು.

Advertisement

ತಾಲೂಕಿನ ಅಮಚವಾಡಿ ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಅಮಚವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊನ್ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಾನಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅರಕಲವಾಡಿ ಜೆಎಸ್‌ಎಸ್‌ ಪ್ರೌಢ ಶಾಲೆಗಳಲ್ಲಿ 8ನೇ ತರಗತಿಯ ವಿದ್ಯಾರ್ಥಿ ಗಳಿಗೆ ಸರ್ಕಾರದಿಂದ ಉಚಿತವಾಗಿ ನೀಡಲಾದ ಸೈಕಲ್‌ಗ‌ಳನ್ನು ವಿತರಿಸಿ ಮಾತನಾಡಿದರು.

ಸರ್ಕಾರದಿಂದ ಶಿಕ್ಷಣಕ್ಕೆ ಒತ್ತು: ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳ ಹಾಜರಾತಿ ಹಾಗೂ ಅವರ ಶೈಕ್ಷಣಿಕ ಬೆಳವಣಿಗೆ ಹಿತದೃಷ್ಟಿಯಿಂದ ಉಚಿತ ಶಿಕ್ಷಣ ನೀಡುತ್ತಿದೆ. ಬಡಮಕ್ಕಳ ಆಹಾರದ ಸಮಸ್ಯೆ ನೀಗಿಸಲು ಮಧ್ಯಾಹ್ನ ಅಕ್ಷರ ದಾಸೋಹ ಬಿಸಿಯೂಟ ನೀಡುತ್ತಿದೆ. ಪೌಷ್ಟಿ ಕತೆಗಾಗಿ ಕ್ಷೀರಭಾಗ್ಯ ಹಾಲು ವಿತರಿಸಲಾಗುತ್ತಿದೆ ಎಂದರು.

ಉತ್ತಮ ಹೆಸರು ತನ್ನಿ: ಬಡ ಮಕ್ಕಳು ಬರಿಗಾಲಲ್ಲಿ ನಡೆಯಬಾರದೆಂದು ಉಚಿತ ಪಾದರಕ್ಷೆಗಳನ್ನು ವಿತರಿಸಲಾಗುತ್ತಿದೆ. ಉಚಿತ ಸಮವಸ್ತ್ರ, ವಿದ್ಯಾರ್ಥಿ ವೇತನ, ಪರ ಊರುಗಳಿಂದ ಬರುವಂತಹ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಸೈಕಲ್‌ ನೀಡುತ್ತಿದೆ. ವಿದ್ಯಾರ್ಥಿಗಳು ಇಷ್ಟೆಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಚೆನ್ನಾಗಿ ಓದಬೇಕು. ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಗಳಿಸಿ, ತಂದೆ ತಾಯಿಗಳಿಗೆ, ಶಾಲೆಗೆ, ಊರಿಗೆ ಉತ್ತಮ ಹೆಸರು ತರಬೇಕು ಎಂದು ಸಲಹೆ ನೀಡಿದರು.

ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ: ವಿದ್ಯಾರ್ಥಿಗಳು ಸಮಯಪ್ರಜ್ಞೆ, ಶಿಸ್ತು, ಸಂಯಮ ಗುಣಗಳನ್ನು ಬೆಳೆಸಿಕೊಂಡು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಆಸಕ್ತಿಯಿಂದ ಪಾಠಗಳನ್ನು ಕಲಿಯಬೇಕು. ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬೇಕೆಂಬ ಗುರಿಹೊಂದಿ ಅದರತ್ತ ಗಮನಹರಿಸಿ ಶ್ರದ್ಧೆವಹಿಸಿ ಓದಬೇಕು. ಜ್ಞಾನಿಗಳಾಗಿ ಸಮಾಜದಲ್ಲಿ ಇತರರಿಗೆ ಮಾದರಿಯಾಗಬೇಕು. ಉತ್ತಮ ಪ್ರಜೆಗಳಾಗಿ ರೂಪುಗೊಂಡು ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

Advertisement

ಶಾಲೆ ಜತೆ ಉತ್ತಮ ಬಾಂಧವ್ಯ ಬೆಳೆಸಿ: ಪೋಷಕರು ಸಹ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ ಬಳಿಕ ಅವರ ಶಿಕ್ಷಣದ ಪ್ರಗತಿ ಬಗ್ಗೆ ಶಾಲೆಗೆ ಭೇಟಿ ನೀಡಿ ವಿಚಾರಿಸಬೇಕು. ಶಾಲೆಯ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು. ತಮ್ಮ ಮಕ್ಕಳನ್ನು ಬಾಲ ಕಾರ್ಮಿಕತೆಗೆ ದೂಡದೇ, ಉತ್ತಮ ಶಿಕ್ಷಣ ಕೊಡಿಸಿ ಅವರ ಬಗ್ಗೆ ಕಾಳಜಿ ವಹಿಸಿ ಅವರ ಭವಿಷ್ಯ ಉಜ್ವಲವಾಗಿರುವಂತೆ ನೋಡಿಕೊಳ್ಳಬೇಕು ಎಂದುಸಲಹೆ ನೀಡಿದರು.

ಜಿಪಂ ಸದಸ್ಯೆ ಶಶಿಕಲಾ ಸೋಮಲಿಂಗಪ್ಪ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಸದಸ್ಯರಾದ ರತ್ನಮ್ಮ, ಮಹದೇವಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್‌, ಜಿಪಂ ಮಾಜಿ ಸದಸ್ಯರಾದ ಕಾವೇರಿ ಶಿವಕುಮಾರ್‌, ಅರಕಲವಾಡಿ ಸೋಮನಾಯಕ, ಗ್ರಾಪಂ ಅಧ್ಯಕ್ಷರಾದ ಜಯಮ್ಮ , ಮಹದೇವಯ್ಯ, ಉಪಾಧ್ಯಕ್ಷೆ ಮಾದಮ್ಮ, ಮೈಮುಲ್‌ ಮಾಜಿ ಅಧ್ಯಕ್ಷ ಸಿದ್ದಮಲ್ಲಪ್ಪ, ಕಾಂತರಾಜು ಪ್ರಸಾದ್‌, ಶಂಭಪ್ಪ, ಎ.ಎಸ್‌.ಗುರುಸ್ವಾಮಿ, ರಾಜೇಂದ್ರ ಪ್ರಸಾದ್‌, ಶಿವಣ್ಣ ಮತ್ತು ಗ್ರಾಪಂ ಸದಸ್ಯರು ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು, ಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next